ಗಂಡನ ಜತೆ ವಾಗ್ವಾದ; ಗುಟ್ಟು ಬಿಚ್ಚಿಟ್ಟ ಕಿರಣ್ ರಾವ್
ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಜೊತೆ ನಡೆದ ಜಗಳದ ಸಂಗತಿಯನ್ನು ಪತ್ನಿ ಕಿರಣ್ ರಾವ್ ಕೊನೆಗೂ ಬಾಯ್ಬಿಟಿದ್ದಾರೆ. ಗಂಡ-ಹೆಂಡತಿ ಎಂದ ಮೇಲೆ ಜಗಳ ಇದ್ದದ್ದೇ ಎಂಬುದು ನಿನ್ನ ಅಭಿಪ್ರಾಯ ಇರಬಹುದು. ಇಲ್ಲ, ಜಗಳವಾಡಲೆಂದೇ ಮದುವೆಯಾಗುವವರೂ ಇರಬಹುದು. ಆದರೆ, ಕಿರಣ್ ರಾವ್ ಹೇಳಿದ್ದು ಅದಲ್ಲ, ಬೇರೆ ವಿಷಯಕ್ಕೆ ಸಂಬಂಧಿಸಿದ್ದು.
12ನೇ ಓಸಿಯನ್ಸ್ ಸಿನಿಫ್ಯಾನ್ ಫಿಲಂ ಫೆಸ್ಟಿವಲ್ಸ್ ನಲ್ಲಿ ಭಾಗವಹಿಸಿದ್ದ ಕಿರಣ್ ರಾವ್, ತಮಗೆ ಆರ್ಟ್ ಫಿಲಂ ಬಗ್ಗೆ ಇರುವ ಭಾರಿ ಆಸಕ್ತಿ ಹಾಗೂ ಅದಕ್ಕೆ ಅಮೀರ್ ಖಾನ್ ಅವರಿಂದ ಬಂದ ವಿರೋಧ, ಎರಡನ್ನೂ ಹೇಳಿಕೊಂಡಿದ್ದಾರೆ, ಕಮರ್ಷಿಯಲ್ ಸಿನಿಮಾ ಬಗ್ಗೆ ಆಸಕ್ತಿಯಿರದ ತಾವು, ತಮ್ಮ ಮೊದಲ ನಿರ್ದೇಶನದ 'ಧೋಬಿ ಘಾಟ್' ಕಲಾ ಪ್ರಕಾರದ ಸಿನಿಮಾಕ್ಕೆ ಅಮೀರ್ ಅವರಿಂದ ವ್ಯಕ್ತವಾದ ವಿರೋಧಗಳ ನಡುವೆಯೂ ಯಶಸ್ವಿಯಾದ ತಮ್ಮ ಕಥೆ ಹೇಳಿಕೊಂಡಿದ್ದಾರೆ.
ಈ ವಿಷಯವಾಗಿ ನಮ್ಮಿಬ್ಬರಲ್ಲಿ ಅತಿಯಾದ ಚರ್ಚೆಗಳಾದವು. ಅವು ಅನಗತ್ಯ ಹಂತಕ್ಕೆ ತಲುಪುತ್ತಿದ್ದಂತೆ ಎಚ್ಚೆತ್ತುಕೊಂಡ ನಾನು, ಈ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟೆ. ನಂತರ ವಿಷಯ ತಿಳಿಯಾಗುತ್ತಾ ಬಂತು. ಸಮಯ ನೋಡಿ ಈ ಚಿತ್ರದಲ್ಲಿ ಅವರಿಗೊಂದು ಪಾತ್ರ ನೀಡಿದೆ. ಕಲಾವಿದರಿಗೆ ಪಾತ್ರ ನೀಡಿದಾಗ ವಿರೋಧ ನಿಂತುಹೋಯ್ತು" ಎಂದು ಹೇಳಿ ತಮ್ಮ ನಡುವಿನ ಮನಸ್ತಾಪ ಹಾಗೂ ಅದಕ್ಕೆ ಜಾಣತನದಿಂದ ತಾವು ತೆರೆ ಎಳೆದ ಬಗ್ಗೆ ಹೇಳಿಕೊಂಡಿದ್ದಾರೆ.
ಆದರೆ ಈಗಲೂ ಕಲಾ ಪ್ರಕಾರದ ಸಿನಿಮಾ ಮಾಡುವುದರಲ್ಲಿರುವ ರಿಸ್ಕ್ ಬಗ್ಗೆ ಕಿರಣ್ ರಾವ್ ಅವರಿಗೆ ಗೊತ್ತಿದೆ. "ಈ ಚಿತ್ರಗಳಿಗೆ ಬಂಡವಾಳ ತೊಡಗಿಸಲು ಯಾರೂ ಮುಂದೆ ಬರುವುದಿಲ್ಲ. ಅದನ್ನು ಬಿಡುಗಡೆ ಮಾಡುವುದೇ ದೊಡ್ಡ ಸಾಹಸ. ಮಾಡಿದರೂ ಕೂಡ ಅದರಿಂದ ಲಾಭ ಬಂದೇ ಬರುತ್ತದೆ ಎಂಬ ಖಾತ್ರಿಯಲ್ಲ. ಆದರೆ ನಮ್ಮ ಮನಸ್ಸಿಗೆ ಅದು ಕೊಡುವ ಸಂತೋಷ ಅಪಾರ" ಎಂದಿದ್ದಾರೆ.
ಧೋಬಿ ಘಾಟ್ ಸಿನಿಮಾ ತಮ್ಮಿಷ್ಟದ ಸಿನಿಮಾ ಎಂದಿರುವ ಅಮೀರ್ ಪತ್ನಿ ಕಿರಣ್ ರಾವ್, ಈಗಲೂ ತಮಗೆ ಅವಕಾಶ ಸಿಕ್ಕರೆ ತಾವು ಆ ರೀತಿಯ ಚಿತ್ರವನ್ನೇ ಮಾಡಲು ಇಷ್ಟಪಡುವುದಾಗಿ ಹೇಳಿಕೊಂಡಿದ್ದಾರೆ. ಆ ಬಗ್ಗೆ ತಾವು ನಿರಂತರವಾಗಿ ಯೋಚಿಸುತ್ತಿದ್ದು ಧೋಬಿ ಘಾಟ್ ಚಿತ್ರ ಮಾಡುವ ವೇಳೆ ತಮ್ಮಿಬ್ಬರಲ್ಲಿ ನಡೆದ ವಾಗ್ವಾದವಾಗಲೀ ಅಥವಾ ಅದರಿಂದ ತಾವು ಕಲಿತ ಪಾಠವಾಗಲೀ ಎಂದೂ ಮರೆಯುವಂತದ್ದಲ್ಲ" ಎಂದಿದ್ದಾರೆ. (ಏಜೆನ್ಸೀಸ್)


Click it and Unblock the Notifications











