ಎನ್ಸಿಬಿ ವಿರುದ್ಧ ಹೈಕೋರ್ಟ್ನಲ್ಲಿ ಕೇಸ್ ದಾಖಲಿಸಿದ ಸುಶಾಂತ್ ಮನೆ ಸಹಾಯಕ
ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿದ್ದ ಸುಶಾಂತ್ ಮನೆ ಸಹಾಯಕ ದೀಪೇಶ್ ಸಾವಂತ್ ಈಗ ಎನ್ಸಿಬಿ ವಿರುದ್ಧ ಹೈಕೋರ್ಟ್ನಲ್ಲಿ ಕೇಸ್ ದಾಖಲಿಸಿದ್ದಾರೆ.
ಎನ್ಸಿಬಿ (ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ) ನನ್ನನ್ನು ಕಾನೂನುಬಾಹಿರವಾಗಿ ಬಂಧಿಸಿತ್ತು. ಹಾಗಾಗಿ, ನನಗೆ ಭಾರತ ಸರ್ಕಾರ 10 ಲಕ್ಷ ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಅಕ್ಟೋಬರ್ 5 ರಂದು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ಅಕ್ಟೋಬರ್ 19ರಂದು ನ್ಯಾಯಮೂರ್ತಿ ಎಸ್ಎಸ್ ಶಿಂಧೆ ಮತ್ತು ನ್ಯಾಯಮೂರ್ತಿ ಎಂ.ಎಸ್. ಕಾರ್ನಿಕ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದರು. ಬಳಿಕ, ಈ ಪ್ರಕರಣವನ್ನು ನವೆಂಬರ್ 6ಕ್ಕೆ ಮುಂದೂಡಿದ್ದಾರೆ.

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಂವಿಧಾನದ ಅನುಚ್ಛೇದ 21 ಮತ್ತು 22ರ ಸಂಪೂರ್ಣವಾಗಿ ಉಲ್ಲಂಘನೆ ಮಾಡಿದೆ ಎಂದು ದೀಪೇಶ್ ಸಾವಂತ್ ಪರ ವಕೀಲ ರಾಜೇಂದ್ರ ರಾಥೋಡ್ ಆರೋಪಿಸಿದ್ದಾರೆ. ದಿಪೇಶ್ ಸಾವಂತ್ ಅವರನ್ನು ಬಂಧಿಸಿದ 36 ಗಂಟೆಗಳ ಬಳಿಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ಬಂಧನಕ್ಕೊಳಗಾದ 24 ಗಂಟೆಗಳ ಒಳಗೆ ಆರೋಪಿಯನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬೇಕು ಎಂದು ವಕೀಲರು ಅರ್ಜಿ ವಾದಿಸಿದ್ದಾರೆ.
ಸೆಪ್ಟೆಂಬರ್ 5 ರಂದು ರಾತ್ರಿ 8 ಗಂಟೆಗೆ ದೀಪೇಶ್ ಅವರನ್ನು ಬಂಧಿಸಲಾಗಿದೆ ಎಂದು ಎನ್ಸಿಬಿ ತಮ್ಮ ದಾಖಲೆಗಳಲ್ಲಿ ತೋರಿಸಿದ್ದಾರೆ. ಆದರೆ ಸೆಪ್ಟೆಂಬರ್ 4 ರಂದು ರಾತ್ರಿ 10 ಗಂಟೆಗೆ ಬಂಧನ ಮಾಡಲಾಗಿದೆ ಮತ್ತು ಸೆಪ್ಟೆಂಬರ್ 6 ರಂದು ಅವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ ಎಂದು ದೀಪೇಶ್ ಸಾವಂತ್ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಹೀಗಾಗಿ, ದೀಪೇಶ್ ಸಾವಂತ್ ಅವರನ್ನು ತಪ್ಪಾಗಿ ಬಂಧಿಸಿ ನಂತರ ಪ್ರೋಟೋಕಾಲ್ ಪಾಲಿಸದ ಕಾರಣ ಎನ್ಸಿಬಿಯಿಂದ 10 ಲಕ್ಷ ರೂ ಪರಿಹಾರ ಕೊಡಿಸಬೇಕು ಎಂದು ನ್ಯಾಯಾಲಯದಲ್ಲಿ ಬೇಡಿಕೆ ಇಡಲಾಗಿದೆ.
ಸದ್ಯ ದೀಪೇಶ್ ಸಾವಂತ್ ಜಾಮೀನಿನ ಆಧಾರದಲ್ಲಿ ಹೊರಗೆ ಬಂದಿದ್ದಾರೆ. ರಿಯಾ ಚಕ್ರವರ್ತಿ, ಸ್ಯಾಮುಯಲ್ ಮಿರಾಂಡ ಅವರ ಜೊತೆ ದೀಪೇಶ್ ಅವರಿಗೂ ಜಾಮೀನು ಸಿಕ್ಕಿತ್ತು.


Click it and Unblock the Notifications











