ಸಲಿಂಗಕಾಮಿಯಾಗಿದ್ದರಾ ಸಂಜಯ್ ದತ್?: ಅಮ್ಮ ನರ್ಗಿಸ್ಗೆ ಈ ಅನುಮಾನ ಬಂದಿದ್ದೇಕೆ?
ಬಾಲಿವುಡ್ ನಟ ಸಂಜಯ್ ದತ್ ಬಾಲ್ಯದಲ್ಲಿ ಬಹಳ ತುಂಟ ಎನ್ನುವುದು ಗೊತ್ತಿರುವ ಸಂಗತಿ. ಮಕ್ಕಳಾದ ಸಂಜಯ್, ಪ್ರಿಯಾ ಮತ್ತು ನಮ್ರತಾ ಅವರನ್ನು ಬೆಳೆಸುವುದಕ್ಕಾಗಿ ಅವರ ತಾಯಿ ನರ್ಗಿಸ್ ದತ್ ತಮ್ಮ ಸಿನಿಮಾ ನಟನೆಯ ವೃತ್ತಿಯನ್ನು ತೊರೆದಿದ್ದರು. ಸಂಜಯ್ ದತ್ ಅವರ ಬದುಕನ್ನು ಆಧರಿಸಿದ 'ಸಂಜು' ಚಿತ್ರವನ್ನು ರಾಜ್ ಕುಮಾರ್ ಹಿರಾನಿ ನಿರ್ದೇಶಿಸಿದ್ದರು. ಆದರೆ ಅದು ಕಮರ್ಷಿಯಲ್ ಸಿನಿಮಾದ ಆಯಾಮಕ್ಕೆ ತಕ್ಕಂತೆ ಕಥೆ ಹೊಂದಿದ್ದರಿಂದ ಅನೇಕ ಸಂಗತಿಗಳನ್ನು ಒಳಗೊಂಡಿರಲಿಲ್ಲ.
ಯಾಸೀರ್ ಉಸ್ಮಾನ್ ಎಂಬುವವರು ಬರೆದಿರುವ 'ಸಂಜಯ್ ದತ್: ಎ ಕ್ರೇಜಿ ಅನ್ಟೋಲ್ಡ್ ಸ್ಟೋರಿ ಆಫ್ ಬಾಲಿವುಡ್ ಬ್ಯಾಡ್ ಬಾಯ್' ಬಯಾಗ್ರಫಿಯಲ್ಲಿ ಸಂಜಯ್ ಸಹೋದರಿ ನಮ್ರತಾ, ಹೊರಜಗತ್ತಿಗೆ ಗೊತ್ತಿರದ ಅನೇಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ. ಮುಂದೆ ಓದಿ...

ಚಪ್ಪಲಿ ಎಸೆದಿದ್ದಳು
ಸಂಜಯ್ ಮೇಲೆ ಅಮ್ಮ ಕೆಲವು ಸಲ ಬಹಳ ಕೋಪಗೊಳ್ಳುತ್ತಿದ್ದಳು. ಅವನಿಗೆ ಸುವ್ವರ್, ಉಲ್ಲು, ಗಧಾ ಎಂಬ ಬೈಗುಳಗಳನ್ನು ಪ್ರಯೋಗಿಸುತ್ತಿದ್ದಳು. ಒಮ್ಮೆ ಆತನ ಮೇಲೆ ಚಪ್ಪಲಿಯನ್ನೂ ಎಸೆದಿದ್ದಳು' ಎಂದು ನಮ್ರತಾ ತಿಳಿಸಿದ್ದಾರೆ.

ಸಲಿಂಗಕಾಮಿ ಆಗಿರುವ ಅನುಮಾನ
ಮನೆಯಲ್ಲಿ ಸ್ನೇಹಿತರ ಜತೆ ಯಾವಾಗಲೂ ರೋಮ್ ಒಳಗೆ ಬಾಗಿಲು ಹಾಕಿಕೊಂಡು ಕೂರುತ್ತಿದ್ದ ಸಂಜಯ್ ದತ್ ಸಲಿಂಗ ಕಾಮಿ ಇರಬಹುದು ಎಂದು ನರ್ಗಿಸ್ ಅಂದುಕೊಂಡಿದ್ದರಂತೆ. 'ಸಂಜಯ್ನ ಸ್ನೇಹಿತರು ಇರುವಾಗ ಆತನ ಕೋಣೆ ಬಾಗಿಲು ಏಕೆ ಯಾವಾಗಲೂ ಮುಚ್ಚಿರುತ್ತದೆ? ಅಲ್ಲಿ ಅಂಥಹದ್ದು ಏನು ನಡೆಯುತ್ತದೆ? ಅವನು ಗೇ ಆಗಿರಲಿಕ್ಕಿಲ್ಲ ಎಂದು ಆಶಿಸುತ್ತೇನೆ ಎಂದು ಅಮ್ಮ ಒಬ್ಬ ಗೆಳೆಯನನ್ನು ಪ್ರಶ್ನಿಸಿದ್ದನ್ನು ಕೇಳಿಸಿಕೊಂಡಿದ್ದೆ' ಎಂದು ಪ್ರಿಯಾ ದತ್ ಹೇಳಿದ್ದು ಕೂಡ ಪುಸ್ತಕದಲ್ಲಿ ದಾಖಲಾಗಿದೆ.

ಕುರುಡಾಗಿ ನಂಬಿದ್ದ ನರ್ಗಿಸ್
ಸಂಜಯ್ ದತ್ ತುಂಟಾಟಗಳು, ಕೆಟ್ಟ ಕೆಲಸಗಳ ಬಗ್ಗೆ ಗೊತ್ತಿದ್ದರೂ ನರ್ಗಿಸ್, ಅವರನ್ನು ಕುರುಡಾಗಿ ನಂಬಿದ್ದರು. ಸಂಜಯ್ ದತ್ ಮಾದಕ ದ್ರವ್ಯದ ವ್ಯಸನಿಯಾದ ಬಳಿಕವೂ ಅವರು ಅದನ್ನು ನಂಬಲು ತಯಾರಿರಲಿಲ್ಲ ಎಂಬ ಮಾಹಿತಿಗಳನ್ನು ಈ ಪುಸ್ತಕ ಒಳಗೊಂಡಿದೆ.

ಸಂಜು ಒಳ್ಳೆಯವನು ಎನ್ನುತ್ತಿದ್ದ ನರ್ಗಿಸ್
'ಸಂಜಯ್ ದತ್ ವ್ಯಸನಿಯಾಗಿದ್ದಾರೆ ಎಂಬುದಕ್ಕೆ ಬೆಟ್ಟದಷ್ಟು ಪುರಾವೆಗಳಿದ್ದರೂ ಆಕೆ ಸಂಜಯ್ನನ್ನು ನಂಬಿದ್ದರು. ಕುಟುಂಬದ ಹಿತೈಷಿಗಳು ಸಂಜಯ್ ಬಗ್ಗೆ ನರ್ಗಿಸ್ ಅವರಿಗೆ ಹೇಳಲು ಪ್ರಯತ್ನಿಸಿದಾಗಲೂ, 'ನನ್ನ ಮಗ ಎಂದಿಗೂ ಕುಡಿಯುವುದಿಲ್ಲ ಮತ್ತು ಡ್ರಗ್ಸ್ ಮುಟ್ಟುವುದೇ ಇಲ್ಲ' ಎನ್ನುವುದು ಅವರ ಸಾಮಾನ್ಯ ಪ್ರತಿಕ್ರಿಯೆಯಾಗಿರುತ್ತಿತ್ತು' ಎಂಬುದಾಗಿ ಒಬ್ಬರು ವಿವರಿಸಿದ್ದಾರೆ.

ಅಮ್ಮ ನರ್ಗಿಸ್ ಸಾವು
1981ರ ಮೇ 3ರಂದು ನರ್ಗಿಸ್ ಕೊನೆಯುಸಿರೆಳೆದರು. ಅವರು ನಿಧನರಾಗಿ ಎರಡು ವರ್ಷದ ಬಳಿಕ ತಮಗಾಗಿ ಅಮ್ಮ ಕಳುಹಿಸಿದ ಕೊನೆಯ ಸಂದೇಶ ಕೇಳುವ ಅವಕಾಶ ಸಿಕ್ಕಿತು. ನ್ಯೂಯಾರ್ಕ್ನ ಆಸ್ಪತ್ರೆಯಲ್ಲಿ ಮರಣ ಹಾಸಿಗೆಯ ಮೇಲಿದ್ದ ನರ್ಗಿಸ್ ಅದನ್ನು ರೆಕಾರ್ಡ್ ಮಾಡಿಸಿದ್ದರು.

ಬದುಕು ಬದಲಿಸಿದ ಆಡಿಯೋ
'ಎಲ್ಲದಕ್ಕಿಂತಲೂ ಮುಖ್ಯವಾಗಿ ಸಂಜು, ನಿನ್ನ ವಿಧೇಯತೆಯನ್ನು ಉಳಿಸಿಕೋ. ನಿನ್ನ ನಡತೆಯನ್ನು ಉಳಿಸಿಕೋ. ಎಂದಿಗೂ ತೋರ್ಪಡಿಕೆ ಮಾಡಬೇಡ. ಯಾವಾಗಲೂ ವಿನಮ್ರತೆಯಿಂದಿರು ಮತ್ತು ದೊಡ್ಡವರಿಗೆ ಸದಾ ಗೌರವ ಕೊಡು. ಆ ಸಂಗತಿ ನಿನ್ನನ್ನು ತುಂಬಾ ದೂರದವರೆಗೆ ಕೊಂಡೊಯ್ಯುತ್ತದೆ. ನಿನ್ನ ಕೆಲಸಕ್ಕೆ ಶಕ್ತಿ ನೀಡುತ್ತದೆ' ಎಂದು ಹೇಳಿದ್ದರು. ಆ ಆಡಿಯೋ ಸಂಜಯ್ ಬದುಕನ್ನು ಬದಲಿಸಿತು. ಅಲ್ಲಿಂದ ಸಂಜಯ್ ಬೇರೆ ವ್ಯಕ್ತಿಯಾಗಿ ಬದಲಾದರು ಎಂದು ಪುಸ್ತಕದಲ್ಲಿ ವಿವರಿಸಲಾಗಿದೆ.


Click it and Unblock the Notifications











