ರಾಜ್ಯಪಾಲರನ್ನು ಭೇಟಿ ಮಾಡಿದ ಪಾಯಲ್, ಅನುರಾಗ್ ಕಶ್ಯಪ್ಗೆ ಸಮನ್ಸ್ ಸಾಧ್ಯತೆ!
''ನಿರ್ದೇಶಕ ಅನುರಾಗ್ ಕಶ್ಯಪ್ ನನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ, ನನ್ನ ಮೇಲೆ ಅತ್ಯಾಚಾರ ಎಸೆಗಿದ್ದಾನೆ, ನನಗೆ ನ್ಯಾಯ ಕೊಡಿಸಿ'' ಎಂದು ನಟಿ ಪಾಯಲ್ ಘೋಷ್ ಮಹಾರಾಷ್ಟ್ರ ರಾಜ್ಯಪಾಲರ ಬಳಿ ಮನವಿ ಮಾಡಿದ್ದಾರೆ.
ಮಂಗಳವಾರ ಮಹಾರಾಷ್ಟ್ರ ರಾಜ್ಯಪಾಲ ಬಿಎಸ್ ಕೊಶ್ಯರಿ ಅವರನ್ನು ಭೇಟಿ ಮಾಡಿದ ಪಾಯಲ್ ಘೋಷ್, ''ಅನುರಾಗ್ ಕಶ್ಯಪ್ ವಿರುದ್ಧ ಕ್ರಮ ತಗೊಳ್ಳಿ, ನನಗೆ ನ್ಯಾಯ ಕೊಡಿಸಿ'' ಎಂದು ವಿನಂತಿಸಿದ್ದಾರೆ. ಈ ವೇಳೆ ಕೇಂದ್ರ ಸಚಿವರೊಬ್ಬರು ನಟಿಗೆ ಸಾಥ್ ನೀಡಿದ್ದಾರೆ. ಈ ಸಂಬಂಧ ಅನುರಾಗ್ ಕಶ್ಯಪ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡುವ ಸಾಧ್ಯತೆ ದಟ್ಟವಾಗಿದೆ. ಮುಂದೆ ಓದಿ...

ರಾಜಭವನ ಟ್ವೀಟ್
ನಟಿ ಪಾಯಲ್ ಘೋಷ್, ಮಹಾರಾಷ್ಟ್ರ ರಾಜ್ಯಪಾಲರ ಭೇಟಿ ಮಾಡಿದ ಹಿನ್ನೆಲೆ ರಾಜಭವನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ. "ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಥಾವಾಲೆ ಅವರೊಂದಿಗೆ ನಟಿ ಪಾಯಲ್ ಘೋಷ್ ಅವರು ಗವರ್ನರ್ ಭಗತ್ ಸಿಂಗ್ ಕೊಶಾರಿ ಅವರನ್ನು ಮುಂಬೈನ ರಾಜ್ ಭವನದಲ್ಲಿ ಭೇಟಿಯಾಗಿ ಮನವಿ ಮಾಡಿದ್ದಾರೆ" ಎಂದು ತಿಳಿಸಿದೆ.

ನ್ಯಾಯದ ಭರವಸೆ ಇದೆ
ರಾಜ್ಯಪಾಲರನ್ನು ಭೇಟಿ ಮಾಡಿದ ವಿಚಾರವಾಗಿ ಟ್ವೀಟ್ ಮಾಡಿರುವ ಪಾಯಲ್ ಘೋಷ್ ''ಗೌರವಾನ್ವಿತ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಮಾಡಿದೆ. ಅವರು ಸಹ ನನಗೆ ಭರವಸೆ ನೀಡಿದ್ದಾರೆ. ನಾನು ಯಾವುದೇ ಕಾರಣಕ್ಕೂ ಇದರಿಂದ ಹಿಂದೆ ಸರಿಯುವುದಿಲ್ಲ, ಬೆಳಕಿಗೆ ತಂದೇ ತರುತ್ತೇನೆ'' ಎಂದು ಹೇಳಿದ್ದಾರೆ.

ಸಮನ್ಸ್ ನೀಡುವ ಸಾಧ್ಯತೆ
ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಕಳೆದ ಸೋಮವಾರ ಮುಂಬೈನ ವರ್ಸೋವಾ ಪೊಲೀಸ್ ಠಾಣೆ ದೂರು ದಾಖಲಿಸಿ ಎಫ್ ಐ ಆರ್ ಸಹ ದಾಖಲಿಸಲಾಗಿದೆ. ಆದ್ರೆ, ಇದುವರೆಗೂ ಕಶ್ಯಪ್ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ. ಈ ಸಂಬಂಧ ಸದ್ಯದಲ್ಲಿ ಕಶ್ಯಪ್ ಅವರಿಗೆ ಮುಂಬೈ ಪೊಲೀಸರು ಸಮನ್ಸ್ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Recommended Video

ಎನ್ಸಿಬಿ ದೂರು ನೀಡಲು ಮುಂದಾದ ನಟಿ
ಅತ್ಯಾಚಾರ, ಲೈಂಗಿಕ ಕಿರುಕುಳದ ಆರೋಪ ಮಾಡಿರುವ ನಟಿ ಪಾಯಲ್ ಘೋಷ್, ಈಗ ಎನ್ಸಿಬಿ ಅಧಿಕಾರಿಗಳಿಗೂ ದೂರು ನೀಡಲು ಮುಂದಾಗಿದ್ದಾರೆ. ಮೂಲಗಳ ಪ್ರಕಾರ ಬುಧವಾರ ಸಂಜೆ ವೇಳೆಗೆ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್ಡಿಪಿಎಸ್) ಕಾಯ್ದೆಯಡಿ ಅನುರಾಗ್ ಕಶ್ಯ ವಿರುದ್ಧ ದೂರು ದಾಖಲಿಸಲಿದ್ದಾರೆ ಎಂದು ಹೇಳಲಾಗಿದೆ.


Click it and Unblock the Notifications











