ವಿವಾದಗಳಿಗೆ ಸಿಲುಕುವುದೇಕೆ ರಶ್ಮಿಕಾ ಮಂದಣ್ಣ? ಅವರೇ ಕೊಟ್ಟರು ಕಾರಣ
ಚಿತ್ರರಂಗದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಟಿ ರಶ್ಮಿಕಾ ಮಂದಣ್ಣ. ಕಡಿಮೆ ಅವಧಿಯಲ್ಲಿ ಅವರು ಸ್ಯಾಂಡಲ್ವುಡ್ನಿಂದ ಈಗ ಬಾಲಿವುಡ್ಗೆ ಹಾರಿದ್ದಾರೆ. ಅಲ್ಲಿಯೇ ನೆಲೆ ನಿಲ್ಲುವ ಸೂಚನೆಗಳನ್ನು ನೀಡಿದ್ದಾರೆ.
ಒಂದರ ಹಿಂದೊಂದರಂತೆ ಹಿಟ್ ಸಿನಿಮಾಗಳನ್ನು ನೀಡುತ್ತಾ, ವಿಜಯ್, ಅಮಿತಾಬ್ ಬಚ್ಚನ್, ಅಲ್ಲು ಅರ್ಜುನ್, ಇದೀಗ ರಣ್ಬೀರ್ ಕಪೂರ್ ಅವರಂಥಹಾ ಸ್ಟಾರ್ ನಟರೊಟ್ಟಿಗೆ ನಟಿಸುವ ಅವಕಾಶ ಬಾಚಿಕೊಳ್ಳುತ್ತಿರುವ ರಶ್ಮಿಕಾರಿಗೆ ಶ್ರಮದ ಜೊತೆಗೆ ಅದೃಷ್ಟವೂ ಜೊತೆಗೆ ನಿಂತಿದೆ.
ರಶ್ಮಿಕಾ ಮಂದಣ್ಣ ದೊಡ್ಡ ಯಶಸ್ಸನ್ನು ಗಳಿಸುತ್ತಿರುವ ಬೆನ್ನಲ್ಲೆ ಪದೇ -ಪದೇ ವಿವಾದಕ್ಕೂ ಒಳಗಾಗುತ್ತಿರುತ್ತಾರೆ. ಅವರ ಮಾತು, ವರ್ತನೆ ಇನ್ನಿತರೆ ವಿಚಾರಗಳ ಬಗ್ಗೆ ಆಗಾಗ್ಗೆ ಟೀಕೆಗಳು ಕೇಳಿ ಬರುತ್ತಲೇ ಇರುತ್ತವೆ. ಈ ರೀತಿ ಆಗುತ್ತಿರುವುದೇಕೆ ಎಂಬ ಬಗ್ಗೆ ಸ್ವತಃ ರಶ್ಮಿಕಾ ಮಂದಣ್ಣ ಮಾತನಾಡಿದ್ದಾರೆ.

ವಿವಾದಗಳಲ್ಲಿ ಸಿಲುಕಿಕೊಳ್ಳುವುದು ಏಕೆ?
ಹೌದು, ನನ್ನ ಹೆಸರು ಸದಾ ಒಂದಿಲ್ಲೊಂದು ವಿವಾದಗಳಲ್ಲಿ ಸಿಲುಕಿಕೊಂಡಿರುತ್ತದೆ ಎಂದಿರುವ ರಶ್ಮಿಕಾ, ಇದಕ್ಕೆ ಮುಖ್ಯ ಕಾರಣ, ನನಗೆ ಸರಿಯಾಗಿ ಸಂಹವನ ಮಾಡಲು ಅಥವಾ ತಾನು ಅಂದುಕೊಂಡಿದ್ದನ್ನು ಸರಿಯಾದ ರೀತಿಯಲ್ಲಿ ಹೇಳಲು ಬರದೇ ಇರುವುದೇ ಕಾರಣ ಎಂದಿದ್ದಾರೆ. ನಾನು ಅಂದುಕೊಂಡಿರುವ ವಿಷಯವನ್ನು ಸರಿಯಾಗಿ ಎದುರಿರುವವರಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ ಇದರಿಂದ ಹೆಚ್ಚು ವಿವಾದಗಳಾಗುತ್ತಿವೆ'' ಎಂದಿದ್ದಾರೆ.

ನನಗೆ ಸರಿಯಾಗಿ ಮಾತನಾಡಲು ಬರುವುದಿಲ್ಲ: ರಶ್ಮಿಕಾ
''ನಾನು ಆಡಿದ ಮಾತುಗಳನ್ನು ಸದಾ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ ಅಥವಾ ತಪ್ಪಾಗಿ ಮಾಧ್ಯಮಗಳು ಜನರಿಗೆ ತಲುಪಿಸುತ್ತವೆ. ಇದಕ್ಕೆ ಕಾರಣ ನನ್ನ ಕಳಪೆ ಸಂಹವನ ಕೌಶಲ ಎಂದು ಒಪ್ಪಿಕೊಂಡಿದ್ದಾರೆ ರಶ್ಮಿಕಾ. ಇದಕ್ಕೆ ತಾಜಾ ಉದಾಹರಣೆಯನ್ನೂ ನೀಡಿರುವ ನಟಿ, ದಕ್ಷಿಣದಕ್ಕಿಂತಲೂ ಬೆಟರ್ ರೊಮ್ಯಾಂಟಿಕ್ ಹಾಡುಗಳು ಹಿಂದಿಯಲ್ಲಿವೆ ಎಂದು ನಾನು ಹೇಳಿದ್ದೆ. ಆದರೆ ದಕ್ಷಿಣದ ಅದ್ಭುತ ರೊಮ್ಯಾಂಟಿಕ್ ಹಾಡುಗಳನ್ನು ಮರೆಯುವಷ್ಟು ದಡ್ಡಿ ನಾನಲ್ಲ, ಆದರೆ ಅದನ್ನು ಬ್ಯಾಲೆನ್ಸಿಂಗ್ ಆಗಿ ಹೇಳಲು ನನಗೆ ಬರಲಿಲ್ಲ'' ಎಂದಿದ್ದಾರೆ ರಶ್ಮಿಕಾ.

ತಾಜಾ ವಿವಾದದ ಉದಾಹರಣೆ ಕೊಟ್ಟ ರಶ್ಮಿಕಾ
''ಕನ್ನಡ, ತೆಲುಗು, ತಮಿಳಿನಲ್ಲಿ ಅದ್ಭುತವಾದ ಹಾಡುಗಳಿವೆ. ನನ್ನ ಸಿನಿಮಾದಲ್ಲಿಯೇ ಎಷ್ಟೋ ಸುಮಧುರವಾದ ಹಾಡುಗಳಿವೆ. ಅವನ್ನೆಲ್ಲ ಮರೆಯುವಷ್ಟು ಮೂರ್ಖಳು ನಾನಲ್ಲ'' ಎಂದಿದ್ದಾರೆ ರಶ್ಮಿಕಾ. ಇದೀಗ ನಾನು ನನ್ನ ಸಂವಹಣ ಕೌಶಲವನ್ನು ಉತ್ತಮ ಪಡಿಸಿಕೊಳ್ಳುವತ್ತ ಗಮನ ಹರಿಸಿದ್ದೇನೆ'' ಎಂದಿದ್ದಾರೆ. ರಶ್ಮಿಕಾ ಸಾಲು-ಸಾಲು ವಿವಾದಗಳಿಗೆ ಆಹಾರವಾಗುತ್ತಲೇ ಬರುತ್ತಿದ್ದಾರೆ. ಗುಡ್ ಬೈ ಸಿನಿಮಾದ ಸಮಯದಲ್ಲಿ ಕಿರಿಕ್ ಪಾರ್ಟಿ ಸಿನಿಮಾ ಹಾಗೂ ಅವರ ನಿರ್ಮಾಣ ಸಂಸ್ಥೆಯ ಹೆಸರು ಮುಚ್ಚಿಟ್ಟು ವಿವಾದಕ್ಕೆ ಈಡಾಗಿದ್ದರು. ಬಳಿಕ 'ಕಾಂತಾರ' ಸಿನಿಮಾ ನೋಡಿಲ್ಲ ಎಂದು ವಿವಾದ ಸೃಷ್ಟಿಸಿಕೊಂಡಿದ್ದರು.

ಪುನೀತ್ ರಾಜ್ಕುಮಾರ್ ನೆನಪು ಮಾಡಿಕೊಂಡ ನಟಿ
ಇದೇ ಸಂದರ್ಶನದಲ್ಲಿ ನಟ ಪುನೀತ್ ರಾಜ್ಕುಮಾರ್ ಅವರನ್ನು ನೆನಪು ಮಾಡಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ''ಅವರೊಟ್ಟಿಗೆ ನಟಿಸಿದಾಗ ನನಗೆ ಹಲವು ಸಲಹೆಗಳನ್ನು ಅವರು ನೀಡಿದರು. ನನ್ನೊಳಗಿನ ಪ್ರತಿಭೆಯನ್ನು ಗುರುತಿಸಿದ ಮೊದಲಿಗರಲ್ಲಿ ಅವರೂ ಒಬ್ಬರು. ನಾನು ಆಗಷ್ಟೆ ತೆಲುಗು ಚಿತ್ರರಂಗಕ್ಕೆ ಕಾಲಿಡಲಿದ್ದೆ ಆಗ ಅವರು ನನಗೆ ಕೆಲವು ಅಗತ್ಯ ಸಲಹೆಗಳನ್ನು ನೀಡಿದ್ದರು, ಹಾಗೂ ನನ್ನ ಬಗ್ಗೆ ಅವರಿಗೆ ಅಪಾರವಾದ ವಿಶ್ವಾಸವಿತ್ತು. ಅವರನ್ನು ಸದಾ ನಾನು ಮಿಸ್ ಮಾಡಿಕೊಳ್ಳುತ್ತೇನೆ'' ಎಂದಿದ್ದಾರೆ ರಶ್ಮಿಕಾ ಮಂದಣ್ಣ.


Click it and Unblock the Notifications











