ಸುಶಾಂತ್ ಸಿಂಗ್ ತಂದೆ ಹೇಳಿರುವುದೆಲ್ಲ ಸುಳ್ಳು ಎಂದ ರಿಯಾ ಚಕ್ರವರ್ತಿ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಎಲ್ಲರ ಕಣ್ಣು ಈಗ ಅವರ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ ಅವರ ಮೇಲೆ ನೆಟ್ಟಿದೆ. ರಿಯಾ ಮತ್ತು ಸುಶಾಂತ್ ತಾವು ಪ್ರೀತಿಸುತ್ತಿದ್ದೇವೆ ಎಂದು ಈ ಮೊದಲು ಎಲ್ಲಿಯೂ ಹೇಳಿರಲಿಲ್ಲ. ಆದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದ ಸಂದರ್ಭದಲ್ಲಿ ತಾನು ಸುಶಾಂತ್ ಪ್ರೇಯಸಿ ಎಂದೇ ರಿಯಾ ಹೇಳಿಕೊಂಡಿದ್ದರು.
ಆದರೆ ಈಗ ರಿಯಾ ವಿರುದ್ಧವೇ ಅನುಮಾನ ಹೆಚ್ಚಾಗಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ತಂದೆ ಕೃಷ್ಣಕುಮಾರ್ ಸಿಂಗ್, ಬಿಹಾರದ ಪೊಲೀಸರಿಗೆ ನೀಡಿರುವ ದೂರಿನಲ್ಲಿ ರಿಯಾ ಮತ್ತು ಅವರ ಕುಟುಂಬದವರು ಸೇರಿದಂತೆ ಐವರ ಹೆಸರನ್ನು ಉಲ್ಲೇಖಿಸಿದ್ದಾರೆ. ಸುಶಾಂತ್ ಆತ್ಮಹತ್ಯೆಗೆ ಪ್ರಚೋದನೆ, ಸುಶಾಂತ್ ಖಾತೆಯಿಂದ 15 ಕೋಟಿ ರೂ ಹಣ ಲಪಟಾಯಿಸಿರುವುದು, ಸುಶಾಂತ್ ಕ್ರೆಡಿಟ್ ಕಾರ್ಡ್, ಅವರ ಆರೋಗ್ಯದ ವರದಿ, ಲ್ಯಾಪ್ ಟಾಪ್ ಮತ್ತಿತರ ದಾಖಲೆ ಮತ್ತು ವಸ್ತುಗಳನ್ನು ಕದ್ದೊಯ್ದಿರುವುದು ಸೇರಿದಂತೆ ವಿವಿಧ ಆರೋಪಗಳನ್ನು ರಿಯಾ ವಿರುದ್ಧ ಹೊರಿಸಲಾಗಿದೆ. ಮುಂದೆ ಓದಿ...

ದುರುದ್ದೇಶದ ಆರೋಪ
ಸುಶಾಂತ್ ತಂದೆ ಬಿಹಾರದಲ್ಲಿ ನೀಡಿರುವ ದೂರಿನ ವಿಚಾರಣೆಯನ್ನು ಮುಂಬೈಗೆ ವರ್ಗಾಯಿಸಬೇಕು ಎಂದು ಕೋರಿ ರಿಯಾ ಚಕ್ರವರ್ತಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಕೆ.ಕೆ. ಸಿಂಗ್ ಮಾಡಿರುವ ಆರೋಪಗಳು ಸುಳ್ಳು ಮತ್ತು ದುರುದ್ದೇಶದಿಂದ ಸೃಷ್ಟಿಸಿರುವ ಆರೋಪ ಎಂದು ಅರ್ಜಿಯಲ್ಲಿ ಹೇಳಿದ್ದಾರೆ. ತಮ್ಮ ಅರ್ಜಿಯನ್ನು ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ.

ನ್ಯಾಯಸಮ್ಮತ ತನಿಖೆ ನಡೆಯುವುದಿಲ್ಲ
ಕೆ.ಕೆ. ಸಿಂಗ್ ಆರೋಪಗಳನ್ನು ನಿರಾಕರಿಸಿರುವ ಅವರು, ಪಟ್ನಾದಲ್ಲಿ ಅವರಿಗೆ ಬಹಳ ಪ್ರಭಾವ ಇದೆ. ಹೀಗಾಗಿ ಸ್ಥಳೀಯ ಅಧಿಕಾರಿಗಳ ಸಹಾಯದಿಂದ ತನಿಖೆಯನ್ನು ತಮಗೆ ಬೇಕಾದಂತೆ ನಡೆಸಬಹುದು. ಇದರಿಂದಾಗಿ ನ್ಯಾಯ ಸಮ್ಮತ ವಿಚಾರಣೆ ನಡೆಯಲಾರದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದೆ
ಸುಶಾಂತ್ ಜತೆ 2020ರ ಜೂನ್ 8ರವರೆಗೂ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದೆ ಎಂದು ಹೇಳಿಕೊಂಡಿರುವ ರಿಯಾ, ಬಳಿಕ ಮುಂಬೈನ ಸ್ವಂತ ನಿವಾಸಕ್ಕೆ ತಾತ್ಕಾಲಿಕವಾಗಿ ವಾಸ ಬದಲಿಸಿಕೊಂಡಿದ್ದಾಗಿ ಅರ್ಜಿಯಲ್ಲಿ ತಿಳಿಸಿದ್ದಾರೆ.

ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಸುಶಾಂತ್ ಕೆಲವು ಸಮಯದಿಂದ ಖಿನ್ನತೆಗೆ ಒಳಗಾಗಿದ್ದರು ಮತ್ತು ಖಿನ್ನತೆ ನಿಗ್ರಹದ ಔಷಧ ತೆಗೆದುಕೊಳ್ಳುತ್ತಿದ್ದರು. ಜೂನ್ 14ರಂದು ಅವರು ಬಾಂದ್ರಾದ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ. ಸುಶಾಂತ್ ಈ ನಿರ್ಧಾರ ತೆಗೆದುಕೊಳ್ಳಲು ಕಾರಣವನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಮುಂಬೈಗೆ ವರ್ಗಾಯಿಸಿ
ಬಾಂದ್ರಾ ಪೊಲೀಸರು ಹಲವು ಬಾರಿ ಸಮನ್ ನೀಡಿ ತಮ್ಮ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಮುಂಬೈ ಪೊಲೀಸರ ತನಿಖೆ ಇನ್ನೂ ನಡೆಯುತ್ತಿದ್ದು, ವಿಧಿ ವಿಜ್ಞಾನ ವರದಿಗಳಿಗೆ ಕಾಯಲಾಗುತ್ತಿದೆ. ಸುಶಾಂತ್ ತಂದೆ ದಾಖಲಿಸಿರುವ ಪ್ರಕರಣದಲ್ಲಿ ಹುರುಳಿಲ್ಲ. ಅಲ್ಲದೆ, ಪ್ರಕರಣದ ವ್ಯಾಪ್ತಿ ಇರುವುದು ಬಾಂದ್ರಾ ಪೊಲೀಸ್ ಠಾಣೆಯಲ್ಲಿ. ಈ ಪ್ರಕರಣದಲ್ಲಿ ಬಿಹಾರದ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಲಾರರು. ಹೀಗಾಗಿ ಈ ಎಫ್ಐಆರ್ನ ತನಿಖೆಯನ್ನು ಮುಂಬೈಗೆ ವರ್ಗಾಯಿಸಬೇಕು ಎಂದು ರಿಯಾ ಹೇಳಿದ್ದಾರೆ.

ಜಾರಿ ನಿರ್ದೇಶನಾಲಯದ ಸೂಚನೆ
ಮತ್ತೊಂದು ಬೆಳವಣಿಗೆಯಲ್ಲಿ ಸುಶಾಂತ್ ಅವರ ಬ್ಯಾಂಕ್ ಖಾತೆಯಿಂದ ರಿಯಾ ಚಕ್ರವರ್ತಿ 15 ಕೋಟಿ ಕಳವು ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಮಧ್ಯಪ್ರವೇಶಿಸಿದೆ. ಕೆ.ಕೆ. ಸಿಂಗ್ ನೀಡಿರುವ ದೂರಿನ ಎಫ್ಐಆರ್ ವಿವರಗಳು ಹಾಗೂ ಸುಶಾಂತ್ ಅವರ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡುವಂತೆ ಸೂಚಿಸಿದೆ. ಅಕ್ರಮ ಹಣ ವರ್ಗಾವಣೆಯ ಆಯಾಮದಿಂದ ಇ.ಡಿ. ತನಿಖೆ ನಡೆಸಲಿದೆ.

ಸುಶಾಂತ್ ಬಳಿ ಅಷ್ಟು ಹಣ ಇರಲಿಲ್ಲ
ಸುಶಾಂತ್ ಬ್ಯಾಂಕ್ ಖಾತೆಯಿಂದ ರಿಯಾ ಖಾತೆಗೆ ಯಾವುದೇ ಹಣ ವರ್ಗಾವಣೆಯಾಗಿಲ್ಲ ಎಂದು ಸುಶಾಂತ್ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಚಾರ್ಟೆಡ್ ಅಕೌಂಟೆಂಟ್ ಸಂದೀಪ್ ಶ್ರೀಧರ್ ಹೇಳಿದ್ದಾರೆ. ಸುಶಾಂತ್ ಬ್ಯಾಂಕ್ ಖಾತೆಯಲ್ಲಿ ಭಾರಿ ಪ್ರಮಾಣದ ಹಣವೇನೂ ಇರಲಿಲ್ಲ. ಕೆಲವು ಸಾವಿರ ರೂ. ಹೊರತಾಗಿ ರಿಯಾ ಖಾತೆಗೆ ದೊಡ್ಡ ಮೊತ್ತವೇನೂ ವರ್ಗಾವಣೆಯಾಗಿಲ್ಲ. ವರದಿಯಾಗಿರುವಷ್ಟು ಹಣ ಸುಶಾಂತ್ ಬಳಿ ಇರಲಿಲ್ಲ. ಕಳೆದ ವರ್ಷದಿಂದ ಅವರ ಆದಾಯ ಕಡಿಮೆಯಾಗಿತ್ತು ಎಂದು ಅವರು ಹೇಳಿದ್ದಾರೆ.


Click it and Unblock the Notifications











