ಆನ್ಲೈನ್ ಗೇಮಿಂಗ್ ಸಂಸ್ಥೆ ವಿರುದ್ಧ ದೂರು ನೀಡಿದ ಸಲ್ಮಾನ್ ಖಾನ್
ಸಲ್ಮಾನ್ ಖಾನ್, ಆನ್ಲೈನ್ ಗೇಮಿಂಗ್ ಸಂಸ್ಥೆಯೊಂರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ಆನ್ಲೈನ್ ಗೇಮಿಂಗ್ ಸಂಸ್ಥೆಯೊಂದು ಸಲ್ಮಾನ್ ಭಾಯ್ರ ಹೆಸರನ್ನೇ ಹೋಲುವ 'ಸೆಲ್ಮೋನ್ ಭೋಯ್' ಹೆಸರಿನ ಗೇಮ್ ಒಂದನ್ನು ಬಿಡುಗಡೆ ಮಾಡಿದ್ದು, ಈ ಗೇಮ್ ಸಲ್ಮಾನ್ ಖಾನ್ರ ಕುಖ್ಯಾತ ಹಿಟ್ ಆಂಡ್ ರನ್ ಪ್ರಕರಣವನ್ನು ಆಧರಿಸಿದೆ.
ಸೆಲ್ಮೋನ್ ಭೋಯ್ ಗೇಮ್ನಲ್ಲಿ ಮುಖ್ಯ ಪಾತ್ರ ಸಲ್ಮಾನ್ ಖಾನ್ ರೀತಿಯಲ್ಲಿಯೇ ಕಾಣುತ್ತಿದ್ದು ಕಾರಿನಲ್ಲಿ ಕೂತು ಫುಟ್ಪಾತ್ ಮೇಲೆ ಓಡಾಡುವವರ ಮೇಲೆ ಗಾಡಿ ಓಡಿಸುವುದು. ಪೊಲೀಸರನ್ನು ಹೊಡೆಯುವುದು ಮಾಡುವಂತೆ ಆಟವನ್ನು ಕೋಡ್ ಮಾಡಲಾಗಿದೆ.

ಇದರ ವಿರುದ್ಧ ಸಲ್ಮಾನ್ ಖಾನ್ ಮುಂಬೈ ಹೈಕೋರ್ಟ್ನಲ್ಲಿ ದೂರು ನೀಡಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯವು 'ಸೆಲ್ಮೋನ್ ಭೋಯ್' ಗೇಮ್ ಸಲ್ಮಾನ್ ಖಾನ್ ಜೊತೆಗೆ ಹೆಚ್ಚು ಹೋಲಿಕೆಗಳನ್ನು ಎಂದು ಹೇಳಿ ಗೇಮ್ ಅನ್ನು ಸ್ಥಗಿತಗೊಳಿಸುವಂತೆ ಆದೇಶ ನೀಡಿದೆ.
''ವ್ಯಕ್ತಿಯೊಬ್ಬನ ಜೀವನ, ಆತನ ವಿರುದ್ಧ ದಾಖಲಾಗಿರುವ ಪ್ರಕರಣ ಇತರೆಗಳ ಕುರಿತಾಗಿ ಆಟವನ್ನು ನಿರ್ಮಿಸಲು ವ್ಯಕ್ತಿ ಒಪ್ಪಿಗೆ ನೀಡದೇ ಇದ್ದಾಗಲೂ ಗೇಮ್ ನಿರ್ಮಾಣ ಮಾಡುವುದು ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತಂದಂತೆ ಆಗುತ್ತದೆ'' ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಗೇಮ್ ತಯಾರು ಮಾಡಿರುವವರು ಬಳಸಿರುವ ಚಿತ್ರ, ಸನ್ನಿವೇಶ, ಸಂಗೀತ, ಧ್ವನಿ ಎಲ್ಲವನ್ನೂ ಒಟ್ಟಾಗಿ ನೋಡಿದರೆ ಇದು ಸಲ್ಮಾನ್ ಖಾನ್ರ ವ್ಯಕ್ತಿತ್ವ, ಅವರ ಜೀವನದಲ್ಲಿ ನಡೆದ ಘಟನೆಗಳಿಗೆ ಹೆಚ್ಚು ಹೋಲಿಕೆ ಇರುವುದು ಖಾತ್ರಿಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಪ್ಯಾರಡಿ ಸ್ಟುಡಿಯೋಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು 'ಸೆಲ್ಮೋನ್ ಭೋಯ್' ಗೇಮ್ ಅನ್ನು ನಿರ್ಮಾಣ ಮಾಡಿದ್ದು, ಈ ಸಂಸ್ಥೆಯ ವಿರುದ್ಧ ಆದೇಶ ಹೊರಡಿಸಿರುವ ನ್ಯಾಯಾಲಯವು, ಗೇಮ್ ಅನ್ನು ಹಿಂಪಡೆಯುವಂತೆ ಹೇಳಿರುವುದಲ್ಲದೆ ಇನ್ನು ಮುಂದೆ ವ್ಯಕ್ತಿಯ ವೈಯಕ್ತಿಕ ಜೀವನವನ್ನು ಹೋಲುವ ಗೇಮ್ಗಳನ್ನು ಮಾಡಬಾರದಾಗಿ ಎಚ್ಚರಿಕೆ ಹೇಳಿದೆ. ಅಲ್ಲದೆ ಸಲ್ಮಾನ್ ಖಾನ್ರ ಜನಪ್ರಿಯತೆಯನ್ನು ತಮ್ಮ ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿರುವ ಬಗ್ಗೆಯೂ ಸಂಸ್ಥೆಗೆ ಛೀಮಾರಿ ಹಾಕಿದೆ.
ಸಲ್ಮಾನ್ ಖಾನ್ ಸಲ್ಲಿಸಿರುವ ದೂರಿಗೆ, ಆರೋಪಕ್ಕೆ ಪ್ರತಿಯಾಗಿ ಅಫಿಡವಿಟ್ ಸಲ್ಲಿಸುವಂತೆ ಸಂಸ್ಥೆಗೆ ಸೂಚಿಸಿರುವ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 20ಕ್ಕೆ ಮುಂದೂಡಿದೆ. ಸಲ್ಮಾನ್ ಖಾನ್ ಕಳೆದ ತಿಂಗಳೇ ಗೇಮಿಂಗ್ ಸಂಸ್ಥೆಯ ವಿರುದ್ಧ ಅರ್ಜಿ ಹಾಕಿದ್ದರು.
2002 ರ ಸೆಪ್ಟೆಂಬರ್ 22ರ ರಾತ್ರಿ ಮುಂಬೈನ ಬೇಕರಿಯೊಂದಕ್ಕೆ ಸಲ್ಮಾನ್ ಖಾನ್ ನುಗ್ಗಿತ್ತು, ಫುಟ್ಪಾತ್ ಮೇಲೆ ಮಲಗಿದ್ದ ಒಬ್ಬರು ಮೃತಪಟ್ಟರೆ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದರು. 2015 ರ ವರೆಗೆ ಈ ಪ್ರಕರಣ ವಿಚಾರಣೆ ನಡೆದು 2015 ರ ಮೇ ತಿಂಗಳಲ್ಲಿ ಸಲ್ಮಾನ್ ಖಾನ್ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದರು ಎಂದು ತೀರ್ಪು ನೀಡಿ ಐದು ವರ್ಷ ಶಿಕ್ಷೆ ಪ್ರಕಟಿಸಲಾಯಿತು. ಆ ನಂತರ ಅದನ್ನು ತಡೆ ಹಿಡಿಯಲಾಯಿತು. ನಂತರ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ ಸಲ್ಮಾನ್ ಖಾನ್ ಡ್ರೈವರ್, ಆ ದಿನ ತಾವೇ ಗಾಡಿ ಓಡಿಸುತ್ತಿದ್ದುದಾಗಿ ಹೇಳಿ 'ತಪ್ಪು ಒಪ್ಪಿಕೊಂಡರು' ಸಲ್ಮಾನ್ ಖಾನ್ ಡ್ರೈವರ್ ಅನ್ನು ಬಂಧಿಸಲಾಯ್ತು. ಈ ಪ್ರಕರಣದ ದೇಶದ ಗಮನ ಸೆಳೆದಿತ್ತು. ಪ್ರಕರಣದ ಮುಖ್ಯ ಸಾಕ್ಷಿಯಾಗಿದ್ದ ರವೀಂದ್ರ ಪಾಟೀಲ್ರ ಅಪಹರಣ ಮತ್ತು ಕೊಲೆ ನಡೆದಿದ್ದು ಹಲವು ಅನುಮಾನಗಳಿಗೆ ಕಾರಣವಾಯ್ತು. 2015ರ ಡಿಸೆಂಬರ್ ತಿಂಗಳಲ್ಲಿ ಸಲ್ಮಾನ್ ಖಾನ್ ಅನ್ನು ಹಿಟ್ ಆಂಡ್ ರನ್ ಪ್ರಕರಣದಿಂದ ಸಾಕ್ಷ್ಯ ಕೊರತೆಯ ಕಾರಣ ನೀಡಿ ಖುಲಾಸೆಗೊಳಿಸಲಾಯಿತು.
ಸಲ್ಮಾನ್ ಖಾನ್ರ ಹಿಟ್ ಆಂಡ್ ರನ್ ಪ್ರಕರಣವು ಹಲವು ಕಾರಣಕ್ಕೆ ಬಹಳ ಮುಖ್ಯ. ಈ ಪ್ರಕರಣವು ದೇಶದ ನ್ಯಾಯ ವ್ಯವಸ್ಥೆಯ ಕೈಗನ್ನಡಿ. ನ್ಯಾಯ ಹೇಗೆ ಶ್ರೀಮಂತ ಹಾಗೂ ಬಡವರಿಗೆ ತಾರತಮ್ಯ ಮಾಡುತ್ತದೆ, ಹಾಗೂ ಹಣವುಳ್ಳವರು ಹೇಗೆ ಅಪರಾಧಗಳಿಂದ ಪಾರಾಗುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿ ಈ ಪ್ರಕರಣವನ್ನು ನೀಡಲಾಗುತ್ತದೆ. ಸ್ಟ್ಯಾಂಡ್ ಅಪ್ ಕಾಮಿಡಿ ಶೋಗಳಲ್ಲಿ, ಸಿನಿಮಾಗಳಲ್ಲಿಯೂ ಈ ಪ್ರಕರಣವನ್ನು ಗೇಲಿ ಮಾಡಲಾಗುತ್ತದೆ.


Click it and Unblock the Notifications











