ಆಗೊಮ್ಮೆ, ರಾಮಾಯಣ, ಮಹಾಭಾರತದ ಬಗ್ಗೆ ಹೀಗೆ ಹೇಳಿದ್ದರು ಶಾರುಖ್ ಖಾನ್
ಬಾಲಿವುಡ್ನ ಖಾನ್ ತ್ರಯರನ್ನು ದೇಶದ್ರೋಹಿಗಳಂತೆ ಬಿಂಬಿಸುವ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ನಡೆಯುತ್ತಾ ಬಂದಿದೆ. ಅವರು ಹಿಂದು ವಿರೋಧಿಗಳೆಂದು, ಪಾಕಿಸ್ತಾನ ಪರವೆಂದು ಏನೇನೋ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಕಾಣಲು ಸಿಗುತ್ತವೆ.
ಶಾರುಖ್ ಖಾನ್ ಬಗ್ಗೆಯೂ ಇಂಥಹಾ ಹಲವು ಪೋಸ್ಟ್ಗಳು ಆಗಾಗ್ಗೆ ಪ್ರಕಟವಾಗುತ್ತಲೇ ಇರುತ್ತವೆ. ಹಿಂದು ಮಹಿಳೆ ಗೌರಿ ಯನ್ನು ವಿವಾಹವಾಗಿ ತಮ್ಮ ನಿವಾಸದಲ್ಲಿ ಸರ್ವಧರ್ಮ ಪರಿಪಾಲನೆ ಮಾಡುವ ಶಾರುಖ್ ಖಾನ್ ಬಗ್ಗೆ ಒಂದು ವರ್ಗದವರು ಸದಾ ದ್ವೇಷ ಕಾರುತ್ತಿರುತ್ತಾರೆ.
ಆದರೆ ಶಾರುಖ್ ಖಾನ್ಗೆ ತಮ್ಮ ಧರ್ಮದ ಬಗ್ಗೆ ಮಾತ್ರವಲ್ಲ ಹಿಂದು ಧರ್ಮದ ಬಗ್ಗೆಯೂ ಅಪಾರ ಗೌರವ, ಪ್ರೀತಿ ಹಾಗೂ ಮಾಹಿತಿಯೂ ಇದೆ. ಇತ್ತೀಚೆಗೆ ರಾಜಮೌಳಿ ಹಾಗೂ ಇನ್ನೂ ಕೆಲವು ನಿರ್ದೇಶಕರು ರಾಮಾಯಣ, ಮಹಾಭಾರತವನ್ನು ಅದ್ಧೂರಿಯಾಗಿ ತೆರೆ ಮೇಲೆ ತರುವ ಬಗ್ಗೆ ಮಾತನಾಡುತ್ತಿದ್ದಾರೆ ಆದರೆ ಶಾರುಖ್ ಖಾನ್ ಈ ಯೋಚನೆಯನ್ನು 10 ವರ್ಷದ ಹಿಂದೆಯೇ ಮಾಡಿದ್ದರು. ಹತ್ತು ವರ್ಷದ ಹಿಂದೆ, ಮಹಾಭಾರತ, ರಾಮಾಯಣದ ಕತೆಗಳು ಮತ್ತು ಅವುಗಳನ್ನು ತೆರೆ ಮೇಲೆ ತರುವ ಪ್ರಯತ್ನದ ಬಗ್ಗೆ ಶಾರುಖ್ ಖಾನ್ ಮಾತನಾಡಿದ್ದ ವಿಡಿಯೋ ಇದೀಗ ವೈರಲ್ ಆಗಿದೆ.

ಶಾರುಖ್ ಖಾನ್ರ ಹಳೆಯ ಸಂದರ್ಶನ ವೈರಲ್
2011 ರಲ್ಲಿ ಶಾರುಖ್ ಖಾನ್ ನಟನೆಯ ಸೂಪರ್ ಹೀರೋ ಸಿನಿಮಾ 'ರಾ ಒನ್' ತೆರೆಗೆ ಬಂದಿತ್ತು. ಆ ಸಮಯದಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಶಾರುಖ್ ಖಾನ್, ನೀವು ಸೂಕ್ಷ್ಮವಾಗಿ ಗಮನಿಸಿದರೆ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿರುವ ಬಹುತೇಕ ಸೂಪರ್ ಹೀರೋ ಸಿನಿಮಾಗಳಿಗೆ ಮೂಲ ನಮ್ಮ ರಾಮಾಯಣ, ಮಹಾಭಾರತವೇ ಆಗಿದೆ. ಬಲ ಭೀಮನನ್ನು ಹಲ್ಕ ಮಾದರಿಯಲ್ಲಿ, ಅರ್ಜುನನ ಪ್ರೇರಣೆ ಪಡೆದು ಹಾಕ್ ಐ ನಿರ್ಮಿಸಲಾಗಿದೆ. ಎಲ್ಲೋ ನಡೆದಿದ್ದು ಇಲ್ಲಿಂದಲೇ ನೋಡುವ ನಕುಲ-ಸಹದೇವರ ಪ್ರೇರಣೆ ಮ್ಯಾಗ್ನಿಟೊ ಮೇಲಿದೆ. ಇನ್ನೂ ಹಲವು ಸೂಪರ್ ಹೀರೋಗಳು ಭಾರತದ ಪೌರಾಣಿಕ ಕತೆಗಳಿಂದ ಇನ್ಸ್ಪೈರ್ ಆಗಿ ನಿರ್ಮಿಸಲ್ಪಟ್ಟಿವೆ. 'ಅವತಾರ್' ಸಿನಿಮಾದಲ್ಲಿ ಇರುವುದು ಶ್ರೀಕೃಷ್ಣನ ಫಿಲಾಸಫಿಯೇ.'' ಎಂದಿದ್ದರು ಆಗ.

ನಮ್ಮ ದೇವರ ಕತೆಗಳು ಅದ್ಭುತವಾಗಿವೆ: ಶಾರುಖ್ ಖಾನ್
''ಬೇರೆ ಬೇರೆ ದೇಶದ ಪೌರಾಣಿಕ ಕತೆಗಳನ್ನು ಗಮನಿಸಿದರೂ ಸಹ ಅದರ ಮೇಲೆ ಹಿಂದು ಧರ್ಮದ ಪ್ರಭಾವ ಇರುವುದು ಕಾಣಬಹುದು. ದೇವರು ಪುಷ್ಪಕ ವಿಮಾನದಲ್ಲಿ ಬಂದರು. ಅವರ ಬಳಿ ಇಂಥಹಾ ಒಂದು ಆಯುಧ ಇತ್ತು. ಇದೆಲ್ಲವೂ ಹಿಂದು ಧರ್ಮದ ಕತೆಗಳಲ್ಲಿ ಇರುವಂಥಹುದೇ. ನಮ್ಮ ದೇವರುಗಳ ವಿಶೇಷತೆಗಳೇ ಅದ್ಭುತವಾಗಿದೆ. ಅವರ ಜನನ, ಶಕ್ತಿ, ಧ್ಯೇಯ ಇವೆಲ್ಲವು ಅದ್ಭುತವಾದ ಕತೆಗಳು. ನನಗೆ ಅವಕಾಶ ಸಿಕ್ಕರೆ ನಾನು ಖಂಡಿತವಾಗಿಯೂ ಮಹಾಭಾರತವನ್ನು 'ಎಕ್ಸ್ ಮ್ಯಾನ್' ರೀತಿ ನಿರ್ಮಾಣ ಮಾಡುತ್ತೇನೆ'' ಎಂದಿದ್ದರು ಶಾರುಖ್ ಖಾನ್.

''ನಾನು ಸಿನಿಮಾ ಮಾಡಿದರೆ ಬ್ಯಾನ್ ಮಾಡುವ ಸಾಧ್ಯತೆ ಇದೆ''
''ನಾನು ಮಹಾಭಾರತವನ್ನು ಸಿನಿಮಾ ಮಾಡಿದರೆ ಹಲವರು ಬೇಸರ ಪಟ್ಟುಕೊಳ್ಳುತ್ತಾರೆ, ಸಿಟ್ಟು ಮಾಡಿಕೊಳ್ಳುತ್ತಾರೆ. ನನ್ನನ್ನು, ಸಿನಿಮಾವನ್ನು ಬ್ಯಾನ್ ಮಾಡುವ ಸಾಧ್ಯತೆಯೂ ಇದೆ ಎಂಬುದು ನನಗೆ ಗೊತ್ತು. ಆದರೆ ಆ ಕತೆಗಳನ್ನು ಹೊಸ ಮಾಧ್ಯಮದ ಮೂಲಕ ಹೇಳುವುದು ಅವಶ್ಯಕವಾಗಿದೆ. ನಾವು ಬಾಲ್ಯದಲ್ಲಿ ಓದಿದಂತೆ ರಾಮಾಯಣ, ಮಹಾಭಾರತ, ಖುರಾನ್ಗಳನ್ನು ನಮ್ಮ ಮಕ್ಕಳು ಓದುತ್ತಿಲ್ಲ, ಹಾಗಾಗಿ ಅವರಿಗೆ ಹೊಸ ಮಾಧ್ಯಮದ ಮೂಲಕ ಇವುಗಳ ಪರಿಚಯ ಮಾಡಿಸಬೇಕಿದೆ, ಆ ಮೂಲಕ ಆ ಮಹಾನ್ ಗ್ರಂಥಗಳ ಬಗ್ಗೆ ಆಸಕ್ತಿ ಮೂಡುವಂತೆ ಮಾಡಬೇಕಿದೆ'' ಎಂದಿದ್ದರು ಶಾರುಖ್ ಖಾನ್.

ಸೂಪರ್ಮ್ಯಾನ್, ಹೀ ಮ್ಯಾನ್ಗೂ ಮುಂಚೆ 'ಹನುಮಾನ್'
'ದಿ ಲಾಸ್ಟ್ ಮ್ಯಾನ್ ಸ್ಟಾಂಡಿಗ್' ಸಿನಿಮಾದ ಹಾಲಿವುಡ್ ನಿರ್ದೇಶಕ ನನಗೊಮ್ಮೆ ಕತೆ ಹೇಳಿದ್ದರು. 'ಸೂಪರ್ ಮ್ಯಾನ್', 'ಬ್ಯಾಟ್ ಮ್ಯಾನ್', 'ಹೀ ಮ್ಯಾನ್'ಗಳಿಗಿಂತಲೂ ಮುಂಚೆ ಇದ್ದಿದ್ದು 'ಹನುಮಾನ್' ಎಂದಿದ್ದ ಅವರು, ಹನುಮಾನ್ ಸಿನಿಮಾದ ಬಗ್ಗೆ ಅದ್ಭುತವಾದ ಪ್ರೆಸೆಂಟೇಶನ್ ನೀಡಿದ್ದರು. ಅವರು ನಮ್ಮ ದೇವರುಗಳ ಬಗ್ಗೆ ಯೋಚಿಸಿದಂತೆ ನಮಗೆ ಯೋಚಿಸಲಾಗುತ್ತಿಲ್ಲ. ನಾನು ನಿರ್ಮಿಸಿರುವ 'ರಾ ಒನ್' ಸಿನಿಮಾ ಅಸಲಿಗೆ ರಾಮಾಯಣವೇ ಆಗಿದೆ. ಇದರಲ್ಲಿ ಜೀವ ಪಾತ್ರ ಆಧಾರವಾಗಿರುವುದು ರಾಮನ ಗುಣಗಳ ಮೇಲೆ, ರಾ ಒನ್ ಆಧಾರವಾಗಿರುವುದು ರಾವಣನ ವ್ಯಕ್ತಿತ್ವದ ಮೇಲೆ. ಜೀ ಒನ್ಗೆ ನಾವು ಬಿಲ್ಲು ಬಾಣವನ್ನು ಆಯುಧವಾಗಿ ನೀಡುವ ಯೋಜನೆ ಹಾಕಿದ್ದೆವು, ಆದರೆ ಆ ನಂತರ ಬೇರೆ ಕಾರಣಕ್ಕೆ ನಾವು ಕೈಬಿಟ್ಟೆವು'' ಎಂದು ಮಾಹಿತಿ ಹಂಚಿಕೊಂಡಿದ್ದರು ಶಾರುಖ್ ಖಾನ್.


Click it and Unblock the Notifications











