ನಟ ಸುಶಾಂತ್ ಸಿಂಗ್ ಆತ್ಮಹತ್ಯೆ: ಇಲ್ಲಿದೆ ತನಿಖೆಯ ಪ್ರಾಥಮಿಕ ಮಾಹಿತಿ
ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ 34 ನೇ ವಯಸ್ಸಿನಲ್ಲಿ ಅಸಹಜ ಸಾವಿಗೆ ಗುರಿಯಾಗಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಅವರ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಬಾಲಿವುಡ್ನಲ್ಲಿ ಚೆನ್ನಾಗಿ ಬೆಳೆಯುತ್ತಿದ್ದ, ಬೇಡಿಕೆಯ ಯುವನಟ ಆಗಿದ್ದ ಸುಶಾಂತ್ ತನ್ನ ವೃತ್ತಿ ಏರುಗತಿಯಲ್ಲಿದ್ದಾಗ ಆತ್ಮಹತ್ಯೆಯಂಥಹಾ ಹೀನ ನಿರ್ಣಯ ಏಕೆ ಮಾಡಿದರು ಎಂಬುದು ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.
ಮುಂಬೈ ಪೊಲೀಸರು ಸುಶಾಂತ್ ಸಾವಿಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ. ಇದೊಂದು ಹೈಪ್ರೊಫೈಲ್ ಪ್ರಕರಣವಾದ ಕಾರಣ ಎಲ್ಲರ ಕಣ್ಣುಗಳೂ ಪ್ರಕರಣದ ಸುತ್ತ ಇವೆ.
ಪ್ರಕರಣದ ತನಿಖೆಯಲ್ಲಿ ಪೊಲೀಸರು ಗಮಿನಿಸುತ್ತಿರುವ ಕೆಲವು ಪ್ರಾಥಮಿಕ ಮಾಹಿತಿ ಇಲ್ಲಿವೆ....

ಸುಶಾಂತ್ ಸಿಂಗ್ ಇದ್ದ ಮನೆಯ ಬಾಡಿಗೆ?
ಸುಶಾಂತ್ ಸಿಂಗ್ ರಜಪೂತ್ ಮುಂಬೈನ ಬಾಂದ್ರಾದಲ್ಲಿನ ಮನೆಗೆ ಕೇವಲ ಆರು ತಿಂಗಳ ಹಿಂದಷ್ಟೆ ಶಿಫ್ಟ್ ಆಗಿದ್ದರು. ಆ ಮನೆಗೆ ಬರೋಬ್ಬರಿ 4.5 ಲಕ್ಷ ರೂಪಾಯಿ ಹಣವನ್ನು ಬಾಡಿಗೆಯಾಗಿ ಪ್ರತಿ ತಿಂಗಳು ಕಟ್ಟುತ್ತಿದ್ದರು.

ಸುಶಾಂತ್ ಜೊತೆ ಮನೆಯಲ್ಲಿ ಯಾರಿದ್ದರು?
ಸುಶಾಂತ್ ಸಿಂಗ್ ಅವರು ತಮ್ಮ ಹೊಸ ಬಾಡಿಗೆ ಮನೆಯಲ್ಲಿ ಒಬ್ಬ ಕಲಾ ನಿರ್ದೇಶಕನ ಜೊತೆಗೆ ವಾಸವಿದ್ದರು. ಅವರಿಬ್ಬರ ಜೊತೆಗೆ ಒಬ್ಬ ಅಡುಗೆಯವ ಹಾಗೂ ಇಬ್ಬರು ಕೆಲಸದವರು ಅಥವಾ ಸಹಾಯಕರು ಇದ್ದರು.

ಕೊನೆಯದಾಗಿ ಕರೆ ಮಾಡಿದ್ದು ಯಾರಿಗೆ?
ಸುಶಾಂತ್ ಸಿಂಗ್ ಕೊನೆಯ ಕರೆಯನ್ನು ಟಿವಿ ನಟ ಮಹೇಶ್ ಶೆಟ್ಟಿ ಎಂಬುವರಿಗೆ ಮಾಡಿದ್ದರಂತೆ. ಸುಶಾಂತ್ ಹಾಗೂ ಮಹೇಶ್ ಒಟ್ಟಿಗೆ ಧಾರಾವಾಹಿಯಲ್ಲಿ ನಟಿಸಿದ್ದರು. ಇದೇ ದಿನ ಬೆಳಿಗ್ಗೆ ಸುಶಾಂತ್ ವಿದೇಶದಲ್ಲಿರುವ ತಮ್ಮ ಸಹೋದರಿಗೆ ಕರೆ ಮಾಡಿದ್ದರಂತೆ.

ಮೊದಲು ಮನೆಗೆ ಬಂದವರು ಯಾರು?
ಸುಶಾಂತ್ ಸಿಂಗ್ ನ ಗೆಳೆಯರು ಇಂದು ಬೆಳಿಗ್ಗೆ ಮೊದಲಿಗೆ ಸುಶಾಂತ್ ಸಿಂಗ್ ಮನೆಗೆ ಬಂದರು. ಬಾಗಿಲು ಹಾಕಿತ್ತು, ಸುಶಾಂತ್ಗೆ ಕರೆ ಮಾಡಿದರು ಆದರೆ ಕರೆಗೆ ಪ್ರತಿಕ್ರಿಯೆ ಇಲ್ಲ. ಹಾಗಾಗಿ ಸುಶಾಂತ್ನ ಮ್ಯಾನೇಜರ್ ಗೆ ಕರೆ ಮಾಡಿ ಅವರನ್ನು ಕರೆಸಿಕೊಂಡರು.

ಸುಶಾಂತ್ ಮನೆ ಬಾಗಿಲು ತೆಗೆದಿದ್ದು ಹೇಗೆ?
ಸುಶಾಂತ್ ಸಿಂಗ್ ಮನೆಯ ಬಾಗಿಲನ್ನು ಒಡೆಯಲು ಪ್ರಯತ್ನಿಸಿದರು. ಆದರೆ ಒಡೆಯಲು ಸಾಧ್ಯವಾಗಲಿಲ್ಲ. ಆಗ ಸುಶಾಂತ್ ಮ್ಯಾನೇಜರ್ ಒಬ್ಬ ಕೀ ಮಾಡುವವರನ್ನು ಕರೆಸಿ ನಕಲಿ ಕೀ ಮಾಡಿಸಿ ಕೀಲಿ ತೆಗೆದು ಒಳಗೆ ಹೋದರು. ಆಗ ರೂಮ್ ನಲ್ಲಿ ಸುಶಾಂತ್ ದೇಹ ಫ್ಯಾನ್ಗೆ ನೇತುಹಾಕಿದ ಸ್ಥಿತಿಯಲ್ಲಿತ್ತು.

ಸುಶಾಂತ್ ಬಳಿ ಎಷ್ಟು ಮೊಬೈಲ್ ಇತ್ತು?
ಸುಶಾಂತ್ ಸಿಂಗ್ ಬಳಿ ಎರಡು ಮೊಬೈಲ್ ಫೋನ್ ಹಾಗೂ ಒಂದು ಲ್ಯಾಪ್ಟಾಪ್ ಇತ್ತು. ಇದನ್ನು ಪೊಲೀಸರು ವಶಕ್ಕೆ ಪಡೆದು ಫೊರಾನ್ಸಿಕ್ ಲ್ಯಾಬ್ಗೆ ಕಳಿಸಿಕೊಟ್ಟಿದ್ದಾರೆ. ಇದರಿಂದ ಹೆಚ್ಚಿನ ಮಾಹಿತಿ ಹೊರಬರುವ ಸಾಧ್ಯತೆ ಇದೆ.

ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದೆ
ಸುಶಾಂತ್ ಸಿಂಗ್ ಜೊತೆಗೆ ಮನೆಯಲ್ಲಿ ವಾಸವಿದ್ದ ಕಲಾ ನಿರ್ದೇಶಕ, ಆತನ ಅಡುಗೆಯವ, ಕೆಲಸಗಾರರು, ಇಂದು ಮನೆಗೆ ಬಂದಿದ್ದ ಗೆಳೆಯರು, ಸುಶಾಂತ್ನ ಮ್ಯಾನೇಜರ್, ಬಾಗಿಲು ತೆರೆದ ಕೀ ಮಾಡುವವನ ಪ್ರಾಥಮಿಕ ಹೇಳಿಕೆಗಳನ್ನು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ಪಡೆದುಕೊಂಡಿದ್ದಾರೆ.

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು
ಸುಶಾಂತ್ ರಜಪೂತ್ ಅವರ ಮೃತದೇಹವನ್ನು ಕೂಪರ್ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯ ಹರೀಶ್ ರೆಡ್ಡಿ ಎಂಬುವರು ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ವರದಿಗಾಗಿ ನಿರೀಕ್ಷಿಸಲಾಗುತ್ತಿದೆ. ವರದಿ ಇನ್ನೆರಡು ದಿನಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.


Click it and Unblock the Notifications











