'ಸತ್ಯ ಗೆಲ್ಲಲಿದೆ': ಸುಶಾಂತ್ ಸಿಂಗ್ ಮಾಜಿ ಪ್ರೇಯಸಿಯ ಹೇಳಿಕೆ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಸುಶಾಂತ್ ಅಭಿಮಾನಿಗಳು ಹಾಗೂ ಕಂಗನಾ ರಣಾವತ್ ಸೇರಿದಂತೆ ಕೆಲವು ಸೆಲೆಬ್ರಿಟಿಗಳು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಇದರಲ್ಲಿ ಅನೇಕ ಗಣ್ಯರ ಕೈವಾಡ ಇದೆ ಎಂದು ಸತತ ಒತ್ತಾಯ ಮಾಡುತ್ತಿದ್ದರು. ಇದುವರೆಗೂ ಮೌನವಹಿಸಿದ್ದ ಸುಶಾಂತ್ ಸಿಂಗ್ ಕುಟುಂಬ ಕೂಡ ಈಗ ಮುಂದೆ ಬಂದಿದೆ. ಸುಶಾಂತ್ ಆತ್ಮಹತ್ಯೆಯ ಹಿಂದೆ ಬೇರೆ ಯಾವುದೇ ಸಂಚು ನಡೆದಿದೆ ಎಂಬ ಅನುಮಾನ ವ್ಯಕ್ತಪಡಿಸಿದೆ.
Recommended Video
ಸುಶಾಂತ್ ಬಣ್ಣದ ಲೋಕಕ್ಕೆ ಕಾಲಿಟ್ಟಾಗಿನಿಂದ ಅವರಿಗೆ ಬಹಳ ಆಪ್ತರಾಗಿದ್ದವರು ನಟಿ ಅಂಕಿತಾ ಲೋಖಂಡೆ. ಸುಶಾಂತ್ ಮತ್ತು ಅಂಕಿತಾ ಜತೆಯಾಗಿ ನಟಿಸಿದ್ದ 'ಪವಿತ್ರ ರಿಷ್ತಾ' ಧಾರಾವಾಹಿ ಬಹುದೊಡ್ಡ ಹಿಟ್ ಆಗಿತ್ತು. ಈ ಜೋಡಿ ಮನೆ ಮನೆಗಳಲ್ಲಿ ಮಾತಾಗಿತ್ತು. ಇಬ್ಬರ ನಡುವೆ ಪ್ರೀತಿಯೂ ಮೊಳೆತಿತ್ತು. ಹಲವು ವರ್ಷ ಲಿವಿ ಇನ್ ಟುಗೆದರ್ನಲ್ಲಿದ್ದರು. ಮುಂದೆ ಓದಿ...

ಸುಶಾಂತ್ಗೆ ಆಪ್ತರಾಗಿದ್ದ ಅಂಕಿತಾ
ಸುಶಾಂತ್ ಅವರ ಶಕ್ತಿ ಮತ್ತು ದೌರ್ಬಲ್ಯಗಳ ಅರಿವು ಅಂಕಿತಾ ಅವರಿಗಿತ್ತು. ತಾಯಿಯನ್ನು ನೆನಪಿಸಿಕೊಂಡು ಸುಶಾಂತ್ ಕಣ್ಣೀರಿಟ್ಟ ಸಂದರ್ಭದಲ್ಲಿ ಅಂಕಿತಾ ಸಮಾಧಾನಪಡಿಸುತ್ತಿದ್ದರು. ಆದರೆ ಸುಶಾಂತ್ ಮತ್ತು ಅಂಕಿತಾ ಸಂಬಂಧ ಕಾರಣಾಂತರಗಳಿಂದ ಮುರಿದಿತ್ತು. ಅಂಕಿತಾ ಬೇರೊಬ್ಬರ ಜತೆಗೆ ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು.

ಸುಶಾಂತ್ ಬಗ್ಗೆ ಹೆಚ್ಚು ಮಾಹಿತಿ ಇದೆ
ಅಂಕಿತಾ ನಿಶ್ಚಿತಾರ್ಥವಾದ ಸಂದರ್ಭದಿಂದಲೂ ಸುಶಾಂತ್ ಮತ್ತಷ್ಟು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಸುಶಾಂತ್ ಖಾಸಗಿ ಮತ್ತು ವೃತ್ತಿ ಬದುಕಿನ ಬಗ್ಗೆ ಅವರ ಕುಟುಂಬದವರಿಗಿಂತಲೂ ಅಂಕಿತಾಗೆ ಹೆಚ್ಚು ಮಾಹಿತಿ ಇದೆ ಎಂದೂ ಹೇಳಲಾಗುತ್ತಿದೆ.

ಕುಟುಂಬದೊಂದಿಗೆ ಉತ್ತಮ ಸಂಬಂಧ
ಸುಶಾಂತ್ರಿಂದ ದೂರವಾಗಿದ್ದರೂ ಅಂಕಿತಾ ಮತ್ತು ಸುಶಾಂತ್ ಕುಟುಂಬದ ಸಂಬಂಧ ಚೆನ್ನಾಗಿಯೇ ಇತ್ತು. ಪಟ್ನಾದಲ್ಲಿರುವ ಸುಶಾಂತ್ ಮನೆಗೆ ಅಂಕಿತಾ ಭೇಟಿ ನೀಡಿದ್ದರು. ಸುಶಾಂತ್ ಸಾವಿನ ಬಳಿಕ ಅಂಕಿತಾ ಕುಟುಂಬದವರನ್ನು ಸಮಾಧಾನಪಡಿಸಿದ್ದರು. ಸುಶಾಂತ್ ಸಹೋದರಿ ಶ್ವೇತಾ ಅವರ ಸಾಮಾಜಿಕ ಜಾಲತಾಣದ ಪೋಸ್ಟ್ಗಳಿಗೆ ಅಂಕಿತಾ ಪ್ರತಿಕ್ರಿಯಿಸುತ್ತಿದ್ದರು.

ಸತ್ಯ ಗೆಲ್ಲಲಿದೆ ಎಂದಿದ್ದೇಕೆ?
ಆದರೆ, ಸುಶಾಂತ್ ಸಾವಿನ ವಿಚಾರವಾಗಿ ನಡೆಯುತ್ತಿರುವ ಗದ್ದಲಕ್ಕೆ ಸಂಬಂಧಿಸಿದಂತೆ ಅಂಕಿತಾ ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ. ಸಿಬಿಐ ತನಿಖೆಯ ಆಗ್ರಹಕ್ಕೂ ದನಿಗೂಡಿಸಿಲ್ಲ. ಈ ನಡುವೆ ಬುಧವಾರ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್, ತೀವ್ರ ಚರ್ಚೆಗೆ ಒಳಗಾಗಿದೆ. ಸುಶಾಂತ್ ತಂದೆ ಬಿಹಾರದಲ್ಲಿ ರಿಯಾ ಚಕ್ರಬೊರ್ತಿ ವಿರುದ್ಧ ದೂರು ನೀಡಿದ್ದರ ಕುರಿತಾಗಿಯೇ ಅಂಕಿತಾ ಈ ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. 'ಸತ್ಯ ಗೆಲ್ಲಲಿದೆ' ಎಂದು ಅಂಕಿತಾ ಬರೆದುಕೊಂಡಿದ್ದಾರೆ. ಇದು ಸುಶಾಂತ್ ಪ್ರಕರಣದಲ್ಲಿ ಬೇರೇನೋ ನಡೆದಿದೆ. ರಿಯಾ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂಬ ನೆಟ್ಟಿಗರ ಬೇಡಿಕೆಗೆ ಮತ್ತಷ್ಟು ಶಕ್ತಿ ನೀಡಿದೆ. ದಯವಿಟ್ಟು ಬಹಿರಂಗವಾಗಿ ಮಾತನಾಡಿ, ಸುಶಾಂತ್ ಸಾವಿಗೆ ನ್ಯಾಯ ದೊರಕಿಸಿ ಎಂದು ಅಭಿಮಾನಿಗಳು ಅವರಿಗೆ ಮನವಿ ಮಾಡಿದ್ದಾರೆ.


Click it and Unblock the Notifications











