ಸುಶಾಂತ್ ಸಿಂಗ್ ಕುರಿತು ಆಘಾತಕಾರಿ ಸಂಗತಿ ತಿಳಿಸಿದ ನಿರ್ದೇಶಕ
ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ಒಂದು ತಿಂಗಳಾಗುತ್ತಾ ಬಂದರೂ ಗೊಂದಲ ಮತ್ತು ಗದ್ದಲ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಸುಶಾಂತ್ ಸಾವಿನ ಸುತ್ತ ಅನೇಕ ಸಂಗತಿಗಳು ಹೊರಬರುತ್ತಿವೆ. ಹಳೆಯ ಘಟನೆಗಳನ್ನು ಜನರು ಕೆದಕುತ್ತಿದ್ದರೆ, ಹೊಸ ಹೊಸ ವಿವಾದಗಳು ಕೂಡ ಸೃಷ್ಟಿಯಾಗುತ್ತಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಬಾಂದ್ರಾ ಪೊಲೀಸರು, ಸುಶಾಂತ್ ಅವರೊಂದಿಗೆ ವಿವಿಧ ವ್ಯವಹಾರಗಳಲ್ಲಿ ಸಂಪರ್ಕದಲ್ಲಿದ್ದ 25ಕ್ಕೂ ಹೆಚ್ಚು ಮಂದಿಯಿಂದ ಹೇಳಿಕೆ ಪಡೆದುಕೊಂಡಿದ್ದಾರೆ. ಸುಶಾಂತ್ ಅವರಿಗೆ ನಾಲ್ಕು ಬಾರಿ ಸಿನಿಮಾ ಆಫರ್ ನೀಡಿದ್ದರೂ ಒಂದೂ ಚಿತ್ರ ಅವರೊಂದಿಗೆ ಮಾಡದ ಕಾರಣಕ್ಕೆ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರಿಂದ ಇತ್ತೀಚೆಗೆ ಹೇಳಿಕೆ ಪಡೆದುಕೊಳ್ಳಲಾಗಿತ್ತು. ಈಗ ಮತ್ತೊಬ್ಬ ನಿರ್ದೇಶಕ ಶೇಖರ್ ಕಪೂರ್ ಅವರಿಗೆ ಖುದ್ದು ಹಾಜರಾಗಿ ಹೇಳಿಕೆ ನೀಡುವಂತೆ ಪೊಲೀಸರು ಸಮನ್ಸ್ ನೀಡಿದ್ದಾರೆ. ಮುಂದೆ ಓದಿ...

ಇ-ಮೇಲ್ ಮೂಲಕ ಹೇಳಿಕೆ ರವಾನೆ
ಸುಶಾಂತ್ ಸಿಂಗ್ ರಜಪೂತ್ ಸಾವಿನ ಹಿಂದೆ ಬೇರೆ ಬೇರೆ ಅಂಶಗಳಿರಬಹುದು ಎಂದು ಬಹಿರಂಗವಾಗಿ ಮಾತನಾಡಿದ ಬಾಲಿವುಡ್ನ ಕೆಲವೇ ಹೆಸರಾಂತ ವ್ಯಕ್ತಿಗಳಲ್ಲಿ ಶೇಖರ್ ಕಪೂರ್ ಕೂಡ ಒಬ್ಬರು. ಇದರ ಬಗ್ಗೆ ಹೆಚ್ಚು ಸ್ಪಷ್ಟತೆಗಾಗಿ ಮಾಹಿತಿ ನೀಡುವಂತೆ ಶೇಖರ್ ಕಪೂರ್ ಅವರನ್ನು ಕೇಳಲಾಗಿದೆ. ತಾವು ಪ್ರಸ್ತುತ ಮುಂಬೈನಲ್ಲಿ ಇಲ್ಲ ಎಂದಿರುವ ಶೇಖರ್ ಕಪೂರ್, ಇ-ಮೇಲ್ ಮೂಲಕ ತಮ್ಮ ಹೇಳಿಕೆಯನ್ನು ರವಾನಿಸಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿವರ ಕೇಳಿದ ಪೊಲೀಸರು
ಆದರೆ ತಮ್ಮ ಟ್ವೀಟ್ಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಒದಗಿಸಬೇಕು. ಅವುಗಳಲ್ಲಿ ಬೇರೆ ಸಂಗತಿಗಳ ಇರುವುದರಿಂದ ಮತ್ತಷ್ಟು ಮಾಹಿತಿ ಅಗತ್ಯವಾಗಿದೆ. ಇದನ್ನು ನೀಡಲು ಖುದ್ದಾಗಿ ಪೊಲೀಸ್ ಠಾಣೆಗೆ ಬರಲೇಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ.

ಸಂಪೂರ್ಣ ಕುಗ್ಗಿ ಹೋಗಿದ್ದ ಸುಶಾಂತ್
2015ರಲ್ಲಿ ತಮ್ಮ ಚಿತ್ರ 'ಪಾನಿ' ನಿಂತು ಹೋದಾಗ ಸುಶಾಂತ್ ಸಿಂಗ್ ಅಕ್ಷರಶಃ ಕುಸಿದುಹೋಗಿದ್ದರು ಎಂದು ಇ-ಮೇಲ್ ಮೂಲಕ ರವಾನಿಸಿರುವ ಹೇಳಿಕೆಯಲ್ಲಿ ಶೇಖರ್ ಕಪೂರ್ ತಿಳಿಸಿದ್ದಾರೆ. ಸುಮಾರು 150 ಕೋಟಿ ರೂ. ಬಜೆಟ್ನ ಈ ಚಿತ್ರಕ್ಕೆ ಸುಶಾಂತ್ ಬಹಳ ಉತ್ಸಾಹದಿಂದ ಪರಿಶ್ರಮಪಟ್ಟು ತಯಾರಿ ನಡೆಸಿದ್ದರು. ಈ ಚಿತ್ರದ ಬಗ್ಗೆ ಸುಶಾಂತ್ ಬಹಳ ಕನಸು ಕಂಡಿದ್ದರು. ಆದರೆ ಆರಂಭದಲ್ಲಿ ಐದು ಕೋಟಿ ರೂ ವಿನಿಯೋಗಿಸಿದ್ದ ಯಶ್ ರಾಜ್ ಫಿಲಂಸ್ ನಿರ್ಮಾಣ ಸಂಸ್ಥೆ ಸೃಜನಶೀಲ ಭಿನ್ನಾಭಿಪ್ರಾಯದ ಕಾರಣದಿಂದ ಸಿನಿಮಾವನ್ನು ನಿಲ್ಲಿಸಿ ಹೊರನಡೆದಿತ್ತು ಎಂದು ವರದಿಯಾಗಿದೆ.

ಯಶ್ ರಾಜ್ ಜತೆ ಮನಸ್ತಾಪ
ಶೇಖರ್ ಕಪೂರ್ ತಮ್ಮ ಇ-ಮೇಲ್ನಲ್ಲಿ ಬೇರೆ ಯಾವುದೇ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಸುಶಾಂತ್ ಈ ಚಿತ್ರಕ್ಕೆ ತೀವ್ರ ಶ್ರಮ ಹಾಕಿದ್ದರು. ಆದರೆ ಯಶ್ ರಾಜ್ ಫಿಲಂಸ್ ಮತ್ತು ಅವರ ನಡುವಿನ ಮನಸ್ತಾಪದಿಂದ ಅದು ಸ್ಥಗಿತಗೊಂಡಿತು. ಈ ಚಿತ್ರದ ನಂತರ ಸುಶಾಂತ್ ತೀವ್ರವಾಗಿ ಕುಗ್ಗಿ ಹೋಗಿದ್ದರು. ಅವರ ಖಿನ್ನತೆಗೆ ಅದೇ ಕಾರಣ ಇರಬಹುದು. ಆದರೆ ಅದರ ಬಗ್ಗೆ ಸುಶಾಂತ್ ಎಂದೂ ಚರ್ಚಿಸಿರಲಿಲ್ಲ ಎಂದು ಶೇಖರ್ ಕಪೂರ್ ಹೇಳಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಖಿನ್ನತೆಗೆ ನೈಜ ಕಾರಣ ತಿಳಿದಿಲ್ಲ
ಸುಶಾಂತ್ ಅವರ ಖಿನ್ನತೆಗೆ ನಿಖರವಾದ ಕಾರಣ ತಮಗೂ ತಿಳಿದಿಲ್ಲ. ಕೆಲವು ಸಮಯದಿಂದ ತಾವು ಲಂಡನ್ನಲ್ಲಿದ್ದು, ಕಳೆದ ಕೆಲವು ತಿಂಗಳಿನಿಂದ ಸುಶಾಂತ್ ಜತೆ ಸಂಪರ್ಕವೇ ಇರಲಿಲ್ಲ ಎಂದು ಶೇಖರ್ ಕಪೂರ್ ಹೇಳಿದ್ದಾರೆ.

ನಾನು ಇರಬೇಕಿತ್ತು...
ಸುಶಾಂತ್ ಸಾವಿನ ಬಳಿಕ ಟ್ವೀಟ್ ಮಾಡಿದ್ದ ಶೇಖರ್ ಕಪೂರ್, 'ನೀವು ಅನುಭವಿಸುತ್ತಿದ್ದ ನೋವು ನನಗೆ ತಿಳಿದಿತ್ತು. ನಿಮ್ಮನ್ನು ಕುಗ್ಗಿಸುವಂತೆ ಮಾಡಿದ ಜನರ ಕಥೆ ನನಗೆ ತಿಳಿದಿದೆ. ನೀವು ನನ್ನ ಭುಜದ ಮೇಲೆ ಅಳುತ್ತಿದ್ದಿರಿ. ಕಳೆದ ಅರು ತಿಂಗಳಲ್ಲಿ ನಾನು ನಿಮ್ಮ ಜೊತೆ ಇರಬೇಕಾಗಿತ್ತು ಎನಿಸುತ್ತಿದೆ. ನೀವು ನನ್ನನ್ನು ಸಂಪರ್ಕಿಸಬೇಕಿತ್ತು ಎನಿಸುತ್ತಿದೆ. ನಿಮಗೆ ಏನಾಗಿದೆಯೋ ಅದು ಅವರ ಕರ್ಮ. ನಿಮ್ಮದಲ್ಲ' ಎಂದು ಬರೆದಿದ್ದರು.


Click it and Unblock the Notifications











