ಸಾವನ್ನು ಸ್ವಂತ ಲಾಭಕ್ಕೆ ಬಳಸಿಕೊಳ್ಳೊಲ್ಲ: ಕಂಗನಾ ರಣಾವತ್ಗೆ ತಾಪ್ಸಿ ಪನ್ನು ತಿರುಗೇಟು
ಕಂಗನಾ ರಣಾವತ್ ಮತ್ತೆ ಬಾಲಿವುಡ್ನಲ್ಲಿ ಕೇಂದ್ರ ಬಿಂದುವಿನಲ್ಲಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಸಾವು ಮತ್ತು ಬಾಲಿವುಡ್ನ ನೆಪೋಟಿಸಂನ ಕುರಿತಾದ ಚರ್ಚೆಯಲ್ಲಿ ಹೆಚ್ಚಿನವರು ತುಟಿಬಿಚ್ಚುತ್ತಿಲ್ಲ. ಇನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ಗಳನ್ನು ಹಾಕಿಕೊಳ್ಳುವ ಮೂಲಕ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಆದರೆ ನಟಿ ಕಂಗನಾ ರಣಾವತ್ ವಿಡಿಯೋಗಳ ಮೂಲಕ, ಮಾಧ್ಯಮಗಳೊಂದಿಗೆ ಮಾತನಾಡುವ ಮೂಲಕ ತಮ್ಮ ವಾದ ಮುಂದಿಡುತ್ತಿದ್ದಾರೆ.
Recommended Video
ಕಂಗನಾ ಬಾಲಿವುಡ್ನ ಅನೇಕ ನಿರ್ಮಾಪಕರು, ನಿರ್ದೇಶಕರು, ನಟರ ಕುರಿತು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಬಾಲಿವುಡ್ನಲ್ಲಿ ಮೂವಿ ಮಾಫಿಯಾ ಎಂದು ಆರೋಪಿಸಿರುವ ಅವರು, ಸುಶಾಂತ್ ಸಿಂಗ್ ಸಾವಿನ ಹಿನ್ನೆಲೆಯಲ್ಲಿ ಪ್ರಭಾವಶಾಲಿ ವ್ಯಕ್ತಿಗಳಿದ್ದಾರೆ ಎಂದಿದ್ದಾರೆ. ಅಷ್ಟೇ ಅಲ್ಲ, ಹೊರಗಿನಿಂದ ಬಂದವರೇ ಆದ ತಾಪ್ಸಿ ಪನ್ನು ಮತ್ತು ಸ್ವರ ಭಾಸ್ಕರ್ ವಿರುದ್ಧವೂ ಕಿಡಿಕಾರಿದ್ದು, ಅವರನ್ನು ಬಿ ಗ್ರೇಡ್ ನಟಿಯರು ಎಂದು ಕರೆದಿದ್ದಾರೆ. ಇದಕ್ಕೆ 'ಹಿಂದೂಸ್ತಾನ್ ಟೈಮ್ಸ್'ಗೆ ನೀಡಿರುವ ಸಂದರ್ಶನದಲ್ಲಿ ತಾಪ್ಸಿ ಪನ್ನು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ...

ಕಳೆದುಕೊಳ್ಳುವುದು ನಾನು ಮಾತ್ರ
'ಈ ಬಾಲಿವುಡ್ನಲ್ಲಿ ಕಳೆದುಕೊಳ್ಳಲು ಇರುವುದು ನಾನು ಮಾತ್ರ. ಏಕೆಂದರೆ ಅವರು (ಮೂವಿ ಮಾಫಿಯಾ ಗ್ಯಾಂಗ್) ತಾಪ್ಸಿ ಪನ್ನು, ಸ್ವರ ಭಾಸ್ಕರ್ ಅವರಂತಹ ಇಲ್ಲಿನ ಅಗತ್ಯವಿರುವ 20 ಮಂದಿ ಹೊರಗಿನವರನ್ನು ಕರೆದುಕೊಂಡು ಬರುತ್ತಾರೆ. ಅವರೆಲ್ಲರು ಎದ್ದು ನಿಂತು, ಕಂಗನಾಗೆ ಸ್ವಜನಪಕ್ಷಪಾತದ ಕುರಿತು ಸಮಸ್ಯೆ ಇದೆ. ಆದರೆ ನಾವು ಕರಣ್ ಜೋಹರ್ ಅವರನ್ನು ಪ್ರೀತಿಸುತ್ತೇವೆ ಎನ್ನುತ್ತಾರೆ' ಎಂದು ಕಂಗನಾ ವ್ಯಂಗ್ಯವಾಗಿ ಹೇಳಿದ್ದರು.

ಇದೇ ನೆಪೋಟಿಸಂನ ಪುರಾವೆ
'ನೀವು ಕರಣ್ ಜೋಹರ್ ಅವರನ್ನು ಪ್ರೀತಿಸುವುದಾದರೆ ನೀವಿಬ್ಬರೂ ಏಕೆ ಬಿ-ಗ್ರೇಡ್ ನಟಿಯರಾಗಿರುತ್ತಿದ್ದಿರಿ? ನೀವು ಆಲಿಯಾ ಭಟ್ ಮತ್ತು ಅನನ್ಯಾ ಪಾಂಡೆ ಇಬ್ಬರಿಗಿಂತಲೂ ಚೆನ್ನಾಗಿದ್ದೀರಿ. ನಿಮಗೇಕೆ ಕೆಲಸ ಸಿಗುತ್ತಿಲ್ಲ? ನಿಮ್ಮ ಸಂಪೂರ್ಣ ಅಸ್ತಿತ್ವವೇ ನೆಪೋಟಿಸಂನ ಪುರಾವೆ. ಉದ್ಯಮದೊಂದಿಗೆ ನೀವು ಎಷ್ಟು ಸಂತೋಷವಾಗಿದ್ದೀರಿ ಎಂದು ಹೇಳುತ್ತೀರಾ? ಇಡೀ ವ್ಯವಸ್ಥೆ ನನ್ನನ್ನು ಒಬ್ಬ ಹುಚ್ಚಿಯಾಗಿ ನೋಡುವಂತೆ ಮಾಡುತ್ತದೆ ಎಂದು ನನಗೆ ಗೊತ್ತು' ಎಂದಿದ್ದರು.

ಅವರು ಏನೆಂದುಕೊಳ್ಳುತ್ತಾರೆ?
'ಹೊರಗಿನವರ ಬಗ್ಗೆ ಮತ್ತು ತನಗೆ ಬಹಳಷ್ಟನ್ನು ನೀಡಿದ ಉದ್ಯಮದ ಕುರಿತು ಈ ರೀತಿ ಅಣಕವಾಡುವುದನ್ನು ನೋಡಿದಾಗ ಮನಸ್ಸಿಗೆ ಬಹಳ ಬೇಸರವಾಗುತ್ತದೆ. ಉದ್ಯಮಕ್ಕೆ ಬರುತ್ತಿರುವ ಮಕ್ಕಳ ಪೋಷಕರ ಬಗ್ಗೆ ಕಲ್ಪಿಸಿಕೊಳ್ಳಿ. ಅವರು ನಮ್ಮ ಬಗ್ಗೆ ಏನೆಂದುಕೊಳ್ಳುವುದಿಲ್ಲ? ನಾವಿಲ್ಲಿ ದುಷ್ಟ ದೆವ್ವಗಳು ಹೊರಗಿನವರನ್ನು ತಿನ್ನಲು ಕುಳಿತವರಂತೆ ನೋಡುತ್ತೇವೆ ಎಂದುಕೊಳ್ಳುವುದಿಲ್ಲವೇ?' ಎಂದು ತಾಪ್ಸಿ ಪ್ರಶ್ನಿಸಿದ್ದಾರೆ.

ಕರಣ್ ಅಷ್ಟಾಗಿ ಪರಿಚಯವೇ ಇಲ್ಲ
'ಕಂಗನಾ ಆರೋಪಿಸಿರುವಂತೆ ನಾನು ಕರಣ್ ಜೋಹರ್ ಅಥವಾ ಯಾರನ್ನಾದರೂ ಪ್ರೀತಿಸುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಹಾಗೆಯೇ ಅವರನ್ನು ದ್ವೇಷಿಸುತ್ತೇನೆ ಎಂದೂ ಹೇಳಿಲ್ಲ. ವಾಸ್ತವವೆಂದರೆ ಅವರು ದ್ವೇಷಿಸುವ ವ್ಯಕ್ತಿಯನ್ನು ನಾವು ದ್ವೇಷಿಸುವುದಿಲ್ಲ. ಇದು ಹೇಗೆಂದರೆ ನಿಮಗೆ ಆ ವ್ಯಕ್ತಿ ಇಷ್ಟ ಎಂದರೆ ಆ ವ್ಯಕ್ತಿಯ ಕಾಲು ನೆಕ್ಕುತ್ತೇವೆ ಎಂದೇ? ನನಗೆ ಔಪಚಾರಿಕ 'ಹಾಯ್, ಹಲೋ, ಥ್ಯಾಂಕ್ಯೂ' ಆಚೆ ಕರಣ್ ಜೋಹರ್ ಪರಿಚಯವೇ ಇಲ್ಲ. ಇದ್ಯಾವ ಸೀಮೆ ಲಾಜಿಕ್?' ಎಂದು ತಾಪ್ಸಿ ಹೇಳಿದ್ದಾರೆ.

ನನಗೆ ಕೆಲಸ ಇಲ್ಲ ಎಂದವರು ಯಾರು?
ಕಳೆದ ಮೂರು ವರ್ಷಗಳಿಂದ ನಾನು ಪ್ರತಿ ವರ್ಷ ಕನಿಷ್ಠ ನಾಲ್ಕು ಸಿನಿಮಾಗಳನ್ನು ಮಾಡುತ್ತಿದ್ದೇನೆ. ಈಗಾಗಲೇ ಐದು ಸಿನಿಮಾಗಳು ಕೂಡ ಘೋಷಣೆಯಾಗಿವೆ. ನನಗೆ ಸಾಕಷ್ಟು ಕೆಲಸ ಸಿಗುತ್ತಿಲ್ಲ ಎಂದು ಹೇಳಿದವರು ಯಾರು? ನನ್ನ ಕೆರಿಯರ್ ಗ್ರಾಫ್ ನಿಧಾನ ಮತ್ತು ಸ್ಥಿರವಾಗಿ ಇರುವಂತೆ ನಡೆಸಿಕೊಂಡು ಹೋಗುತ್ತಿದ್ದೇನೆ.

ಅವರ ಹೇಳಿದಂತೆ ನಾನು ಕುಣಿದಿಲ್ಲ
ಹೌದು ಸಿನಿಮಾಗಳಿಂದ ನನ್ನನ್ನು ತೆಗೆದು ಅಲ್ಲಿಗೆ ಸ್ಟಾರ್ಗಳ ಮಕ್ಕಳನ್ನು ಹಾಕಿದ್ದಾರೆ. ಆದರೆ ಸತ್ಯವೇನೆಂದರೆ ಕಂಗನಾ ಮತ್ತು ಆಕೆಯ ಸಹೋದರಿ ನನಗೆ ಹಾಗೂ ನನ್ನ ಕಠಿಣ ಪರಿಶ್ರಮಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ. ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇದು ಕಿರುಕುಳಕ್ಕೆ ಸಮಾನವಾಗಿದೆ. ಇದಕ್ಕೆ ಕಾರಣವೇನೆಂದರೆ ಅವರ ತಾಳಕ್ಕೆ ತಕ್ಕಂತೆ ಕುಣಿಯಲು ನಾನು ಒಪ್ಪಿಕೊಂಡಿಲ್ಲ. ಹೊರಗಿನಿಂದ ಬಂದವರ ಮುಂಚೂಣಿ ನಾಯಕಿ ಎಂದು ಒಪ್ಪಿಕೊಳ್ಳಲು ನಾನು ನಿರಾಕರಿಸಿದ್ದೇನೆ. ಏಕೆಂದರೆ ನಾವೆಲ್ಲರೂ ಕಹಿ ಉಂಡವರಲ್ಲ ಎಂದಿದ್ದಾರೆ.

ಸಾವನ್ನು ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳೊಲ್ಲ
'ನಾನು ಕಹಿಯಾಗಿ ವರ್ತಿಸಲು ನಿರಾಕರಿಸಿದ್ದೇನೆ. ಯಾರೊಬ್ಬರ ಸಾವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವುದನ್ನು ನಿರಾಕರಿಸಿದ್ದೇನೆ. ನನಗೆ ಆಹಾರ ಮತ್ತು ಅಸ್ಮಿತೆ ನೀಡಿದ ಉದ್ಯಮವನ್ನು ಅಣಕಿಸಲಾರೆ ಎಂದಿದ್ದೇನೆ. ನಟಿಯಾಗಿ ನಾನು ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡಬೇಕು. ಇದರಿಂದ ಬೇರೆಯವರನ್ನು ಸಬಲಗೊಳಿಸಬಹುದು. 'ಪತಿ ಪತ್ನಿ ಔರ್' ಚಿತ್ರದಲ್ಲಿ ದಿಶಾ ಪಟಾನಿ ಜಾಗದಲ್ಲಿ ನನ್ನನ್ನು ತಂದಾಗ ನಾನು ಅದರ ವಿರುದ್ಧ ಧ್ವನಿ ಎತ್ತಿದ್ದೆ. ಸಮಸ್ಯೆಗಳ ವಿರುದ್ಧ ನನಗೆ ಧ್ವನಿ ಎತ್ತಲು ಭಯ ಎಂದಲ್ಲ. ನಿಮ್ಮ ಉದ್ದೇಶ ಸರಿ ಇದ್ದಾಗ ಜನರು ನಿಮ್ಮನ್ನು ಬೆಂಬಲಿಸುತ್ತಾರೆ' ಎಂದು ತಾಪ್ಸಿ ಹೇಳಿದ್ದಾರೆ.


Click it and Unblock the Notifications











