ನಟ ಅಮಿತಾಬ್ ಗೆ ಅಮೆರಿಕಾ ಕೋರ್ಟ್ ಸಮನ್ಸ್
ಬಾಲಿವುಡ್ ಮೇರುನಟ ಅಮಿತಾಬ್ ಬಚ್ಚನ್ ಅವರಿಗೆ ಅಮೆರಿಕಾ ನ್ಯಾಯಾಲಯವೊಂದು ಸಮನ್ಸ್ ಜಾರಿ ಮಾಡಿದೆ. ಸಿಖ್ಖರ ಹಕ್ಕುಗಳ ಸಂಘಟನೆ ಸಲ್ಲಿಸಿದ್ದ ಮಾವನ ಹಕ್ಕುಗಳ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ಜಾರಿ ಮಾಡಲಾಗಿದೆ.
1984ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆ ಸಂದರ್ಭ ನಡೆದಿದ್ದ ಗಲಭೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಸಿಖ್ಖರ ಹಕ್ಕುಗಳ ಸಂಘಟನೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಸಮನ್ಸ್ ಜಾರಿಯಾಗಿದೆ.
ಇಂದಿರಾಗಾಂಧಿ ಅವರ ಹತ್ಯೆಯ ನಂತರ ಅಮಿತಾಬ್ ಬಚ್ಚನ್ ಅವರು ಸಿಖ್ಖರ ಮೇಲಿನ ಹಿಂಸಾಚಾರಕ್ಕೆ ಪ್ರಚೋದಿಸಿದ್ದರು ಎಂದು ನ್ಯೂಯಾರ್ಕ್ ಮೂಲಕ ಸಿಖ್ಖರು ಕೋರ್ಟ್ ಗೆ ದೂರು ಸಲ್ಲಿಸಿದ್ದರು.
ಇದರ ಜೊತೆಗೆ 1984ರ ಗಲಭೆಯಲ್ಲಿ ಬಲಿಪಶುಗಳಾಗಿದ್ದ ದೆಹಲಿ ಮೂಲದ ಬಾಬು ಸಿಂಘ್ ದುಖಿಯ ಹಾಗೂ ಕ್ಯಾಲಿಫೋರ್ನಿಯಾ ನಿವಾಸಿ ಮೊಹೇಂದರ್ ಸಿಂಗ್ ಸಲ್ಲಿಸಿದ್ದ ಅರ್ಜಿ ಆಧರಿಸಿ ಜಿಲ್ಲಾ ನ್ಯಾಯಾಲಯ ಈ ಸಮನ್ಸ್ ಜಾರಿ ನೀಡಿದೆ. 21 ದಿನಗಳಲ್ಲಿ ಉತ್ತರಿಸುವಂತೆ ಕೋರ್ಟ್ ಆದೇಶಿಸಿದೆ. ಸಮನ್ಸ್ ಕೈಸೇರಿದ ಬಳಿಕ 21 ದಿನಗಳಲ್ಲಿ ಅಮಿತಾಬ್ ಕೋರ್ಟ್ ಗೆ ಉತ್ತರಿಸಬೇಕಿದೆ.

ಈ ಬಗ್ಗೆ ಸಿಎನ್ಎನ್ಐಬಿಎನ್ ಜೊತೆ ಮಾತನಾಡಿರುವ ದೆಹಲಿ ಹೈಕೋರ್ಟ್ ನ ಹಿರಿಯ ವಕೀಲ ಎಚ್ ಎಸ್ ಫೂಲ್ಕಾ, "ಅಮಿತಾಬ್ ಅವರು ಗಾಂಧಿ ಕುಟುಂಬದ ಭಾಗವಾಗಿದ್ದರು. ಆ ಸಮಯದಲ್ಲಿ ಅಮಿತಾಬ್ ಬಹಳ ಪ್ರಭಾವಿ ವ್ಯಕ್ತಿಯಾಗಿದ್ದರು. ಇಂದಿಗೂ ಜೀವಂತವಾಗಿರುವವರಿಗೆ ಮಾತ್ರ ಆಗಿನ ಸರ್ಕಾರದಲ್ಲಿ ಏನಾಯಿತು ಎಂಬುದು ಗೊತ್ತಿರುವುದು. ಅಂತಹವರಲ್ಲಿ ಅಮಿತಾಬ್ ಸಹ ಒಬ್ಬರು" ಎಂದಿದ್ದಾರೆ.
ಅಂದಿನ ಪ್ರಧಾನಿ ಇಂದಿರಾ ಅವರ ಹತ್ಯೆಯ ಬಳಿಕ ಅಮಿತಾಬ್ ಅವರು ಸಿಖ್ಖರ ಮೇಲಿನ ಹಲ್ಲೆಗೆ ಪ್ರಚೋದಿಸಿದ್ದಾರೆ ಎಂಬ 35 ಪುಟಗಳ ಆರೋಪ ಮಾಡಲಾಗಿದೆ. ಈ ಹಿಂದೆಯೂ ಸಾಕಷ್ಟು ಸಲ ಸಿಖ್ಖರ ಮೇಲಿನ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಅಮೆರಿಕಾ ನ್ಯಾಯಾಲಕ್ಕೆ ಎಳೆಯಲು ಸಿಖ್ಖ ಸಂಘಟನೆ ಪ್ರಯತ್ನಿಸಿ ವಿಫಲವಾಗಿದೆ.


Click it and Unblock the Notifications











