ಕೃಷ್ಣ ಮೂಲಕ ಅಂತ್ಯವಾಯ್ತು ತೆಲುಗು ಚಿತ್ರರಂಗದ 'ಸುವರ್ಣ ಯುಗ'
ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಕೃಷ್ಣ ಇಂದು (ನವೆಂಬರ್ 15)ರ ಬೆಳಿಗ್ಗೆ ನಿಧನ ಹೊಂದಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು.
ಸೂಪರ್ ಸ್ಟಾರ್ ಕೃಷ್ಣ ಮೂಲಕ ದಕ್ಷಿಣ ಭಾರತ ಚಿತ್ರರಂಗದ ಸುವರ್ಣ ಯುಗ ಅಂತ್ಯವಾದಂತಾಗಿದೆ. ಡಾ ರಾಜ್ಕುಮಾರ್, ಎನ್ಟಿಆರ್, ಎಎನ್ಆರ್, ಎಂಜಿಆರ್, ಅಕ್ಕಿನೇನಿ ನಾಗೇಶ್ವರ್ ರಾವ್ ಅವರುಗಳು ದಕ್ಷಿಣ ಭಾರತ ಚಿತ್ರರಂಗದಲ್ಲಿ ಸುವರ್ಣಯುಗಕ್ಕೆ ಕಾರಣೀಭೂತ ನಟರಾಗಿದ್ದರು. ಅವರುಗಳ ಸಾಲಿನಲ್ಲೇ ನಿಂತಿದ್ದವರು ಸೂಪರ್ ಸ್ಟಾರ್ ಕೃಷ್ಣ. ಈಗ ಕೃಷ್ಣ ನಿಧನ ಮೂಲಕ ಸುವರ್ಣಯುಗ ಅಂತ್ಯವಾದಂತಾಗಿದೆ.
1950 ದಕ್ಷಿಣ ಭಾರತ ಚಿತ್ರರಂಗದ ಜನನ ಹಾಗೂ ಬೆಳವಣಿಗೆ ಕಾಲ ಎಂದು ಪರಿಗಣಿಸಿದರೆ ಸುವರ್ಣಯುಗ ಪ್ರಾರಂಭವಾಗಿದ್ದು 1960 ರಿಂದ. ಕನ್ನಡದಲ್ಲಿ ಡಾ ರಾಜ್ಕುಮಾರ್, ತಮಿಳಿನಲ್ಲಿ ಎಂಜಿಆರ್, ಎಎನ್ಆರ್, ತೆಲುಗಿನಲ್ಲಿ ಎನ್ಟಿಆರ್, ಅಕ್ಕಿನೇನಿ ನಾಗೇಶ್ವರ ರಾವ್ ಅವರುಗಳು ತಮ್ಮ ತಮ್ಮ ಚಿತ್ರರಂಗವನ್ನು ಎತ್ತರಕ್ಕೆ ಕೊಂಡುಹೋಗುತ್ತಿದ್ದ ಕಾಲದಲ್ಲಿಯೇ ಕೃಷ್ಣ ಚಿತ್ರರಂಗಕ್ಕೆ ಎಂಟ್ರಿ ನೀಡಿದರು.
1965 ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿದ ಕೃಷ್ಣ ಎರಡೇ ವರ್ಷದಲ್ಲಿ ಸ್ಟಾರ್ ನಟನಾಗಿ ಗುರುತಿಸಿಕೊಂಡರು. ಅದಾಗಲೇ ತೆಲುಗು ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರುಗಳಿಸಿದ್ದ ಸೀನಿಯರ್ ಎನ್ಟಿಆರ್, ಅಕ್ಕಿನೇನಿ ನಾಗೇಶ್ವರ ರಾವ್ ಅವರುಗಳ ನಡುವೆ ಕೃಷ್ಣ ಸಹ ದೊಡ್ಡ ನಟರಾಗಿ ಬೆಳೆದಿದ್ದೇ ಒಂದು ಅದ್ಭುತ. ಪೌರಾಣಿಕ, ಆಕ್ಷನ್ ಸಿನಿಮಾಗಳಿಗೆ ಎನ್ಟಿಆರ್, ಸಾಮಾಜಿಕ, ಕೌಟುಂಬಿಕ ಪ್ರೇಮಕತೆಗಳಿಗೆ ಸ್ಪುರದ್ರೂತಿ ಅಕ್ಕಿನೇನಿ ನಾಗೇಶ್ವರ ರಾವ್ ತಮ್ಮ ಸ್ಥಾನ ಅದಾಗಲೇ ಭದ್ರಪಡಿಸಿಕೊಂಡಿದ್ದ ಕಾಲಕ್ಕೆ ಚಿತ್ರರಂಗಕ್ಕೆ ಬಂದವರು ಕೃಷ್ಣ.

ನಾಯಕ ನಟನಾಗಲು ನಾಲ್ಕು ವರ್ಷ
1961 ರಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರೂ ಮೊದಲು ನಾಯಕನಾಗಿ ನಟಿಸಲು ನಾಲ್ಕು ವರ್ಷ ಕಾಯಬೇಕಾಯ್ತು. ಎನ್ಟಿಆರ್, ಅಕ್ಕಿನೇನಿ ನಾಗೇಶ್ವರ ರಾವ್ ಇನ್ನೂ ಕೆಲವು ನಾಯಕ ನಟರು ಉಚ್ರಾಯ ಕಾಲದಲ್ಲಿದ್ದಾಗ ಕೃಷ್ಣ ಚಿತ್ರರಂಗ ಪ್ರವೇಶಿಸಿದರಾದರು ತಮ್ಮದೇ ಭಿನ್ನ ಶೈಲಿಯಿಂದ ಬಹುಬೇಗ ಚಿತ್ರರಂಗದಲ್ಲಿ ಸ್ಟಾರ್ ನಟನ ಪಟ್ಟ ಗಳಿಸಿಕೊಂಡರು. 1965 ರಲ್ಲಿ ನಾಯಕ ನಟನಾದ ಕೃಷ್ಣ, 1967 ರಲ್ಲಿ ಬರೋಬ್ಬರಿ 7 ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದರು. 1968 ರಲ್ಲಿ 11 ಸಿನಿಮಾಗಳಲ್ಲಿ ನಟಿಸಿ ಹಿಟ್ ಎನಿಸಿಕೊಂಡರು. ಆ ನಂತರ ಕೃಷ್ಣ ಅವರನ್ನು ತಡೆದವರ್ಯಾರೂ ಇಲ್ಲ.

ಎನ್ಟಿಆರ್-ಕೃಷ್ಣ ಜೋಡಿ
ತಮಗಿಂತಲೂ ದೊಡ್ಡ ಸ್ಟಾರ್ಗಳು ತೆಲುಗು ಚಿತ್ರರಂಗದಲ್ಲಿ ಇದ್ದಾಗಿಯೂ ಅವರೊಟ್ಟಿಗೆ ಸ್ಪರ್ಧೆಗೆ ಬೀಳದೆ ತಮ್ಮದೇ ಆದ ವೀಕ್ಷಕ ವರ್ಗ ಸೃಷ್ಟಿಸಿಕೊಂಡ ಕೃಷ್ಣ. ಪೌರಾಣಿಕ, ಕೌಟುಂಬಿಕ, ಸಾಮಾಜಿಕ, ಆಕ್ಷನ್, ಹಾಸ್ಯ ಎಲ್ಲ ರೀತಿಯ ಸಿನಿಮಾಗಳು ಹಾಗೂ ಪಾತ್ರಗಳಿಗೆ ತಮ್ಮನ್ನು ಒಡ್ಡಿಕೊಂಡು ತಾವೊಬ್ಬ ಪರಿಪೂರ್ಣ ಕಲಾವಿದ ಎಂಬುದನ್ನು ಸಾರಿ ಹೇಳಿದರು. ಇದರ ಜೊತೆಗೆ ಎನ್ಟಿಆರ್ ಬಗ್ಗೆ ವಿಶೇಷ ಪ್ರೀತಿ-ಆದರ ಹೊಂದಿದ್ದ ಕೃಷ್ಣ ಅವರೊಟ್ಟಿಗೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ನಾಯಕ-ನಾಯಕಿ ಜೋಡಿಯಂತೆ ಎನ್ಟಿಆರ್-ಕೃಷ್ಣ ಜೋಡಿಯೂ ಬಹಳ ಜನಪ್ರಿಯವಾಗಿತ್ತು.

ಹಲವು ಮೊದಲುಗಳಿಗೆ ಕಾರಣೀಭೂತ
ಇದೆಲ್ಲದರ ಹೊರತಾಗಿ ತೆಲುಗು ಚಿತ್ರರಂಗ ಕೃಷ್ಣ ಅವರನ್ನು ನೆನಪಿಟ್ಟುಕೊಳ್ಳಬೇಕಾದ ಅತ್ಯಂತ ಪ್ರಮುಖ ಕಾರಣವೆಂದರೆ ಅವರು ಮಾಡುತ್ತಿದ್ದ ಪ್ರಯೋಗಗಳು. ಹೊಸ ಪ್ರಯೋಗಗಳನ್ನು ಮಾಡಲು ಸದಾ ಮುಂದು ಕೃಷ್ಣ. ಅದರಲ್ಲಿಯೂ ಭಿನ್ನ-ಭಿನ್ನ ತಂತ್ರಜ್ಞಾನಗಳನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಿದವರು ಕೃಷ್ಣ. ಮೊದಲ ಸಿನಿಮಾ ಸ್ಕೋಪ್ ತೆಲುಗು ಸಿನಿಮಾ, ಮೊದಲ 70 ಎಂಎಂ ತೆಲುಗು ಸಿನಿಮಾ, ಮೊದಲ ಈಸ್ಟ್ಮನ್ ಕಲರ್ ತೆಲುಗು ಸಿನಿಮಾಗಳೆಲ್ಲವೂ ಇರುವುದು ಕೃಷ್ಣ ಖಾತೆಯಲ್ಲಿವೆ. ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಭಯಪಡದೆ ಪ್ರಯೋಗಗಳನ್ನು ಮಾಡಿದರು. ಆ ಮೂಲದ ಸಾಹಸಿ ಸಿನಿಮಾಕರ್ಮಿ ಎಂಬ ಬಿರುದು ಸಹ ಸಂಪಾದಿಸಿದರು.

ಕಣ್ಮುಚ್ಚಿದ ನಾಯಕ ನಟರು
ತೆಲುಗು ಚಿತ್ರರಂಗ ಎಂದರೆ ಎನ್ಟಿಆರ್, ಅಕ್ಕಿನೇನಿ ನಾಗೇಶ್ವರ ರಾವ್ ಎಂಬಂತಿದ್ದ ವಾತಾವರಣವನ್ನು ಬದಲಾಯಿಸಿದರು ಕೃಷ್ಣ. ಅವರದ್ದೇ ಸಮಯದಲ್ಲಿ ಕೃಷ್ಣಂರಾಜು ಸಹ ಚಿತ್ರರಂಗಕ್ಕೆ ಕಾಲಿಟ್ಟು ಸುವರ್ಣಯುಗದ ಭಾಗವಾದರು. ಕಳೆದ ತಿಂಗಳ 11 ನೇ ತಾರೀಖು ಕೃಷ್ಣಂರಾಜು ನಿಧನ ಹೊಂದಿದರು. ಇದೀಗ ಕೃಷ್ಣ ಸಹ ನಿಧನ ಹೊಂದುವ ಮೂಲಕ ತೆಲುಗು ಚಿತ್ರರಂಗದ 60 ರ ದಶಕದ ನಾಯಕ ನಟರೆಲ್ಲರೂ ಇಲ್ಲವಾದಂತಾಗಿದೆ. ಆ ಸುವರ್ಣಯುಗಕ್ಕೆ ಸಾಕ್ಷಿಯಾದ ಕೆಲವು ಹಾಸ್ಯನಟರು, ಕೆಲವು ನಿರ್ದೇಶಕರಷ್ಟೆ ಈಗಿದ್ದಾರೆ.


Click it and Unblock the Notifications











