ಹೊಸಪೇಟೆ ವಿದ್ಯಮಾನ: ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ವಾರ್ ಸುನಾಮಿಯ ಮುನ್ಸೂಚನೆಯೇ?
ಕನ್ನಡ ಚಿತ್ರೋದ್ಯಮದಲ್ಲಿ ಏನು ಆಗಬೇಕಿತ್ತು ಅದು ಆಗುತ್ತಿದೆಯೋ ಅಥವಾ ಏನು ನಡೆಯಬಾರದಿತ್ತು ಅದು ನಡೆಯುತ್ತಿದೆಯೋ ಎನ್ನುವ ಗೊಂದಲ ಕಾಡಲು ಆರಂಭವಾಗಿರುವುದು ಅಭಿಮಾನಿಗಳ ಅತಿರೇಕದಿಂದ ಮತ್ತು ಅದರ ಸುತ್ತಮುತ್ತಲ ನಡೆಯುತ್ತಿರುವ ವಿದ್ಯಮಾನಗಳಿಂದ.
ಕೆಜಿಎಫ್, ಚಾರ್ಲಿ, ವಿಕ್ರಾಂತ್ ರೋಣ, ಗಾಳಿಪಟ, ಕಾಂತಾರ ಚಿತ್ರದ ಮೂಲಕ 2022ರಲ್ಲಿ ಆರ್ಥಿಕವಾಗಿಯೂ ಭರ್ಜರಿ ಇಳುವರಿ ಮಾಡಿಕೊಂಡಿದ್ದ ಚಿತ್ರೋದ್ಯಮಕ್ಕೆ, ಹೊಸಪೇಟೆಯಲ್ಲಿ ನಡೆದ ಚಪ್ಪಲಿ ತೂರಿದ ಪ್ರಕರಣ ಬ್ಲ್ಯಾಕ್ ಸ್ಪಾಟ್ ಇಡುವಂತೆ ಮಾಡಿದೆ.
2022 ಸ್ಯಾಂಡಲ್ ವುಡ್ ಅನ್ನು ಉಚ್ಚ್ರಾಯ ಸ್ಥಿತಿಗೆ ತೆಗೆದುಕೊಂಡ ಹೋದ ವರ್ಷ ಎಂದರೆ ತಪ್ಪಾಗಲಾರದು. ಕೋಟಿಗಟ್ಟಲೆ ಸುರಿದು ಸಿನಿಮಾವನ್ನು ಹೇಗೆ ತೆಗೆಯಬೇಕು ಎನ್ನುವುದಕ್ಕೆ ಪ್ರಶಾಂಶ್ ನೀಲ್ ಉದಾಹರಣೆಯಾದರೆ, ನಿಯಮಿತ ಬಜೆಟ್ ನಲ್ಲಿ ಸಿನಿಮಾ ಹೇಗೆ ತೆಗೆಯಬಹುದು ಎನ್ನುವುದಕ್ಕೆ ರಿಷಬ್ ಶೆಟ್ಟಿ ಉದಾಹರಣೆಯಾದರು.

ಆದರೆ, ಈ ಎಲ್ಲಾ ಖುಷಿ, ಹೆಮ್ಮಯನ್ನು ಹೊಸಪೇಟೆಯಲ್ಲಿ ನಡೆದ ಘಟನೆ ಮೀರಿ ನಿಂತಿದೆ. ಅಷ್ಟೇ ಅಲ್ಲದೇ, ಮುಂದಿನ ವರ್ಷಕ್ಕೆ ಚಿತ್ರೋದ್ಯಮದ ಸ್ಟಾರ್ ವಾರ್ ಇನ್ನೊಂದು ಮಜಲಿಗೆ ಹೋಗಲಿದೆಯೇ ಎನ್ನುವ ಮುನ್ಸೂಚನೆ ಅಣ್ಣಾವ್ರ ಕುಟುಂಬದಿಂದ ಲೇಟೆಸ್ಟ್ ಆಗಿ ಹೊರಬಿದ್ದ ಸಾಮಾಜಿಕ ಪೋಸ್ಟ್ ನಿಂದ ಎದುರಾಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹುನಿರೀಕ್ಷಿತ ಕ್ರಾಂತಿ ಚಿತ್ರ ಬರುವ ಜನವರಿ 26ರಂದು ಬಿಡುಗಡೆಯಾಗಲಿದೆ. ದೃಶ್ಯ ಮಾಧ್ಯಮಗಳು ದರ್ಶನ್ ಅವರಿಗೆ ಸಂಬಂಧಪಟ್ಟ ಯಾವುದೇ ಸುದ್ದಿಗಳನ್ನು ಬಿತ್ತರಿಸದೇ ಇರುವುದರಿಂದ, ಸುಮಾರು ಒಂದೂವರೆ ತಿಂಗಳ ಮೊದಲೇ ಚಿತ್ರತಂಡ ಪ್ರಚಾರವನ್ನು ಆರಂಭಿಸಿದೆ. ಅದರ ಭಾಗವಾಗಿ, ಬಯಲುಸೀಮೆ ಭಾಗದ ಹೊಸಪೇಟೆಯಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ಚಿತ್ರತಂಡದ ಮೇಲೆ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ಚಪ್ಪಲಿ ಎಸೆದಿದ್ದಾನೆ. ಅದಕ್ಕಿಂತಲೂ ಮೊದಲೇ ಪುನೀತ್ ರಾಜಕುಮಾರ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಪೋಸ್ಟರಿಗೆ ಸಂಬಂಧಿಸಿದಂತೆ ಕಿತ್ತಾಟ ನಡೆದಿತ್ತು. ಆದರೆ, ಪುನೀತ್ ಪುತ್ಠಳಿಗೆ ದರ್ಶನ್ ಮಾಲಾರ್ಪಣೆಯನ್ನು ಮಾಡಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ದರ್ಶನ್ ಮೇಲೆ ಚಪ್ಪಲಿ ಎಸೆದವನು ಅಪ್ಪು ಅಭಿಮಾನಿ ಎಂದು ಗುಲ್ಲೆಬ್ಬಿದ್ದರಿಂದ, ಇಡೀ ಪ್ರಕರಣ ಹೊಸ ತಿರುವನ್ನು ಪಡೆದುಕೊಂಡಿತು. ಈ ಪ್ರಕರಣವನ್ನು ಮೊದಲು ಖಂಡಿಸಬೇಕಾದ ಅನಿವಾರ್ಯತೆಗೆ ಬಿದ್ದ ಅಣ್ಣಾವ್ರ ಕುಟುಂಬ ವಿಡಿಯೋ ಮೂಲಕ ಆ ಕೆಲಸವನ್ನು ಮಾಡಿತು. ಇದರ ಜೊತೆಗೆ ಇಡೀ ಚಿತ್ರೋದ್ಯಮ ಒಗ್ಗಟ್ಟಾಗಿ ಘಟನೆಯನ್ನು ಖಂಡಿಸಿತು. ಆದರೆ, ಅಭಿಮಾನಿಗಳ ಅತಿರೇಕ ಮುಂದುವರಿದು, ದಿವಂಗತ ಪುನೀತ್ ರಾಜಕುಮರ್ ಅವರ ಹೆಸರನ್ನು ನೇರವಾಗಿ ತರುತ್ತಿದ್ದರೆ. ಅಭಿಮಾನಿಗಳ ಈ ನಡೆಗೆ ದುನಿಯಾ ವಿಜಯ್ ಮತ್ತು ಯುವ ರಾಜಕುಮಾರ್ ಪ್ರತಿಕ್ರಿಯಿಸಿದ್ದು, ಸ್ಟಾರ್ ವಾರ್ ಗೆ ನಾಂದಿ ಹಾಡಿದಂತಿದೆ.

ಚಪ್ಪಲಿ ತೂರಾಟದ ಘಟನೆಯನ್ನು ಖಂಡಿಸಿ ಕಿಚ್ಚ ಸುದೀಪ್ ಮಾಡಿದ ಟ್ವೀಟ್, ಅದಕ್ಕೆ ದರ್ಶನ್ ಪ್ರತಿಕ್ರಿಯಿಸಿದ ರೀತಿಯನ್ನು ಇಟ್ಟುಕೊಂಡು ಮತ್ತೆ ಈ ಇಬ್ಬರು ನಟರು ಒಂದಾಗುತ್ತಾರೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ ಎನ್ನುವುದು ಒಂದು ಕಡೆ. ಇನ್ನೊಂದು ಕಡೆ, ಅಪ್ಪು ಫೋಟೋದ ಜೊತೆಗೆ ಕ್ರಾಂತಿ ಕಾರ್ಯರ್ಕ್ರಮಕ್ಕೆ ಯಾಕೆ ಬರಬೇಕಿತ್ತು, ಮುಂದೆ ನೋಡಿ ಕೊಳ್ಳುತ್ತೇವೆ ಎನ್ನುವು ಪ್ರಶ್ನೆಗಳು ಇನ್ನೊಂದು ಕಡೆಯಿಂದ ಬರುತ್ತಿರುವುದರಿಂದ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸುನಾಮಿ ಎದ್ದೇಳುವ ಸಾಧ್ಯತೆ ದಟ್ಟವಾಗಿದೆ.
ಬಹುತೇಕ ಎಲ್ಲಾ ನಟರು ತಮ್ಮ ಫ್ಯಾನ್ಸ್ ಪರವಾಗಿ ನಿಲ್ಲುವುದರಿಂದ ಅಭಿಮಾನಿಗಳ ಮಧ್ಯೆ ನಡೆಯುತ್ತಿರುವ ಈ ಆರೋಪ/ಪ್ರತ್ಯಾರೋಪಕ್ಕೆ ಮುಂದಿನ ದಿನಗಳಲ್ಲಿ ಯಾವರೀತಿ ಬೇಕಾದರೂ ತಿರುವು ಸಿಗಬಹುದು. ಕನ್ನಡ ಚಿತ್ರೋದ್ಯಮದಲ್ಲೂ ಹಲವು ಬಣಗಳು ಇರುವುದು ಗೊತ್ತಿರುವ ವಿಚಾರ. ಹಾಲೀ ವರ್ಷದಲ್ಲಿ ಉತ್ತಮ ಚಿತ್ರಗಳ ಮೂಲಕ ದೇಶಾದ್ಯಂತೆ ಹೆಸರು ಮಾಡಿದ್ದ ಸ್ಯಾಂಡಲ್ ವುಡ್, ಮುಂದಿನ ದಿನಗಳಲ್ಲಿ ಸ್ಟಾರ್ ವಾರ್ ಮೂಲಕ ಹಿನ್ನಡೆಯನ್ನು ಅನುಭವಿಸುತ್ತದೋ ಎನ್ನುವ ಭೀತಿ ಕನ್ನಡ ಚಿತ್ರಪ್ರೇಮಿಗಳಿಗೆ..


Click it and Unblock the Notifications











