ಒಂದಾನೊಂದು ಕಾಲದಲ್ಲಿ ಪಾದರಸದಂತಿದ್ದ ಶಂಕರ್ನಾಗ್ ಸಾಧನೆಗಳೆಷ್ಟು? ಕನಸುಗಳೆಷ್ಟು?
ಕನ್ನಡ ಚಿತ್ರರಂಗದ ಪಾಲಿಗೆ ಕ್ರಿಯಾತ್ಮಕ ನಿರ್ದೇಶಕ.. ಕರಾಟೆ ಕಿಂಗ್.. ಕನಸುಗಾರ.. ಆಟೋರಾಜ.. ಶಂಕರ್ನಾಗ್ಗೆ ಅಭಿಮಾನಿಗಳು ಪ್ರೀತಿಯಿಂದ ಕೊಟ್ಟ ಹೆಸರು ಒಂದಾ ಎರಡಾ? ಒಂದಾನೊಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಗತಿಯನ್ನೇ ಬದಲಿಸಿದ್ದು ಇದೇ ಶಂಕರ್ನಾಗ್. ನಿರ್ದೇಶನಕ್ಕೆ ಇಳಿದರೆ ಬೇರೆಯದೇ ಲೋಕ ಸೃಷ್ಟಿಸುವ ಮಾಂತ್ರಿಕ. ನಟನೆಗಿಳಿದರೆ ಅಭಿಮಾನಿಗಳ ಲೋಕದೊಳಗೆ ನುಗ್ಗುವ ಛಲಗಾರ. ಶಂಕರ್ನಾಗ್ ಅಪಾರ ಅಭಿಮಾನಿಗಳನ್ನು ಅಗಲಿ 32 ವರ್ಷಗಳೇ ಆಗಿವೆ. ಆದರೂ ವಿಶ್ವದ ಮೂಲೆ ಮೂಲೆಯಲ್ಲಿರುವ ಅಪಾರ ಅಭಿಮಾನಿಗಳ ಪಾಲಿಗೆ ಇಂದಿಗೂ ಜೀವಂತವಾಗಿ ಇದ್ದಾರೆ.
ಶಂಕರ್ ನಾಗ್ ಕನ್ನಡ ಚಿತ್ರರಂಗಕ್ಕೆ ಬಿಟ್ಟು ಹೋದ ಸಂಪತ್ತು ಅಂತಹದ್ದು. ತಾನು ಉತ್ತುಂಗದಲ್ಲಿ ಇದ್ದ ಕಾಲದಲ್ಲೇ ನಟನೆ, ನಿರ್ದೇಶನದ ಜೊತೆಗೆ ಟಿವಿ ಲೋಕಕ್ಕೆ ಕಾಲಿಟ್ಟು ಅಲ್ಲಿನ ದಿಕ್ಕನ್ನು ಬದಲಿಸಿದ ಹೆಗ್ಗಳಿಕೆ ಶಂಕರ್ನಾಗ್ ಅವರಿಗೆ ಸಲ್ಲುತ್ತದೆ. ಸಿನಿಮಾ ಹೊರತು ಪಡಿಸಿ, ಮೆಟ್ರೋ, ರೋಪ್ವೇ ಅಂತಹ ದುಬಾರಿ ಕನಸುಗಳನ್ನು ಕಂಡಿದ್ದ ಈ ಕನಸುಗಾರರನಿಗೆ ಇಂದು(ನವೆಂಬರ್ 09) 67ನೇ ಹುಟ್ಟುಹಬ್ಬ. ಶಂಕರ್ ಜನ್ಮದಿನದ ಈ ಸಂದರ್ಭದಲ್ಲಿ ಕರಾಟೆ ಕಿಂಗ್ ಸಾಧನೆಯ ಒಂದು ಝಲಕ್ ಇಲ್ಲಿದೆ.
ಒಂದಾನೊಂದು ಕಾಲದಲ್ಲಿ ಶಂಕರ್ ನಾಗ್ ಸಿನಿಜರ್ನಿ
ಹುಟ್ಟಿದ್ದು ಉತ್ತರಕನ್ನಡದ ಹೊನ್ನಾವರ ಆಗಿದ್ದರೂ, ಅಂದಿನ ಬಾಂಬೆ ಕಡೆ ಪಯಣ ಬೆಳೆಸಿದ್ದರು. ಅಲ್ಲಿ ಮರಾಠಿ ರಂಗ ಭೂಮಿ ಶಂಕರ್ನಾಗ್ರನ್ನು ಇನ್ನಿಲ್ಲದಂತೆ ಸೆಳೆದಿತ್ತು. ನಾಟಕದಲ್ಲಿ ನಟಿಸುತ್ತಿದ್ದ ಶಂಕರ್ ಸರ್ವಸಾಕ್ಷಿ ಅನ್ನುವ ಮರಾಠಿ ಸಿನಿಮಾದಿಂದ ಸಿನಿಮಾಗೆ ಕಾಲಿದ್ದರು. ಇಲ್ಲಿಂದ ಶಂಕರ್ ಸಿನಿ ಪಯಣ ಹೊಸ ತಿರುವು ಪಡೆದಿತ್ತು. ನಿರ್ದೇಶಕ- ಸಾಹಿತಿ ಗಿರೀಶ್ ಕಾರ್ನಾಡ್ ಮರಾಠಿ ನಾಟಕಗಳಲ್ಲಿ ಮಿಂಚುತ್ತಿದ್ದ ಶಂಕರ್ ನಾಗ್ರನ್ನು ಗುರುತಿಸಿದ್ದರು. ಆಗಲೇ ಅವರು ನಿರ್ದೇಶಿಸಲು ಹೊರಟಿದ್ದ ಒಂದಾನೊಂದು ಕಾಲಕ್ಕೆ ಶಂಕರ್ನಾಗ್ರನ್ನು ಆಯ್ಕೆ ಮಾಡಿದ್ದರು.

ಅಕಿರಾ ಕುರೋಸಾವಾ ಸಿನಿಮಾದಿಂದ ಪ್ರೇರಣೆ
ಗಿರೀಶ್ ಕಾರ್ನಾಡ್ ಸಿನಿಮಾ ವಿಶ್ವ ಸಿನಿಮಾ ಕಂಡ ದಂತಕಥೆ ಅಕಿರಾ ಕುರೋಸಾವಾದ ಸಮುರಾಯ್ ಸಿನಿಮಾಗಳಿಂದ ಪ್ರೇರಣೆ ಪಡೆದಿದ್ದಾಗಿತ್ತು. ಕಥೆ, ಚಿತ್ರಕತೆ ಅಲ್ಲದೆ ಹೋದರೂ, ಸಿನಿಮಾ ಸಾಹಸ ದೃಶ್ಯಗಳು ಸಮುರಾಯ್ ಸಿನಿಮಾಗಳಿಂದಲೇ ಪ್ರೇರಣೆಯಾಗಿತ್ತು. ಇಲ್ಲಿಂದ ಕನ್ನಡ ಚಿತ್ರರಂಗದಲ್ಲಿ ಸಾಹಸಮಯ ಸಿನಿಮಾಗಳಿಗೆ ಹೊಸ ರೂಪ ಸಿಗಲು ಹೊಸ ದಾರಿ ಮಾಡಿಕೊಟ್ಟಿತ್ತು. 1978ರಲ್ಲಿ ತೆರೆಕಂಡಿದ್ದ ಚಿತ್ರವನ್ನು ಪ್ರೇಕ್ಷಕರು ಬೆರಗು ಕಣ್ಣುಗಳಿಂದ ನೋಡಿದ್ದರು.

80 ರ ದಶಕದಲ್ಲೇ ಮಾರ್ಷಲ್ ಆರ್ಟ್ಸ್, ಕರಾಟೆ ಪ್ರದರ್ಶನ
ಶಂಕರ್ ನಾಗ್ ನಟಿಸುವ ಸಿನಿಮಾಗಳಿಗೂ, ನಿರ್ದೇಶನ ಮಾಡುವ ಸಿನಿಮಾಗಳಿಗೂ ಬಹಳ ಅಂತರವಿದೆ. ಶಂಕರ್ ನಟಿಸಿದ ಸಿನಿಮಾಗಳು ಬಹುತೇಕ ಮಾಸ್ ಸಿನಿಮಾಗಳು. ಅದಕ್ಕೆ 80 ರ ದಶಕದಲ್ಲೇ ಮಾರ್ಷಲ್ ಆರ್ಟ್ಸ ಕಲಿತಿದ್ದರು. ಕರಾಟೆ ಕಲಿತ್ತಿದ್ದರು. ಈ ಕಾರಣಕ್ಕೆ ಶಂಕರ್ ನಾಗ್ರನ್ನು ಅಭಿಮಾನಿಗಳು ಇಂದಿಗೂ ಕರಾಟೆ ಕಿಂಗ್ ಅಂತಲೇ ಕರೆಯುತ್ತಾರೆ. ಅಂದು ಶಂಕರ್ ನಾಗ್ ನಡೆದ ದಾರಿಯಲ್ಲಿ ಇಂದಿನ ಬಹುತೇಕ ನಟರು ನಡೆಯುತ್ತಿದ್ದಾರೆ. ಸಿನಿಮಾಗೆ ಬೇಕಿರುವ ತಯಾರಿ ಮಾಡಿಕೊಳ್ಳುತ್ತಾರೆ. ಇಂದಿನ ವಿದ್ಯೆಗಳಾದ ಕಿಕ್ ಬಾಕ್ಸಿಂಗ್ ಅಂತಹವನ್ನು ಬಿಡದೆ ಅಭ್ಯಾಸ ಮಾಡುತ್ತಾರೆ. ಇಂತಹ ಪ್ರಯೋಗವನ್ನು ಶಂಕರ್ ಅಂದೇ ಮಾಡಿದ್ದರು.

ಕನ್ನಡ ಚಿತ್ರರಂಗದ ಹೊಸ ಮೈಲಿಗಲ್ಲಿ ಮಿಂಚಿನ ಓಟ
ಶಂಕರ್ನಾಗ್ ನಿರ್ದೇಶಿಸಿದ ಮೊದಲ ಸಿನಿಮಾ ಮಿಂಚಿನ ಓಟ. ಇದು ನಾಗ್ ಸಹೋದರರಿಗೆ ಹೊಸ ಸಿನಿ ಬದುಕನ್ನು ಬೇರೆ ಲೆವೆಲ್ಗೆ ತೆಗೆದುಕೊಂಡು ಹೋದ ಸಿನಿಮಾ. ಮಿಂಚಿನ ಓಟ ಚಿತ್ರಮಂದಿರದಲ್ಲೂ ಅದ್ಭುತ ಪ್ರದರ್ಶನ ಕಂಡಿತ್ತು. ಕನ್ನಡ ಈ ಚೇಸಿಂಗ್ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವವನ್ನೇ ನೀಡಿತ್ತು. ಇದೇ ಸಿನಿಮಾವನ್ನು ಶಂಕರ್ ನಾಗ್ ಹಿಂದಿ ಭಾಷೆಯಲ್ಲೂ ನಿರ್ದೇಶನ ಮಾಡಿದ್ದರು. ಬಾಲಿವುಡ್ ನಟ ವಿನೋದ್ ಮೆಹ್ರಾ, ರಂಜಿತ್, ಪ್ರಾಣ್ ಅಂತಹ ನಟರು ಹಿಂದಿಯ ಲಾಲಜ್ ಸಿನಿಮಾದಲ್ಲಿ ನಟಿಸಿದ್ದರು. ಮಿಂಚಿನ ಓಟದ ಹಿಂದಿ ಚಾಪ್ಟರ್ ಲಾಲಜ್ 1983ರಲ್ಲಿ ತೆರೆಕಂಡಿತ್ತು.

ಇತಿಹಾಸ ಸೃಷ್ಟಿಸಿದ ಮಾಲ್ಗುಡಿ ಡೇಸ್
ಭಾರತೀಯ ಟೆಲಿವಿಷನ್ ಇತಿಹಾಸದಲ್ಲಿ ಹೊಸ ಇತಿಹಾಸವನ್ನೇ ರಚಿಸಿದ ಟೆಲಿಸೀರಿಯಲ್ ಮಾಲ್ಗುಡಿ ಡೇಸ್. ಆರ್ ಕೆ ನಾರಾಯಣ್ ಅವರ ಕೃತಿಯನ್ನು ಟಿವಿಗಾಗಿ ನಿರ್ದೇಶಿಸಿದ್ದು ಮನಮನ್ನಣೆ ಗಳಿಸಿತ್ತು. ವಿಷ್ಣುವರ್ಧನ್, ಅನಂತ್ನಾಗ್ ರಂತಹ ಸ್ಟಾರ್ ನಟರು ಈ ಟೆಲಿಸೀರಿಯಲ್ನಲ್ಲಿ ನಟಿಸಿ ಅಚ್ಚರಿ ಮೂಡಿಸಿದ್ದರು. ಇಂದಿಗೂ ಟೆಲಿವಿಷನ್ ಇತಿಹಾಸದಲ್ಲಿ ಇಂತಹದ್ದೊಂದು ಧಾರಾವಾಹಿಯನ್ನು ಮತ್ತೆ ಸೃಷ್ಟಿಸೋಕೆ ಯಾರಿಂದಲೂ ಸಾಧ್ಯವಾಗಲಿಲ್ಲ.

ಕನಸುಗಳು ನನಸಾಗದೆ ಉಳಿದು ಬಿಟ್ಟಿತು
ಶಂಕರ್ನಾಗ್ ನಿರ್ದೇಶಿಸಿದ ಒಂದೊಂದು ಸಿನಿಮಾದಲ್ಲೂ ಏನಾದರೂ ಒಂದು ಹೊಸ ಪ್ರಯೋಗ ಮಾಡಿದ್ದಾರೆ. ಸದಾ ಪಾದರಸದಂತೆ ಕೆಲಸ ಮಾಡುತ್ತಿದ್ದ ಶಂಕರ್ ನಾಗ್ ಸಿನಿಮಾ ಬಿಟ್ಟು ಏನಾದರೂ ಮಾಡಬೇಕು ಅನ್ನುವ ಕನಸುಕಂಡಿದ್ದರು. ಕರ್ನಾಟಕಕ್ಕೆ ರೆಕಾರ್ಡಿಂಗ್ ಸ್ಟುಡಿಯೋ ತರಲು ಮುಂದಾದರು. ಅದುವೇ ಸಂಕೇತ್ ಸ್ಟುಡಿಯೋ. ಇದರೊಂದಿಗೆ ಬೆಂಗಳೂರಿಗೆ ಮೆಟ್ರೊ ರೈಲು, ನಂದಿಬೆಟ್ಟಕ್ಕೆ ರೋಪ್ ವೇ ಎಲ್ಲವೂ ಶಂಕರ್ ಕನಸು. ಆದರೆ ಅಂದಿನ ಸರ್ಕಾರ ಈ ಕನಸುಗಳಿಗೆ ಅಂದಿನ ಸರ್ಕಾರಗಳು ಆಸಕ್ತಿ ತೋರಲಿಲ್ಲ. 30 ವರ್ಷ ಮುಂದೆ ಆಲೋಚನೆ ಮಾಡಿದ್ದ ಶಂಕರ್ ಇವೆಲ್ಲಾ ಕಾರಣಗಳಿಗಾಗಿ ಇಂದಿಗೂ ಜನ ಮಾನಸದಲ್ಲಿ ಉಳಿದಿದ್ದಾರೆ.


Click it and Unblock the Notifications











