'ಕಸ್ತೂರಿ ನಿವಾಸ' ಸೃಷ್ಟಿಕರ್ತ ಕೆಸಿಎನ್ ಗೌಡ ಚಿತ್ರರಂಗಕ್ಕೆ ಬಂದಿದ್ದು ಹೇಗೆ?
ಕನ್ನಡ ಚಿತ್ರರಂಗದ ಖ್ಯಾತ ಸಿನಿಮಾ ವಿತರಕ, ನಿರ್ಮಾಪಕ ಹಾಗೂ ಪ್ರದರ್ಶಕ ಕೆಸಿ ನಂಜುಂಡೇಗೌಡ (ಕೆಸಿಎನ್ ಗೌಡ). 300ಕ್ಕೂ ಅಧಿಕ ಚಿತ್ರಗಳನ್ನು ವಿತರಿಸಿದ್ದಾರೆ. ಶರಪಂಜರ, ಹುಲಿ ಹಾಲಿನ ಮೇವು, ಬಬ್ರುವಾಹನ, ಬಂಗಾರದ ಪಂಜರ, ದಾರಿ ತಪ್ಪಿದ ಮಗ, ಕಸ್ತೂರಿ ನಿವಾಸ ಅಂತಹ ಚಿತ್ರಗಳನ್ನು ನಿರ್ಮಿಸಿದ್ದು ಇದೇ ಕೆಸಿಎನ್ ಸಂಸ್ಥೆ.
Recommended Video
1960ರ ಸಮಯದಲ್ಲಿ ಬೆಂಗಳೂರಿನಲ್ಲಿದ್ದ ಸಿನಿಮಾ ಥಿಯೇಟರ್ಗಳೆಲ್ಲವೂ ಗುಜರಾತಿಗಳು, ಮಾರ್ವಾಡಿಗಳ ನಿಯಂತ್ರಣದಲ್ಲಿದ್ದವು. ಇಂತಹ ಸಮಯದಲ್ಲಿ ನವರಂಗ್ ಚಿತ್ರಮಂದಿರ ಇರುವ ಸ್ಥಳವನ್ನು ಬಿಡಿಎ ಹರಾಜು ಹಾಕಿತ್ತು. ಈ ಹರಾಜಿನಲ್ಲಿ ಈ ಸ್ಥಳವನ್ನು ಕೆಸಿಎನ್ ಗೌಡರ ಖರೀದಿ ಮಾಡಿ ಚಿತ್ರಮಂದಿರ ಕಟ್ಟಿದರು. ಆರಂಭದ ದಿನಗಳಲ್ಲಿ ಸಿನಿಮಾ ಪ್ರದರ್ಶನ ಮಾಡುವುದು ಬಹಳ ಕಷ್ಟವಾಗಿತ್ತು. ನಗರದಿಂದ ಹೊರಗೆ ಇದ್ದ ಕಾರಣ, ಬಸ್ ಸಂಚಾರ ಕಷ್ಟ ಇದ್ದ ಕಾರಣ ಪ್ರೇಕ್ಷಕರ ಕೊರತೆ ಹಾಗೂ ಸಿನಿಮಾಗಳು ಸಹ ನವರಂಗ್ ಪಾಲಿಗೆ ಸಿಗುತ್ತಿರಲಿಲ್ಲ. ಆಮೇಲೆ ತಾವೇ ಚಿತ್ರ ನಿರ್ಮಿಸುವುದಕ್ಕೂ ಹಾಗೂ ವಿತರಣೆಗೂ ಕೈ ಹಾಕಿದರು ಕೆಸಿಎನ್.
ಅಂದ್ಹಾಗೆ, ಕೆಸಿಎನ್ ಗೌಡರು ಚಿತ್ರರಂಗ ಪ್ರವೇಶಿಸಿದ್ದು ಅನಿರೀಕ್ಷಿತ. ಟೆಕ್ಸ್ಟೈಲ್ಸ್ ಉದ್ಯಮದಲ್ಲಿದ್ದ ಕೆಸಿಎನ್ ಗೌಡ ಸ್ಯಾಂಡಲ್ವುಡ್ ಪ್ರವೇಶಿಸಿದ್ದು ಹೇಗೆ ಎಂದು ಮಗ ಕೆಸಿಎನ್ ಮೋಹನ್ ಫಿಲ್ಮಿಬೀಟ್ ಕನ್ನಡದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಓದಿ....

ಬೆಳ್ಳಿಮೋಡ ಸಿನಿಮಾ ನಿಂತಿತ್ತು
ಪುಟ್ಟಣ್ಣ ಕಣಗಾಲ್ ನಿರ್ದೇಶನ ಮಾಡ್ತಿದ್ದ 'ಬೆಳ್ಳಿಮೋಡ' ಸಿನಿಮಾ ಕೊನೆಯ ಹಂತದಲ್ಲಿ ನಿಂತು ಹೋಗಿತ್ತು. ಚಿತ್ರದ ಕ್ಲೈಮ್ಯಾಕ್ಸ್ ಇಷ್ಟ ಆಗದ ಕಾರಣ ನಿರ್ಮಾಪಕರು ಹಿಂದೆ ಸರಿದಿದ್ದರು. ಈ ಸಮಯದಲ್ಲಿ ಪುಟ್ಟಣ್ಣ ಕಣಗಾಲ್, ನವರಂಗ್ ಚಿತ್ರದ ಮಾಲೀಕರಾಗಿದ್ದ ಕೆಸಿಎನ್ ಗೌಡರಿಗೆ ಈ ಸಿನಿಮಾ ಮಾಡಿ ಎಂದು ಸಲಹೆ ಕೊಟ್ಟರು. ಅದಾಗಲೇ ಚಿತ್ರಮಂದಿರವೂ ಅಷ್ಟಾಗಿ ಚೆನ್ನಾಗಿ ಹೋಗುತ್ತಿರಲಿಲ್ಲ.ತಾವೇ ಏಕೆ ಸಿನಿಮಾ ನಿರ್ಮಾಣ ಸಂಸ್ಥೆ ಮತ್ತು ವಿತರಣೆ ಸಂಸ್ಥೆ ಸ್ಥಾಪಿಸಬಾರದು ಎಂದು ಯೋಚಿಸಿ ಬೆಳ್ಳಿಮೋಡ ಚಿತ್ರಕ್ಕೆ ಜೊತೆಯಾದರು.

ಪುಟ್ಟಣ್ಣ ಮೇಲೆ ನಂಬಿಕೆಯಿಟ್ಟು ಸಿನಿಮಾ ಆರಂಭ
ಅರ್ಧಕ್ಕೆ ನಿಂತಿದ್ದ 'ಬೆಳ್ಳಿಮೋಡ' ಚಿತ್ರವನ್ನು ಮುಂದುವರಿಸಲು ಕೆಸಿಎನ್ ಗೌಡರು ತೀರ್ಮಾನಿಸಿದರು. ಮೊದಲೇ ಪುಟ್ಟಣ್ಣ ಅವರ ಪರಿಚಯ ಇದ್ದ ಕಾರಣ ಅವರ ಮೇಲೆ ನಂಬಿಕೆಯಿಟ್ಟು ಸಿನಿಮಾ ಮುಗಿಸಲು ನಿರ್ಧರಿಸಿದರು. 'ಬೆಳ್ಳಿಮೋಡ' ರಿಲೀಸ್ ಆದಾಗ ದೊಡ್ಡ ಹಿಟ್ ಆಯಿತು. ಕಲ್ಯಾಣ್ ಕುಮಾರ್, ಕಲ್ಪನಾ, ಕೆಎಸ್ ಅಶ್ವಥ್, ಪಂಡರಿಬಾಯಿ, ಬಾಲಕೃಷ್ಣ, ದ್ವಾರಕೀಶ್, ಬಿ ಜಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದ ಚಿತ್ರ. ಏಳು ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿತು.

300ಕ್ಕೂ ಅಧಿಕ ಸಿನಿಮಾ ವಿತರಣೆ
'ಭಲೇ ಜೋಡಿ' ಚಿತ್ರ ಕೆಸಿಎನ್ ಗೌಡ ನಿರ್ಮಿಸಿದ ಚೊಚ್ಚಲ ಚಿತ್ರ. ರಾಜ್ ಕಮಲ್ ಆರ್ಟ್ಸ್ ಲಾಂಛನದಲ್ಲಿ ನಿರ್ಮಿಸಿದ ಈ ಚಿತ್ರದಲ್ಲಿ ಅಣ್ಣಾವು ದ್ವಿಪಾತ್ರಾಭಿನಯ ಮಾಡಿದ್ದರು. ರಾಜ್ ಕಮಲ್ ಆರ್ಟ್ಸ್ ಮತ್ತು ಕೆಸಿಎನ್ ಮೂವಿಸ್ ಮೂಲಕ ವಿತರಣೆ ಸಹ ಮುಂದುವರಿಸಿದರು. ಸುಮಾರು 300ಕ್ಕೂ ಅಧಿಕ ಚಿತ್ರಗಳನ್ನು ಈ ಸಂಸ್ಥೆ ವಿತರಿಸಿದೆ. ಜೊತೆಗೆ ಚಿತ್ರಮಂದಿರಗಳ ಮೇಲೆ ಹಿಡಿತ ಹೊಂದಿದ್ದ ಕೆಸಿಎನ್ ಪ್ರದರ್ಶಕರಾಗಿಯೂ ಯಶಸ್ಸು ಕಂಡರು.

ಜೀವನಚೈತ್ರ ಸಿನಿಮಾ ನೋಡಿದ್ದ ಅಣ್ಣಾವ್ರು
ನವರಂಗ್ ಚಿತ್ರಮಂದಿರಕ್ಕೆ ಡಿಟಿಎಸ್ ಸೌಲಭ್ಯ ಅಳವಡಿಸಿದ ಸಂದರ್ಭದಲ್ಲಿ ಜೀವನಚೈತ್ರ ಸಿನಿಮಾ ಪ್ರದರ್ಶನ ಮಾಡಲಾಯಿತು. ರಾಜ್ ಕುಮಾರ್ ಅವರು ಖುದ್ದು ಥಿಯೇಟರ್ಗೆ ಬಂದು ಈ ಸಿನಿಮಾ ಪೂರ್ತಿ ನೋಡಿಕೊಂಡು ಹೋಗಿದ್ದರು. ಅದಕ್ಕೂ ಮುಂಚೆಯೂ ಹಲವು ಸಲ ನವರಂಗ್ ಥಿಯೇಟರ್ಗೆ ಭೇಟಿ ಕೊಟ್ಟು ಮೊದಲ ಶೋ ನೋಡಿ ಹೋಗುತ್ತಿದ್ದರಂತೆ.

ಕೆಸಿಎನ್ಗೆ ಇಬ್ಬರು ಮಕ್ಕಳು
ಕೆಸಿಎನ್ ಗೌಡರಿಗೆ ಕೆಸಿಎನ್ ಚಂದ್ರಶೇಖರ್ ಹಾಗೂ ಕೆಸಿಎನ್ ಮೋಹನ್ ಇಬ್ಬರು ಮಕ್ಕಳು. ಇವರಿಬ್ಬರು ಸಹ ಚಿತ್ರನಿರ್ಮಾಣದಲ್ಲಿ ತೊಡಗಿಕೊಂಡಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಚಿತ್ರಮಂದಿರಗಳಾದ ನವರಂಗ್ ಮತ್ತು ಊರ್ವಶಿ ಮಾಲೀಕರು ಸಹ ಹೌದು.


Click it and Unblock the Notifications











