ಗದರಿದ್ದ ಪುರಿ ಜಗನ್ನಾಥ್.. ತಿರುಗೇಟು ಕೊಟ್ಟ ರಕ್ಷಿತಾ: ಮುಂದೇನಾಯ್ತು?
'ಲೈಗರ್' ಸಿನಿಮಾ ಸೋಲಿನ ನಂತರ ಸೈಲೆಂಟ್ ಆಗಿದ್ದ ನಿರ್ದೇಶಕ ಪುರಿ ಜಗನ್ನಾಥ್ ಹೊಸ ಸಿನಿಮಾ ತಯಾರಿಯಲ್ಲಿದ್ದಾರೆ. ಬಹಳ ದಿನಗಳ ನಂತರ ಸೋಶಿಯಲ್ ಮೀಡಿಯಾಗೆ ವಾಪಸ್ ಆಗಿದ್ದಾರೆ. ಪುರಿ ಮ್ಯೂಸಿಂಗ್ಸ್ ಹೆಸರಿನಲ್ಲಿ ಪ್ರತಿದಿನ ಯಾವುದಾದರೂ ಒಂದು ವಿಷಯದ ಬಗ್ಗೆ ಫಿಲಾಸಫಿ ಹೇಳುತ್ತಿದ್ದ ಪುರಿ ಅದನ್ನು ಮತ್ತೆ ಆರಂಭಿಸಿದ್ದಾರೆ. ಬ್ಯಾಲೆನ್ಸ್ಡ್ ಆಗಿ ಪ್ರತಿಕ್ರಿಯಿಸುವುದು ಹೇಗೆ ಎನ್ನುವ ವಿಷಯದ ಬಗ್ಗೆ ವಿಡಿಯೋ ಶೇರ್ ಮಾಡಿದ್ದಾರೆ.
ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವ ಮಾತಿನಂತೆ ಯಾವುದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎನ್ನುವುದು ನಮಗೆ ಗೊತ್ತಿರಬೇಕು. ಸಮಸ್ಯೆ ಯಾವತ್ತೂ ಸಮಸ್ಯೆ ಅಲ್ಲ. ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದು ಸಮಸ್ಯೆ. ಪ್ರತಿಕ್ರಿಯೆ ಎನ್ನುವುದು ಬಹಳ ಮುಖ್ಯ. ಎಂತಹ ಸಮಯದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎನ್ನುವುದು ಗೊತ್ತಿರಬೇಕು. ಎದುರಿಗಿದ್ದವರು ಕೋಪದಿಂದ ಕೂಗಾಡಿದಾಗ ನಗುತ್ತಾ ಉತ್ತರ ಕೊಟ್ಟರೆ ಅವರಿಗೆ ಏನು ಮಾಡಬೇಕೋ ಗೊತ್ತಾಗುವುದಿಲ್ಲ ಎಂದಿದ್ದಾರೆ. ಇದಕ್ಕೆ ಪುರಿ ಜಗನ್ನಾಥ್ 'ಈಡಿಯಟ್' ಸೆಟ್ನಲ್ಲಿ ನಡೆದ ಘಟನೆಯನ್ನು ಉದಾಹರಣೆಯಾಗಿ ನೀಡಿದ್ದಾರೆ.
ಪುರಿ ಜಗನ್ನಾಥ್ ನಿರ್ದೇಶನದ 'ಅಪ್ಪು' ಚಿತ್ರದ ಮೂಲಕ ರಕ್ಷಿತಾ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಮುಂದೆ ಇದೇ ಚಿತ್ರವನ್ನು ತೆಲುಗಿಗೆ ರೀಮೆಕ್ ಮಾಡಿದಾಗ ರಕ್ಷಿತಾ ನಾಯಕಿಯಾಗಿ ನಟಿಸಿದ್ದರು. ಕನ್ನಡದಲ್ಲಿ ಪುನೀತ್ ರಾಜ್ಕುಮಾರ್ ಮಾಡಿದ್ದ ಪಾತ್ರವನ್ನು ತೆಲುಗಿನಲ್ಲಿ ರವಿತೇಜಾ ನಿಭಾಯಿಸಿದ್ದರು. ಕನ್ನಡ ಮಾತ್ರವಲ್ಲ ತೆಲುಗಿನಲ್ಲೂ ಸಿನಿಮಾ ಸೂಪರ್ ಹಿಟ್ ಆಗಿತ್ತು.

ರಕ್ಷಿತಾಗೆ ಸೆಟ್ನಲ್ಲಿ ಗದರಿದ್ದೆ
"ಈಡಿಯಟ್ ಸಿನಿಮಾ ಚಿತ್ರೀಕರಣ ನಡೀತಿತ್ತು. ಅದು ಗಂಭೀರವಾದ ಸನ್ನಿವೇಶ. ಆದರೆ ರಕ್ಷಿತಾ ಮಾತ್ರ ಸಿಕ್ಕಾಪಟ್ಟೆ ನಗುತ್ತಿದ್ದರು. ಎಷ್ಟು ಹೇಳಿದರೂ ಕೇಳಲಿಲ್ಲ. ನನಗೆ ಕೋಪ ಬಂದು, ಸೆಟ್ನಲ್ಲಿ ಎಲ್ಲರ ಎದುರು ಜೋರಾಗಿ ಗದರಿದ್ದೆ. ರಕ್ಷಿತಾ ನೀನು ಫೋಕಸ್ ಮಾಡ್ತಿಲ್ಲ. ಹಿಂದೆ ಮಾಡ್ತಿದ್ರೆ, ಇನ್ನು ಮುಂದೆ ನಿನಗೆ ಯಾವುದೇ ಅವಕಾಶ ಕೊಡುವುದಿಲ್ಲ. ಸಾಕು ನಿನ್ನ ಸಹವಾಸ ಎಂದು ಕೂಗಾಡಿದ್ದೆ. ಆದರೆ ಅದಕ್ಕೆ ಆಕೆ ಕೊಟ್ಟ ಉತ್ತರ ಕೇಳಿ ಶಾಕ್ ಆಗಿದ್ದೆ ಎಂದಿದ್ದಾರೆ.

ರಕ್ಷಿತಾ ತಿರುಗೇಟು ಕೊಟ್ಟಿದ್ದಳು
ನಾನು ಆ ರೀತಿ ಗದರುತ್ತಿದ್ದಂತೆ, ಆಕೆ ತಿರುಗಿಸಿ ಕೇಳಿದಳು. "ಏನು ನನಗೆ ಅವಕಾಶ ಕೊಡಲ್ವಾ? ಕೊಡದೇ ಇದ್ದರೆ ಬಿಡಲ್ಲ. ನಿನ್ನ ಮುಂದಿನ 10 ಸಿನಿಮಾಗಳಲ್ಲಿ ನಾನೇ ನಟಿಸ್ತೀನಿ. ಈಗ ನಿನಗೆ ಏನು ಬೇಕೋ ಸರಿಯಾಗಿ ಹೇಳು ಎಂದಿದ್ದರು. ಆಕೆಯ ಪ್ರತಿಕ್ರಿಯೆಗೆ ಸೆಟ್ನಲ್ಲಿ ಇದ್ದವರೆಲ್ಲಾ ಚಪ್ಪಾಳೆ ತಟ್ಟಿದ್ದರು. ಆಕೆಯ ಮಾತಿಗೆ ನನಗೂ ನಗು ಬಂತು. ಯಾಕಂದರೆ ನಾನು ಊಹಿಸದ ಪಾಸಿಟಿವ್ ರೆಸ್ಪಾನ್ಸ್ ಅದಾಗಿತ್ತು. ಒಂದೇ ಕ್ಷಣಕ್ಕೆ ಅವಳ ಮೇಲೆ ಇದ್ದ ಕೋಪ ಕರಗಿ ಹೋಗಿತ್ತು" ಎಂದು ಆ ಘಟನೆ ನೆನಪಿಸಿಕೊಂಡಿದ್ದಾರೆ.

ನಮ್ಮ ಪ್ರತಿಕ್ರಿಯೆ ಬಹಳ ಮುಖ್ಯ
"ಬೇರೆ ಯಾರಾದರೂ ಆಗಿದ್ದರೆ ನನ್ನ ಮಾತಿಗೆ ನೊಂದುಕೊಳ್ಳುತ್ತಿದ್ದರು. ಯಾವುದಾದರೂ ಮೂಲೆಗೆ ಹೋಗಿ ಅಳುತ್ತಿದ್ದರು. ಮಾರನೇ ದಿನ ಶೂಟಿಂಗ್ಗೆ ಬರಲ್ಲ ಎನ್ನುತ್ತಿದ್ದರು. ಆದರೆ ರಕ್ಷಿತಾ ಆ ರೀತಿ ಮಾಡಲಿಲ್ಲ. ಅದಕ್ಕೆ ಹೇಳಿದ್ದು ನಮ್ಮ ಪ್ರತಿಕ್ರಿಯೆ ಎನ್ನುವುದು ಬಹಳ ಮುಖ್ಯ ಎಂದು. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿಚಾರಗಳು ಬರುತ್ತಿರುತ್ತವೆ. ಹಿಂದೆ ಮುಂದೆ ನೋಡದೇ ಅದಕ್ಕೆಲ್ಲಾ ಪ್ರತಿಕ್ರಿಯಿಸಬಾರದು" ಎಂದು ಪುರಿ ಜಗನ್ನಾಥ್ ಹೇಳಿದ್ದಾರೆ.

ಪುರಿ ನಿರ್ದೇಶನದಲ್ಲಿ ರಕ್ಷಿತಾ
ರಕ್ಷಿತಾ ಹೇಳಿದಂತೆ ಮುಂದೆ ಪುರಿ ಜಗನ್ನಾಥ್ ತಮ್ಮ ಸಿನಿಮಾಗಳಲ್ಲಿ ಆಕೆಗೆ ಅವಕಾಶ ಕೊಟ್ಟಿದ್ದರು. ನಾಗಾರ್ಜುನ ನಟನೆಯ 'ಶಿವಮಣಿ', ಜ್ಯೂ. ಎನ್ಟಿಆರ್ ನಟನೆಯ 'ಆಂಧ್ರವಾಲ' ಚಿತ್ರದಲ್ಲಿ ರಕ್ಷಿತಾ ನಾಯಕಿಯಾಗಿ ಬಣ್ಣ ಹಚ್ಚಿದ್ದರು. ಈ ಎರಡು ಚಿತ್ರಗಳಿಗೆ ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿದ್ದರು. ರಕ್ಷಿತಾ ಪ್ರೇಮ್ ಹಾಗೂ ಪುರಿ ಜಗನ್ನಾಥ್ ಇವತ್ತಿಗೂ ಆತ್ಮೀಯ ಸ್ನೇಹಿತರಾಗಿ ಇದ್ದಾರೆ.


Click it and Unblock the Notifications











