"ಆ ಸೋಲು ರವಿಚಂದ್ರನ್ ಸೋಲು ಅಲ್ಲ.. ಉದ್ಯಮದ ಸೋಲು" ನಿರ್ದೇಶಕ ಎಸ್ ನಾರಾಯಣ!
ಕ್ರೇಜಿಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗದ ಕನಸುಗಾರ. ಕನ್ನಡ ಚಿತ್ರರಂಗಕ್ಕೆ ರವಿಚಂದ್ರನ್ ನೀಡಿದ ಸಿನಿಮಾಗಳು ಒಂದಕ್ಕಿಂತ ಒಂದು ಅದ್ಭುತ. ಆದರೆ, ಇತ್ತೀಚೆಗೆ ಕ್ರೇಜಿಸ್ಟಾರ್ಗೆ ದೊಡ್ಡ ಸಕ್ಸಸ್ ಸಿಕ್ಕಿಲ್ಲ. ಈ ಬಗ್ಗೆ ನಿರ್ದೇಶಕ ಎಸ್ ನಾರಾಯಣ್ ಮನಬಿಚ್ಚಿ ಮಾತಾಡಿದ್ದಾರೆ.
ವಿ. ರವಿಚಂದ್ರನ್ 80ರ ದಶಕದಲ್ಲಿಯೇ ಪ್ಯಾನ್ ಇಂಡಿಯಾ ಸಿನಿಮಾ ಮಾಡಿದ್ದರು. ಅಂದು ಕ್ರೇಜಿಸ್ಟಾರ್ ನಿರ್ದೇಶಿಸಿದ ಈ ಸಿನಿಮಾ ಗೆದ್ದಿದ್ದರೆ, ಅಂದೇ ಕನ್ನಡ ಚಿತ್ರರಂಗ ಬದಲಾಗುತ್ತಿತ್ತು. ಸ್ಯಾಂಡಲ್ವುಡ್ ಗೌರವ ಹೆಚ್ಚಾಗುತ್ತಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕಲಾ ಸಾಮ್ರಾಟ್ ಎಸ್ ನಾರಾಯಣ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಇಬ್ಬರೂ ಆತ್ಮೀಯರು. ರವಿಚಂದ್ರನ್ ಕಾರ್ಯವೈಖರಿಯನ್ನು ನೋಡಿರೋ ಎಸ್ ನಾರಾಯಣ್ಗೆ ಈ ಸಂಜೆ ಜೊತೆಗಿನ ಸಂದರ್ಶನದಲ್ಲಿ ಕ್ರೇಜಿಸ್ಟಾರ್ ಸೋಲಿನ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ.

'ಶಾಂತಿ ಕ್ರಾಂತಿ ಗೆಲ್ಲಬೇಕಿತ್ತು'
"ಶಾಂತಿ ಕ್ರಾಂತಿ ಸಿನಿಮಾ ಅವತ್ತು ಗೆಲ್ಲಬೇಕಿತ್ತು. ಗೆದ್ದಿದ್ದರೆ ನಮ್ಮ ಉದ್ಯಮದ ಗೌರವ ಬೇರೆ ರೀತಿನೇ ಬೆಳೆಯುತ್ತಿತ್ತು. ನಮ್ಮ ಉದ್ಯಮ ಬೇರೆ ರೀತಿ ಇರುತ್ತಿತ್ತು. ಅವತ್ತಿಗೆ ನೂರಾರು ಕೋಟಿ ಸಿನಿಮಾ ಬರುತ್ತಿತ್ತು. ಆ ಸೋಲು ರವಿಚಂದ್ರನ್ ಸೋಲು ಅಲ್ಲ. ಉದ್ಯಮದ ಸೋಲು. ನಮ್ಮ ಸೋಲು ಅದು. ನಾನು ಆ ಸಿನಿಮಾಗೆ ನಿರ್ಮಾಪಕ, ನಿರ್ದೇಶಕ ಅಲ್ಲ. ಸಹಾಯಕ ನಿರ್ದೇಶಕನೂ ಅಲ್ಲ. ಆದರೆ, ಆ ಸಿನಿಮಾ ಸೋತಾಗ ನನಗೆ ತುಂಬಾನೇ ಬೇಸರ ಆಗಿತ್ತು." ಎಂದು ಎಸ್ ನಾರಾಯಣ ಈ ಸಂಜೆಗೆ ಮಾಹಿತಿ ನೀಡಿದ್ದಾರೆ.

'ನಾಲ್ಕು ಭಾಷೆಯಲ್ಲಿ ನೆಗೆಟಿವ್ನಲ್ಲಿ ಡೈರೆಕ್ಟ್ ಶೂಟ್'
"ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಶುರು ಮಾಡಿದ್ದೇ ರವಿಚಂದ್ರನ್. 87 - 88ನಲ್ಲಿ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ರವಿಚಂದ್ರನ್ಗೆ ಬಂತ ಅಂದ್ರೆ, ಇವತ್ತು ನಾವು ಒಂದು ಭಾಷೆಯಲ್ಲಿ ಶೂಟಿಂಗ್ ಮಾಡಿ, ನಾಲ್ಕಾರು ಭಾಷೆಯಲ್ಲಿ ಡಬ್ಬಿಂಗ್ ಮಾಡುತ್ತೇವೆ. ರವಿಚಂದ್ರನ್ ಆತರ ಅಲ್ಲ. ನಾಲ್ಕು ಭಾಷೆಯಲ್ಲಿ ನೆಗೆಟಿವ್ನಲ್ಲಿ ಡೈರೆಕ್ಟ್ ಶೂಟ್ ಮಾಡುತ್ತಿದ್ದರು. ಪ್ರತಿ ಭಾಷೆಯಲ್ಲಿ ಕಲಾವಿದರನ್ನು ಕರೆದುಕೊಂಡು ಬರುತ್ತಿದ್ದರು. ಹೀರೊ ಇವರೇ ಇರುತ್ತಿದ್ದರು. ಬೇರೆ ಬೇರೆ ಭಾಷೆಯ ಕಲಾವಿದರು ಇರುತ್ತಿದ್ದರು. ನೆಗೆಟಿವ್ನಲ್ಲಿ ಶೂಟ್ ಮಾಡೋದು ಹುಡುಗಾಟಿಕೆಯ ವಿಚಾರವಲ್ಲ."

'ರವಿಚಂದ್ರನ್ಗೆ ಹಿನ್ನಡೆಯಾದರೆ, ಉದ್ಯಮಕ್ಕೆ ಆದಂತೆ'
"ಅವರಿಗೆ 10 ರೂ. ಬಂದರೆ ಇನ್ನೊಂದು ಸಿನಿಮಾ ಮಾಡುತ್ತಾರೆ. ಸೈಟ್ ತೆಗೆದುಕೊಳ್ಳುವುದಿಲ್ಲ. ಕೋಟಿ ರೂ. ಬಂದರೆ, ಒಂದೂವರೆ ಕೋಟಿ ರೂ. ಸಿನಿಮಾ ಮಾಡುತ್ತಾರೆ. 100 ಕೋಟಿ ರೂ. ಬಂದರೆ 150 ಕೋಟಿ ರೂ. ಸಿನಿಮಾ ಮಾಡುತ್ತಾರೆ. ಅದೇ ರವಿಚಂದ್ರನ್. ಅವರಿಗೆ ಏನೇ ಹಿನ್ನಡೆಯಾಗಿದ್ದರೂ, ಅದು ಚಿತ್ರರಂಗಕ್ಕೆ ಹಿನ್ನಡೆ." ಎಂದು ಕ್ರೇಜಿಸ್ಟಾರ್ ಬಗ್ಗೆ ಎಸ್ ನಾರಾಯಣ ಹೇಳಿದ್ದಾರೆ.

'ಈ ಸೋಲು ತಾತ್ಕಾಲಿಕ ಅಷ್ಟೇ'
ಸದ್ಯ ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಸೋಲುತ್ತಿವೆ. ಆದರೆ, ಕ್ರೇಜಿ ಸ್ಟಾರ್ ಮಾತ್ರ ಯಾವತ್ತೂ ಸೋಲುವುದಿಲ್ಲ ಎಂದು ಎಸ್ ನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ರವಿಚಂದ್ರನ್ ಯಾವತ್ತೂ ಸೋಲುವುದೇ ಇಲ್ಲ. ಸೋಲು ಅವರ ಬಳಿ ಸುಳಿಯುವುದಿಲ್ಲ. ಇದು ತಾತ್ಕಾಲಿಕ ಅಷ್ಟೇ. ಸಿನಿಮಾಗಳಲ್ಲಿ ನಾವು ಇಂಟರ್ವಲ್ ನೋಡುತ್ತೇವಲ್ಲ ಅಷ್ಟೇನೆ. ಅದರಿಂದ ಅವರು ಹೊರಗಡೆ ಬರುತ್ತಾರೆ. ಅವರಿಗೆ ಆ ಶಕ್ತಿ ಇದೆ." ಎಂದು ಕ್ರೇಜಿಸ್ಟಾರ್ ರವಿಚಂದನ್ ಸಂದರ್ಶನದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.


Click it and Unblock the Notifications











