ಸಲ್ಮಾನ್ ಖಾನ್ ಮೇಲೆ 12 ವರ್ಷಗಳ ಹಗೆ! ಯಾರು ಈ ಗ್ಯಾಂಗ್ಸ್ಟರ್ ಲಾರೆನ್ಸ್?
ಸಲ್ಮಾನ್ ಖಾನ್ ಕೊಲೆ ಬೆದರಿಕೆ ಪ್ರಕರಣವನ್ನು ಮುಂಬೈ ಪೊಲೀಸ್ ಗಂಭೀರವಾಗಿ ಪರಿಗಣಿಸಿದೆ. ಸಲ್ಮಾನ್ ಖಾನ್ ಮನೆಯ ಸುತ್ತ ಹಾಗೂ ಬೆದರಿಕೆ ಪತ್ರ ಸಿಕ್ಕ ಬ್ಯಾಂಡ್ರಾ ಬಾಂಡ್ಸ್ಟಾಂಡ್ ಬಳಿಯ ಸುಮಾರು 200 ಸಿಸಿ ಟಿವಿಯ ದೃಶ್ಯಗಳನ್ನು ಸಂಗ್ರಹಿ ತನಿಖೆಗೊಳಪಡಿಸಲಾಗಿದೆ.
ಬೆದರಿಕೆ ಪತ್ರವು ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ಗೆ ಮುಂಬೈನ ಬ್ಯಾಂಡ್ರಾ ಸ್ಟಾಂಡ್ ಬಳಿಯ ಪಾರ್ಕ್ನಲ್ಲಿ ದೊರಕಿತ್ತು. ಸಲೀಂ ಖಾನ್, ಪ್ರತಿದಿನವೂ ಬ್ಯಾಂಡ್ರಾ ಸ್ಟ್ಯಾಂಡ್ ಬಳಿ ಜಾಗಿಂಗ್ ಮಾಡಿ ಒಂದು ಕಲ್ಲು ಬೇಂಚಿನ ಮೇಲೆ ಕೂರುತ್ತಾರೆ. ಭಾನುವಾರ ಜಾಗಿಂಗ್ ಮುಗಿಸಿ ಅದೇ ಕಲ್ಲು ಬೇಂಚಿನ ಮೇಲೆ ಕೂತಾದ ಪಕ್ಕದಲ್ಲಿಯೇ ಇದ್ದ ಈ ಪತ್ರ ಸಿಕ್ಕಿದೆ. ಪತ್ರದ ಮೇಲೆ ಸಲ್ಮಾನ್ ಖಾನ್ ಎಂದು ಬರೆದಿದ್ದ ಕಾರಣ ಸಲೀಂ ಖಾನ್ ಆ ಪತ್ರವನ್ನು ತೆಗೆದು ಓದಿದ್ದಾರೆ.
ಪತ್ರದಲ್ಲಿ, ''ಸಲೀಂ ಖಾನ್, ಸಲ್ಮಾನ್ ಖಾನ್ಗೆ ಆದಷ್ಟು ಬೇಗ ಸಿಧು ಮೂಸೆವಾಲಾಗೆ ಆದ ಗತಿಯೇ ಆಗುತ್ತದೆ'' ಎಂದು ಬರೆದಿತ್ತು. ಪತ್ರದಲ್ಲಿ 'ಎಲ್.ಬಿ' ಹಾಗೂ 'ಜಿ.ಬಿ' ಎಂಬ ಅಕ್ಷರಗಳನ್ನು ಸಹ ಬರೆಯಲಾಗಿತ್ತು. ಎಲ್.ಬಿ ಎಂದರೆ ಲಾರೆನ್ಸ್ ಬಿಷ್ಣೋಯಿ ಹಾಗೂ ಜಿಬಿ ಎಂದರೆ ಗೋಲ್ಡಿ ಬ್ರಾರ್ ಅಥವಾ ಗೋಲ್ಡಿ ಬ್ರದರ್ಸ್ ಎಂದು ಹೇಳಲಾಗುತ್ತಿದೆ. ಇಬ್ಬರೂ ಗ್ಯಾಂಗ್ಸ್ಟರ್ಗಳಾಗಿದ್ದಾರೆ. ಸಲ್ಮಾನ್ ಖಾನ್ ಮೇಲೆ ಸುಮಾರು 12 ವರ್ಷಗಳಿಂದಲೂ ಹಗೆತನ ಸಾಧಿಸುತ್ತಿದ್ದ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿಯನ್ನು ಮುಂಬೈ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಗ್ಯಾಂಗ್ಸ್ಟರ್ ಬಿಷ್ಣೋಯಿ ಕಳೆದ ಹನ್ನೆರಡು ವರ್ಷಗಳಿಂದಲೂ ಸಲ್ಮಾನ್ ಖಾನ್ ವಿರುದ್ಧ ಹಗೆತನ ಸಾಧಿಸುತ್ತಿದ್ದಾನೆ. ಸಲ್ಮಾನ್ ಖಾನ್ ಅನ್ನು ಕೊಲ್ಲಲು ಹಲವು ಬಾರಿ ಯೋಜನೆ ರೂಪಿಸಿ ವಿಫಲನಾಗಿದ್ದಾನೆ. ಹಾಗಿದ್ದರೆ ಯಾರು ಲಾರೆನ್ಸ್ ಬಿಷ್ಣೋಯಿ, ಈತನಿಗೆ ಸಲ್ಮಾನ್ ಖಾನ್ ಮೇಲೇಕೆ ಇಷ್ಟು ದ್ವೇಷ?

ಸಲ್ಮಾನ್ ಖಾನ್ ವಿರುದ್ಧ ದ್ವೇಷ ಹುಟ್ಟಲು ಕಾರಣವೇನು?
ಲಾರೆನ್ಸ್ ಬಿಷ್ಣೋಯಿಗೆ ಸಲ್ಮಾನ್ ಖಾನ್ ವಿರುದ್ಧ ದ್ವೇಷ ಹುಟ್ಟಲು ಕಾರಣ ಕೃಷ್ಣಮೃಗ ಬೇಟೆ. 1998 ರಲ್ಲಿ 'ಹಮ್ ಸಾಥ್ ಸಾಥ್ ಹೈ' ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಬೇಟೆಯಾಡಿದ್ದ ಪ್ರಕರಣ. ಈ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅಪರಾಧಿ ಎಂದು ಸಾಬೀತಾಗಿ ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು(ನಂತರ ಆರೋಪ ಖುಲಾಸೆಯಾಯ್ತು). ಕೃಷ್ಣಮೃಗವನ್ನು ದೇವರ ರೂಪವೆಂದು ನಂಬುವ ಬಿಶ್ಣೋಯಿ ಕುಟುಂಬದವನಾದ ಲಾರೆನ್ಸ್ ಬಿಷ್ಣೋಯಿ, ಕೃಷ್ಣಮೃಗವನ್ನು ಕೊಂದಿದ್ದಕ್ಕಾಗಿ ಸಲ್ಮಾನ್ ಖಾನ್ ವಿರುದ್ಧ ದ್ವೇಷ ಬೆಳೆಸಿಕೊಂಡ. ಕೆಲ ವರ್ಷಗಳ ಹಿಂದೆ ಜೋಧ್ಪುರದ ನ್ಯಾಯಾಲಯದ ಹೊರಗೆ ನಿಂತು ತಾನು ಸಲ್ಮಾನ್ ಖಾನ್ ಅನ್ನು ಸಾಯಿಸಿಯೇ ತೀರುವುದಾಗಿ ಹೇಳಿದ್ದ ಲಾರೆನ್ಸ್ ಬಿಷ್ಣೋಯಿ.

700 ಶಾರ್ಪ್ ಶೂಟರ್ಗಳಿಗೆ ನಾಯಕ!
ಪೊಲೀಸ್ ಕಾನ್ಸ್ಟೇಬಲ್ ಪುತ್ರನಾಗಿರುವ ಲಾರೆನ್ಸ್ ಬಿಷ್ಣೋಯಿ, ಭಾರತದ ನಟೋರಿಯಸ್ ಗ್ಯಾಂಗ್ಸ್ಟರ್ಗಳಲ್ಲಿ ಒಬ್ಬ. ದೇಶದಾದ್ಯಂತ ಸುಮಾರು 700 ಶಾರ್ಪ್ ಶೂಟರ್ಗಳ ಸಿಂಡಿಕೇಟ್ಗೆ ಈತ ನಾಯಕ ಎನ್ನಲಾಗುತ್ತದೆ. ಆದರೆ ಈ ಬಗ್ಗೆ ನಿಖರ ಸಾಕ್ಷ್ಯಗಳು ಇಲ್ಲ. ಇದೀಗ ಹತ್ಯೆಯಾಗಿರುವ ಸಿಧು ಮೂಸೆ ಪ್ರಕರಣದಲ್ಲಿಯೂ ಈತನ ಹೆಸರು ಕೇಳಿ ಬಂದಿದೆ. ಸಿಧು ಪ್ರಕರಣ ಮಾತ್ರವೇ ಅಲ್ಲದೆ ಹಲವು ವಿಐಪಿಗಳ ಹತ್ಯೆ ಪ್ರಕರಣದಲ್ಲಿ ಈತನ ಹೆಸರು ಕೇಳಿ ಬಂದಿದೆ. ಜೈಲಿನಲ್ಲಿದ್ದುಕೊಂಡೆ ಕೇವಲ ಫೋನ್ ಕಾಲ್ ಮೂಲಕ ಹಲವು ಡೀಲ್ಗಳನ್ನು ಮುಗಿಸಿದ್ದಾನೆ ಲಾರೆನ್ಸ್ ಎನ್ನಲಾಗುತ್ತದೆ.

ಕಾಲೇಜು ದಿನಗಳಲ್ಲಿಯೇ ಕೊಲೆ ಬೆದರಿಕೆ ಆರೋಪ
ಕಾಲೇಜು ದಿನಗಳಲ್ಲಿಯೇ ರಾಬರಿಗೆ ಇಳಿದಿದ್ದ ಲಾರೆನ್ಸ್ ಬಿಷ್ಣೋಯಿ, ಕಾಲೇಜು ಚುನಾವಣೆಯಲ್ಲಿ ಸೋತಾಗ ಗಾಳಿಯಲ್ಲಿ ಗುಂಡು ಹಾರಿಸಿ ಆಕ್ರೋಶ ವ್ಯಕ್ತಪಡಿಸಿದ್ದ, ಗೆದ್ದ ಅಭ್ಯರ್ಥಿಗೆ ಬೆದರಿಕೆ ಹಾಕಿದ್ದ. ಆಗ ಈತನ ವಿರುದ್ಧ ಮೊದಲ ಬಾರಿಗೆ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿತ್ತು. ಅಂದಿನಿಂದ ಈಗಿನವರೆಗೆ ಅಂಡರ್ವಲ್ಡ್ ಪ್ರಪಂಚದಲ್ಲಿಯೇ ಬದುಕುತ್ತಿದ್ದಾನೆ ಲಾರೆನ್ಸ್. ಸಂಪತ್ ನರೇಶ್ ಗೆಳೆತನ ದೊರೆತ ಮೇಲಂತೂ ಈತನ ಆರ್ಭಟ ಮತ್ತಷ್ಟು ಹೆಚ್ಚಾಯಿತು.

ಸಲ್ಲು ಅನ್ನು ಕೊಲ್ಲಲು ಯತ್ನಿಸಿ ವಿಫಲನಾಗಿದ್ದಾನೆ
ಈ ಲಾರೆನ್ಸ್ ಬಿಷ್ಣೋಯಿ, ಸಲ್ಮಾನ್ ಖಾನ್ ಅನ್ನು ಕೊಲ್ಲಲು ಕೆಲವು ಬಾರಿ ಯತ್ನಿಸಿ ವಿಫಲವಾಗಿದ್ದಾನೆ. 2011 ರಲ್ಲಿಯೇ ಸಲ್ಮಾನ್ ಖಾನ್ ಅನ್ನು ಹೊಡೆದುರುಳಿಸುವ ಯೋಜನೆ ಹಾಕಿದ್ದ. 'ರೆಡಿ' ಸಿನಿಮಾದ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಅನ್ನು ಕೊಲ್ಲಲು ಪ್ಲ್ಯಾನ್ ರೂಪಿಸಲಾಗಿತ್ತು. ಈ 'ಆಪರೇಷನ್'ನ ಜವಾಬ್ದಾರಿಯನ್ನು ಕರ್ನಾಟಕ ಮೂಲದ ಮುಂಬೈ ಗ್ಯಾಂಗ್ಸ್ಟರ್ ನರೇಂದ್ರ ಶೆಟ್ಟಿಗೆ ವಹಿಸಲಾಗಿತ್ತು. ಆದರೆ ಅವರಿಗೆ ಸೂಕ್ತ ಸಮಯಕ್ಕೆ ಅಗತ್ಯ ಶಸ್ತ್ರಾಸ್ತ್ರ ಸಿಗದ ಕಾರಣ ಆ ಯೋಜನೆ ಕೈಗೂಡಿರಲಿಲ್ಲ.

2017 ರಲ್ಲಿ ಕೊಲ್ಲಲು ಯತ್ನಿಸಿದ್ದ
ಅದು ಮಾತ್ರವೇ ಅಲ್ಲದೆ, ತನ್ನ ಆತ್ಮೀಯನಾದ ಸಂಪತ್ ನರೇಶ್ ಜೊತೆ ಸೇರಿ 2017ರಲ್ಲಿ ಮುಂಬೈನ ವಾಶಿ ಏರಿಯಾದಲ್ಲಿ ಠಿಕಾಣಿ ಹೂಡಿ ಸಲ್ಮಾನ್ ಖಾನ್ ಅನ್ನು ಕೊಲ್ಲಲು ಯತ್ನಿಸಿದ್ದರು. ಸಲ್ಮಾನ್ ಖಾನ್ ನಿವಾಸದ ಬಳಿ ಗಸ್ತು ತಿರುಗಿ ಕೊಲ್ಲಲು ಯೋಜನೆಗಳನ್ನು ಸಿದ್ಧಪಡಿಸಿದರು. ಆದರೆ ಕೊಲ್ಲಲು ವಿಫಲವಾದರು. ನಂತರ ಶಾರ್ಪ್ ಶೂಟರ್ಗಳ ಗ್ಯಾಂಗ್ ರೆಡಿ ಮಾಡಿಕೊಂಡ ಲಾರೆನ್ಸ್, 2020ರಲ್ಲಿ ತನ್ನ ಗ್ಯಾಂಗ್ ನ ಕೆಲವು ಸದಸ್ಯರನ್ನು ಸಲ್ಮಾನ್ ಖಾನ್ ಅನ್ನು ಕೊಲ್ಲಲು ಕಳಿಸಿದ.

2020ರಲ್ಲೂ ಯತ್ನಿಸಿದ್ದ
ಆದರೆ ವಿಶೇಷ ದೆಹಲಿ ಪೊಲೀಸರು ನಡೆಸಿದ ತನಿಖೆಯಲ್ಲಿ ಆಕಸ್ಮಿಕವಾಗಿ ಈ ಗ್ಯಾಂಗ್ ಬಲೆಗೆ ಬಿತ್ತು, ಇವರ ಯೋಜನೆ ಮತ್ತೆ ವಿಫಲವಾಯಿತು. 2020 ರಲ್ಲಿ ಮುಂಬೈನ ವಾಶಿಯಲ್ಲಿ ರಜನ್ ಜಾಟ್, ಸುಮಿತ್ ಹಾಗೂ ಅಮಿತ್ ಎಂಬ ಶಾರ್ಪ್ ಶೂಟರ್ಗಳನ್ನು ದೆಹಲಿ ಪೊಲೀಸರು ಬಂಧಿಸಿದರು. ಈ ಮೂವರೂ ಸಹ ಲಾರೆನ್ಸ್ನ ಶಾರ್ಪ್ ಶೂಟರ್ ಗ್ಯಾಂಗ್ನ ಸದಸ್ಯರಾಗಿದ್ದರು.

ರಾಹುಲ್ ಸಂಘಾ ಸಹ ಸಲ್ಮಾನ್ ಅನ್ನು ಕೊಲ್ಲಲು ಯತ್ನಿಸಿದ್ದ
ಕಳೆದ ವರ್ಷ ಫರೀದಾಬಾದ್ ಪೊಲೀಸರು ಶಾರ್ಪ್ ಶೂಟರ್ ರಾಹುಲ್ ಸಂಘಾ ಅನ್ನು ಬಂಧಿಸಿದ್ದರು. ಆಗಲೂ ಆತ ಇದೇ ಆಘಾತಕಾರಿ ವಿಷಯವನ್ನು ಹೊರಹಾಕಿದ್ದ. ತಾನು ಮುಂಬೈನಲ್ಲಿ ಸಲ್ಮಾನ್ ಖಾನ್ ಅನ್ನು ಕೊಲ್ಲುವ ಸಲುವಾಗಿ ಕೆಲ ಕಾಲ ವಾಸ್ತವ್ಯ ಹೂಡಿದ್ದಾಗಿ ಹೇಳಿದ್ದ. ಈತನನ್ನೂ ಸಹ ಲಾರೆನ್ಸ್ನೇ ಸಲ್ಮಾನ್ ಅನ್ನು ಕೊಲ್ಲಲು ನಿಯೋಜಿಸಿದ್ದ ಎಂಬ ಅನುಮಾನವನ್ನು ಫರೀದಾಬಾದ್ ಪೊಲೀಸರು ವ್ಯಕ್ತಪಡಿಸಿದ್ದರು.

ಸಿಧುವನ್ನು ಕೈಯಾರೆ ಕೊಂದೆ ಎಂದಿರುವ ಲಾರೆನ್ಸ್ ತಮ್ಮ ಸಚಿನ್
ಕೆಲವು ದಿನಗಳ ಹಿಂದೆ ಕೊಲೆಯಾದ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆ ಹತ್ಯೆ ಪ್ರಕರಣದಲ್ಲಿ ಲಾರೆನ್ಸ್ ಹೆಸರು ಕೇಳಿ ಬರುತ್ತಿದೆ. ಈತನ ಸಹೋದರನೇ ಆಗಿರುವ ಸಚಿನ್ ಬಿಶ್ಣೋಯಿ, ತಾನೇ ತನ್ನ ಕೈಯಾರೆ ಸಿಧು ಮೂಸೆವಾಲಾನನ್ನು ಕೊಂದಿರುವುದಾಗಿ ಮಾಧ್ಯಮಗಳ ಬಳಿ ಹೇಳಿಕೊಂಡಿದ್ದಾನೆ. ತನ್ನ ಅಣ್ಣನಂತಿದ್ದ ವಿಕ್ಕಿ ಮಿಧುಕೇರಾನನ್ನು ಕೊಂದವರಿಗೆ ಸಿಧು ಮೂಸೆವಾಲಾ ಸಹಾಯ ಮಾಡಿದ್ದನಾದ್ದರಿಂದ ಆತನನ್ನು ಕೊಂದಿದ್ದಾಗಿ ಹೇಳಿಕೊಂಡಿದ್ದಾನೆ.


Click it and Unblock the Notifications











