ಯಶ್, ಅಲ್ಲು ಅರ್ಜುನ್, ಧನುಷ್ ಇವರೆಲ್ಲಾ ತಮ್ಮೊಳಗಿನ ಆಂಗ್ರಿ ಯಂಗ್ ಮ್ಯಾನ್ ಹುಡುಕೊಂಡಿದ್ದೇಗೆ?
ದಕ್ಷಿಣ ಭಾರತದ ಹೀರೊಗಳು ಉತ್ತರ ಭಾರತದ ಜನರಿಗೆ ಯಾಕೆ ಇಷ್ಟ ಆಗುತ್ತಿದ್ದಾರೆ? ಯಶ್, ಅಲ್ಲು ಅರ್ಜುನ್, ಜೂ. ಎನ್ಟಿಆರ್, ರಾಮ್ ಚರಣ್, ಧನುಷ್ ಸಿನಿಮಾಗಳು ಪ್ರೇಕ್ಷಕರಿಗೆ ಕಿಕ್ ಕೊಡುತ್ತಿರೋದರ ಗುಟ್ಟೇನು? ದಕ್ಷಿಣ ಭಾರತದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಬಾಕ್ಸಾಫೀಸ್ನಲ್ಲಿ ಸದ್ದು ಮಾಡುತ್ತಿರುವುದು ಯಾಕೆ? ಇಂತಹದ್ದೇ ಒಂದಿಷ್ಟು ವಿಷಯಗಳು ಹಲವರ ತಲೆಗೆ ಹುಳ ಬಿಟ್ಟಂತಾಗಿರೋದು ಸತ್ಯ.
ಬಾಲಿವುಡ್ ಅಂತಹ ದೈತ್ಯ ಚಿತ್ರರಂಗದ ಲೆಕ್ಕಾಚಾರವನ್ನೇ ದಕ್ಷಿಣ ಭಾರತದ ಈ ಹೀರೊಗಳು ತಲೆ ಕೆಳಗೆ ಮಾಡಿ ನಿಂತಿದ್ದೇ ಅಚ್ಚರಿ. ಸೌತ್ ಸೂಪರ್ಸ್ಟಾರ್ಗಳು ಬಿಡುವ ಒಂದೊಂದು ಡೈಲಾಗ್ ಅನ್ನೂ ಉತ್ತರ ಭಾರತದವರು ಯಾಕೆ ಅಷ್ಟೊಂದು ಇಷ್ಟ ಪಡುತ್ತಿದ್ದಾರೆ ? ಥಿಯೇಟರ್ ಕಿತ್ತೋ ಹೋಗುವಂತೆ ಶಿಳ್ಳೆಗಳನ್ನು ಹಾಕುತ್ತಿರುವುದು ಯಾಕೆ? ದಿಢೀರನೇ ಈ ಹೀರೊಗಳೆಲ್ಲಾ ತಮ್ಮೊಳಗಿನ ಆಂಗ್ರಿ ಯಂಗ್ ಮ್ಯಾನ್ ಅನ್ನು ಮೈ ಮೇಲೆ ಎಳೆದುಕೊಂಡಿದ್ದರ ಸೀಕ್ರೆಟ್ ಏನಿರಬಹುದು?
ಈ ಎಲ್ಲಾ ಸೂಪರ್ಸ್ಟಾರ್ ಸಿನಿಮಾಗಳು ಭಾರತದಲ್ಲಿ ಅಷ್ಟೇ ಅಲ್ಲ, ವಿಶ್ವದ ಗಮನವನ್ನೇ ಸೆಳೆಯುತ್ತಿವೆ. ಬಾಕ್ಸಾಫೀಸ್ ದಾಖಲೆಗಳನ್ನು ಮುರಿಯುತ್ತಿವೆ. ಮುಂದೆ ಹಾಲಿವುಡ್ ಬಾಕ್ಸಾಫೀಸ್ ಮೇಲೂ ಕಣ್ಣಿಟ್ಟು ಕೂತಿದೆ. ಅಷ್ಟಕ್ಕೂ ಈ ಸೂಪರ್ಸ್ಟಾರ್ಗಳು ತಮ್ಮೊಳಗಿನ ಆಂಗ್ರಿ ಯಂಗ್ ಮ್ಯಾನ್ ಅನ್ನು ಹುಡುಕಿಕೊಂಡಿದ್ದೇಗೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಅಮಿತಾಬ್ ಬಚ್ಚನ್ ಕಾರಣ
ಭಾರತದಲ್ಲಿ ಆಂಗ್ರಿ ಯಂಗ್ ಮ್ಯಾನ್ ಯಾರು ಅಂತ ಕೇಳಿದ್ರೆ, ಜನರೇಷನ್ ಯಾವುದೇ ಇರಲಿ. ಅವರೆಲ್ಲರೂ ಮೊದಲು ಬೊಟ್ಟು ಮಾಡೋದೇ ಬಿಗ್ ಬಿ ಕಡೆಗೆ. 70 ಹಾಗೂ 80ರ ದಶಕದಲ್ಲಿ ಅಮಿತಾಬ್ ಬಚ್ಚನ್ ಅವರ ಆಂಗ್ರಿ ಯಂಗ್ ಮ್ಯಾನ್ ಲುಕ್ ಅನ್ನೇ ಪ್ಯಾನ್ ಇಂಡಿಯಾ ಸೂಪರ್ಸ್ಟಾರ್ಗಳು ಹೊಸ ರೂಪ ಕೊಟ್ಟಿದ್ದಾರೆ ಅನ್ನೋದು ಹಲವರ ವಾದ. ರಣ್ವೀರ್ ಸಿಂಗ್, ವರುಣ್ ಧವನ್, ಕಾರ್ತಿಕ್ ಆರ್ಯನ್, ರಣ್ಬೀರ್ ಕಪೂರ್ ಅಂತಹ ಯುವ ನಟರು ಬಾಲಿವುಡ್ನಲ್ಲಿ ಎದ್ದು ನಿಂತಿದ್ದರೂ, ದಕ್ಷಿಣ ಭಾರತದ ಸೂಪರ್ಸ್ಟಾರ್ಗಳು ಅವರ ಲೆಕ್ಕಚಾರವನ್ನೇ ತಲೆಕೆಳಗೆ ಮಾಡಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅಮಿತಾಬ್ ಬಚ್ಚನ್ ಆಂಗ್ರಿ ಯಂಗ್ ಮ್ಯಾನ್ ಲುಕ್.

ಹೊಸ ಜನರೇಷನ್ ಹೀರೊಯಿಸಂ
ಈಗಾಗಲೇ ವಿಶ್ವದೆಲ್ಲೆಡೆ ಸದ್ದು ಮಾಡಿರುವ 'ಪುಷ್ಪ', 'ಕೆಜಿಎಫ್', RRR ಸೇರಿದಂತೆ ಹಲವು ಮಾಸ್ ಸಿನಿಮಾಗಳು ಹೀರೊಯಿಸಂನಿಂದಲೇ ಪ್ರೇಕ್ಷಕರನ್ನು ಸೆಳೆದಿದೆ. 'ಪುಷ್ಪ' ಸಿನಿಮಾದಲ್ಲಿ ಅಲ್ಲು ಅರ್ಜುನ್ ರಕ್ತ ಚಂದನ ಕದಿಯುವ ಕಾಡುಗಳ್ಳ. ಇತ್ತ 'ಕೆಜಿಎಫ್ 2' ಸಿನಿಮಾದಲ್ಲಿ ಚಿನ್ನದ ಹಿಂದೆ ಬಿದ್ದ ರಾಕಿ ಬಾಯ್. ಇನ್ನು ರಾಜಮೌಳಿಯ RRR ಸಿನಿಮಾದಲ್ಲೂ ರಾಮ್ ಚರಣ್ ಹಾಗೂ ಜೂ.ಎನ್ಟಿಆರ್ ಕ್ರಾಂತಿಕಾರಿಗಳಂತೆ ಮಾಸ್ ಲುಕ್ ಕೊಟ್ಟು ಮನಗೆದ್ದಿದ್ದಾರೆ. " 70ರ ದಶಕದಲ್ಲಿ ಅಮಿತಾಬ್ ಬಚ್ಚನ್ ಪಾತ್ರಗಳು ಶೇಪ್ ಕೊಟ್ಟಂತೆ, ವ್ಯಕ್ತಿಯ ಭಾವನಾತ್ಮಕ ಸನ್ನಿವೇಶಗಳನ್ನಿಟ್ಟುಕೊಂಡು ಕಥೆ ಹೆಣೆಯಲಾಯಿತು. ಇದು ಕೆಜಿಎಫ್ ಸಿನಿಮಾಗೆ ಪ್ರೇರಣೆ." ಎಂದು 'ಕೆಜಿಎಫ್ 2' ಬಿಡುಗಡೆ ವೇಳೆ ನಿರ್ದೇಶಕ ಪ್ರಶಾಂತ್ ನೀಲ್ ತಮ್ಮ ನಾಯಕ ಆಂಗ್ರಿ ಯಂಗ್ ಮ್ಯಾನ್ ಲುಕ್ ಬಗ್ಗೆ ಹೇಳಿದ್ದರು.

ಹಿಂಸೆ ಮತ್ತು ಕೋಪವೇ ಪ್ರಮುಖ ಅಸ್ತ್ರ
ದಕ್ಷಿಣ ಭಾರತದ ಸಿನಿಮಾಗಳು ಗೆಲ್ಲುವುದಕ್ಕೆ, ಆ ಸಿನಿಮಾಗಳಲ್ಲಿ ನಟಿಸಿದ ಹೀರೊಗಳು ಸ್ಟಾರ್ ಪಟ್ಟಕ್ಕೇರುವುದಕ್ಕೆ ಹಲವು ಕಾರಣಗಳನ್ನು ಹುಡುಕಿ ತೆಗೆಯಲಾಗಿದೆ. ಪ್ರಭಾಸ್ ಹಾಗೂ ರಾಣಾ ದಗ್ಗುಬಾಟಿಯ 'ಬಾಹುಬಲಿ' ಕಥೆಯಲ್ಲಿರುವ ಎರಡು ಅಂಶಗಳೆಂದರೆ ಅದು ಕೋಪ ಮತ್ತು ಹಿಂಸೆ. ಹೀರೊ ಸೇಡು ತೀರಿಸಿಕೊಳ್ಳಬೇಕು. ವಿಲನ್ ಹಿಂಸೆ ಮಾಡಬೇಕು. ಹಾಗೇ 'RRR', 'ಕೆಜಿಎಫ್ 2', 'ಪುಷ್ಪ' ಸಿನಿಮಾದ ಅಡಿಪಾಯ ಕೂಡ ಕೋಪ ಹಾಗೂ ಹಿಂಸೆ. ಅಷ್ಟೇ ಯಾಕೆ? ವಿಜಯ್ ದೇವರಕೊಂಡನನ್ನು ಹೀರೊ ಮಾಡಿದ 'ಅರ್ಜುನ್ ರೆಡ್ಡಿ' ಸಿನಿಮಾದಲ್ಲೂ ಕೋಪವೇ ಪ್ರಮುಖ ಅಸ್ತ್ರ. ಇದರೊಂದಿಗೆ ಸಿನಿಮಾದ ವೈಭವೀಕರಣವೂ ಪ್ರಮುಖ ಪಾತ್ರವಹಿಸಿದೆ.

ದಲಿತರ ಹಕ್ಕು ಮತ್ತು ಹೋರಾಟ
ಇನ್ನು ತಮಿಳು ಸಿನಿಮಾಗಳ ದಾಟಿನೇ ಬೇರೆ. ದಲಿತರ ಹುಡುಗನೊಬ್ಬ ಸೇನೆ ಬಿಟ್ಟು ತನ್ನ ಹಳ್ಳಿಗಾಗಿ ಹೋರಾಟಕ್ಕೆ ಇಳಿಯುವ ಕಥೆ ಗಮನ ಸೆಳೆದಿತ್ತು. ಮರಿ ಸೆಲ್ವರಾಜ್ ನಿರ್ದೇಶಿಸಿದ 'ಕರ್ಣನ್' ಸಿನಿಮಾದಲ್ಲಿ ಧನುಷ್ ಮನಸೆಳೆದಿದ್ದರು. ಇದು 1995ರ ಕೊಡಿಯಂಕುಲಂ ಹಿಂಸೆಯನ್ನು ಆಧರಿಸಿತ್ತು. ಹಾಗೇ ವೆಟ್ರಿಮಾರನ್ ನಿರ್ದೇಶಿಸಿದ ದಲಿತ ರೈತನೊಬ್ಬ ತಿರುಗಿ ಬೀಳುವ ಕಥೆ 'ಅಸುರನ್' ಮೆಚ್ಚುಗೆ ಗಳಿಸಿತ್ತು. ಇನ್ನು ಪಾ ರಂಜಿಂತ್ ನಿರ್ದೇಶಿಸಿದ್ದ 'ಸರ್ಪೆಟ್ಟಾ ಪರಂಬರೈ' ದಲಿತ ಬಾಕ್ಸರ್ ಒಬ್ಬನ ಕಥೆ ಹೇಳಿತ್ತು. ಹಾಗೇ ಸೂರ್ಯ ನಟಿಸಿದ 'ಜೈ ಭೀಮ್' ಸಿನಿಮಾ ನೈಜತೆಯ ಜೊತೆ ಆಕ್ರೋಶವನ್ನು ಹೊರಹಾಕಿದ್ದವು. ಇವುಗಳನ್ನು ಪ್ರೇಕ್ಷಕರು ಮೆಚ್ಚಿಕೊಂಡಾಡಿದ್ದರು. ದಕ್ಷಿಣ ಭಾರತದ ಸಿನಿಮಾ ಯಶಸ್ಸಿನ ಹಿಂದೆ ಇವೆಲ್ಲವೂ ತುಂಬಾನೇ ಕೆಲಸ ಮಾಡಿದ್ದವು.


Click it and Unblock the Notifications











