ಪ್ರೇಮ್ 'ಅಡ್ಡ' ಶೀರ್ಷಿಕೆ ವಿವಾದ ಬಹುತೇಕ ಸುಖಾಂತ್ಯ
'ಜೋಗಯ್ಯ' ಚಿತ್ರ ಅಡ್ಡಡ್ಡ ಮಲಗಿದ ಮೇಲೆ ನಿರ್ದೇಶಕ ಪ್ರೇಮ್ ಕೈಗೆತ್ತಿಕೊಂಡಿರುವ ಹೊಸ ಚಿತ್ರ ಹೆಸರು 'ಅಡ್ಡ'. ಆದರೆ ಈ ಚಿತ್ರದ ಶೀರ್ಷಿಕೆಯನ್ನು ಈಗಾಗಲೆ ತಾವು ಫಿಲಂ ಚೇಂಬರ್ನಲ್ಲಿ ರಿಜಿಸ್ಟರ್ಡ್ ಮಾಡಿಕೊಂಡಿದ್ದೇನೆ ಎಂದು ಬಿ ಕೆ ಶ್ರೀನಿವಾಸ್ 'ಅಡ್ಡ'ಗಾಲಾಕ್ಕಿದ್ದರು. ತಮಿಳಿನ ಯಶಸ್ವಿ ಚಿತ್ರ 'ಸುಬ್ರಮಣಿಪುರಂ' ರೀಮೇಕ್ ಚಿತ್ರ ಇದಾಗಿದೆ.
'ಅಡ್ಡ' ಶೀರ್ಷಿಕೆಯನ್ನು ತಾವು ಹತ್ತು ವರ್ಷಗಳ ಹಿಂದೆಯೇ ರಿಜಿಸ್ಟರ್ ಮಾಡಿಕೊಂಡಿದ್ದೆ ಎಂದಿದ್ದಾರೆ ಪ್ರೇಮ್. ಆದರೆ 'ಜೋಗಯ್ಯ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಕಾರಣ ಶೀರ್ಷಿಕೆಯನ್ನು ನವೀಕರಣ ಮಾಡಿಸಲು ಸಾಧ್ಯವಾಗಿರಲಿಲ್ಲ. ಆದರೆ ಶ್ರೀನಿವಾಸ್ ಮಾತ್ರ ಈ ಶೀರ್ಷಿಕೆಯನ್ನು ವರ್ಷದ ಹಿಂದೆ ಸಾ ರಾ ಗೋವಿಂದು ಅವರಿಂದ ತೆಗೆದುಕೊಂಡಿದ್ದಾಗಿ ಸುಳ್ಳೇ ಸುಳ್ಳು ಹೇಳಿದ್ದಾರೆ.
ಅಸಲಿ ವಿಷಯ ಏನೆಂದರೆ, 'ಜೋಗಯ್ಯ' ವಿತರಣೆ ಹಕ್ಕುಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಚಿತ್ರ ನಿರ್ಮಾಣಕ್ಕೆ ಕೊಂಚ ದುಡ್ಡು ಕಾಸನ್ನು ಶ್ರೀನಿವಾಸ್ ಹೊಂಚಿದ್ದರು ಎನ್ನುತ್ತವೆ ಗಾಂಧಿನಗರ ಮೂಲಗಳು. ಈಗ 'ಅಡ್ಡ' ಚಿತ್ರದ ವಿತರಣೆ ಹಕ್ಕುಗಳನ್ನು ಶ್ರೀನಿವಾಸ್ ಕೇಳಿದ್ದಕ್ಕೆ ಈ ಅಡ್ಡಪರಿಣಾಮ ಉದ್ಭವಿಸಿತ್ತು ಎನ್ನಲಾಗಿದೆ.
ಬೆಂಗಳೂರು, ಕೋಲಾರ ಹಾಗೂ ತುಮಕೂರು ಜಿಲ್ಲೆಗಳ 'ಅಡ್ಡ' ವಿತರಣೆ ಹಕ್ಕುಗಳು ಶ್ರೀನಿವಾಸ್ ಅವರ ಕೈಗೆ ಕೊಡುವುದಾಗಿ ಪ್ರೇಮ್ ಹೇಳಿ ಒಪ್ಪಿಸಿದ್ದಾಗಿ ಸುದ್ದಿ ಇದೆ. ಈ ಮೂಲಕ ಪ್ರೇಮ್ 'ಅಡ್ಡ' ಚಿತ್ರಕ್ಕಿದ್ದ ಅಡ್ಡಿಆತಂಕಗಳು, ವಿಘ್ನಗಳು ಬಹುತೇಕ ನಿವಾರಣೆ ಆಗಿವೆ. (ಏಜೆನ್ಸೀಸ್)


Click it and Unblock the Notifications











