ಕನ್ನಡ ಚಿತ್ರ ನಿರ್ಮಾಪಕರಿಗೆ ಬೆಂಡೆತ್ತಿ ಬ್ರೇಕು ಹಾಕಿದ ಕಾಜಲ್
ತೆಲುಗು, ತಮಿಳು ಚಿತ್ರರಂಗದ ಸಿನಿಮಾ ತಾರೆ ಕಾಜಲ್ ಅಗರವಾಲ್ ಕನ್ನಡ ಚಿತ್ರ ನಿರ್ಮಾಪಕರನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ತಾವು ಯಾವುದೇ ಕನ್ನಡ ಚಿತ್ರಕ್ಕೆ ಸಹಿ ಹಾಕದಿದ್ದರೂ, ಅನಾವಶ್ಯಕವಾಗಿ ತಮ್ಮ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆಕೆ ನಿರ್ಮಾಪಕರನ್ನು ಬೆಂಡೆತ್ತಿದ್ದಾರೆ. ತಾವು ಇದುವರೆಗೂ ಯಾವುದೇ ಕನ್ನಡ ಚಿತ್ರಕ್ಕೆ ಸಹಿ ಹಾಕಿಲ್ಲ ಎಂದೂ ಕಾಜಲ್ ಅಗರವಾಲ್ ಸ್ಪಷ್ಟಪಡಿಸಿದ್ದಾರೆ.
ಕನ್ನಡದ 'ಬುಲ್ ಬುಲ್' ಚಿತ್ರದಲ್ಲಿ ದರ್ಶನ್ ಜೊತೆ ಕಾಜಲ್ ಅಭಿನಯಿಸಲಿದ್ದಾರೆ ಎನ್ನಲಾಗಿತ್ತು. ಚಿತ್ರದ ನಿರ್ಮಾಪಕರ ಟೀಂನಿಂದಲೂ ಅಧಿಕೃತವಾಗಿ ಈ ವಿಷಯ ಪ್ರಕಟವಾಗಿತ್ತು. ಈ ಚಿತ್ರ ತೆಲುಗಿನ 'ಡಾರ್ಲಿಂಗ್' ರೀಮೇಕ್. ಮೂಲ ಚಿತ್ರದಲ್ಲಿ ಕಾಜಲ್ ಅಗರವಾಲ್ ಅಭಿನಯಿಸಿದ್ದರು. ಆದರೆ ತಾವು ಕನ್ನಡದ ಬುಲ್ ಬುಲ್ಗೆ ಸಹಿ ಹಾಕಿಲ್ಲ ಎಂದಿದ್ದಾರೆ ಕಾಜಲ್.
"ತಾವು ಯಾವುದೇ ಕನ್ನಡ ಚಿತ್ರಕ್ಕೆ ಸಹಿಹಾಕಿಲ್ಲ. ಅನಾವಶ್ಯಕವಾಗಿ ತಮ್ಮ ಹೆಸರನ್ನು ಕನ್ನಡ ಚಿತ್ರ ನಿರ್ಮಾಪಕರು ಬಳಸಿಕೊಳ್ಳುತ್ತಿದ್ದಾರೆ. ಯಾಕಾದರೂ ತಮ್ಮ ಹೆಸರನ್ನು ಬಳಸಿಕೊಳ್ಳುತ್ತಿದ್ದಾರೋ ತಿಳಿಯುತ್ತಿಲ್ಲ. ಇದುವರೆಗೂ ನಾನು ಯಾರನ್ನೂ ಭೇಟಿ ಮಾಡಿಲ್ಲ. ಸದ್ಯಕ್ಕೆ ತಾವು ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಬ್ಯುಸಿಯಾಗಿದ್ದೇನೆ. ಯಾವುದೇ ಕನ್ನಡ ಚಿತ್ರಕ್ಕೂ ನಾನು ಸಹಿಹಾಕಿಲ್ಲ" ಎಂದಿದ್ದಾರೆ.
ಒಂದು ವೇಳೆ ಕನ್ನಡದಲ್ಲಿ ಒಳ್ಳೆಯ ಚಿತ್ರಕತೆ ಸಿಕ್ಕರೆ ಖಂಡಿತ ಅಭಿನಯಿಸುತ್ತೇನೆ. ಈ ಹಿಂದೆಯೂ ಒಮ್ಮೆ ಕನ್ನಡದ 'ತಥಾಸ್ತು' ಚಿತ್ರದಲ್ಲಿ ಅಭಿನಯಿಸುವುದಾಗಿ ಸುದ್ದಿಯಿತ್ತು. ಆ ಚಿತ್ರದ ನಿರ್ಮಾಪಕ ರಘು ಹಾಸನ್, ಕಾಜಲ್ ಅಗರವಾಲ್ ಅವರನ್ನು ಕನ್ನಡಕ್ಕೆ ಕರೆತರುವುದಾಗಿ ತಿಳಿಸಿದ್ದರು. ಆದರೆ ಅದು ಕೇವಲ ಪ್ರಚಾರ ತಂತ್ರ ಎಂಬುದು ಬಳಿಕ ಗೊತ್ತಾಯಿತು.
ಒಟ್ಟಿನಲ್ಲಿ ಚಾಲ್ತಿಯಲ್ಲಿರುವ ಸಿನಿಮಾ ತಾರೆಗಳನ್ನು ಕನ್ನಡಕ್ಕೆ ಕರೆತರುತ್ತಿರುವುದಾಗಿ ಕೆಲವು ನಿರ್ಮಾಪಕರು ಹೇಳಿಕೊಂಡು ಬಿಟ್ಟಿ ಪ್ರಚಾರ ಗಿಟ್ಟಿಸುತ್ತಿದ್ದಾರೆ ಎಂಬುದನ್ನು ಕಾಜಲ್ ಅಗರವಾಲ್ ಈ ಮೂಲಕ ಬಹಿರಂಗಪಡಿಸಿದ್ದಾರೆ. ಒಟ್ಟಿನಲ್ಲಿ ನಿರ್ಮಾಪಕರ ಬಿಟ್ಟಿ ಪ್ರಚಾರ ತಂತ್ರಕ್ಕೆ ಮಂಗಳಾರತಿಯನ್ನೂ ಮಾಡಿದ್ದಾರೆ ಕಾಜಲ್. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











