ನಟಿ ರಮ್ಯಾಗೆ ನಿರ್ಮಾಪಕ ಗಣೇಶ್ ದಂಡಂ ದಶಗುಣಂ
ತಾರೆಗಳ ವಿವಾದ, ಕಿರಿಕಿರಿಗಳಿಲ್ಲದೆ ಗರಬಡಿದಂತಾಗಿದ್ದ ಗಾಂಧಿನಗರದಲ್ಲಿ ನಟಿ ರಮ್ಯಾ ಮತ್ತೊಂದು ಕಿರಿಕ್ ಮಾಡಿಕೊಂಡ ಘಟನೆ ಸೋಮವಾರ (ಮಾ.14) ರಾತ್ರಿ ನಡೆದಿದೆ. 'ದಂಡಂ ದಶಗುಣಂ' ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ರಮ್ಯಾ ಗೈರುಹಾಜರಾಗಿ ಶಾಪಿಂಗ್ ಮಾಡುತ್ತಿದ್ದದ್ದು ಚಿತ್ರದ ನಿರ್ಮಾಪಕ ಎ ಗಣೇಶ್ ಅವರ ಪಿತ್ತಕೆರಳಿಸುವಂತೆ ಮಾಡಿದೆ.
ಏಟ್ರಿಯ ಹೋಟೆಲ್ನಲ್ಲಿ ಸಮಯಕ್ಕೆ ಸರಿಯಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಶುರುವಾಗಿತ್ತು. ಚಿತ್ರದ ನಾಯಕ ನಟ ಚಿರಂಜೀವಿ ಸರ್ಜಾ, ನಿರ್ದೇಶಕ ಕೆ ಮಾದೇಶ್, ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಸೇರಿದಂತೆ ಚಿತ್ರದ ತಾಂತ್ರಿಕ ಬಳಗ ಹಾಜರಿತ್ತು. ಆದರೆ ಆಡಿಯೋ ಬಿಡುಗಡೆಯ ಮುಖ್ಯ ಆಕರ್ಷಣೆ ಹಾಗೂ ಚಿತ್ರದ ನಾಯಕಿ ರಮ್ಯಾ ಮಾತ್ರ ಪತ್ತೆ ಇರಲಿಲ್ಲ.
ಆಡಿಯೋ ಬಿಡುಗಡೆ ಮುಹೂರ್ತ ಮೀರುತ್ತಿದ್ದರೂ ರಮ್ಯಾ ನಾಪತ್ತೆ. ಇನ್ನೇನು ಸ್ವಲ್ಪ ಹೊತ್ತಿನಲ್ಲಿ ರಮ್ಯಾ ಬರಲಿದ್ದಾರೆ ಎಂದು ನಿರ್ಮಾಪಕರು ಪತ್ರಕರ್ತರಿಗೆ ಸಮಜಾಯಿಷಿ ನೀಡಿದರು. ಸಮಯ ಸರಿಯುತ್ತಿದ್ದರೂ ರಮ್ಯಾ ಸುಳಿವಿಲ್ಲ. ಕಡೆಗೆ ನಿರ್ಮಾಪಕರು ರಮ್ಯಾಗೆ ಫೋನ್ ಮಾಡಿ ಎಲ್ಲಿದ್ದೀರಿ ಎಂದರು. ಬಹುಶಃ ಟ್ರಾಫಿಕ್ ಜಾಮ್ನಲ್ಲಿ ಇರಬಹುದು ಎಂದು ನಿರೀಕ್ಷಿಸಿದ್ದ ಅವರಿಗೆ ಅಚ್ಚರಿ ಕಾದಿತ್ತು.
"ಫರ್ನಿಚರ್ ಅಂಗಡಿಯಲ್ಲಿ ಶಾಪಿಂಗ್ ಮಾಡುತ್ತಿದ್ದೇನೆ" ಎಂದಿದ್ದಾರೆ ರಮ್ಯಾ. ಇದರಿಂದ ಕರೆಂಟ್ ಶಾಕ್ ಹೊಡೆದಂತಾದ ನಿರ್ಮಾಪಕರು ಬಳಿಕ ಪರಿಸ್ಥಿತಿಯನ್ನು ಪತ್ರಕರ್ತರಿಗೆ ತಿಳಿಸಿದರು. "ನೋಡ್ರಿ ರು.27 ಲಕ್ಷ ಸಂಭಾವನೆ ಕೊಟ್ಟಿದ್ದೇನೆ. ಚಿತ್ರದ ಬಗ್ಗೆ ಪ್ರಚಾರ ಮಾಡಬೇಕು ಎಂಬ ಕನಿಷ್ಠ ಸೌಜನ್ಯವೂ ಇಲ್ಲ ಎಂದು ನಿರ್ಮಾಪಕರು ಗರಂ ಆದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತಕುಮಾರ್ ಪಾಟೀಲ್ ಮಾತನಾಡುತ್ತಾ, ಚಿತ್ರದ ಪ್ರಚಾರ ಕಾರ್ಯಕ್ಕೆ ನಾಯಕ, ನಾಯಕಿ, ನಿರ್ದೇಶಕರು ಸೇರಿದಂತೆ ಎಲ್ಲರೂ ಇರಬೇಕು ಎಂಬ ನೀತಿ ಸಂಹಿತೆ ರೂಪಿಸುವ ಪ್ರಸ್ತಾಪವನ್ನು ಈ ಸಂದರ್ಭದಲ್ಲಿ ಮಾಡಿದರು.
"ಚಿತ್ರದ ನಾಯಕಿ ಏನು ಹೇಳ್ತಾರೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಕಾರ್ಯಕ್ರಮಕ್ಕೆ ಬಂದು ಅವರು ಒಂದೆರಡು ಮಾತು ಹೇಳಿದ್ದರೆ ಚಿತ್ರಕ್ಕೆ ಹೆಚ್ಚಿನ ಪ್ರಚಾರ ಸಿಗುತ್ತಿತ್ತು. ಆದರೆ ಅವರು ಕೈಕೊಟ್ಟರು. ನಿರ್ಮಾಪಕರು ಕೊಟ್ಟ ಹಣದಲ್ಲೇ ತಾನೆ ಅವರು ಖರೀದಿಸುವುದು. ಅದು ಬಿಟ್ಟು ಅವರಿಗೆ ಶಾಪಿಂಗ್ ಮುಖ್ಯವಾದರೆ ಏನು ಮಾಡುವುದು ನೀವೇ ಹೇಳಿ? " ಎಂದಿದ್ದಾರೆ ನಿರ್ಮಾಪಕ ಎ ಗಣೇಶ್.


Click it and Unblock the Notifications











