ಫೇಸ್ಬುಕ್ನಲ್ಲಿ ಹೃದಯಶಿವ ಏನ್ ಸಿವಾ ಹಿಂಗ್ ಹೇಳ್ಬಿಟ್ಟೆ!

ಇದು ಕನ್ನಡ ಚಿತ್ರರಂಗದ ಯುವ ಸಾಹಿತಿ ಹೃದಯಶಿವ ಅವರ ಫೇಸ್ ಬುಕ್ ನಲ್ಲಿ ಇಂದಿನ ಬಹುಚರ್ಚಿತ ಹೇಳಿಕೆ. ಜನರಿಗೆ ತಲುಪದ ಚಿತ್ರ ಅಂದರೇನು ಎಂದು ಕೆಲವರು ಪ್ರಶ್ನಿಸಿದ್ದರೆ, ಕೆಲವರು ಹೃದಯಶಿವ ಅವರ ಹೇಳಿಕೆಯ ಪೂರ್ಣ ವಿಶ್ಲೇಷಣೆ ಮಾಡಿದ್ದಾರೆ. ಮನಸ್ಸಿಗೆ ತೋಚಿದ್ದು ಫೇಸ್ ಬುಕ್ ನಲ್ಲಿ ಗೀಚಿದರೆ ಮೊದಲೇ ಚರ್ಚೆಗೆ ಕಾದು ಕೂತಿರುವ ಹತಾಶ ಪ್ರೇಕ್ಷಕರ ಕೈಲಿ ಸಿಕ್ಕು ಹೃದಯಶಿವ ಪೆಚ್ಚಾಗಿದ್ದಾರೆ.
ಸುಮ್ಮನೆ ಕುಳಿತ ಸಿನಿಕವಿ ಹೃದಯಶಿವ ಬೆಳಗ್ಗೆ ಮೊಬೈಲ್ ಮೂಲಕ ಫೇಸ್ ಬುಕ್ ಗೆ ಈ ರೀತಿ ಮೆಸೇಜ್ ಮಾಡಿದ್ದೇ ತಡ ಸದಭಿರುಚಿ ಚಿತ್ರಗಳನ್ನು ಇಷ್ಟಪಡುವ ಅನೇಕ ಮಿತ್ರರು ಪ್ರತ್ರಿಕ್ರಿಯೆಗಳ ಸುರಿಮಳೆಗೈದಿದ್ದಾರೆ." ಸತ್ಯ ಇಸ್ ಇನ್ ಲವ್. ನಿಂದ ಹಿಡಿದು ಇತ್ತೀಚಿನ ಕಾರ್ತೀಕ್ ಚಿತ್ರದ ಹಾಡುಗಳ ತನಕ ಅವರು ಬರೆದಿರುವ ಸಾಹಿತ್ಯ ಸವಿಯೋ ಸವಿಯೋ ಎನ್ನುವಂತಿದೆ. ಕನ್ನಡ ಗಾಯಕರೆ ತನ್ನ ಹಾಡುಗಳನ್ನು ಹಾಡಿದರೆ ಚೆನ್ನ. ಸಾಹಿತ್ಯವನ್ನು ಬದಲಿಸಿ ನಿರ್ದೇಶಕರು ಹಾಡಿಸಿದರೆ ಮೈ ಉರಿಯುತ್ತದೆ ಎನ್ನುವ ಶಿವಗೆ ಇಂದು ಯಾಕೋ ದಿನ ಚೆನ್ನಾಗಿಲ್ಲ.
'ಜನರಿಗೆ ತಲುಪದ" ಎಂದಿದ್ದೀರಿ? ಆ 'ಜನ" ಯಾರು ಎಂಬುದು ಮುಖ್ಯ! ಆಯಾ ನಿರ್ದೇಶಕರಿಗೆ ಅವರವರ ಪ್ರೇಕ್ಷಕರು ಇದ್ದೇ ಇರುತ್ತಾರೆ. ಒಬ್ಬರಿಗೆ ಕಾಣುವ ಪ್ರೇಕ್ಷಕರು ಮತ್ತೊಬ್ಬರಿಗೆ ಸಿಗುವುದಿಲ್ಲ. ಅತಿ ಹೆಚ್ಚು ಜನ ನೋಡಿದ '2012" ಸಿನಿಮಾಗಿಂತ ಕಡಿಮೆ ಜನ ನೋಡಿದ 'ಪಾ", 'ದೋಬಿಘಾಟ್", 'ತಾರೆ ಜಮೀನ್ ಪರ್" ಉತ್ತಮ ಸಿನಿಮಾಗಳು ಎಂಬುದನ್ನು ಯಾರೂ ಅಲ್ಲಗಳೆಯಲಾರರು! ಹಾಗೆಯೇ ಹೆಚ್ಚು ಜನ ನೋಡದ 'ಉಡಾನ್", 'ಗುಲಾಲ್" ಸಹ ಅತ್ಯುತ್ತಮ ಸಿನಿಮಾಗಳಾಗಿದ್ದವು ಎಂಬುದನ್ನು ನಾವು ಮರೆಯಬಾರದು ಎಂದು ನಿರ್ದೇಶಕ ಬಿ ಸುರೇಶ ಪ್ರತಿಕ್ರಿಯಿಸಿದ್ದಾರೆ.
ಕನ್ನಡದಲ್ಲಿಯೇ ಬಂದ ಮೈಸೂರಿನ ಹುಡುಗ ನಿರ್ದೇಶಿಸಿದ 'ಶಿಶಿರ" ಅದ್ಭುತವಾಗಿತ್ತು. ಹೆಚ್ಚು ಜನ ನೋಡಲಿಲ್ಲ ಎಂದು ಆ ಸಿನಿಮಾದ ಔತ್ತಮ್ಯ ನಾಶವಾಗುವುದಿಲ್ಲ. ಅಲ್ಲವೇ ಕವಿಗಳೇ. ಅತಿ ಹೆಚ್ಚು ಜನ ನೋಡಿದ್ದೆಲ್ಲಾ ಒಳ್ಳೆಯದಾಗಿರುವುದಿಲ್ಲ. ಹಾಗೆಯೇ ಕಡಿಮೆ ಜನಕ್ಕೆ ತಲುಪಿದ್ದು ಕೆಟ್ಟದ್ದೂ ಆಗಿರುವುದಿಲ್ಲ ಎಂದು ಕಿರಿಕವಿ ಕಿರಿಕ್ ಗೆ ಹಿರಿ ಸಿನಿಕರ್ಮಿ ಸುರೇಶ್ ಬುದ್ಧಿವಾದ ಹೇಳಿದ್ದಾರೆ.
ಇದರ ಜೊತೆಗೆ ಸದಭಿರುಚಿ ಚಿತ್ರಗಳನ್ನು ಪ್ರದರ್ಶಿಸುತ್ತಾ ಬಂದಿರುವ ಅವಿರತ ಸಂಸ್ಥೆ, ಮೊನ್ನೆ ನಾವು ಕನಸೆಂಬ ಕುದುರೆಯನೇರಿ ಪ್ರದರ್ಶನ ಮಾಡಿದಾಗ ಜನ ಕಿಕ್ಕಿರಿದು ತುಂಬಿದ್ದರು ಮೆಟ್ಟಿಲ ಮೇಲೆಲ್ಲ ಕುಳಿತು ನೋಡಿದರು ಸಿನಿಮಾ ಮುಗಿದಮೇಲು 2 ಗಂಟೆ ಸಂವಾದ ಮಾಡಿದರು... ಆದರೆ ಇದೇ ಹೃದಯ ಶಿವ ಕನಸೆಂಬ ಕುದುರೆಯನೇರಿ ಚಿತ್ರದ ನಿರ್ದೇಶಕ ಯಾರು ಅಂತ ಕೇಳಿದ್ದರು..... ಇದೇ ಕ್ಷೇತ್ರದಲ್ಲಿ ಇದ್ದು ಒಂದು ರಾಷ್ಟ್ರಪ್ರಶಸ್ತಿ ಪಡೆದ ಚಿತ್ರದ ನಿರ್ದೇಶಕ ಯಾರು ಅಂತ ತಿಳಿಯದವರು ಇಂತಹ ಹೇಳಿಕೆ ಕೊಡುವುದೆ ವಿಪರ್ಯಾಸ ಎಂದಿದ್ದಾರೆ.
ಜನರಿಗೆ ತಲುಪಲಾಗದ ಅಂದರೆ ಅರ್ಥವೇನು ಶಿವ? ವರುಷಕ್ಕೆ 52 ವಾರಗಳಲ್ಲಿ 104 ಸಿನೆಮಾಗಳು ಬರುತ್ತಿವೆ. ಅದರಲ್ಲಿ ಎಷ್ಟು ಜನರಿಗೆ ತಲುಪುತ್ತಿವೆ? ಎಷ್ಟು ಜನ ನೋಡುತ್ತಿದ್ದಾರೆ. ಆದರೆ ನೀವು ಹೇಳುತ್ತಿರುವಂತಹ ಸಿನೆಮಾಗಳು ನೋಡಿದ ಕಡಿಮೆ ಪ್ರೇಕ್ಷರಿಗೂ ಸಂತೋಷ ಕೊಟ್ಟಿವೆ ಅವರ ಭಾವನೆಗಳಿಗೆ ಸ್ಪಂದಿಸಿವೆ. ಹೀಗಾಗಿ ಡಬ್ಬ ಸೇರುತ್ತಿರುವ ಕಮರ್ಷಿಯಲ್ ಎನಿಸಿ ಕೊಂಡಿರುವ ಸಿನೆಮಾಗಳಿಗಿಂತ ಈ ಸಿನೆಮಾಗಳು ಸಾವಿರ, ಲಕ್ಷ, ಕೋಟಿ ಪಾಲಿಗೆ ಚೆನ್ನಾಗಿವೆ ಎಂದು ವಟಿ ಕುಟೀರ ಸಂಸ್ಥೆ ಕಿರಣ್ ವಟಿ ಪ್ರತಿಕ್ರಿಯಿಸಿದ್ದಾರೆ.
ಎಲ್ಲ ಪ್ರತಿಕ್ರಿಯೆಗಳನ್ನು ನೋಡಿದ ನಂತರ ಶಿವ ಅವರಿಗೆ ಏನಾಯಿತೋ ಏನೋ
"ಅತ್ಯಂತ ವ್ಯಾಪಾರಿ ಹಾಗೂ ಅತ್ಯಂತ ಕಲಾತ್ಮಕ ಚಿತ್ರಗಳೆ ನಮ್ಮ ಹಾಲಿ ಕನ್ನಡ ಚಿತ್ರರಂಗವನ್ನ ಹಾಳು ಮಾಡಿದ್ದು ಪುಟ್ಟಣ್ಣ ಕಣಗಾಲ್ ಅವರು ಸಾಧಿಸಿದ ಯಶಸ್ಸನ್ನು ಗಾಂಧಿನಗರದಿಂದ ನಾನು ನಿರೀಕ್ಷಿಸುತ್ತೇನೆ ಎಂದು ಮತ್ತೊಂದು ಸಂದೇಶ ಹಾಕಿದ್ದಾರೆ.


Click it and Unblock the Notifications











