ದರ್ಶನ್ ಸ್ನೇಹಿತರಿಗೆ ಮಂಡ್ಯದಲ್ಲಿ ಹಿಗ್ಗಾ ಮುಗ್ಗಾ ಗೂಸಾ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯಲ್ಲಿರುವ ಚಿಂಗಾರಿ ಚಿತ್ರದ ಚಿತ್ರೀಕರಣಕ್ಕೆಂದು ಹೊರಡುತ್ತಿದ್ದ ವೇಳೆ ಅಚಾನಕ್ ಆಗಿ ಒಂದು ಘಟನೆ ಸಂಭವಿಸಿದೆ. ಅದೇನಪ್ಪಾ ಅಂದ್ರೆ, ಆ ಚಿತ್ರದ ಸಾಹಸ ನಿರ್ದೇಶಕರಾದ ರವಿವರ್ಮ ಹಾಗೂ ಚಿನೈ ಅವರನ್ನು ಹಿಗ್ಗಾಮುಗ್ಗಾ ಥಳಿಸಲಾಗಿದೆ ಎಂಬುದು.
ಪ್ರತ್ಯಕ್ಷದರ್ಶಿಗಳ ಪ್ರಕಾರ ಘಟನೆಯ ವಿವರಗಳು ಹೀಗಿವೆ. ರವಿವರ್ಮ ಹಾಗೂ ಚಿನೈ ಪ್ರಯಾಣಿಸುತ್ತಿದ್ದ ಕ್ವಾಲಿಸ್ ಗಾಡಿ ಮಂಡ್ಯ ಜಿಲ್ಲೆಯ ಪಾಂಡವಪುರ ಬಳಿ ದ್ವಿಚಕ್ರ ವಾಹನವೊಂದಕ್ಕ್ಕೆ ಲೈಟಾಗಿ ಟಚ್ ಮಾಡಿದೆ.ಬೈಕಿನಲ್ಲಿದ್ದವರು ಆಯತಪ್ಪಿ ಕೆಳಬಿದ್ದಿದ್ದಾರೆ. ಬಳಿಕ ಇಬ್ಬರೊಂದಿಗೂ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ.
ರವಿವರ್ಮ ಹಾಗೂ ಚಿನೈ ಅವರು ಬೈಕಿನಲ್ಲಿದ್ದ ಆದಿಶೇಷ ಹಾಗೂ ನಾಣಪ್ಪ ಎಂಬುವವರ ಮೇಲೆ ಕೈ ಮಾಡಿದರು ಎನ್ನಲಾಗಿದೆ. ಆದರೆ ಅಷ್ಟರಲ್ಲಾಗಲೆ ಅಲ್ಲಿ ಸ್ಥಳೀಯರು ಜಮಾಯಿಸಿ ರವಿವರ್ಮ ಹಾಗೂ ಚಿನೈ ಅವರಿಗೆ ಹಿಗ್ಗಾ ಮುಗ್ಗಾ ಗೂಸಾ ನೀಡಿದ್ದಾರೆ. ರವಿವರ್ಮ ಎಸ್ಕೇಪ್ ಆಗಿದ್ದಾರೆ. ಆದರೆ ಚಿನೈ ಸ್ಥಳೀಯರ ಕೈಗೆ ಸಿಕ್ಕು ಹಣ್ಣುಗಾಯಿ ನೀರುಗಾಯಿ ಆಗಿದ್ದಾರೆ.
ಬಳಿಕ ದರ್ಶನ್ಗೆ ಸುದ್ದಿ ಮುಟ್ಟಿಸಲಾಗಿದೆ. ಅದೇ ದಾರಿಯಲ್ಲಿ ಮುಂದೆ ಹೊರಟಿದ್ದ ದರ್ಶನ್ ವಾಪಸ್ ಘಟನಾ ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಲ್ಲಾಗಲೆ ಕೆರಳಿದ ಕೇಸರಿಯಂತಾಗಿದ್ದ ಜನ ದರ್ಶನ್ ಜೊತೆಗೂ ಮಾತಿನ ಚಕಮಕಿಗೆ ಇಳಿದರು. ಬಳಿಕ ಸ್ಥಳೀಯ ಮುಖಂಡರ ನೆರವಿನಿಂದ ಸಮಸ್ಯೆಯನ್ನು ದರ್ಶನ್ ಪರಿಹರಿಸಿದ್ದಾರೆ.(ಏಜೆನ್ಸೀಸ್)


Click it and Unblock the Notifications











