ಉಪೇಂದ್ರ ಸೂಪರ್ ಚಿತ್ರದಿಂದ ರಾಕ್ ಲೈನ್ ಔಟ್!
ಚಿತ್ರವೊಂದರಿಂದ ನಟ, ನಟಿಯರು ಹೊರಬೀಳುವುದನ್ನು ಕೇಳಿದ್ದೀರಿ. ಆದರೆ ಚಿತ್ರದ ನಿರ್ಮಾಪಕರೇ ಹೊರಬಿದ್ದರೆ? ಆಶ್ಚರ್ಯವಾಗುತ್ತಿದೆಯೇ? ಹಾಗಿದ್ದರೆ ಇಲ್ಲಿದೆ ನೋಡಿ ರಿಯಲ್ ಸ್ಟಾರ್ ಉಪೇಂದ್ರನಿಗೆ ಸಂಬಂಧಿಸಿದಂತೆ ಗಾಂಧಿನಗರದಲ್ಲಿ ಗಿರಿಗಿಟ್ಲೆ ಹೊಡೆಯುತ್ತಿರುವ 'ಸೂಪರ್' ಸುದ್ದಿ.
ರಿಯಲ್ ಸ್ಟಾರ್ ಉಪೇಂದ್ರ ಆಕ್ಷನ್, ಕಟ್ ಹೇಳುವುದರ ಜೊತೆಗೆ ಅಭಿನಯಿಸುತ್ತಿರುವ ಚಿತ್ರ 'ಸೂಪರ್'. ಈ ಚಿತ್ರದ ನಿರ್ಮಾಪಕರು ಧೀರ ರಾಕ್ ಲೈನ್ ವೆಂಕಟೇಶ್ ಎಂಬುದು ಈಗಾಗಲೆ ಎಲ್ಲರಿಗೂ ಗೊತ್ತಿರುವ ವಿಷಯ. ಮೂಲಗಳ ಪ್ರಕಾರ ದಿಢೀರ್ ಬೆಳವಣಿಗೆಯೊಂದರಲ್ಲಿ ಸೂಪರ್ ಚಿತ್ರದ ನಿರ್ಮಾಪಕರು ಬದಲಾಗಿದ್ದಾರೆ ಎನ್ನಲಾಗಿದೆ.
ಗಾಂಧಿನಗರ ಸೇರಿದಂತೆ ಇಡೀ ಸಮಸ್ತ ಚಿತ್ರೋದ್ಯಮ ಈ ಹೊಸ ಬೆಳವಣಿಗೆಯಿಂದ ಗಲಿಬಿಲಿಗೊಂಡಿದೆ. ಸೂಪರ್ ಚಿತ್ರದ ಚಿತ್ರೀಕರಣ ಸದ್ಯಕ್ಕೆ ಲಂಡನ್ ನಲ್ಲಿ ಭರದಿಂದ ಸಾಗುತ್ತಿದೆ. ಉಪೇಂದ್ರ ಹಾಗೂ ಚಿತ್ರದ ನಾಯಕಿ ನಯನತಾರಾ ಇತ್ತೀಚೆಗಷ್ಟೆ ಲಂಡನ್ ಗೆ ಹಾರಿದ್ದರು. ಅವರು ಅಲ್ಲಿರುವಾಗಲೆ ಇಲ್ಲಿ ಈ ಘಟನೆ ನಡೆದಿದೆ.
ಅದ್ಯಾಕೋ ಏನೋ ರಾಕ್ ಲೈನ್ ವೆಂಕಟೇಶ್ ನಿರ್ಮಾಪನ ಸ್ಥಾನವನ್ನು ತ್ಯಜಿಸಿದ್ದಾರೆ. ಮೂಲಗಳ ಪ್ರಕಾರ, ಈ ಚಿತ್ರವನ್ನು ಉಪೇಂದ್ರ ಅವರೇ ತಮ್ಮ ಸ್ವಂತ ಲಾಂಛನದಲ್ಲಿ ನಿರ್ಮಿಸಲಿದ್ದಾರೆ ಎನ್ನಲಾಗಿದೆ. ಚಿತ್ರವೊಂದನ್ನು ಒಪ್ಪಿಕೊಂಡ ಬಳಿಕ ರಾಕ್ ಲೈನ್ ಹೊರಬೀಳುತ್ತಿರುವುದು ಇದೇ ಮೊದಲು.
ಸೂಪರ್ ಚಿತ್ರಕ್ಕೆ ಆರಂಭದಿಂದಲೂ ಹಲವಾರು ವಿಘ್ನಗಳು ಎದುರಾಗುತ್ತಲೇ ಇವೆ. ಆರಂಭದಲ್ಲಿ ಈ ಚಿತ್ರಕ್ಕೆ ನಿರ್ಮಾಪಕರನ್ನು ಹುಡುಕುವುದೇ ಉಪ್ಪಿಗೆ ದೊಡ್ಡ ಸವಾಲಾಗಿತ್ತು. ಚಿತ್ರತಂಡದಿಂದ ಹದಿನಾಲ್ಕಕ್ಕು ಹೆಚ್ಚು ಮಂದಿ ಹೊರಬಿದ್ದಿರುವ ಸುದ್ದಿಯೂ ಇದೆ. ಚಿತ್ರಕ್ಕೆ ಇತ್ತೀಚೆಗೆ ಟುಲಿಪ್ ಜೋಷಿ ಸೇರ್ಪಡೆಯಾಗಿದ್ದರು. ಸಂಗೀತ ನಿರ್ದೇಶಕ ಹರಿಕೃಷ್ಣ, ಛಾಯಾಗ್ರಾಹಕ ಅಶೋಕ್ ಕಶ್ಯಪ್ ಅಷ್ಟೇ ಉಪೇಂದ್ರ ಜೊತೆ ಸದ್ಯಕ್ಕೆ ಉಳಿದವರು.


Click it and Unblock the Notifications











