'ಲವ್ ಯು ರಚ್ಚು' ನಿರ್ಮಾಪಕನ ಮೇಲೆ ಅಜಯ್ ರಾವ್ ಮುನಿಸು: ಇಬ್ಬರ ನಡುವೆ ನಡೆದಿದ್ದೇನು?
'ಲವ್ ಯು ರಚ್ಚು' ಈ ವರ್ಷ ಬಿಡುಗಡೆಯಾಗುತ್ತಿರುವ ಕೊನೆಯ ಸಿನಿಮಾ. ರಚಿತಾ ರಾಮ್ ಹಾಗೂ ಅಜಯ್ ರಾಜ್ ಜೋಡಿಯ ಮೊದಲ ಸಿನಿಮಾ. ಹೀಗಾಗಿ 'ಲವ್ ಯು ರಚ್ಚು' ಚಿತ್ರದ ಬಗ್ಗೆ ಸ್ಯಾಂಡಲ್ವುಡ್ನಲ್ಲಿ ಸ್ವಲ್ಪ ನಿರೀಕ್ಷೆ ಹೆಚ್ಚಿದೆ. ಆದರೆ, ಇಷ್ಟು ದಿನ ಆರಾಮಾಗಿ ಸಿನಿಮಾ ಪ್ರಚಾರದಲ್ಲಿ ಭಾಗಿಯಾಗಿದ್ದ ಅಜಯ್ ರಾವ್ ಟ್ರೈಲರ್ ಲಾಂಚ್ ವೇಳೆ ಕಣ್ಮರೆಯಾಗಿದ್ದರು. ಆಗಲೇ ಚಿತ್ರತಂಡ ಹಾಗೂ ಅಜಯ್ ರಾವ್ ನಡುವೆ ಏನೋ ಹೊಗೆಯಾಡುತ್ತಿರುವ ವಾಸನೆ ಮೂಗಿದೆ ಬಡಿಯುತ್ತಿದೆ.
ಈ ಸಿನಿಮಾದ ಹಾಡುಗಳು, ಟ್ರೈಲರ್ ಅನ್ನು ರಚಿತಾ ರಾಮ್ ಹಾಗೂ ಅಜಯ್ ಅಭಿಮಾನಿಗಳು ಮೆಚ್ಚಿಕೊಂಡಾಡಿದ್ದಾರೆ. ಈ ಮಧ್ಯೆ ಸಿನಿಮಾ ಬಿಡುಗಡೆಗೆ ಇನ್ನು ಎರಡು ವಾರವಿರುವಾಗಲೇ ಅಜಯ್ ರಾವ್ ಸಿನಿಮಾದ ಪ್ರಚಾರದಿಂದ ದೂರ ಉಳಿದಿದ್ದಾರೆ. ಅಷ್ಟಕ್ಕೂ ಅಜಯ್ ರಾವ್ ನಿರ್ಮಾಪಕ ಗುರು ದೇಶಪಾಂಡೆ ಮೇಲೆ ಮುನಿಸಿಕೊಂಡಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ. ಅಸಲಿಗೆ ಗಾಂಧಿನಗರದ ಗಲ್ಲಿಗಲ್ಲಿಯಲ್ಲಿ ಅಜಯ್ ಮುನಿಸಿನ ಬಗ್ಗೆ ಹರಿದಾಡುತ್ತಿರುವ ಸುದ್ದಿ ಹೀಗಿದೆ.

ರಚಿತಾ ರಾಮ್ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದೆ ಕಾರಣ
ಅಜಯ್ ರಾವ್ಗೂ ನಿರ್ಮಾಪಕ ಗುರುದೇಶಪಾಂಡೆಗೂ ಆಗಿಬರುತ್ತಿಲ್ಲ ಅನ್ನುವುದ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಬಿಸಿಬಿಸಿ ಸುದ್ದಿ. ಇಲ್ಲಿವರೆಗೂ ಇಬ್ಬರ ನಡುವೆ ಎಲ್ಲವೂ ಸರಿಯಿತ್ತು. ಆದರೂ, ಇದ್ದಕ್ಕಿದ್ದಂತೆ ಅಜಯ್ ರಾವ್ ಮುನಿಸಿಕೊಂಡಿದ್ದೇಕೆ? ಅನ್ನುವ ಪ್ರಶ್ನೆಗೆ ಸಿಕ್ಕ ಉತ್ತರ ರಚಿತಾ ರಾಮ್ ಅಂತೆ. ನಿರ್ಮಾಪಕ ಗುರುದೇಶಪಾಂಡೆ 'ಲವ್ ಯು ರಚ್ಚು' ಸಿನಿಮಾ ಪ್ರಮುಖ ಪಾತ್ರವನ್ನು ರಚಿತಾ ಅಂತಾನೇ ಪರಿಚಯಿಸುತ್ತಿದ್ದಾರಂತೆ. ತಮ್ಮನ್ನು ಸೈಡ್ ಲೈನ್ ಮಾಡಿದ್ದಕ್ಕೆ ಅಜಯ್ ರಾಮ್ ಮುನಿಸಿಕೊಂಡಿದ್ದಾರೆ ಎನ್ನುತ್ತಿದೆ ಗಾಂಧಿನಗರ.

ಫೈಟರ್ ವಿವೇಕ್ ಕುಟುಂಬಕ್ಕೆ ಹಣ ನೀಡಿಲ್ಲ
ನಿರ್ಮಾಪಕ ಗುರುದೇಶಪಾಂಡೆ ಶೂಟಿಂಗ್ ವೇಳೆ ಸಾವನ್ನಪ್ಪಿದ ಫೈಟರ್ ವಿವೇಕ್ ಕುಟುಂಬಕ್ಕೆ ಹಣ ನೀಡಿಲ್ಲ ಅನ್ನುವ ಮಾತು ಕೂಡ ಕೇಳಿಬರುತ್ತಿದೆ. ಇದರಿಂದ ಅಜಯ್ ರಾಮ್ ಬೇಸರಗೊಂಡಿದ್ದಾರೆ. ಈ ವಿಚಾರಕ್ಕೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಹೀಗಾಗಿ ಸಿನಿಮಾ ಪ್ರಚಾರದಿಂದ ದೂರ ಉಳಿದ್ದಾರೆ ಎನ್ನುವುದು ಮತ್ತೊಂದು ಮೂಲ ಹೇಳುವ ಮಾತು. ಅದೇ, ಗುರುದೇಶಪಾಂಡೆ ಬಳಿಯೇ ಈ ಮಾತು ಹೇಳಿದರೆ, ಅವರು ಕೊಡುವ ಉತ್ತರವೇ ಬೇರೆ.

ಅಜಯ್ ರಾವ್ಗೆ ಆರೋಗ್ಯ ಸರಿಯಿಲ್ಲ
ಟ್ರೈಲರ್ ಲಾಂಚ್ ಇವೆಂಟ್ನಲ್ಲಿ ರಚಿತಾ ರಾಮ್ ಇದ್ದರು. ಮುಖ್ಯ ಅತಿಥಿಯಾಗಿ ಧ್ರುವ ಸರ್ಜಾ ಆಗಮಿಸಿದ್ದರು. ನಿರ್ದೇಶಕ ಶಶಾಂಕ್ ಇದ್ದರು. ಆದರೆ, ಅಜಯ್ ರಾವ್ ಯಾಕೆ ಬಂದಿಲ್ಲ ಅನ್ನುವ ಪ್ರಶ್ನೆಗೆ ಗುರುದೇಶಪಾಂಡೆ ಕೊಟ್ಟ ಉತ್ತರ ಹೀಗಿತ್ತು." ನಮ್ಮ ಟೀಮ್ ಅಜಯ್ ರಾವ್ ಅವರಿಗೆ ಟ್ರೈಲರ್ ಲಾಂಚ್ ಬಗ್ಗೆ ಮಾಹಿತಿ ನೀಡಿತ್ತು. ಆದರೆ, ಅವರು ಆರೋಗ್ಯ ಸರಿಯಿಲ್ಲ ಅಂತ ಹೇಳಿದ್ದಾರೆ. ಈ ಕಾರಣಕ್ಕಾಗಿ ಅವರು ಬಂದಿಲ್ಲ. ನಮ್ಮ ಹಾಗೂ ಅಜಯ್ ನಡುವೆ ಕಿತ್ತಾಟವೇನೂ ಇಲ್ಲ. " ಎಂದು ಹೇಳಿ ನುಣುಚಿಕೊಂಡಿದ್ದಾರೆ.

ಟ್ರೈಲರ್ ಲಾಂಚ್ನಲ್ಲಿ ಅಜಯ್ ರಾವ್ ಪ್ರಸ್ತಾಪವಿಲ್ಲ
ಟ್ರೈಲರ್ ಲಾಂಚ್ ಮಾಡಿದ ಬಳಿಕ ಎಲ್ಲರ ಬಗ್ಗೆನೂ ಮಾತಾಡಿದ ನಿರ್ಮಾಪಕ ಅಜಯ್ ರಾವ್ ಬಗ್ಗೆ ಒಂದೇ ಒಂದು ಮಾತು ಆಡಿಲ್ಲ. ಒತ್ತಡದಲ್ಲಿ ಅಜಯ್ ಹೆಸರು ಮರೆತು ಹೋಗಿದೆ ಅಂತ ಬಳಿಕ ಗುರುದೇಶಪಾಂಡೆ ಸಮಜಾಯಿಷಿ ನೀಡಿದ್ದಾರೆ. ಸದ್ಯ ಗಾಂಧಿನಗರದಲ್ಲಿ ಮಾತ್ರ ಬಿಡುಗಡೆ ವಿಚಾರದಲ್ಲಿ ಅಜಯ್ ರಾವ್ ಹಾಗೂ ಗುರುದೇಶಪಾಂಡೆ ನಡುವೆ ಅಸಮಾಧಾನವಿದೆ ಎಂದು ಹೇಳುತ್ತಿದೆ. ಒಟ್ನಲ್ಲಿ ಬಿಡುಗಡೆ ಹೊಸ್ತಿಲಲ್ಲಿ 'ಲವ್ ಯು ರಚ್ಚು' ಟ್ರೈಲರ್ ಇಂದ ಅಲ್ಲದೆ ಹೋದರೂ ಇಂತಹ ಗಾಸಿಪ್ನಿಂದ ಸುದ್ದಿಯಲ್ಲಿದೆ.


Click it and Unblock the Notifications











