ಅಪ್ಪು ಅಗಲುವ ಒಂದು ದಿನ ಮುನ್ನ ರವಿಚಂದ್ರನ್ ಜೊತೆ ಫೋಟೊಶೂಟ್ ಕ್ಯಾನ್ಸಲ್
ಪುನೀತ್ ರಾಜ್ಕುಮಾರ್ ನಟನೆ ಜೊತೆ ಜೊತೆಗೆ ಬೇರೆ ಬೇರೆ ಕೆಲಸಕ್ಕೂ ಕೈ ಹಾಕಿದ್ದರು. ಸಿನಿಮಾ ನಿರ್ಮಾಣದಲ್ಲಿ ಎಲ್ಲಿಲ್ಲದ ಆಸಕ್ತಿ ಇತ್ತು. ಆಡಿಯೋ ಕಂಪನಿ, ಡಾಕ್ಯೂಮೆಂಟರಿ ಸೇರಿದಂತೆ ಅದು ಇನ್ನೇನು ಆಲೋಚನೆ ಮಾಡಿದ್ದರೋ ಗೊತ್ತಿಲ್ಲ. ಆದರೆ ಸದಾ ಲವಲವಿಕೆಯಿಂದ ಇರುತ್ತಿದ್ದ ಪವರ್ಸ್ಟಾರ್ ದಿಢೀರನೇ ಕನಸುಗಳನ್ನೆಲ್ಲಾ ಬದಿಗೊತ್ತಿ ಹೊರಟು ಹೋಗಿದ್ದಾರೆ. ಅಪ್ಪು ಸಿನಿಮಾಗಳಿಗಾಗಿ ಕಾದು ಕೂತಿದ್ದ ಅಭಿಮಾನಿಗಳಿಗೆ ನಿರಾಸೆ ಬಿಟ್ಟರೆ ಮತ್ತೇ ಇನ್ನೇನಿದೆ.
ಸಿನಿಮಾ ವಿಷಯಕ್ಕೆ ಬಂದರೆ ಪುನೀತ್ ರಾಜ್ಕುಮಾರ್ ಆಗಲೇ ಒಪ್ಪಿಕೊಂಡಿದ್ದ ಸಿನಿಮಾಗಳ ಬಗ್ಗೆ ಭಾರಿ ನಿರೀಕ್ಷೆಯಿತ್ತು. ಜೇಮ್ಸ್, ದಿತ್ವ, ಜೇಕಬ್ ವರ್ಗೀಸ್ ಸಿನಿಮಾಗಳಲ್ಲಿ ನಟಿಸಲು ಕಾತುರದಿಂದ ಕಾಯುತ್ತಿದ್ದರು. ಇನ್ನೇನು ಕೊನೆಯ ಹಂತದಲ್ಲಿದ್ದ ಜೇಮ್ಸ್ ಮುಗಿಯುತ್ತಿದ್ದಂತೆ ಪವನ್ ಕುಮಾರ್ ನಿರ್ದೇಶನದ 'ದ್ವಿತ್ವ' ಸಿನಿಮಾಗೆ ತಯಾರಿ ನಡೆಸಿದ್ದರು. ಆದರೆ, ಆ ಸಿನಿಮಾಗೆ ಇನ್ನೇನು ತಯಾರಿ ನಡೆಯಬೇಕು ಅನ್ನುವಷ್ಟರಲ್ಲೇ ಪುನೀತ್ ನಮ್ಮಿಂದ ದೂರ ಆಗಿದ್ದಾರೆ. ಅಪ್ಪು ಅಗಲುವ ಒಂದು ದಿನ ಮುನ್ನ ಒಂದು ಫೋಟೊಶೂಟ್ ನಡೆಯಬೇಕಿತ್ತು. ಆದರೆ ಆ ಶೂಟ್ ಕ್ಯಾನ್ಸಲ್ ಆಯ್ತು. ಯಾಕೆ ಅಂತ ಮುಂದೆ ಓದಿ.

ಅಗಲುವ ಒಂದು ದಿನ ಮುನ್ನ ಫೋಟೊಶೂಟ್ ಕ್ಯಾನ್ಸಲ್
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಬಹಳ ಇಷ್ಟ ಪಟ್ಟಿದ್ದ ಕಥೆ 'ದ್ವಿತ್ವ'. ಹೊಂಬಾಳೆ ಫಿಲಂಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿತ್ತು. ಯೂಟರ್ನ್, ಲೂಸಿಯಾ ಖ್ಯಾತಿಯ ಪವನ್ ಕುಮಾರ್ ಈ ಚಿತ್ರದ ನಿರ್ದೇಶಕರು. ಅಪ್ಪು ಇದೇ ಸಿನಿಮಾಗಾಗಿ ಭಾರಿ ಸಿದ್ಧತೆ ಮಾಡಿಕೊಂಡಿದ್ದರು. ಇನ್ನೇನು ಕೆಲವು ದಿನಗಳಲ್ಲಿ ಸಿನಿಮಾ ಶೂಟಿಂಗ್ ಆರಂಭ ಆಗುವುದರಲ್ಲಿತ್ತು. ಆದರೆ, ಪವನ್ ಕುಮಾರ್ ಶೂಟಿಂಗ್ಗೂ ಮುನ್ನ ರಿಹರ್ಸಲ್ ನಡೆಸಲು ಮುಂದಾಗಿದ್ದರು. ಈ ರಿಹರ್ಸಲ್ಗೂ ಮುನ್ನ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಪುನೀತ್ ಕಾಂಬಿನೇಷನ್ನಲ್ಲಿ ಒಂದು ಫೋಟೋ ಶೂಟ್ ನಡೆಯಬೇಕಿತ್ತು.

ಫಿಕ್ಸ್ ಆಗಿತ್ತು ಅಪ್ಪು-ಕ್ರೇಜಿ ಫೋಟೊಶೂಟ್
ಇದೇ ಮೊದಲ ಬಾರಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಪುನೀತ್ ರಾಜ್ಕುಮಾರ್ ಜೊತೆಯಾಗಿ ನಟಿಸಬೇಕಿತ್ತು. ಅದಕ್ಕಾಗಿ ಇಬ್ಬರೂ ತಮ್ಮದೇ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದರು. ಸ್ಯಾಂಡಲ್ವುಡ್ ಮೂಲಗಳ ಪ್ರಕಾರ, ಅಕ್ಟೋಬರ್ 28ರಂದು ರವಿಚಂದ್ರನ್ ಹಾಗೂ ಪುನೀತ್ ರಾಜ್ಕುಮಾರ್ ಕಾಂಬಿನೇಷನ್ನಲ್ಲಿ ಫೋಟೊಶೂಟ್ ನಡೆಸಲು ಸಿದ್ಧತೆ ನಡೆಸಿದ್ದರು. ಆದರೆ, ಸ್ವತಃ ಅಪ್ಪುನೇ ಈ ಪೋಟೋಶೂಟ್ ಇವತ್ತು ಬೇಡ ಶನಿವಾರ( ಅಕ್ಟೋಬರ್ 30) ಮಾಡೋಣ ಅಂತ ಹೇಳಿದ್ದರಂತೆ. ಅದಕ್ಕಾಗಿ ಅಕ್ಟೋಬರ್ 28ರಂದು ನಡೆಯಬೇಕಿದ್ದ ಫೋಟೊಶೂಟ್ ಕ್ಯಾನ್ಸಲ್ ಆಗಿತ್ತು.

ಪವನ್ ಹುಟ್ಟುಹಬ್ಬ ನಿಮಿತ್ತ ಕ್ಯಾನ್ಸಲ್?
ಅಕ್ಟೋಬರ್ 29, ಪುನೀತ್ ನಿಧನದ ದಿನವೇ ದ್ವಿತ್ವ ಚಿತ್ರದ ನಿರ್ದೇಶಕ ಪವನ್ ಕುಮಾರ್ ಹುಟ್ಟುಹಬ್ಬವಿತ್ತು. ಹೀಗಾಗಿ ಪುನೀತ್ ರಾಜ್ಕುಮಾರ್ ಎರಡು ದಿನ ಬಿಡುವು ಕೊಡಲು ಮುಂದಾಗಿದ್ದರು ಎನ್ನಲಾಗಿದೆ. ಪವನ್ ಕುಮಾರ್ ಬರ್ತ್ಡೇ ಮುಗಿದ ಮರುದಿನವೇ ಫೋಟೊಶೂಟ್ ಮಾಡಲು ನಿರ್ಧರಿಸಲಾಗಿತ್ತು ಎನ್ನಲಾಗುತ್ತಿದೆ. ಈ ಕಾರಣಕ್ಕೆ ಅಂದು ನಡೆಯಬೇಕಿದ್ದ ಫೋಟೊಶೂಟ್ ನಿಂತಿತ್ತು. ಕ್ರೇಜಿಸ್ಟಾರ್ ಜೊತೆ ನಟಿಸಬೇಕು ಅಂದುಕೊಂಡಿದ್ದ ಅಪ್ಪು ಕನಸು ಕನಸಾಗಿಯೇ ಉಳಿದು ಬಿಟ್ಟಿತ್ತು.

30 ದಿನ ದ್ವಿತ್ವಕ್ಕೆ ಕಾಲ್ಶೀಟ್
'ದ್ವಿತ' ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ಗೆ ಉತ್ತಮ ಪಾತ್ರವಿದ್ಯಂತೆ. ರವಿಮಾಮ ಹಿಂದೆಂದೂ ಮಾಡದ ಪಾತ್ರದಲ್ಲಿ ನಟಿಸಬೇಕಿತ್ತು. ದ್ವಿತ್ವ ಸಿನಿಮಾಗಾಗಿ 30 ದಿನ ಕಾಲ್ಶೀಟ್ ಕೂಡ ನೀಡಿದ್ದರು. ಆದರೆ, ಮತ್ತೆ ದಿತ್ವ ಸೆಟ್ಟೇರುತ್ತಾ? ಪುನೀತ್ ಪಾತ್ರದಲ್ಲಿ ಯಾರು ನಟಿಸಬಹುದು? ಯಾರಿಗಾಗಿ ಈ ಸಿನಿಮಾ ಆಗುತ್ತೆ ಅನ್ನುವುದು ಸದ್ಯಕ್ಕಂತೂ ಉತ್ತರ ಹುಡುಕುವುದು ಅಸಾಧ್ಯ.


Click it and Unblock the Notifications











