'ಕನ್ವರ್ ಲಾಲ್'ಗೆ ರೀಮೇಕ್ ಸ್ಪೆಷಲಿಸ್ಟ್ ಕೆ.ಮಾದೇಶ್..?
ಎಲ್ಲವೂ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ಮಾಪಕ ದಿನೇಶ್ ಗಾಂಧಿ ಪ್ಲಾನ್ ಮಾಡಿದ ಹಾಗೆ ನಡೆದಿದ್ದರೆ, ಸಂಕ್ರಾಂತಿ ಹಬ್ಬದ ದಿನ ಗಾಂಧಿನಗರದ ನೂತನ 'ಕನ್ವರ್ ಲಾಲ್' ಆಗಿ ಗಣೇಶ್ ಅಬ್ಬರಿಸಬೇಕಿತ್ತು.
ಆದ್ರೆ, ಹಬ್ಬದ ಹೊಸ್ತಿಲಲ್ಲೇ ಚಿತ್ರತಂಡಕ್ಕೆ ಆಘಾತ ಎದುರಾಗಿದೆ. 'ಖುಷಿ ಖುಷಿಯಾಗಿ'ರಬೇಕಾಗಿದ್ದ ಗಣೇಶ್ ತಲೆ ಮೇಲೆ ಕೈ ಹೊತ್ತಿಕೊಂಡು ಕೂತಿದ್ದಾರೆ. ಏನು ಮಾಡುವುದು ಅಂತ ಗೊತ್ತಾಗದೆ ನಿರ್ಮಾಪಕ ದಿನೇಶ್ ಗಾಂಧಿ ಪೇಚಾಡುತ್ತಿದ್ದಾರೆ. ಯಾಕಂದ್ರೆ, ನಿರ್ದೇಶಕ ಎಂ.ಡಿ.ಶ್ರೀಧರ್, 'ಕನ್ವರ್ ಲಾಲ್' ಪ್ರಾಜೆಕ್ಟ್ ನಿಂದ ಹಿಂದೆ ಸರಿದಿದ್ದಾರೆ.

ಕಿರುತೆರೆಯಲ್ಲಿದ್ದ ಗಣೇಶ್ ರನ್ನ ಬೆಳ್ಳಿಪರದೆ ಮೇಲೆ ತಂದ ನಿರ್ದೇಶಕ ಎಂ.ಡಿ.ಶ್ರೀಧರ್, ಗಣಿಗಾಗಿ 'ಕನ್ವರ್ ಲಾಲ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಬೇಕೆನ್ನುವುದು ಗಣಿ ಮತ್ತು ದಿನೇಶ್ ಗಾಂಧಿ ಆಸೆಯಾಗಿತ್ತು. ಆದ್ರೆ, 'ಬುಗುರಿ' ಚಿತ್ರದಲ್ಲಿನ ಪೋಸ್ಟ್ ಪ್ರೊಡಕ್ಷನ್ ಒತ್ತಡದಿಂದ ಅನಿವಾರ್ಯವಾಗಿ 'ಕನ್ವರ್ ಲಾಲ್' ಚಿತ್ರಕ್ಕೆ ಎಂ.ಡಿ.ಶ್ರೀಧರ್ ಓಕೆ ಅನ್ನಲಿಲ್ಲ. [ಗೋಲ್ಡನ್ ಸ್ಟಾರ್ ಗಣೇಶ್ 'ಕನ್ವರ್ ಲಾಲ್' ಕನಸು ಭಗ್ನ]
ಹೀಗಾಗಿ, ಸಂಕ್ರಾಂತಿ ಹಬ್ಬದ ದಿನ ಅದ್ಧೂರಿಯಾಗಿ ನಡೆಯಬೇಕಿದ್ದ 'ಕನ್ವರ್ ಲಾಲ್' ಮುಹೂರ್ತ ಇದೀಗ ಕ್ಯಾನ್ಸಲ್ ಆಗಿದೆ. ಹಾಗೆ, ಎಂ.ಡಿ.ಶ್ರೀಧರ್ ಜಾಗಕ್ಕೆ ಬೇರೆ ನಿರ್ದೇಶಕರ ಹುಡುಕಾಟ ನಡೆಯುತ್ತಿದೆ.

ಹೇಳಿ ಕೇಳಿ 'ಕನ್ವರ್ ಲಾಲ್' ರೀಮೇಕ್ ಚಿತ್ರವಾಗಿರುವುದರಿಂದ ಸದ್ಯಕ್ಕೆ ಗಣಿ ಮತ್ತು ದಿನೇಶ್ ಗಾಂಧಿಗೆ ತಲೆಗೆ ಹೊಳೆದಿರುವ ಹೆಸರು ನಿರ್ದೇಶಕ ಕೆ.ಮಾದೇಶ್. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗಾಗಿ 'ರಾಮ್', 'ಹುಡುಗರು', 'ಪವರ್ ***', ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಾಗಿ 'ಬೃಂದಾವನ' ಸೇರಿದಂತೆ ಸಾಲು ಸಾಲು ಹಿಟ್ ರೀಮೇಕ್ ಚಿತ್ರಗಳನ್ನೇ ನೀಡಿರುವ ಕೆ.ಮಾದೇಶ್, 'ಕನ್ವರ್ ಲಾಲ್'ಗೆ ಬೆಸ್ಟ್ ಅನ್ನುವ ಅಭಿಪ್ರಾಯ ವ್ಯಕ್ತವಾಗಿದ್ಯಂತೆ. [ಖಾಕಿ ತೊಟ್ಟು 'ಕನ್ವರ್ ಲಾಲ್' ಆದ ಗಣೇಶ್]
ರೀಮೇಕ್ ಸ್ಪೆಷಲಿಸ್ಟ್ ಆಗಿರುವ ಕೆ.ಮಾದೇಶ್ 'ದಬ್ಬಂಗ್' ಚಿತ್ರವನ್ನ ಅಚ್ಚುಕಟ್ಟಾಗಿ ಕನ್ನಡಕ್ಕೆ 'ಕನ್ವರ್ ಲಾಲ್' ಆಗಿ ತೆರೆಗೆ ತರಬಹುದು ಅನ್ನುವ ವಿಶ್ವಾಸ ಗಣಿ ಮತ್ತು ದಿನೇಶ್ ಗಾಂಧಿ ಇಬ್ಬರಲ್ಲೂ ಇದೆ. ಈ ಬಗ್ಗೆ ಕೆ.ಮಾದೇಶ್ ಜೊತೆ ಮಾತುಕತೆ ಕೂಡ ನಡೆದಿದ್ಯಂತೆ. ಕೆ.ಮಾದೇಶ್ ಒಪ್ಪಿಗೆಗಾಗಿ ಈಗ ವೇಯ್ಟಿಂಗ್ ಅಷ್ಟೆ.
ಒಂದ್ವೇಳೆ ಕೆ.ಮಾದೇಶ್ ಒಪ್ಪಿಕೊಂಡರೆ, ಅವರ ಅಕೌಂಟಿಗೆ ಮತ್ತೊಂದು ರೀಮೇಕ್ ಸಿನಿಮಾ ಸೇರ್ಪಡೆಯಾಗಲಿದೆ. ಗಣಿಗೂ ಆನೆ ಬಲ ಬಂದಂತಾಗಲಿದೆ.


Click it and Unblock the Notifications











