ಕುಚುಕು ಸ್ನೇಹಿತರ ನಡುವೆ ವಿರಸ: ಸುದೀಪ್ ಸ್ಪಷ್ಟನೆ
ಗಾಂಧಿನಗರದಲ್ಲಿ ಎಲ್ಲಿ, ಯಾವಾಗ ಯಾಕೆ ಗಾಳಿಸುದ್ದಿಗಳು ಹರಡುತ್ತವೋ? ಇದರ ಹಿಂದೆ ಯಾರು ಇರುತ್ತಾರೋ? ಇದರಿಂದಾಗುವ ಲಾಭವೇನಂದು ತಿಳಿಯಲು ಚಲನಚಿತ್ರ ಮಂಡಳಿ ಒಂದು ಕಮಿಟಿ ರಚಿಸಿ ತನಿಖೆ ನಡೆಸುವುದು ಸೂಕ್ತವೇನೋ?
ತಲೆಬುಡವಿಲ್ಲದ ಗಾಳಿಸುದ್ದಿಗಳು ಹರಡುತ್ತಲೇ ಇರುತ್ತವೆ. ಆ ಗಾಳಿಸುದ್ದಿಗಳು 'ಭಾರೀ ಸುದ್ದಿ'ಯಾಗಿ ಸಂಬಂಧಪಟ್ಟವರು ಅದಕ್ಕೆ ಉತ್ತರಿಸಲೇ ಬೇಕಾದ ಅನಿವಾರ್ಯುತೆಯಲ್ಲಿರುವುದು ಅಷ್ಟೇ ಸತ್ಯ.
ಇದೇ ರೀತಿಯ ಗಾಳಿಸುದ್ದಿಯೊಂದು ಕಳೆದ ವಾರ ಗಾಂಧಿನಗರದ ಗಲ್ಲಿಯಿಂದ ಹೊರಬಿದ್ದಿತ್ತು. ಸುದ್ದಿಗೆ ಮತ್ತಷ್ಟು ಮಸಾಲ ಸೇರಿ, ಅದು ಊರೆಲ್ಲಾ ಸುದ್ದಿಯಾಗಿ ಕನ್ನಡದ ಇಬ್ಬರು ಪ್ರಮುಖ ನಾಯಕ ನಟರು ಮತ್ತು ಕುಚುಕು ಸ್ನೇಹಿತರಾಗಿರುವವರು ಉತ್ತರಿಸಲೇ ಬೇಕಾದ ಅನಿವಾರ್ಯತೆಯಲ್ಲಿ ಬಿದ್ದರು.
ಅದೇನಪ್ಪಾಂದ್ರೆ, ಕನ್ನಡ ಚಿತ್ರರಂಗದ ಇಬ್ಬರು ಕುಚುಕು..ಕುಚುಕು ಸ್ನೇಹಿತರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ನಡುವೆ ಎಲ್ಲವೂ ಸರಿಯಲ್ಲ, ಇಬ್ಬರೂ ಬೇರೆ ಬೇರೆಯಾಗಿದ್ದಾರೆ ಎನ್ನುವ ಸುದ್ದಿ. ಮುಂದೆ ಓದಿ..

ಪತ್ರಿಕೆಯಲ್ಲಿ ವರದಿಯಾಗಿತ್ತು
ಚಿತ್ರರಂಗದಲ್ಲಿ ಸುದೀಪ್ ಮತ್ತು ದರ್ಶನ್ ಆಪ್ತ ಸ್ನೇಹಿತರು. ಇಬ್ಬರ ನಡುವೆ ಸರಿಯಿಲ್ಲ, ಇಬ್ಬರೂ ಒಟ್ಟಿಗೆ ಇತ್ತೀಚೆಗೆ ಯಾವುದೇ ವೇದಿಕೆಯಲ್ಲಿ ಅಥವಾ ಸಾರ್ವಜನಿಕವಾಗಿ ಕಾಣಿಸುತ್ತಿಲ್ಲ ಎಂದು ದಿನಪತ್ರಿಕೆಯೊಂದು ಸುದ್ದಿ ಮಾಡಿತ್ತು. ಗಾಂಧಿನಗರದ ಗಲ್ಲಿಗಳಿಂದ ಬಂದ ಸುದ್ದಿಯನ್ನು ಆಧರಿಸಿ ಪತ್ರಿಕೆ ವರದಿ ಮಾಡಿತ್ತೋ ತಿಳಿಯದು. ಒಟ್ಟಿನಲ್ಲಿ ಪತ್ರಿಕೆಯ ಈ ವರದಿಯಿಂದ ಇದೊಂದು ಭಾರೀ ಸುದ್ದಿಯಾಗಿ ಹೋಯಿತು.

ಸುದೀಪ್ ನೀಡಿದ ಸ್ಪಷ್ಟನೆ
ಇದೊಂದು ತಲೆಬುಡವಿಲ್ಲದ ಗಾಳಿಸುದ್ದಿ. ಇಂತಹ ಸುದ್ದಿಗಳು ಯಾಕೆ ಹರಡುತ್ತೋ, ನನಗೆ ತಿಳಿಯುತ್ತಿಲ್ಲ. ಇಂತಹ ಸುದ್ದಿಗಳಿಂದ ಯಾರಿಗೆ ಏನು ಲಾಭವಾಗುತ್ತೋ ಗೊತ್ತಿಲ್ಲ. ಆದರೆ ಈಗ ಈ ಸುದ್ದಿ ಹರಡಿರುವುದರಿಂದ ಇದಕ್ಕೆ ಉತ್ತರ ನೀಡಬೇಕಾಗಿದೆ ಎಂದು ಸುದೀಪ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಸುದೀಪ್ ಟ್ವೀಟ್ ಸಂದೇಶ
ಈ ಬಗ್ಗೆ ಹೇಳಿಕೆ ನೀಡುವುದರ ಜೊತೆಗೆ ಟ್ವೀಟ್ ಸಂದೇಶ ರವಾನಿಸಿರುವ ಕಿಚ್ಚ ಸುದೀಪ್, ನಾನು ಮತ್ತು ದರ್ಶನ್ ಯಾವತ್ತಿಗೂ ಒಳ್ಳೆಯ ಸ್ನೇಹಿತರು. ನಾವಿಬ್ಬರೂ ನಮ್ಮ ನಮ್ಮ ಕೆಲಸದಲ್ಲಿ ಬ್ಯೂಸಿಯಾಗಿರುವುದರಿಂದ ಜೊತೆಯಾಗಿ ಕಾಣಿಸಲು ಆಗಲಿಲ್ಲ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದು ಸಂದೇಶ ಕಳುಹಿಸಿದ್ದಾರೆ.
ದರ್ಶನ್ ಕೂಡಾ ಟ್ವೀಟ್ ಮಾಡಿದ್ದರು
ನಮ್ಮಿಬ್ಬರ ನಡುವೆ ಸರಿಯಿಲ್ಲ ಎನ್ನುವ ಸುದ್ದಿ ಸುಳ್ಳೋ ಸುಳ್ಳು. ವಿಷಯ ಸರಿಯಾಗಿ ಅರಿಯದೇ ಇಂತಹ ಸುದ್ದಿಯನ್ನು ಹರಡಬೇಡಿ. ನಮ್ಮಿಬ್ಬರ ನಡುವೆ ಎಲ್ಲವೂ ಸರಿಯಿದೆ ಎಂದು ದರ್ಶನ್ ಕೂಡಾ ಟ್ವೀಟ್ ಮಾಡಿದ್ದಾರೆ.

ಸಿಸಿಎಲ್ ನಂತರ ಕಾಣಿಸಿದ್ದು ಕಮ್ಮಿ
ಸಿಸಿಎಲ್ ನಂತರ ದರ್ಶನ್ ಮತ್ತು ಸುದೀಪ್ ಒಟ್ಟಿಗೆ ಕಾಣಿಸಿದ್ದು ಕಮ್ಮಿ. ರೆಬೆಲ್ ಸ್ಟಾರ್ ಅಂಬರೀಶ್ ಆಸ್ಪತ್ರೆಗೆ ದಾಖಲಾಗಿದ್ದಾಗ ಜೊತೆಯಾಗಿ ಕಾಣಿಸಿಕೊಂಡಿದ್ದ ಇಬ್ಬರೂ ನಂತರ ಒಟ್ಟಾಗಿ ಕಾಣಿಸಿಕೊಳ್ಳಲಿಲ್ಲ.

ಬಿಗ್ ಬಾಸ್ ನಲ್ಲೂ ದರ್ಶನ್ ಭಾಗವಹಿಸಲಿಲ್ಲ
ಬಿಗ್ ಬಾಸ್ 2 ರಿಯಾಲಿಟಿ ಶೋನ ವೀಕೆಂಡ್ ಕಾರ್ಯಕ್ರಮದಲ್ಲಿ ದರ್ಶನ್ ಭಾಗವಹಿಸುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ದರ್ಶನ್ ಈ ಶೋನಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಈ ಸುದ್ದಿ ಹರಡಿದ್ದರೂ ಹರಡಿರ ಬಹುದು. ಬೆಂಕಿಯಿಲ್ಲದೆ ಹೊಗೆಯಾಡುತ್ತಾ ಎನ್ನುವುದೇ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ.


Click it and Unblock the Notifications











