ದೀಪಾ ಸನ್ನಿಧಿ 'ಔಟ್' ಮಾಡಿದ್ದು ಸುದೀಪ್ ಅಲ್ವಂತೆ
ಮುಹೂರ್ತ ಮುಗಿದ ಮೇಲೆ ಮೊದಲು ಆಯ್ಕೆಯಾಗಿದ್ದ ದೀಪಾ ಸನ್ನಿಧಿಗೆ ಗೇಟ್ ಪಾಸ್ ನೀಡಲಾಗಿತ್ತು. ಆ ಜಾಗಕ್ಕೆ ಪ್ರಣೀತಾ ಎಂಟ್ರಿ ಪಡೆದಿದ್ದರು. ಇಷ್ಟು ದಿನ ಅದಕ್ಕೆ ಸಂಬಂಧಿಸಿ ಯಾಕೋ ಸುಮ್ಮನಿದ್ದ ಸುದೀಪ್, ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಈಗ ದೀಪಾ ಸನ್ನಿಧಿ ಹೋಗಿ ಆ ಜಾಗಕ್ಕೆ ಪ್ರಣೀತಾ ಬಂದಿದ್ದರಲ್ಲಿ ತನ್ನ ಕೈವಾಡವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬದಲಾವಣೆಗೆ ಕಥೆಯಲ್ಲಾದ ಬದಲಾವಣೆಯೇ ಕಾರಣ ಎಂದು ಬಚ್ಚನ್ ನಿರ್ದೇಶಕ ಶಶಾಂಕ್ ಹೇಳಿದ್ದಾಗಿದೆ. ಅದನ್ನು ನಟಿ ದೀಪಾ ಸನ್ನಿಧಿ ಕೂಡ ಹೇಳಿದ್ದರು. ಆಶ್ಚರ್ಯವೆಂದರೆ ಶಶಾಂಕ್ ಅವರ ಅದೇ ಹೇಳಿಕೆಯನ್ನು ಈಗ ನಟ ಕಿಚ್ಚ ಸುದೀಪ್ ಕೂಡ ಪುನರುಚ್ಚರಿಸಿದ್ದಾರೆ.
"ಆರಂಭದಲ್ಲಿ ದೀಪಾ ಸನ್ನಿಧಿಯನ್ನು ಆರಿಸಿದ್ದು ಹೌದು. ಆದರೆ ಅದು ಪ್ರಾರಂಬಿಕ ಹಂತದಲ್ಲಾಗಿತ್ತು. ನಂತರ ಕಥೆಯಲ್ಲಿ ಬಹಳಷ್ಟು ಬದಲಾವಣೆಗಳಾದವು. ಹೀಗಾಗಿ ದೀಪಾ ಸನ್ನಿಧಿ ಜತೆ ಸಮಾಲೋಚನೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ. ಇದೆಲ್ಲಾ ನಡೆದಿರುವುದು ಹಾಗೂ ಆಕೆಯನ್ನು ಆರಿಸಿರುವುದು ಯಾವುದರಲ್ಲೂ ನನ್ನ ಕೈವಾಡವಿಲ್ಲ. ದೀಪಾ ಬೇಡವೆಂದು ಕೈ ಬಿಟ್ಟಿರುವುದೂ ನಾನಲ್ಲ.
ಅಷ್ಟಕ್ಕೂ ನಾನು ಅಭಿನಯಿಸುವ ಚಿತ್ರಗಳ ನಾಯಕಿಯರ ಆಯ್ಕೆಯಲ್ಲಿ ನಾನು ಯಾವತ್ತೂ ಮೂಗು ತೂರಿಸುವುದಿಲ್ಲ. ದಿನಕ್ಕೊಂದರಂತೆ ಹುಟ್ಟಿಕೊಳ್ಳುವ ವಿವಾದಗಳಿಗೆ ಉತ್ತರಿಸುತ್ತಾ ಇರಲು ನನಗೆ ಸಾಧ್ಯವಿಲ್ಲ. ನನಗೆ ದೀಪಾ ಸನ್ನಿಧಿ ತೀರಾ ಪರಿಚಿತರಲ್ಲ; ಆದರೆ ಆಕೆ ಒಬ್ಬ ಒಳ್ಳೆಯ ಹುಡುಗಿ ಎಂಬುದು ಗೊತ್ತು.
ಆಕೆ ನಟಿಸಿರುವ 'ಜಾನೂ' ಮುಂತಾದ ಚಿತ್ರಗಳನ್ನು ನೋಡಿದ್ದೇನೆ. ದೀಪಾ ಸನ್ನಿಧಿ ಉತ್ತಮ ನಟಿ. ನನಗೆ ದೀಪಾ ಸನ್ನಿಧಿಯೊಂದಿಗೆ ಯಾವ ಮನಸ್ತಾಪವಾಗಲೀ, ಅಸಮಾಧಾನವಾಗಲೀ ಇಲ್ಲ. ಆಕೆ ಒಳ್ಳೊಳ್ಳೆಯ ಪಾತ್ರಗಳನ್ನು ಮಾಡಬೇಕೆಂದು ನಾನೂ ಕೂಡ ಬಯಸುತ್ತೇನೆ" ಎಂದು ಗರಂ ಆಗಿ ತಿರುಗೇಟು ನೀಡಿದ್ದಾರೆ.
ಶಶಾಂಕ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಬಚ್ಚನ್' ಚಿತ್ರದಲ್ಲಿ ಸುದೀಪ್ ಅವರಿಗೆ ಭಾವನಾ ನಾಯಕಿ. ಪಾರುಲ್ ಯಾದವ್ ಇನ್ನೊಬ್ಬ ನಾಯಕಿ. ಈಗ ಮೂರನೇ ನಾಯಕಿಯಾಗಿ ಈಗ ಪ್ರಣೀತಾ ಬಂದಿದ್ದಾರೆ. ಅದ್ಯಾಕೋ ನಾಯಕಿಯರ ಬದಲಾವಣೆ ಇತ್ತೀಚಿಗೆ ತೀರಾ ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ಶಶಾಂಕ್ ಚಿತ್ರದಲ್ಲಿ ಇದು ಸರ್ವೇ ಸಾಮಾನ್ಯವೇ ಎಂದು ಎಲ್ಲರೂ ಅಚ್ಚರಿಪಡುವಂತಾಗಿದೆ.
ಈ ಮೊದಲು ಶಶಾಂಕ್ ನಿರ್ದೇಶಿಸಿದ್ದ 'ಜರಾಸಂಧ' ಚಿತ್ರದಲ್ಲೂ ಹೀಗೆ ಆಗಿತ್ತು. ಆಗ, ನಾಯಕ ದುನಿಯಾ ವಿಜಯ್ ಮಾತು ಕೇಳಿ ಐಂದ್ರಿತಾ ರೇ ಯನ್ನು ಚಿತ್ರದಿಂದ ಹೊರ ದಬ್ಬಲಾಗಿತ್ತು ಎಂದು ಭಾರೀ ಸುದ್ದಿಯಾಗಿತ್ತು. ಆಗಲೂ ಶಶಾಂಕ್ ಹೀಗೇ ಹೇಳಿದ್ದರು. ಈಗಲೂ ಹಾಗೇ ಹೇಳಿದ್ದಾರೆ. ಅದು ನಿಜವೇ ಆಗಿರಬಹುದು! (ಒನ್ ಇಂಡಿಯಾ ಕನ್ನಡ)


Click it and Unblock the Notifications












