ಲೂಸ್ ಮಾದನ ಬಿಟ್ಟು ಬರುತ್ತಿರುವ ಲೂಸುಗಳು!
ಆಶ್ಚರ್ಯವೆಂದರೆ, ಈ ಚಿತ್ರದಲ್ಲಿ ಲೂಸ್ ಮಾದ ಯೋಗೇಶ್ ಇಲ್ಲ. ಲೂಸ್ ಗಳಾಗಿ ನಟಿಸಲಿರುವ ನಟರುಗಳು ಅಕುಲ್ ಬಾಲಾಜಿ, ಶ್ರೀ ಮುರಳಿ ಹಾಗೂ ಶ್ರೀಕಾಂತ್. ಅರುಣ್ ನಿರ್ದೇಶನದಲ್ಲಿ (ನಿರ್ದೇಶನದ ಅಗತ್ಯ!) ಈ ಮೂವರೂ ಲೂಸುಗಳು ನಟಿಸಲಿದ್ದು ಚಿತ್ರದ ಕತೆ ಹೊಸ ರೀತಿಯದ್ದು ಎನ್ನಲಾಗಿದೆ. ಸದ್ಯದಲ್ಲೇ ಈ ಚಿತ್ರವು ಮುಹೂರ್ತ ಆಚರಿಸಿಕೊಳ್ಳಲಿದ್ದು ಅದಕ್ಕೆ ವಿಭಿನ್ನವಾಗಿ ಆಮಂತ್ರಣ ಪತ್ರಿಕೆಯನ್ನು ಸಿದ್ಧಪಡಿಸಲಾಗುತ್ತಿದೆ.
ಮಾಮೂಲಿಯಂತೆ ಆಮಂತ್ರಣ ಪತ್ರಿಕೆಯನ್ನು ಎನ್ವಲಪ್ ಒಳಗೆ ಸೇರಿಸಿ ಕೊಡುವ ಬದಲು ಹೊಸ ಐಡಿಯಾ ಮಾಡಿದ್ದಾರೆ ನಿರ್ದೇಶಕ ಅರುಣ್ ಕುಮಾರ್. ಡಸ್ಟ್ ಬಿನ್ ಮಾದರಿ ಬಾಕ್ಸ್ ನೊಳಕ್ಕೆ ಚಿತ್ರದ ಕುರಿತಾದ ಆಹ್ವಾನ ಪತ್ರಿಕೆ ತುರುಕಿ, ಅದನ್ನು ಕೊಡಬೇಕಾದವರಿಗೆ ಕೊಡುವ ವಿಚಿತ್ರ ಐಡಿಯಾ ನಿರ್ದೇಶಕರದು.
ಆಮಂತ್ರಣ ಪತ್ರಿಕೆ ನಂತರ ಕಸದ ಬುಟ್ಟಿ ಸೇರುವುದು ಸಹಜವಾಗಿ ಇದ್ದೇ ಇದೆ. ಅದಕ್ಕೂ ಮೊದಲೇ ಕಸದ ಬುಟ್ಟಿಯಲ್ಲಿ ಆಹ್ವಾನ ಪತ್ರಿಕೆ ತುಂಬಿ ಕರೆ ನೀಡುವ ಹೊಸ ಐಡಿಯಾಕ್ಕೆ ಸಂಬಂಧಪಟ್ಟವರು ಹೇಗೆ ಪ್ರತಿಕ್ರಿಯೆ ನೀಡುತ್ತಾರೋ ಏನೋ! ನಿರ್ದೇಶಕರು 'ಲೂಸುಗಳು' ಚಿತ್ರ ಮಾಡುವ ಮೊದಲೇ ಹೀಗಾದರೆ ಗತಿಯೇನು ಎಂದು ಪ್ರಶ್ನಿಸದಿದ್ದರೆ ಸಾಕು, ಏನಂತೀರಾ?
ಈ 'ಲೂಸುಗಳು' ಎಂಬ ಟೈಟಲ್ ಇಟ್ಟು ತಮ್ಮನ್ನೇ ಬಿಟ್ಟು ಚಿತ್ರ ಮಾಡಲು ಹೊರಟವರ ಬಗ್ಗೆ ಲೂಸ್ ಮಾದ ಯೋಗೇಶ್ ಅವರಿಗೆ ಭಾರಿ ಕೋಪ ಬಂದಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಗಿರಗಿರ ತಿರುಗುತ್ತಿದೆ. ತಮ್ಮ ಬಿರುದನ್ನು ದುರುಪಯೋಗ ಪಡಿಸಿಕೊಳ್ಳಲಿರುವ ಚಿತ್ರತಂಡದ ಬಗ್ಗೆ ಲೂಸ್ ಮಾದ ಯೋಗಿ ಏನಂತಾರೋ! 'ರೈಟ್ಸ್' ಕೇಳಿದರೆ ಕಷ್ಟ ಕಷ್ಟ ಎನ್ನುತ್ತಿದೆ ಗಾಂಧಿನಗರ! (ಒನ್ ಇಂಡಿಯಾ ಕನ್ನಡ)


Click it and Unblock the Notifications












