ಯಡಿಯೂರಪ್ಪನವರಿಗೆ ಕೈಕೊಟ್ಟ ಪೂಜಾಗಾಂಧಿ?
ಮಂಗಳವಾರ (ಫೆ.26) ಪೂಜಾಗಾಂಧಿ ಅವರು ಬಳ್ಳಾರಿಯಲ್ಲಿ ಶ್ರೀರಾಮುಲು ಏರ್ಪಡಿಸಿದ್ದ ಭೋಜನ ಕೂಟಕ್ಕೆ ಹಾಜರಾಗಿದ್ದರು. ಅಲ್ಲಿ ಪತ್ರಕರ್ತರಿಗೆ ಕಣ್ಣಿಗೆ ಬಿದ್ದು ಎಲ್ಲರನ್ನೂ ಚಕಿತಗೊಳಿಸಿದರು. ಅರೆ ಇದೇನಿದು ಕೆಜೆಪಿ ಪಕ್ಷದ ಕಾರ್ಯಕರ್ತೆ ಬಿಎಸ್ಆರ್ ಕಾಂಗ್ರೆಸ್ ಮನೆಯಲ್ಲಿ ಎಂಬ ಅಚ್ಚರಿಗೆ ಕಾರಣರಾದರು.
ಇದೇನು ಪೂಜಾಗಾಂಧಿ ಅವರೇ ಎಂದು ಕೇಳಿದ ಪತ್ರಕರ್ತರಿಗೆ ಅವರು ಉತ್ತರಿಸಿದ್ದು, ಊಟಕ್ಕೆ ಕರೆದಿದ್ದರು ಅದಕ್ಕಾಗಿ ಬಂದಿದ್ದೆ. ಬಳ್ಳಾರಿ ಬಿರಿಯಾನಿ ಸಖತ್ತಾಗಿದೆ ಎಂದರು. ತಾವೇನಾದರೂ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತೀರಾ? ಎಂದು ಕೇಳಿದ್ದಕ್ಕೆ...ಈಗಲೇ ಏನೂ ಹೇಳಲಿಕ್ಕಾಗಲ್ಲ ಎಂದು ಹೇಳಿ ಪತ್ರಕರ್ತರನ್ನು ಅವಾಕ್ಕಾಗಿಸಿದರು.
ಸ್ಪಲ್ಪ ಸ್ಪಷ್ಟವಾಗಿ ಹೇಳಿ ಮೇಡಂ ಎಂದರೆ, "ಅದೇ ಹೇಳಿದೆನಲ್ಲಾ ಬಳ್ಳಾರಿ ಬಿರಿಯಾನಿ ಸೊಗಸಾಗಿದೆ ಎಂದು" ಎಂದು ಹೇಳಿ ಅಲ್ಲಿಂದ ಕಳಚಿಕೊಂಡರು. ಒಟ್ಟಿನಲ್ಲಿ ಈಗ ಹರಿದಾಡುತ್ತಿರುವ ಸುದ್ದಿ ಪ್ರಕಾರ ಪೂಜಾಗಾಂಧಿ ಶೀಘ್ರದಲ್ಲೇ ಬಿಎಸ್ಆರ್ ಕಾಂಗ್ರೆಸ್ ಸೇರ್ಪಡೆಯಾಗುವುದು ಗ್ಯಾರಂಟಿ ಎನ್ನಲಾಗಿದೆ.
ಜನವರಿ 18, 2012ರಂದು ಜೆಡಿ(ಎಸ್) ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದ ಪೂಜಾ ಬಳಿಕ ಡಿಸೆಂಬರ್ 9, 2012ಕ್ಕೆ ಯಡಿಯೂರಪ್ಪ ಅವರ ನೂತನ ಪಕ್ಷ ಕೆಜೆಪಿ ಕೈಹಿಡಿದಿದ್ದರು. ಈಗ ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಮುಂದಾಗಿದ್ದಾರೆ. ಕೇವಲ ಒಂದೇ ಒಂದು ವರ್ಷದಲ್ಲಿ ಈ ಪಾಟಿ ಪಕ್ಷಾಂತರ ಮಾಡಿದ ತಾರೆ ಕರ್ನಾಟಕದ ಇತಿಹಾಸದಲ್ಲಿ ದುರ್ಬೀನು ಹಾಕಿ ಹುಡುಕಿದರೂ ಸಿಗಲಿಕ್ಕಿಲ್ಲ ಅನ್ನಿಸುತ್ತದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications












