'ಸುದೀಪ್-ಭಟ್' ಜೋಡಿಗೆ 'ತಥಾಸ್ತು' ಎಂದ ನಿರ್ಮಾಪಕ
ಸುದೀಪ್ ಅವರ ಜೊತೆಯಲ್ಲಿ ಯೋಗರಾಜ್ ಭಟ್ ಅವರು ಮತ್ತೆ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಆಗಾಗ ಕೇಳಿ ಬರುತ್ತಲೇ ಇದೆ. ಇತ್ತೀಚೆಗೆ ಟಿ.ವಿ ಕಾರ್ಯಕ್ರಮವೊಂದರಲ್ಲಿ ಕೂಡ ಸುದೀಪ್ ಜೊತೆ ಸಿನಿಮಾ ಮಾಡುವ ಆಸೆಯನ್ನ ಭಟ್ಟರು ವ್ಯಕ್ತಪಡಿಸಿದ್ದರು.
ಬಹುಶಃ ಭಟ್ಟರ ಈ ಆಸೆ ಆ ದೇವರಿಗೆ ಕೇಳಿಸಿದೆ ಅನ್ಸುತ್ತೆ. ಯಾಕಂದ್ರೆ, ಯೋಗರಾಜ್ ಭಟ್ ಮತ್ತು ಸುದೀಪ್ ಜೋಡಿಯಲ್ಲಿ ಒಂದು ಸಿನಿಮಾ ಮಾಡು ಅಂತ ನಿರ್ಮಾಪಕರೊಬ್ಬರನ್ನ ಕಳುಹಿಸಿದ್ದಾರೆ.
ಹೌದು, ಭಟ್ ಮತ್ತು ಸುದೀಪ್ ಕಾಂಬಿನೇಷನ್ ಸಿನಿಮಾ ಆಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದ್ದು, ಈ ಪ್ರಾಜೆಕ್ಟ್ ಮತ್ತೊಂದು ಹಂತ ತಲುಪಿದೆ. ಹಾಗಿದ್ರೆ, ಈ ಚಿತ್ರವನ್ನ ಮಾಡಲು ಮನಸ್ಸು ಮಾಡಿರುವುದು ಯಾರು? ಈ ಬಗ್ಗೆ ಭಟ್ ಮತ್ತು ಸುದೀಪ್ ಒಪ್ಪಿಗೆ ನೀಡಿದ್ದಾರಾ? ಮುಂದೆ ಓದಿ.....

ಸುದೀಪ್-ಭಟ್ ಸಿನಿಮಾ ಮಾಡ್ತಾರಂತೆ
ಪ್ರತಿ ವರ್ಷವೂ ಸುದೀಪ್ ಜೊತೆ ಸಿನಿಮಾ ಮಾಡುವ ಯೋಚನೆ ಮಾಡ್ತಾರಂತೆ ಯೋಗರಾಜ್ ಭಟ್ಟರು. ಆದ್ರೆ, ಸುದೀಪ್ ಬಿಜಿ ಇರುವ ಕಾರಣ ಅದು ಸಾಧ್ಯವಾಗುತ್ತಿರಲಿಲ್ಲವಂತೆ. ಆದ್ರೀಗ, ಸಿನಿಮಾ ಆಗುವ ಹಂತಕ್ಕೆ ಬಂದಿದೆ.

ನಿರ್ಮಾಪಕರು ರೆಡಿ
ಯೋಗರಾಜ್ ಭಟ್ ಮತ್ತು ಸುದೀಪ್ ಸಿನಿಮಾ ಮಾಡಬೇಕು ಎಂದುಕೊಂಡಿದ್ದರೇ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೆ ನಿರ್ಮಾಪಕರೊಬ್ಬರು ಮುಂದೆ ಬಂದಿದ್ದಾರೆ. ಈ ಚಿತ್ರಕ್ಕೆ ನಾನು ಬಂಡವಾಳ ಹಾಕುತ್ತೇನೆ ಎಂದು ನಿರ್ಧರಿಸಿದ್ದಾರಂತೆ.

ಯಾರು ಆ ನಿರ್ಮಾಪಕ?
ಸುದೀಪ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್ ಮತ್ತೆ ಒಟ್ಟಾಗಿಸುವ ಉದ್ದೇಶ ಹೊಂದಿರುವ ಆ ನಿರ್ಮಾಪಕ ಎಂ.ಎನ್ ಕುಮಾರ್. ಇದೇ ಕುಮಾರ್ ಅವರು ಅಂದು 'ರಂಗ ಎಸ್.ಎಸ್.ಎಲ್.ಸಿ' ಚಿತ್ರವನ್ನ ನಿರ್ಮಾಣ ಮಾಡಿದ್ದರು.

ಮತ್ತೆ ಒಂದಾಗುತ್ತಿದೆ 'SSLCರಂಗ' ತಂಡ
ಈ ಮೂಲಕ 'ರಂಗ SSLC' ಚಿತ್ರತಂಡ ಮತ್ತೆ ಒಂದಾಗುತ್ತಿದೆ. ಸುದೀಪ್ ಅಭಿನಯಿಸಿದ್ದ ಈ ಚಿತ್ರವನ್ನ ಯೋಗರಾಜ್ ಭಟ್ ನಿರ್ದೇಶನ ಮಾಡಿದ್ದರು. ಎಂ.ಎನ್ ಕುಮಾರ್ ನಿರ್ಮಾಣ ಮಾಡಿದ್ದರು. ರಮ್ಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. 2004ರಲ್ಲಿ ಈ ಸಿನಿಮಾ ತೆರೆಕಂಡಿತ್ತು.

ಒಂದು ಸುತ್ತಿನ ಚರ್ಚೆ ಆಗಿದೆ ಎನ್ನಲಾಗಿದೆ
'ಮುಗುಳುನಗೆ' ಚಿತ್ರವನ್ನ ನೋಡುವಂತೆ ಸುದೀಪ್ ಅವರನ್ನ ಯೋಗರಾಜ್ ಭಟ್ ಅವರು ಆಹ್ವಾನಿಸಿದ್ದಾರಂತೆ. ಈ ವೇಳೆ ಹೊಸ ಚಿತ್ರದ ಬಗ್ಗೆ ಒಂದು ಸುತ್ತಿನ ಚರ್ಚೆ ಆಗಿದೆ ಎನ್ನಲಾಗಿದೆ.

ಮೂರು ಪ್ರಾಜೆಕ್ಟ್ ಮುಗಿದ ನಂತರ?
ಸದ್ಯ, ಸುದೀಪ್ ಅವರು ಪ್ರೇಮ್ ನಿರ್ದೇಶನ 'ದಿ ವಿಲನ್' ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅದಾದ ನಂತರ ಹೆಬ್ಬುಲಿ ಕೃಷ್ಣ ಅವರ 'ಪೈಲ್ವಾನ್' ಮತ್ತು ಸೂರಪ್ಪ ಬಾಬು ಜೊತೆ 'ಕೋಟಿಗೊಬ್ಬ-3' ಚಿತ್ರವನ್ನ ಮಾಡಲಿದ್ದಾರೆ. ಈ ಮೂರು ಸಿನಿಮಾದ ನಂತರ ಯೋಗರಾಜ್ ಭಟ್ ಮತ್ತು ಸುದೀಪ್ ಸಿನಿಮಾ ಸೆಟ್ಟೇರಬಹುದು ಎನ್ನಲಾಗಿದೆ.


Click it and Unblock the Notifications











