'ಲೆಜೆಂಡ್' ಬಾಲಕೃಷ್ಣ ಸಕ್ಸಸ್ ಕೊಟ್ಟ 'ಅಖಂಡ' ಪಾರ್ಟ್ 2ಗೆ ಭರ್ಜರಿ ಸಿದ್ಧತೆ: ಏನಂತಿದೆ ಟಾಲಿವುಡ್?
ಕಳೆದ ವರ್ಷ ಟಾಲಿವುಡ್ ಬಾಕ್ಸಾಫೀಸ್ನಲ್ಲಿ ಹೊಸ ಅಧ್ಯಾಯ ಬರೆದ ಸಿನಿಮಾ 'ಅಖಂಡ'. ಲೆಜೆಂಡ್ ಬಾಲಕೃಷ್ಣಗೆ 'ಅಖಂಡ' ಸಿನಿಮಾ ಸೂಪರ್ ಸಕ್ಸಸ್ ತಂದುಕೊಟ್ಟಿತ್ತು. ಬಾಲಕೃಷ್ಣ ಅಬ್ಬರಕ್ಕೆ ಗಲ್ಲಾಪಟ್ಟಿಗೆಯಲ್ಲಿ ಪತರಗುಟ್ಟಿ ಹೋಗಿತ್ತು. ಬಿಡುಗಡೆಯಾದ ಕಡೆಯಲ್ಲೆಲ್ಲಾ 'ಅಖಂಡ' ಗಳಿಕೆ ಆಶಾದಾಯಕವಾಗಿತ್ತು. ಈ ಬೆನ್ನಲ್ಲೇ ಮತ್ತೊಂದು 'ಅಖಂಡ' ನಿರ್ಮಾಣಕ್ಕೆ ಟಾಲಿವುಡ್ ಸಜ್ಜಾಗುತ್ತಿದೆ ಎನ್ನುವ ಮಾತು ಹರಿದಾಡುತ್ತಿದೆ.
Recommended Video
ಮಾಸ್ ಎಂಟರ್ಟೈನರ್ ಬಾಲಕೃಷ್ಣ ವೃತ್ತಿ ಬದುಕಿನ ಅತೀ ದೊಡ್ಡ ಯಶಸ್ಸು ಸಿಕ್ಕ ಸಿನಿಮಾ ಎಂದು ಸಾಭೀತಾಗಿದೆ. ಇತ್ತೀಚೆಗೆ 'ಅಖಂಡ' 50 ದಿನಗಳನ್ನು ಪೂರೈಸಿದ್ದು, ಬಾಕ್ಸಾಫೀಸ್ನಲ್ಲೂ ಉತ್ತಮ ಗಳಿಕೆಯನ್ನು ಕಂಡಿದೆ. ಒಂದು ಸಿನಿಮಾ ಸೂಪರ್ ಹಿಟ್ ಆದಾಗ ಅದರ ಸೀಕ್ವೆಲ್ ಬಗ್ಗೆ ಬೇಡಿಕೆ ಹೆಚ್ಚಾಗುತ್ತೆ. ಅದರಂತೆ ಬಾಲಕೃಷ್ಣ ಅಭಿಮಾನಿಗಳು 'ಅಖಂಡ 2' ಬೇಕು ಅಂತ ಒತ್ತಡ ಹೇರಿದ್ದು, ನಿರ್ದೇಶಕ ಬೋಯಪಟ್ಟಿ ಶ್ರೀನು ಪಾಸಿಟಿವ್ ಉತ್ತರ ನೀಡಿದ್ದಾರೆ.

ಬಾಲಯ್ಯ- ಶ್ರೀನುಗೆ 'ಅಖಂಡ' ಮರುಜನ್ಮ
ಟಾಲಿವುಡ್ ದಿಗ್ಗಜ ಬಾಲಕೃಷ್ಣ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ದೊಡ್ಡ ಯಶಸ್ಸು ಕಂಡಿರಲಿಲ್ಲ. ಇನ್ನೊಂದು ಕಡೆ ಬೋಯಪಟ್ಟು ಶ್ರೀನು ಕೂಡ ಸೋಲಿನ ಸುಳಿಗೆ ಸಿಕ್ಕು ಒದ್ದಾಡುತ್ತಿದ್ದರು. ಒಂದು ಅದ್ಭುತ ಗೆಲುವಿಗಾಗಿ ಎದುರು ನೋಡುತ್ತಿದ್ದ ಇಬ್ಬರಿಗೂ ಮರುಜನ್ಮ ನೀಡಿದ್ದು 'ಅಖಂಡ'. ಕೊರೊನಾ ಆತಂಕವನ್ನೂ ಮರೆತು 'ಅಖಂಡ' ಸಿನಿಮಾ ನೋಡಲು ಜನರು ಚಿತ್ರಮಂದಿರಕ್ಕೆ ಬಂದಿದ್ದರು. ಹೀಗಾಗಿ 'ಅಖಂಡ'ಗೆ ಸಿಕ್ಕ ಯಶಸ್ಸು ಬೆನ್ನತ್ತಿ ಹೊರಡಲು ಚಿತ್ರತಂಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಟಾಲಿವುಡ್ನಲ್ಲಿ ಸದ್ದಿಯೊಂದು ಹರಿದಾಡಿದೆ. 'ಅಖಂಡ 2'ಗೆ ಸಿದ್ಧತೆಗಳು ಆರಂಭ ಆಗಿದೆ ಅನ್ನುವ ಮಾತು ಕೇಳಿರುತ್ತಿದೆ.

ಅಖಂಡ 2 ಬಗ್ಗೆ ನಿರ್ದೇಶಕರು ಹೇಳಿದ್ದೇನು?
ಟಾಲಿವುಡ್ನಲ್ಲಿ 'ಅಖಂಡ 2' ಬಗ್ಗೆ ಶೀಘ್ರವೇ ಹೊಸ ಸುದ್ದಿಯೊಂದು ಹೊರಬೀಳಲಿದೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ. ಇದಕ್ಕೆ ಕಾರಣ, ಬೋಯಪಟ್ಟಿ ಶ್ರೀನು ನೀಡಿದ ಹೇಳಿಕೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ 'ಅಖಂಡ' ನಿರ್ದೇಶಕ ಶ್ರೀನು ಪಾರ್ಟ್ 2 ಬರುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದರು. ಇಲ್ಲಿಂದ ಬಾಲಕೃಷ್ಣ ಅಭಿಮಾನಿಗಳಲ್ಲಿ ಹೊಸ ಆಸೆ ಚಿಗುರೊಡೆದಿದೆ. 'ಅಖಂಡ 2' ಯಾವಾಗ ಅನೌನ್ಸ್ ಅಗುತ್ತೋ ಎಂದು ಎದುರು ನೋಡುತ್ತಿದ್ದಾರೆ. ಆದರೆ, 'ಅಖಂಡ 2' ಹೇಗೆ ಶುರುವಾಗುತ್ತೆ ಅನ್ನುವ ಬಗ್ಗೆ ಜನರಲ್ಲಿ ಕುತೂಹಲ ದುಪ್ಪಟ್ಟಾಗಿದೆ.

'ಅಖಂಡ 2' ಕಥೆ ಬಗ್ಗೆ ಗೊಂದಲ
'ಅಖಂಡ' ಸಿನಿಮಾ ಒಂದು ಭಾವನಾತ್ಮಕ ಪತ್ರದಿಂದ ಕೊನೆಗೊಂಡಿತ್ತು. ಅದರಲ್ಲಿ ಅಗೋರ ತನ್ನ ಸಹೋದರನ ಮಗಳಿಗೆ ತೊಂದರೆಯಾದರೆ ಮತ್ತೆ ಹಿಂತಿರುಗುವುದಾಗಿ ಬರೆಯಲಾಗಿತ್ತು. ಆದರೆ, ಅಖಂಡ ಪಾರ್ಟ್ 2 ಮಾಡುವುದಕ್ಕೆ ಇದು ಬಲವಾದ ಕಾರಣ ಅಲ್ಲವೆಂದು ಹೇಳಲಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಥೆಗಿಂತ ಬಾಲಯ್ಯ ಅವರ ಇಮೇಜ್ ಹಾಗೂ ಮಾಸ್ ಲುಕ್ ಮುಖ್ಯ ಆಗುತ್ತೆ ಅನ್ನುವ ಮಾತುಗಳು ಕೂಡ ಕೇಳಿ ಬಂದಿವೆ. ಹೀಗಾಗಿ ಬೊಯಾಪಟ್ಟಿ ಶ್ರೀನು ಅದ್ಯಾವ ರೀತಿ ಕಥೆ ಹೆಣೆಯುತ್ತಾರೆ? ಯಾವಾಗ ಅನೌನ್ಸ್ ಮಾಡುತ್ತಾರೆ ಎನ್ನುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಗಲ್ಲಾಪೆಟ್ಟಿಗೆಯಲ್ಲಿ 125 ಕೋಟಿ ಕಲೆಕ್ಷನ್
ಬಾಲಕೃಷ್ಣ ಅಭಿನಯದ 'ಅಖಂಡ' ಸಿನಿಮಾ ಬಾಕ್ಸಾಫೀಸ್ನಲ್ಲಿ ಬೇಜಾನ್ ಸದ್ದು ಮಾಡಿದೆ. ಸುಮಾರು 125 ಕೋಟಿಗೂ ಅಧಿಕ ಮೊತ್ತವನ್ನು ಕಲೆಹಾಕಿದೆ. ಸಿನಿಮಾ ಬಿಡುಗಡೆಗೊಂಡ ಕಡೆಯಲ್ಲೆಲ್ಲಾ ಚಿತ್ರಕ್ಕೆ ಸೂಪರ್ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲೂ ಕರ್ನಾಟಕದಲ್ಲಿಯೇ ಸುಮಾರು 12 ಕೋಟಿಗೂ ಅಧಿಕ ಮೊತ್ತವನ್ನು ಕಲೆಹಾಕಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಹೀಗಾಗಿ 'ಅಖಂಡ 2' ಸಿನಿಮಾ ನಿರ್ಮಾಣದ ಬಗ್ಗೆ ಚಿತ್ರತಂಡ ಚಿಂತಿಸುತ್ತಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.


Click it and Unblock the Notifications











