Don't Miss!
- News ಬೆಂಗಳೂರಲ್ಲಿ ನಿತ್ಯ 10 mld ಸಂಸ್ಕರಿಸಿದ ನೀರು ಪೂರೈಕೆ: BWSSB
- Sports Rishabh Pant: ಟಿ20 ವಿಶ್ವಕಪ್ಗೆ ರಿಷಭ್ ಪಂತ್ ಭಾರತ ತಂಡದಲ್ಲಿರಬೇಕು
- Lifestyle ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
- Automobiles ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅತಿಯಾದ ಪ್ರಚಾರ ನಿನಗೆ ಮುಳುವಾಗದಿರಲಿ ಶಿವ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 101ನೆ ಚಿತ್ರ 'ಶಿವ' ನಾಡಿದ್ದು ಅಂದರೆ ಆಗಸ್ಟ್ 24, 2012 ರಂದು ತೆರೆಗೆ ಬರಲಿರುವುದು ಭಾರಿ ಪ್ರಚಾರದ ಮೂಲಕ ಎಲ್ಲರಿಗೂ ತಿಳಿದ ವಿಷಯ. ಸಾಕ್ಷಾತ್ ಶಿವನೇ ಭೂಮಿಗೆ ಬರುತ್ತಿರುವಂತೆ ಮಾಡುತ್ತಿರುವ ಪ್ರಚಾರವನ್ನು ನೋಡಿ ಕನ್ನಡ ಸಿನಿಪ್ರೇಕ್ಷಕರಲ್ಲಿ ಕೆಲವರು ಕಂಗಾಲಾಗಿದ್ದಾರೆ. ಕಾರಣ, ಅತಿ ಪ್ರಚಾರದಿಂದ ಕೆಲವು ಒಳ್ಳೆಯ ಚಿತ್ರಗಳು ನೆಲಕಚ್ಚಿರುವ ಉದಾಹರಣೆ ನಮ್ಮಲ್ಲಿವೆ.
ಸಿನಿಮಾಕ್ಕೆ ಪ್ರಚಾರದ ಅಗತ್ಯವೇನೋ ಸರಿ. ಆದರೆ, ಈ ಮಟ್ಟಿಗೆ ಕೊಡುತ್ತಿರುವ ಪ್ರಚಾರವನ್ನು ಜನರು 'ಗಿಮಿಕ್' ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ ಎಂಬುದು ಚಿತ್ರತಂಡದ ಗಮನಕ್ಕಿರಲಿ. 'ಶಿವ' ಚಿತ್ರವನ್ನು ಸಾಕ್ಷಾತ್ ಶಿವನಿಗೆ ಹೋಲಿಕೆ ಮಾಡಲಾಗುತ್ತಿರುವುದು ಹಾಗೂ ಅದಕ್ಕೆ ಬೇಕಾದ ಡೈಲಾಗುಗಳನ್ನು ಚಿತ್ರದಲ್ಲಿ ಬಳಸಿರುವುದು ಚಿತ್ರದ ಟ್ರೈಲರ್ ನೋಡಿದರೆ ಅರ್ಥವಾಗುವಂತಿದೆ. 'ಮಾಸ್' ಡೈಲಾಗ್ ಗಳು ಅತಿಯಾಯ್ತು ಎಂಬ ಕೆಲವರ ವಾದಕ್ಕೆ ಚಿತ್ರ ನೋಡದೆ ನಿರ್ಧರಿಸುವುದು ಸರಿಯಲ್ಲ ಎಂಬ ಇನ್ನೊಂದು ವಾದವೂ ಜೊತೆಯಲ್ಲೇ ಕೇಳಿಬರುತ್ತಿದೆ.
ಪ್ರಚಾರದ ತಂತ್ರಗಳಲ್ಲಿ ಮುಖ್ಯವಾಗಿ ಎದ್ದು ಕಾಣುತ್ತಿರುವುದು 'ಶಿವ' ಚಿತ್ರದ ಚಿತ್ರೀಕರಣದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಬಳಕೆಯಾದ ಶಿವನ ಮೂರ್ತಿಯನ್ನು ಕೆಜಿ ರಸ್ತೆಯ ಸಂತೋಷ್ ಚಿತ್ರಮಂದಿರದ ಮುಂದೆ ಸಾರ್ವಜನಿಕ ಪ್ರದರ್ಶನಕ್ಕೆ ಇಟ್ಟಿರುವುದು. ಇದೇನೂ ಹೊಸದಲ್ಲ. ಕಳೆದ ವರ್ಷದ ಸೂಪರ್ ಹಿಟ್ 'ಸಾರಥಿ' ಚಿತ್ರ ಬಿಡುಗಡೆ ವೇಳೆಯಲ್ಲೂ ಆ ಚಿತ್ರದಲ್ಲಿ ಬಳಸಿದ್ದ 'ಭುವನೇಶ್ವರಿ' ಬೃಹತ್ ವಿಗ್ರಹವನ್ನು ಚಿತ್ರ ಬಿಡುಗಡೆಯಾಗಿದ್ದ ನರ್ತಕಿ ಚಿತ್ರಮಂದಿರದ ಬಳಿ ಇಡಲಾಗಿತ್ತು.
ಅಂದಹಾಗೆ. ಜೋಗಿ ಪ್ರೇಮ್ ನಿರ್ದೇಶನದ ಶಿವಣ್ಣರ ಬಹುನಿರೀಕ್ಷೆಯ 100ನೆ ಚಿತ್ರ 'ಜೋಗಯ್ಯ' ಫ್ಲಾಪ್ ಆಗಿದೆ. ಈ 101ನೆ ಚಿತ್ರವನ್ನು ಯಶಸ್ವಿಗೊಳಿಸಲೇ ಬೇಕೆಂದು ಚಿತ್ರತಂಡ ಹಾಗೂ ಶಿವಣ್ಣರ ಅಭಿಮಾನಿಗಳು ಪಣ ತೊಟ್ಟಿದ್ದಾರೆ. ಆದರೆ ಶಿವಣ್ಣರ ಅಭಿಮಾನಿಗಳದೇ ಕೆಲವರ ಪ್ರಕಾರ, ಅತಿಯಾದ ಪ್ರಚಾರದಿಂದಲೇ 'ಜೋಗಯ್ಯ'ನಿಗೆ ಆ ಗತಿಯಾಗಿದ್ದು. ಹೀಗಾಗಿ 'ಶಿವ' ಚಿತ್ರದ ಭಾರಿ ಪ್ರಚಾರ ಕೆಲವರ ನಿದ್ದೆ ಕೆಡಿಸಿದೆ.
ನಿರ್ಮಾಪಕ ಕೆಪಿ ಶ್ರೀಕಾಂತ್ ತಮ್ಮ ಈ 'ಶಿವ' ಚಿತ್ರಕ್ಕೆ ಅತಿಯಾದ ಪ್ರಚಾರಕ್ಕೆ ಮೊರೆ ಹೋಗಿದ್ದಾರೆ ಎಂಬುದು ಹಲವರ ಅಭಿಪ್ರಾಯ. ಶ್ರೀಕಾಂತ್ ಇದೀಗ ಬಿಡುಗಡೆಗೆ ಕಾದಿರುವ ತಮ್ಮ'ಶಿವ' ಚಿತ್ರಕ್ಕೆ ತಮಿಳು, ತೆಲುಗು ಸ್ಟಾರ್ ನಟರಾದ ವಿಜಯ್, ನಾಗಾರ್ಜುನ ಹಾಗೂ ಚಿರಂಜೀವಿ ಅವರನ್ನು ಮಾತನಾಡಿಸಿ, ಅದನ್ನೂ ಚಿತ್ರದ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಶ್ರೀಕಾಂತ್ ಅವರ ಅತಿಯಾದ ಈ ನಡೆಗಳು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ. ಜೋಗಯ್ಯ ಸೋಲು ಕಣ್ಣ ಮುಂದಿರುವಾಗ ಕೆಲವರು ಈ ಭಾರಿ ಪ್ರಚಾರಕ್ಕೆ ಅಪಸ್ವರ ಎತ್ತಿದ್ದಾರೆ.
ಅಂದಹಾಗೆ, ಓಂ ಪ್ರಕಾಶ್ ರಾವ್ ನಿರ್ದೇಶನದ 'ಶಿವ' ಚಿತ್ರದಲ್ಲಿ ನಾಯಕ ನಟ ಶಿವಣ್ಣರಿಗೆ ರಾಗಿಣಿ ದ್ವಿವೇದಿ ನಾಯಕಿ. ಶಿವಣ್ಣರ 'ಮೈಲಾರಿ' ಚಿತ್ರದ ನಂತರ ಗುರುಕಿರಣ್ ಮತ್ತೊಮ್ಮೆ ಶಿವರಾಜ್ ಕುಮಾರ್ ಚಿತ್ರಕ್ಕೆ ಜತೆಯಾಗಿದ್ದಾರೆ. ಸತ್ಯ ಹೆಗಡೆ ಕ್ಯಾಮರಾ ಚಿತ್ರಕ್ಕಿದ್ದು ಚಿತ್ರ ತೀರಾ ಶ್ರೀಮಂತವಾಗಿ ಮೂಡಿಬಂದಿದೆ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿದೆ. ಇನ್ನೇನು 'ಶಿವ' ಪ್ರೇಕ್ಷಕರ ಮುಂದೆ ಪ್ರತ್ಯಕ್ಷವಾಗಲಿದೆ, ಫಲಿತಾಂಶಕ್ಕೆ ಹೆಚ್ಚು ಕಾಲ ಕಾಯಬೇಕಿಲ್ಲ. (ಒನ್ ಇಂಡಿಯಾ ಕನ್ನಡ)