ಸಂದರ್ಶನ : ಪ್ರಿಯಾಂಕ - ರಚಿತಾ ಮನಸ್ತಾಪದ ಬಗ್ಗೆ ಮನಸು ಬಿಚ್ಚಿದ ಉಪೇಂದ್ರ
Recommended Video
ಇತ್ತೀಚೆಗಷ್ಟೇ 'ಐ ಲವ್ ಯೂ' ಸಿನಿಮಾ 25 ದಿನಗಳತ್ತ ಸಾಗಿದ ಸಂಭ್ರಮಾಚರಣೆ ನಡೆದಿದೆ. ಚಿತ್ರದಲ್ಲಿ ಹಳೆಯ ಉಪೇಂದ್ರ ಮತ್ತೆ ಕಾಣಿಸಿಕೊಂಡಿದ್ದಾರೆಂದು ಸುದ್ದಿಯಾಗಿತ್ತು.
ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಉಪೇಂದ್ರ, ತಾವು ನಿರ್ದೇಶಿಸಿದರೆ ಅದು ಬೇರೆಯೇ ರೀತಿಯಲ್ಲಿ ಇರುತ್ತಿತ್ತು ಎಂದು ಹೇಳಿದ್ದರು. ಹಾಗಾದರೆ ಉಪೇಂದ್ರ ನಿರ್ದೇಶಿಸಿದ್ದರೆ 'ಐ ಲವ್ ವ್ಯೂ' ಚಿತ್ರದಲ್ಲಿ ಆಗುತ್ತಿದ್ದ ಬದಲಾವಣೆಗಳೇನು?, ರಚಿತಾ ಪ್ರಿಯಾಂಕ ಮನಸ್ತಾಪ ಆಗಿದ್ದೇಕೆ? ರಚಿತಾ ಹೇಳಿಕೆಗೆ ಅವರ ಪ್ರತಿಕ್ರಿಯೆ ಏನು? ಉಪೇಂದ್ರ ಅವರ ಮುಂದಿರುವ ಚಿತ್ರಗಳು ಯಾವುವು? ಪ್ರಜಾಕೀಯ ಬಗ್ಗೆ ಸಿನಿಮಾ ಮಾಡುತ್ತೀರ ಮೊದಲಾದ ಪ್ರಶ್ನೆಗಳಿಗೆ ಫಿಲ್ಮಿಬೀಟ್ ಮುಂದೆ ಅವರು ನೀಡಿರುವ ಎಕ್ಸ್ ಕ್ಲೂಸಿವ್ ಉತ್ತರಗಳು ಇಲ್ಲಿವೆ.

'ಐ ಲವ್ ಯು' ಚಿತ್ರದ ಕತೆ ಕೇಳಿದಾಗ ಮತ್ತು ಈಗ ಸಿನಿಮಾ ನೋಡಿದಾಗ ನಿಮಗೆ ಆಕರ್ಷಕ ಅನಿಸಿದ ಅಂಶವೇನು?
ನನಗೆ ಕತೆ ಕೇಳಿದಾಗ ಇಷ್ಟವಾಗಿದ್ದು, ಈಗ ಚಿತ್ರ ನೋಡುವಾಗ ನನಗೆ ಮಾತ್ರವಲ್ಲ ಎಲ್ಲರಿಗೂ ಇಷ್ಟವಾಗುತ್ತಿರೋದು ಚಿತ್ರದ ಕ್ಲೈಮ್ಯಾಕ್ಸ್. ಯಾಕೆಂದರೆ ಕೊನೆಯ ಹತ್ತು ನಿಮಿಷದಲ್ಲಿರುವ ಫ್ಯಾಮಿಲಿ ಸೆಂಟಿಮೆಂಟ್ ಚೆನ್ನಾಗಿ ವರ್ಕೌಟ್ ಆಗಿದೆ.

ಒಂದು ವೇಳೆ ನೀವೇ ಈ ಚಿತ್ರ ನಿರ್ದೇಶಿಸಿದ್ದರೆ ಕ್ಲೈಮ್ಯಾಕ್ಸ್ ಬದಲಾಯಿಸುತ್ತಿದ್ದಿರಾ?
ಖಂಡಿತವಾಗಿ ಇಲ್ಲ. ಯಾಕೆಂದರೆ ಕ್ಲೈಮ್ಯಾಕ್ಸೇ ಈ ಚಿತ್ರದ ಜೀವಾಳ. ಈ ಸಿನಿಮಾ 'ಹೀಗೇನೇ' ಇರಬೇಕು. ಇದರಲ್ಲಿ ನಟನಾಗಿ ನಾನು ಹೀಗೆಯೇ ಇರಬೇಕು. ಇಲ್ಲಿ ನಾನು ನಿರ್ದೇಶಕನಾಗಿ ಥಿಂಕ್ ಮಾಡಿಲ್ಲ. ಕಲಾವಿದನಾಗಿ ಅಭಿನಯಿಸಿದ್ದೀನಿ.

ಆದರೆ ನೀವು ನಿರ್ದೇಶಿಸಿರುವ ಚಿತ್ರದಲ್ಲಿ ನಿಮ್ಮನ್ನು ತೋರಿಸಿರುವಂತೆ ಇಲ್ಲಿ ತೋರಿಸಲಾಗಿತ್ತಲ್ಲವೇ?
ಹೌದು. ನನ್ನ ಆರಂಭದ ಇಮೇಜ್ ಇರಿಸಿಕೊಂಡು ಚಿತ್ರ ಮಾಡಲು ತುಂಬ ಜನ ನಿರ್ದೇಶಕರು ಹಿಂದೆಯೂ ಬಂದಿದ್ದರು. ನಾನು ಒಪ್ಪಿರಲಿಲ್ಲ. ಯಾಕೆಂದರೆ ಅದಕ್ಕೆ ತಕ್ಕಂತೆ ಸಬ್ಜೆಕ್ಟ್ ಕೂಡ ಕೂಡಿ ಬರಬೇಕು. ಇಲ್ಲಿ ಹಾಗೆ ಕೂಡಿಕೊಂಡು ಬಂದಕಾರಣ ಸಿನಿಮಾದಲ್ಲಿ ನನ್ನ ಹಳೆಯ ಇಮೇಜ್ ಬಳಸಲಾಗಿದೆ. ಇಲ್ಲಿ ನಾನು ನಿರ್ದೇಶನ ಮಾಡಿಲ್ಲವಾದರೂ ಚಂದ್ರು ಅವರು ಯಾವ ರೀತಿ ವರ್ತಿಸಬೇಕೆಂದು ಆಯ್ಕೆಗಳನ್ನು ನೀಡಿದಾಗ ನಾನು ಕೂಡ ಸಲಹೆಗಳನ್ನು ನೀಡಿದ್ದೇನೆ. ನಮ್ಮಿಬ್ಬರ ಸಮ್ಮತದಲ್ಲೇ ಚಿತ್ರೀಕರಣ ನಡೆದಿದೆ. ಸಾಮಾನ್ಯವಾಗಿ ಎಲ್ಲ ಚಿತ್ರಗಳು ಹಾಗೆ ತಾನೇ?

'ಐ ಲವ್ ವ್ಯೂ ಟೂ' ಅಂತ ಈ ಚಿತ್ರದ ಎರಡನೇ ಭಾಗ ಬರಲಿರುವ ಸುದ್ಧಿ ನಿಜಾನ?
ಹಾಗೇನಿಲ್ಲ. ಈ ಯಶಸ್ಸನ್ನು ಎನ್ಕ್ಯಾಶ್ ಮಾಡಲಿಕ್ಕಾಗಿ ಮತ್ತೊಂದು ಭಾಗ ಮಾಡುವುದರಲ್ಲಿ ನನಗೆ ನಂಬಿಕೆಯಿಲ್ಲ. ಆದರೆ ನಿರ್ದೇಶಕ ಚಂದ್ರು ಅವರು ನನ್ನ ಕಾಂಬಿನೇಶನ್ ನಲ್ಲಿ ಮತ್ತೊಂದು ಚಿತ್ರ ಪ್ಲ್ಯಾನ್ ಮಾಡುತ್ತಿರುವುದೇನೋ ನಿಜ. ಭಟ್ ಅದು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಸರಿಯಾಗಿ ತೀರ್ಮಾನ ಮಾಡಿದ ಬಳಿಕವಷ್ಟೇ ಆ ಬಗ್ಗೆ ಮಾಹಿತಿ ನೀಡಬಹುದು.

ರಚಿತಾ ರಾಮ್ ಅವರು ನಿಮ್ಮ ಸೂಚನೆಯ ಮೇರೆಗೆ ಅಂಥ ಹಾಡಿನಲ್ಲಿ ಅಭಿನಯ ನೀಡಿದ್ದಾಗಿ ಹೇಳಿದ್ದಕ್ಕೆ ನಿಮ್ಮ ಪತ್ನಿ ವಿರೋಧಿಸಿ ಮಾತನಾಡಿದ್ದರು. ಆದರೆ ನಿಮಗೆ ಅದರಲ್ಲಿ ವಿರೋಧಗಳೇನೂ ಆಗಿಲ್ಲವೇ?
ರಚಿತಾ ಅವರಿಗೆ ಚಿತ್ರ ನೋಡಿದ ಬಳಿಕ ಅವರಿಗೆ ಸಿಕ್ಕ ಪ್ರತಿಕ್ರಿಯೆಯಿಂದ ಡಿಸ್ಟರ್ಬ್ ಆಗಿ ಏನೋ ಹೇಳಿದ್ದಾರೆ. ಎಲ್ಲೋ ಏನೋ ಪ್ರಶ್ನೆಗೆ ಉತ್ತರಿಸುವಾಗ ಅವರು ನನ್ನ ಸೂಚನೆಯಂತೆ ನಟಿಸಿದ್ದಾಗಿ ಹೇಳಿರುತ್ತಾರೆ. ಉದ್ದೇಶಪೂರ್ವಕವಾಗಿ ಏನೂ ಹೇಳಿರಲ್ಲ. ಹಾಗಾಗಿ ಅದನ್ನು ನಾನು ಗಂಭೀರವಾಗಿ ತೆಗೆದುಕೊಂಡು ಪ್ರತಿಕ್ರಿಯಿಸಲ್ಲ. ಯಾಕೆಂದರೆ, ಚಿತ್ರೋದ್ಯಮದಲ್ಲಿ ಪ್ರತಿಯೊಬ್ಬರ ಮಾತುಗಳನ್ನು ಸೀರಿಯಸ್ಸಾಗಿ ತಗೊಂಡು ಯೋಚಿಸುತ್ತಾ ಕುಳಿತರೆ ಯಾರೊಂದಿಗೂ ಮಾತನಾಡುವ ಹಾಗೆಯೇ ಇಲ್ಲ! ಹಾಗಂತ ನಾನು ಪ್ರಿಯಾಂಕ ಪ್ರತಿಕ್ರಿಯಿಸಿದ್ದು ತಪ್ಪು ಎಂದು ಹೇಳಲಾರೆ. ಅವರಿಗೆ ತಮ್ಮ ಗಂಡನ ಮೇಲೆ ಆಪಾದಿಸಿದ ಹಾಗೆ ಕಂಡಾಗ ನೀಡಿದಂಥ ಸಹಜವಾದ ಪ್ರತಿಕ್ರಿಯೆ ಅದು.

ಹೊರಗಿನಿಂದ ನೋಡುವಾಗ ಏನೋ ಚಿತ್ರದ ಪ್ರಚಾರಕ್ಕಾಗಿ ಡ್ರಾಮ ಮಾಡುತ್ತಿದ್ದಾರೇನೋ ಎಂಬ ಸಂದೇಹ ಮೂಡುವಂತಿತ್ತು. ಆದರೆ ಇತ್ತೀಚಿಗೆ ಅವಾರ್ಡ್ ಕಾರ್ಯಕ್ರಮವೊಂದರಲ್ಲಿ ಪ್ರಿಯಾಂಕ ಮತ್ತು ರಚಿತಾ ಪರಸ್ಪರ ಭೇಟಿಯಾಗದೇ ಹೊರಟು ಹೋಗಿದ್ದನ್ನು ಕಂಡರೆ ಅವರ ಮಧ್ಯೆ ನಿಜವಾದ ಮುನಿಸೇ ಉಂಟಾದಂತಿದೆ?
ನಮ್ಮಲ್ಲಿ ಮಹಿಳೆಯರು ಸಾಮಾನ್ಯವಾಗಿ ಸೆನ್ಸಿಟಿವ್ ಆಗಿರುತ್ತಾರೆ. ಎಲ್ಲವನ್ನು ಎಲ್ಲರೂ ಒಂದೇ ರೀತಿ ಸ್ವೀಕರಿಸಬೇಕು ಎಂದು ನಾವು ಹೇಳಲು ಸಾಧ್ಯವಿಲ್ಲ. ನಿಜಕ್ಕೂ ದೊಡ್ಡದೇನೂ ಸಂಭವಿಸಿಲ್ಲ ಎಂದಾದಾಗ ಅದನ್ನು ಹಾಗೇ ತಣ್ಣಗಾಗಲು ಬಿಡಬೇಕು. ಎಳೆಯುತ್ತಾ ಹೋದಷ್ಟು ಅಸಮಾಧಾನವೇ ಅಧಿಕ.

ಮಾಧ್ಯಮಗಳು ಕೂಡ ಈ ಘಟನೆಯನ್ನು ಮತ್ತೆ ಮತ್ತೆ ಕೆದಕಿದ್ದೂ ವಿಷಯ ಗಂಭೀರವಾಗಲು ಒಂದು ಕಾರಣ ಅನಿಸುತ್ತದೆ ಅಲ್ಲವೇ?
ನಿಜ. ಎಲ್ಲರೂ ಅದೇ ಪ್ರಶ್ನೆಯನ್ನೇ ಪದೇ ಪದೇ ಕೇಳುತ್ತಾ ಹೋದರೆ ಯಾರಿಗಾದರೂ ಹರ್ಟಾಗೋದು ಸಹಜ ಅಲ್ವಾ? ಬಹುಶಃ ಆನಂತರ ರಚಿತಾ ಅವರು ಚಿತ್ರದ ಮಾಧ್ಯಮಗೋಷ್ಠಿಗಳಲ್ಲಿ ಭಾಗವಹಿಸದೇ ಇರೋದಿಕ್ಕೆ ಅದೇ ಕಾರಣ ಆಗಿದ್ದರೂ ಅಚ್ಚರಿ ಏನಿಲ್ಲ! ಆದರೆ ಜನ ಎಲ್ಲ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಅವರು ಕುಟುಂಬ ಸಮೇತ ಬಂದು ಸಿನಿಮಾ ನೋಡಿ ಹೊಗಳ್ತಾ ಇದ್ದಾರೆ.

ನೀವು ಪ್ರಜಾಕೀಯದ ಕಾನ್ಸೆಪ್ಟ್ ಬಗ್ಗೆ ಒಂದು ಆಕರ್ಷಕವಾದ ಸಿನಿಮಾ ಮಾಡಬಾರದೇಕೆ?
ಪ್ರಜಾಕೀಯದ ಕುರಿತಾದ ನನ್ನ ಯೋಜನೆಗಳ ಬಗ್ಗೆ ಹೇಳಬೇಕಾದರೆ ಅದನ್ನೇ ಸಿನಿಮೀಯವಾಗಿದೆ ಎನ್ನುತ್ತಿದ್ದಾರೆ. ಇನ್ನು ಯೋಜನೆಯನ್ನೇ ಸಿನಿಮಾ ಮಾಡಿದರೆ ಪ್ರಜಾಕೀಯ ಸಿನಿಮಾಕ್ಕೆ ಮಾತ್ರ ಮೀಸಲು ಎಂಬಂತಾದೀತೇನೋ! ಆದರೆ ನನ್ನ ಕಾನ್ಸೆಪ್ಟ್ ತೀರ ನೈಜತೆಯ ಮೇಲೆ ನಿಂತಿದೆ. ರಾಜಕಾರಣಿಗಳನ್ನು ಸಂಬಳಕ್ಕೆ ಕೆಲಸ ಮಾಡುವವರಂತೆ ದುಡಿಸಬೇಕು ಎನ್ನುವುದಷ್ಟೇ ನನ್ನ ಮಾತು. ಅದು ಬಿಟ್ಟು ಐವತ್ತು ಕೋಟಿ ಖರ್ಚು ಮಾಡಿ ಪದವಿಗೆ ಬರುವವರು ಸಮಾಜ ಸೇವೆಗಿಂತ ಖರ್ಚಾದ ಹಣದ ದುಪ್ಪಟ್ಟು ಸಂಪಾದನೆಗೆಂದೇ ಬಂದಿರುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಜನ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ ಅಷ್ಟೇ.

ಆದರೆ, ನಿಮ್ಮ ಸಿನಿಮಾದ ಮೂಲಕ ಯೋಜನೆಗಳು ತೆರೆಗೆ ಬಂದಲ್ಲಿ ಅದು ಹೆಚ್ಚು ಮಂದಿಯನ್ನು ರೀಚಾಗಬಹುದಲ್ಲ ಎಂದು?
ಸಿನಿಮಾದಲ್ಲಿ ನೋಡಿ ಅರ್ಥ ಮಾಡಿಕೊಳ್ಳುವಂಥ ವಿಷಯ ಏನೂ ಇಲ್ಲ. ಅಥವಾ ಸಿನಿಮಾ ನೋಡಿದವರಷ್ಟೇ ಅರ್ಥ ಮಾಡಿಕೊಳ್ಳಬೇಕು ಅಂತಾನೂ ಇಲ್ಲ.'ಸೂಪರ್' ಚಿತ್ರದಲ್ಲಿ ಸ್ವಲ್ಪ ವಿಚಾರ ಸಿನಿಮ್ಯಾಟಿಕ್ ಆಗಿ ಹೇಳಿದ್ದೆ. ನೈಜವಾಗಿ ಅರ್ಥಮಾಡಿಕೊಳ್ಳಲೆಂದೇ ನಾನು 'ಪ್ರಜಾಕೀಯ' ಎಂಬ ಒಂದು ವೇದಿಕೆ ಮಾಡಿದ್ದೇನೆ. ಜನ ಇದನ್ನು ಬಳಸಿಕೊಳ್ಳಬೇಕು. ಉಳಿದಿದ್ದು ಮುಂದೆ ನೋಡೋಣ.

ನಿಮ್ಮ ಹೊಸ ಸಿನಿಮಾಗಳ ಬಗ್ಗೆ ಹೇಳಿ
'ಬುದ್ಧಿವಂತ 2' ಮತ್ತು ರವಿಚಂದ್ರನ್ ಅವರೊಂದಿಗೆ ನಟಿಸುತ್ತಿರುವ 'ರವಿಚಂದ್ರ' ಚಿತ್ರಗಳ ಚಿತ್ರೀಕರಣ ನಡೆದಿದೆ. ಇನ್ನು 'ಹೋಮ್ ಮಿನಿಸ್ಟರ್' ಎಂಬ ಚಿತ್ರ ಡಬ್ಬಿಂಗ್ ಹಂತದಲ್ಲಿದೆ. ಬಹುಶಃ ಅದು ಇನ್ನು ಮೂರು ತಿಂಗಳೊಳಗೆ ತೆರೆಗೆ ಬರಬಹುದು.


Click it and Unblock the Notifications











