30 ದಿನ 'ನವ್ಯಾಸಿ' ನಾಟಕ ಪ್ರದರ್ಶಿಸಿ ಉತ್ತರ ಕರ್ನಾಟಕದಲ್ಲಿ ಖ್ಯಾತಿ ಗಳಿಸಿದ ಅಕ್ಷತಾ ಪಾಂಡವಪುರ!
ಮೊದಲಿನಿಂದಲೂ ಹೊಸದೇನಾದರೂ ಹುಡುಕಬೇಕು. ಏನಾದರೂ ಹೊಸ ಪ್ರಯೋಗಗಳನ್ನು ಮಾಡಬೇಕು ಅನ್ನುವುದು ರಂಗಭೂಮಿ ಕಲಾವಿದೆ, ಲೇಖಕಿ, ನಟಿಯ ಅಕ್ಷತಾ ಪಾಂಡವಪುರ ಅವರ ಛಲ. ಸಿನಿಮಾ, ನಟನೆ, ರಂಗಭೂಮಿ, ರಿಯಾಲಿಟಿ ಶೋ ಅಂತ ಕಾಲಿಟ್ಟ ಕಡೆಯಲ್ಲ ಹೊಸದೇನಾದರೂ ಪ್ರಯೋಗ ಮಾಡಬೇಕು ಎನ್ನುವ ತುಡಿತ ಇವರದ್ದು.
ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಅಕ್ಷತಾ ಪಾಂಡವಪುರ ಚಿರಪರಿಚಿತರು. ನೀನಾಸಂ ಮತ್ತು ಎನ್ಎಸ್ಡಿ ಅಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಅಕ್ಷತಾ ಅವರು ಪಳಗಿದ್ದಾರೆ. ರಂಗಭೂಮಿಯಲ್ಲಿ ಏನಾದರೂ ಹೊಸ ಪ್ರಯೋಗ ಮಾಡಲೇ ಬೇಕೆಂದು ಹಠಕ್ಕೆ ಬಿದ್ದು, ತಾನೇ ಬರೆದ ಲೀಕ್ ಔಟ್ ಕಥನವನ್ನು ವಿಭಿನ್ನವಾಗಿ ಪ್ರದರ್ಶನ ಮಾಡಿ ಬಂದಿದ್ದಾರೆ.
ಮನೆಯಲ್ಲಿ ಹಸುಗೂಸನ್ನು ಬಿಟ್ಟು, 30ಕ್ಕೂ ಹೆಚ್ಚು ದಿನ ಉತ್ತರ ಕರ್ನಾಟಕದ ಹಳ್ಳಿಹಳ್ಳಿಗಳಿಗೆ ತಿರುಗಿ ಹೊಸ ಪ್ರಕಾರದ ನಾಟಕವನ್ನು ಪ್ರದರ್ಶನ ಮಾಡಿದ್ದಾರೆ. ಜನರೊಂದಿಗೆ ಬರೆತು. ಅವರನ್ನೂ ನಾಟಕದೊಳಗೆ ಸೇರಿಸಿಕೊಂಡು 40 ಪ್ರದರ್ಶನ ನೀಡಿ ಸಾಂಸ್ಕೃತಿಕ ಲೋಕಕ್ಕೆ ಜೀವ ತುಂಬಿದ್ದಾರೆ. ಈ ಹೊಸ ಸಾಹಸದ ಬಗ್ಗೆ ಅಕ್ಷತಾ ಪಾಂಡವಪುರ ಫಿಲ್ಮಿ ಬೀಟ್ ಜೊತೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಒಂದು ತಿಂಗಳ ಜರ್ನಿ ಬಗ್ಗೆ ಹೇಳಿ?
"ಒಂದು ತಿಂಗಳು ಆದ ಮೇಲೆ ಬಂದಿದ್ದೀನಿ. ಇನ್ನೂ ಆ ಗುಂಗಿನಲ್ಲಿಯೇ ಇದ್ದೀನಿ. ತುಂಬಾ ತುಂಬಾ ಒಳ್ಳೆಯ ಅನುಭವ. ಅಷ್ಟು ಸುಲಭ ಆಗಿರಲಿಲ್ಲ. ಗೊತ್ತಿಲ್ಲದ ಊರಿಗೆಲ್ಲಾ ಹೋಗಿ ಬರುವುದು. ಇಲ್ಲಿಂದ ಹೊರಡುವಾಗ ಕೇವಲ 14 ಶೋ ಅಷ್ಟೇ ಫಿಕ್ಸ್ ಆಗಿತ್ತು. ಬಳಿಕ ನಾಟಕಗಳನ್ನು ನೋಡಿದ ಮತ್ತಷ್ಟು ಶೋ ಹೆಚ್ಚಾಯಿತು. ಅದು ಇನ್ನಷ್ಟು ಖುಷಿಕೊಟ್ಟಿದೆ."

ಹೊಸ ಪ್ರಯೋಗ ಹುಟ್ಟಿದ್ದೇಗೆ?
" ನಾನು ಕಟ್ಟಿದ ಶೋ ಹೇಗಿದೆ ಅಂದರೆ, ಅದು ನನ್ನದೇ ಹುಡುಕಾಟ. ಅದು ಪ್ರೇಕ್ಷಕರ ಮುಂದೆ ಹೋಗಿ ನಿಲ್ಲದೆ ಇದ್ದರೆ ನಡೆಯುವುದಿಲ್ಲ. ಈ ನಾಟಕದ ಹೊಸ ಪ್ರಕಾರದ ಹುಡುಕಾಟದಲ್ಲಿ ನಮಗೂ ಒಂದು ಟಾಸ್ಕ್ ಇತ್ತು. ಒಂದು ಶೋ ನೋಡಿ, ಮತ್ತೊಂದು ಶೋಗೆ ಕರೀತಾರೆ ಅಂದರೆ, ಆ ಶೋ ಎಷ್ಟು ಇಷ್ಟ ಆಗಿದೆ ಅಂತ ನೀವೇ ಯೋಚನೆ ಮಾಡಿ. ನಾನು ಪುಸ್ತಕ ಬರೆದೆ. 'ಲೀಕ್ ಔಟ್' ಅಂತ. ಇದರಲ್ಲಿ 11 ಕಥೆಗಳಿವೆ. ಇದನ್ನು ಯಾರೋ ಒಂದಿಷ್ಟು ಮಂದಿ ಓದುವುದಕ್ಕಿಂತ, ನನ್ನ ಕಥೆಯನ್ನು ಸಂಬಂಧ ಪಟ್ಟವರಿಗೆ ಮುಟ್ಟಿಸಬೇಕಿತ್ತು. ಅದನ್ನು ಹೇಗೆ ಮುಟ್ಟಿಸುವುದು ಅಂತ ಯೋಚಿಸಿದಾಗ, ನನಗೆ ಅನಿಸಿದ್ದು, ನಾನು ಜನರ ಹತ್ತಿರ ಹೋಗಬೇಕು ಅಂತ ಅನಿಸಿತ್ತು. ಅದಕ್ಕೆ ಆಪ್ತ ರಂಗ ಪ್ರಯೋಗ ಮಾಡಲು ಮುಂದಾದೆ."

ಈ ಹೊಸ ಪ್ರಯೋಗ ಹೇಗೆ ನಡೆಯುತ್ತೆ?
"ಆಪ್ತರಂಗ ಪ್ರಯೋಗ ಮಾಡುವಾಗ ತುಂಬಾ ದೊಡ್ಡ ಗುಂಪಿಗೆ ಮಾಡಲು ಆಗುವುದಿಲ್ಲ. ಒಂದು ವೇಳೆ ಮಾಡಿದರೆ, ಅದರ ಪ್ರಾಮುಖ್ಯತೆ ಕಡಿಮೆ ಆಗುತ್ತದೆ. ಈ ನಾಟಕ ಪ್ರಕಾರದಲ್ಲಿ ನಾನು ಅವರ ಕಣ್ಣಲ್ಲಿ ಕಣ್ಣಿಟ್ಟು ಮಾತಾಡುತ್ತೇನೆ. ಅವರ ಕೈ ಹಿಡಿಯುತ್ತೇನೆ. ಅವರು ನನ್ನ ಬಳಿ ಬರುತ್ತಾರೆ. ಹೀಗೆ ನಾಟಕ ಸಾಗುತ್ತೆ. ಇಲ್ಲದೆ ಹೋದರೆ ಅದು ಪರ್ಫಾಮೆನ್ಸ್ ಆಗುತ್ತೆ. ಇದು ಪ್ರದರ್ಶನ ಅಲ್ಲ. ಇದೊಂದು ಪ್ರಯೋಗ. ಭಾವನೆ ಭಾವನೆಗಳನ್ನು ಶೇರ್ ಮಾಡಿಕೊಳ್ಳುವುದು. ನಾನು ಹೋಗಿ ಶೋ ಶುರು ಮಾಡುವವರೆಗೂ, ಈ ಶೋ ಹೀಗೆ ಆಗುತ್ತೆ ಅನ್ನುವುದು ಗೊತ್ತಾಗುವುದಿಲ್ಲ."

ಈ ನಾಟಕದ ಸಮಯವೆಷ್ಟು?
" ಈ ನಾಟಕ ಒಂದೂವರೆ ತಾಸಿನಿಂದ ಒಂದೂ ಮುಕ್ಕಾಲು ತಾಸಿನವರೆಗೂ ನಡೆಯುತ್ತೆ. ಒಂದು ಪ್ರದರ್ಶನ ಅಂತೂ ಎರಡು ಗಂಟೆಗೆ 10 ನಿಮಿಷ ಇತ್ತು. ಈ ನಾಟಕಗಳಲ್ಲಿ ಎಷ್ಟೋ ಮಹಿಳೆಯ ಅತ್ತಿದ್ದಾರೆ. ಅವರ ಕಥೆಗಳನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಅವರಿಗೆ ಸಮಾಧಾನ ಮಾಡಿ ಮುಂದೆ ನಾಟಕವನ್ನು ತೆಗೆದುಕೊಂಡು ಹೋಗಬೇಕು."

ಉತ್ತರ ಕರ್ನಾಟಕವೇ ಯಾಕೆ?
" ಉತ್ತರ ಕರ್ನಾಟಕವನ್ನೇ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣವಿದೆ. ನಾವು ಅವರಿಗೆ ಪರಿಚಯವಿದ್ದಿದ್ದರಿಂದ ಅವರಿಗೆ ನಾವು ಕನೆಕ್ಟ್ ಆಗುತ್ತೇವೆ. ಅವರು ಸ್ಟಾರ್ಗಳನ್ನು, ನಟರನ್ನ-ನಟಿಯರನ್ನ, ಟಿಕ್ ಟಾಕ್ ಮಾಡಿದ್ದವರನ್ನ ಬೇರೆಯದ್ದೇ ರೀತಿ ನೋಡಿರುತ್ತಾರೆ. ನಾವು ಹಾಗಲ್ಲ. ನಿಮ್ಮ ಜೊತೆ ಬಂದು ಕೆಲಸ ಮಾಡುವವರು ಎಂದು ತೋರಿಸಬೇಕಿತ್ತು. ಕೆಲವರೆಲ್ಲ ವೈಯುಕ್ತಿಕವಾಗಿ ಕನೆಕ್ಟ್ ಆಗಿದ್ದಾರೆ. ಅವರ ಕಥೆಯನ್ನು ಹೇಳಿಕೊಂಡಿದ್ದಾರೆ. ಒಬ್ಬರು ಅಜ್ಜಿಯಂತೂ ನಿನ್ನ ಜೊತೆ ಬರುತ್ತೇನೆ ಅಂತ ಬ್ಯಾಗ್ ಪ್ಯಾಕ್ ಮಾಡಿಕೊಂಡಿದ್ದರು. ಅಷ್ಟು ಪ್ರಭಾವ ಬೀರಿದೆ."

ನಿಮಗೆ ಎದುರಾದ ಸಮಸ್ಯೆಗಳೇನು?
"ದುರ್ಗಾ ದೇವಿಯ ಮೂರ್ತಿಯ ಮುಂದೆ ನಾಟಕ ಮಾಡಿದ್ದೇವೆ. ವಾಡೆಯೊಳಗೆ ನಾಟಕ ಮಾಡಿದ್ದೇವೆ. ಛತ್ರದೊಳಗೆ, ವರಾಂಡ, ಬೀದಿಯಲ್ಲಿ ನಾಟಕ ಮಾಡಿದ್ದೇನೆ. ಎಲೆಕ್ಟ್ರಿಕ್ ಪವರ್ ಕೊಟ್ಟಿದ್ದರೆ ಸಾಕು ಅನ್ನುವ ಹಾಗಿತ್ತು. ಲೈಟ್, ಸೆಟ್ಟು, ಸೌಂಡ್ ಎಲ್ಲವೂ ನಂದೇ ಆಗಿತ್ತು. ಕೆಲವೊಮ್ಮೆ ತುಂಬಾ ಜನರು ಸೇರುತ್ತಿದ್ದರು. ಆದರೆ ಅಷ್ಟು ದೊಡ್ಡ ಗುಂಪಿಗೆ ನಾಟಕ ಮಾಡಲು ಸಾಧ್ಯವಾಗುತ್ತಿರಲಿಲ್ಲ. "

ಇದಕ್ಕೆಲ್ಲಾ ಆಯೋಜಕರು ಯಾರು?
ಈ ಶೋಗಳನ್ನು ಜನರೇ ಆಯೋಜನೆ ಮಾಡಿದ್ದರು. ಈ ನಾಟಕಗಳನ್ನು ಆರ್ಥಿಕವಾಗಿ ಸಬಲಳಾಗಬೇಕು ಅಂತ ಮಾಡಿದ್ದಲ್ಲ. ಹಾಗಂತ ನಾನೇ ಖರ್ಚು ಮಾಡಿ ನಾಟಕ ಮಾಡಲು ಇಷ್ಟವಿರಲಿಲ್ಲ. ಒಂದು ಸಣ್ಣ ಅಮೌಂಟ್ ಆದರೂ ಕೊಟ್ಟರೆ, ಅವರಿಗೂ ಬೆಲೆ. ನಮಗೂ ಬೆಲೆ. ಒಂದು ತಿಂಗಳ ಕಾಲ ಎಲ್ಲೋ ಒಂದು ಕಡೆ ಊಟ ಆಗುತ್ತೆ. ಉಳಿದ ವೇಳೆ ಏನು ಮಾಡುವುದು? ಒಂದು ತಿಂಗಳು ನಡೆಯಬೇಕಲ್ಲ. ಅದನ್ನೆಲ್ಲಾ ಆಯೋಜಕರೇ ನೋಡಿಕೊಂಡರು. ಪ್ರಯೋಗ ಯಶಸ್ವಿ ಆಯಿತು."

ನಿಮ್ಮ ಹೊಸ ಆಲೋಚನೆ ಏನು?
" ಈಗ ಇಲ್ಲಿವರೆಗೂ ನಾನೇ ಬರೆದ ಕಥೆಗಳನ್ನು ಇಟ್ಟುಕೊಂಡು ನಾಟಕ ಮಾಡಿದೆ. ಮುಂದೆ ಬೇರೆಯವರು ಬರೆದ ಕಥೆಗಳನ್ನು ತೆಗೆದುಕೊಂಡು ನಾಟಕ ಮಾಡುತ್ತೇನೆ. ಇದೇ ಆಪ್ತರಂಗ ಪ್ರಯೋಗ ಮಾಡುವ ಮೂಲಕ ಬೇರೆ ಬೇರೆ ಆಯಾಮಗಳಲ್ಲಿ ಬೇರೆ ಬೇರೆ ಜಿಲ್ಲೆಗಳಲ್ಲಿ ಮಾಡುತ್ತೇನೆ. 10 ದಿನ ಅಥವಾ ಒಂದು ವಾರ ಟೂರ್ ಮಾಡಿ ಮಾಡುತ್ತೇನೆ."

ನಿಮ್ಮ ಇಲಾಖೆ ಬೆಂಬಲ ಸಿಕ್ಕಿತೇ?
" ಇಲಾಖೆ ಅಂದರೆ ನನಗೆ ನಗು ಬರುತ್ತೆ. ಇಲ್ಲಿ ತುಂಬಾ ನಾಟಕಗಳ ಮೇಲೆ ನಾಟಕ ಮಾಡುತ್ತಲೇ ಇರುತ್ತಾರೆ. ಅವರು ಫಂಡ್ ತೆಗೆದುಕೊಂಡಿರುತ್ತಾರೆ. ಅವರು ಇಷ್ಟು ಪ್ರದರ್ಶನ ಆಯ್ತು ಅಂತ ಲೆಕ್ಕ ಕೊಡಬೇಕು. ಅದು ಇನ್ನು ದೊಡ್ಡ ಫನ್ನಿ ಅಂತ ಅನಿಸುತ್ತೆ. ಈ ಹೊಸ ಪ್ರಯೋಗವನ್ನು ಇಲಾಖೆ ಗುರುತಿಸಿಲ್ಲ. ಕೆಲವರು ಹಠಕ್ಕೆ ಬಿದ್ದು ನಾಟಕ ಮಾಡುತ್ತಾರೆ. ಫ್ರೀ ಅಂತ ಮಾಡಿಸುತ್ತಾರೆ. ಎಲ್ಲದಕ್ಕೂ ಒಂದು ಬೆಲೆ ಅಂತ ಇರಬೇಕು."

ಕುಟುಂಬದ ಸಪೋರ್ಟ್ ಹೇಗಿದೆ?
"ಅಮ್ಮನೇ ನನ್ನ ಶಕ್ತಿ. ನಮ್ಮ ಮಗಳಿಗೆ ಹೊಟ್ಟೆಯಲ್ಲಿರುವಾಗಲೇ ಗೊತ್ತಾಗಿತ್ತು ಅಂತ ಅನಿಸುತ್ತೆ. ಇವಳ ವೃತ್ತಿನೇ ಹೀಗೆ ಅಂತ. ಹೊರಗಡೆ ಹೋದರೇನೆ ಹೊಟ್ಟೆ ಪಾಡು. ಜೀವನ ಅಂತ ಗೊತ್ತಾಗಿತ್ತು ಅನಿಸುತ್ತೆ. ನಾನು ಫೀಡಿಂಗ್ ಸ್ಟಾಪ್ ಮಾಡಿ ಈ ಟೂರ್ ಮಾಡಿದ್ದೇನೆ. ಸಿನಿಮಾ ಶೂಟಿಂಗ್ ಹೋಗಿದ್ದಾಗಲೂ ಮಗಳಿಗೆ 8 ತಿಂಗಳು. ಹೀಗಾಗಿ ನಮ್ಮ ಅಮ್ಮನೊಂದಿಗೆ ಆರಾಮಾಗಿ ಇರುತ್ತಾಳೆ. ನಮ್ಮ ಯಜಮಾನರೂ ಕೂಡ ಸಪೋರ್ಟಿವ್ ಆಗಿಯೇ ಇರುತ್ತಾರೆ." ಎನ್ನುತ್ತಾರೆ ಅಕ್ಷತಾ ಪಾಂಡವಪುರ.


Click it and Unblock the Notifications











