'ಕಾಮಿಡಿ ಕಿಲಾಡಿ' ಮುತ್ತುರಾಜ್ ಯಾರು? ಅವರ ಹಿನ್ನೆಲೆ ಏನು?
ಜೀ-ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ಸ್ಪರ್ಧಿ ಮಂಡ್ಯದ ಮುತ್ತುರಾಜ್ ಅವರನ್ನ ಟಿವಿಯಲ್ಲಿ ನೋಡೇ ಇರುತ್ತೀರಿ. 'ಗಡ್ಡಪ್ಪ', 'ಕಳ್ಳ ಸ್ವಾಮೀಜಿ', 'ಕಬಾಲಿ ಡ್ಯಾನ್ಸ್' ಮತ್ತು 'ರೆಮೋ' ಪಾತ್ರಗಳಿಂದ ನಿಮ್ಮನ್ನೆಲ್ಲಾ ಹೊಟ್ಟೆ ಹುಣ್ಣಾಗುವಂತೆ ನಗಿಸಿರುವ ಇವರ ಗುರುತು ನಿಮಗೆಲ್ಲಾ ಇದ್ದೇ ಇರುತ್ತೆ.
ತೆಳ್ಳಗೆ, ತಲೆ ತುಂಬಾ ಕೂದಲು ಬಿಟ್ಟುಕೊಂಡು ಸ್ವಾಮೀಜಿ ತರ ಕಾಣುವ ಮುತ್ತುರಾಜ್ ಯಾರು? ಅವರ ಹಿನ್ನೆಲೆ ಏನು.? ಅಂತ ತಿಳಿದುಕೊಳ್ಳುವ ಕುತೂಹಲ ನಿಮಗೆ ಇರುತ್ತೆ....ಮುತ್ತುರಾಜ್ ಈಗ 'ಕಾಮಿಡಿ ಕಿಲಾಡಿಗಳು' ಗ್ರ್ಯಾಂಡ್ ಫಿನಾಲೆ ತಲುಪಿರುವ 10 ಜನರ ಪೈಕಿ ಒಬ್ಬರಾಗಿದ್ದಾರೆ. ಈ ವಾರ 'ಕಾಮಿಡಿ ಕಿಲಾಡಿಗಳು' ಫಿನಾಲೆ ನಡೆಯಲಿದ್ದು, ಅದಕ್ಕೂ ಮುಂಚೆ ಮುತ್ತುರಾಜ್ ಅವರ ಜೊತೆಯಲ್ಲಿ, ನಿಮ್ಮ 'ಫಿಲ್ಮಿಬೀಟ್ ಕನ್ನಡ' ನಡೆಸಿರುವ ಸಂದರ್ಶನ ಇಲ್ಲಿದೆ ಓದಿರಿ.....
ಸಂದರ್ಶನ: ಸುನೀಲ್ ಬಿಂಡಹಳ್ಳಿ

-ನಮ್ಮ ಓದುಗರಿಗೆ ನಿಮ್ಮ ಪರಿಚಯ?
ನಮ್ಮೂರು ಮಾಚಗೋನಹಳ್ಳಿ, ಕೆ ಆರ್ ಪೇಟೆ, ತಾಲ್ಲೂಕು, ಮಂಡ್ಯ ಜಿಲ್ಲೆ. ಸಂಪೂರ್ಣ ಬರಪೀಡಿತ ಹಳ್ಳಿ. 10 ನೇ ತರಗತಿ ವರೆಗೆ ಬಲ್ಲೇನಹಳ್ಳಿಯಲ್ಲಿ ಓದಿದ್ದು. ಇನ್ನೂ ಪಿಯುಸಿ ಮಾಡಿದ್ದು ಬನ್ನಂಗಾಡಿಯಲ್ಲಿ. ನಾನು ಸಂಪೂರ್ಣ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಓದಿದ್ದು.

ನಟನೆ ಬಗ್ಗೆ ಆಸಕ್ತಿ ಬಂದಿದ್ದು ಹೇಗೆ.?
-ಸಾಮಾನ್ಯವಾಗಿ ಚಿಕ್ಕಂದಿನಿಂದಲೂ ಆಸಕ್ತಿ ಇತ್ತು. ಆದರೆ ಸಿನಿಮಾ, ಡ್ರಾಮಾ, ಸೀರಿಯಲ್ ಬಗ್ಗೆ ನಾಲೆಡ್ಜ್ ಇರ್ಲಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದೆ. ಸುಮ್ನೆ ಹಾಡು ಹೇಳೋದು, ಡ್ಯಾನ್ಸ್, ನಾಟಕಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದೆ. ನಟನೆ ಅನ್ನೋದು ಬೆಳೆಯುತ್ತಾ ಆಸಕ್ತಿ ಹುಟ್ಟಿಸುತ್ತಾ ಬಂತು.

ನಟನೆ ಅಂತ ಬಂದಾಗ ಮೊದಲು ವೇದಿಕೆ ಹತ್ತಿದ್ದು?
-ಶಾಲೆಗಳಲ್ಲಿ 3ನೇ ತರಗತಿಯಲ್ಲಿ ಇದ್ದಾಗ ಸಣ್ಣ ಪಾತ್ರಗಳಲ್ಲಿ ನಟಿಸಿದ್ದೆನಂತೆ. ಆ ಫೋಟೋಗಳಿವೆ. ಆದ್ರೆ ಅದು ನಂಗೆ ನೆನಪಿಲ್ಲ. ನಾನ್ ಫಸ್ಟ್ ವೇದಿಕೆ ಹತ್ತಿದ್ದು 7ನೇ ತರಗತಿಯಲ್ಲಿದ್ದಾಗ 'ದಾನ ಶೂರ ಕರ್ಣ' ಪೌರಾಣಿಕ ನಾಟಕದಲ್ಲಿ. ಅದರಲ್ಲಿ ಕೊರಮನ ಪಾತ್ರ ಮಾಡಿದ್ದೆ.

ಹಾಸ್ಯ ಮಾಡುವುದು ನಿಮ್ಮ ಪ್ರಕಾರ ಎಷ್ಟು ಕಷ್ಟ?
-ಎಲ್ಲರಿಗೂ ಗೊತ್ತಿರುವಂತೆ ಹಾಸ್ಯ ಮಾಡೋದು ತುಂಬಾನೆ ಕಷ್ಟ. ಕೆಲವೊಮ್ಮೆ ಇಷ್ಟೆಲ್ಲಾ ಪ್ರಯತ್ನ ಪಟ್ಟು, ವರ್ಕ್ ಆಗ್ಲಿಲ್ಲವಲ್ಲ ಅನಿಸುತ್ತೆ. ಆದ್ರೆ, ಕಲಾವಿದನಾಗಿ ಪರಕಾಯ ಪ್ರವೇಶ ಮಾಡಿದಾಗ ತುಂಬಾ ಸುಲಭ. ಹೊರಗೆ ಪ್ರೇಕ್ಷಕನಾಗಿ ನೋಡಿದಾಗ ನಗಿಸುವುದು ತುಂಬಾನೆ ಕಷ್ಟ.

ಕಾಮಿಡಿ ಕಿಲಾಡಿಗಳಲ್ಲಿ ನಿಮಗೆ ಇಷ್ಟವಾದ ಪಾತ್ರ?
-ಇದುವರೆಗೆ ಯಾವ ಪಾತ್ರಗಳು ಸಮಾಧಾನ ಆಗಿಲ್ಲ. ಯಾಕಂದ್ರೆ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಅನಿಸಿದೆ. ಆದ್ರೆ 3 ಅಥವಾ 4ನೇ ಎಪಿಸೋಡ್ ನಲ್ಲಿ 'ಕಳ್ಳ ಸ್ವಾಮೀಜಿ' ಪಾತ್ರ ಲೈಟ್ ಆಗಿ ಇಷ್ಟ ಆಗಿತ್ತು.

ನಿಮ್ಮ ಅಭಿನಯ ಕಲೆಗೆ ಸ್ಫೂರ್ತಿ ಆದವರು?
-ವಿಷ್ಣುವರ್ಧನ್ ಸರ್. ಅವರ ವೈಯಕ್ತಿಕ ಜೀವನ ನನಗೆ ಮೊದಲು ಇಷ್ಟ ಆಯಿತು. ನಂತರ ಆಕ್ಟಿಂಗ್ ಗೆ ಸ್ಫೂರ್ತಿ ಆದ್ರು.

ಮುಂದಿನ ಪ್ಲಾನ್ ಏನು.?
-ಸಿನಿಮಾ, ಟಿವಿ, ಹಾಸ್ಯ ಕಾರ್ಯಕ್ರಮಗಳಲ್ಲಿ ನಟಿಸಲು ಆಫರ್ ಬರ್ತಿದೆ. ನೋಡಿಕೊಂಡು ಹೆಜ್ಜೆ ಹಾಕಬೇಕು ಅಂದುಕೊಂಡಿದ್ದೇನೆ. ಯಾಕಂದ್ರೆ ಜೀವನದಲ್ಲಿ ತುಂಬಾನೆ ಸ್ಟ್ರಗಲ್ ಮಾಡಿದ್ದೀನಿ. ಈ ಹಿಂದೆ ಯಾವುದೇ ಆಡಿಶನ್ ಗೆ ಹೋದ್ರು ಪಟ ಪಟ ಅಂತ ಸೆಲೆಕ್ಟ್ ಮಾಡ್ತಿದ್ರು. ಅರ್ಧ ಸಿನಿಮಾ ಕೆಲಸ ಮಾಡಿಸಿಕೊಳ್ಳೋರು. ಸಂಭಾವನೆ ಕೊಡುತ್ತಿರಲಿಲ್ಲ. ಆ ಸಿನಿಮಾನೂ ರಿಲೀಸ್ ಆಗ್ತಿರಲಿಲ್ಲ ಬಿಡಿ.

ಎಲ್ಲರನ್ನ ಹೆಚ್ಚು ನಗಿಸುವವರಲ್ಲಿ ಹೆಚ್ಚು ನೋವು ಅಡಗಿರುತ್ತಂತೆ. ನಿಮ್ಮ ಪ್ರಕಾರ ಇದು ನಿಜವೇ.?
-ಇದರ ಬಗ್ಗೆ ಜಗ್ಗೇಶಣ್ಣವರು ಹೇಳಿದ್ದಾರೆ. ಅದು ಸತ್ಯ. ಹಾಗಂತ ನಗಿಸುವವರಲ್ಲೇ ನೋವು ಇರುತ್ತೆ ಅಂತ ಹೇಳಲ್ಲಾ. ಎಲ್ಲರ ಜೀವನದಲ್ಲಿಯೂ ಕಷ್ಟಗಳು ಇರುತ್ತವೆ. ಆದ್ರೆ ನಗಿಸುವವರು ಒಬ್ಬ ಕಲಾವಿದನಾಗಿ ನಗಿಸುತ್ತಾನೆ.

'ಕಾಮಿಡಿ ಕಿಲಾಡಿಗಳು' ಜರ್ನಿಯಲ್ಲಿ ನಿಮ್ಮ ಜೀವನದಲ್ಲಿ ಏನಾದರೂ ಬದಲಾವಣೆ ಆಗಿದ್ಯಾ.?
-ಖಂಡಿತ. ನಾನು 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮಕ್ಕೆ ಬಂದ ನಂತರ ವಿದೇಶಗಳಿಂದ ಕರೆಮಾಡಿ ಅಭಿನಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಮೀಟ್ ಮಾಡಬೇಕು ಅಂತಾರೆ. ವಿಶ್ ಮಾಡ್ತಾರೆ. ನನಗೆ ಈಗೊಂದು ತೃಪ್ತಿ ಸಿಕ್ಕಿದೆ. ಹೆಚ್ಚಾಗಿ ನಟನೆ ಬಗ್ಗೆ ಕಲಿಕೆ ನಿರಂತರವಾಗಿ ಸಿಕ್ಕಿದೆ ಇಲ್ಲಿ.

ಸಿನಿಮಾಗಳಿಗೆ ಅವಕಾಶ ಬಂದಿದ್ಯಾ?
-ಬಂದಿದೆ. ಆದ್ರೆ ನನಗೆ ಇನ್ನೂ ಹೊಸ ಸಿನಿಮಾಗಳ ಬಗ್ಗೆ ಜಡ್ಜ್ ಮಾಡಿ ಹೋಗೋಕೆ ಸಮಯ ಬೇಕು? ನೋಡಿಕೊಂಡು ಕಾಲಿಡಬೇಕು?

ಫ್ಯಾಮಿಲಿ ಸಪೋರ್ಟ್ ಹೇಗಿದೆ.?
-ಮನೆಕಡೆ ತುಂಬಾ ಸಾಲ ಇದೆ. ಒಬ್ಬನೇ ಮಗನಾನು. ನಮ್ಮ ತಂದೆಗೆ ಅಷ್ಟು ದುಡಿಮೆ ಇಲ್ಲ. ನಾನು ಜವಾಬ್ದಾರಿಯಿಂದ ಸಾಲ ತೀರಿಸಬೇಕು. ಹೀಗಿದ್ರು ನಮ್ಮ ತಂದೆ-ತಾಯಿ ಪರವಾಗಿಲ್ಲ ನೀನು ನಿನ್ನ ಆಸೆಯಂತೆ ಮುಂದುವರಿ ಅಂತ ಪ್ರೋತ್ಸಾಹ ಕೊಡ್ತಾರೆ.

ಕಾಮಿಡಿ ಕಿಲಾಡಿಗಳು ಜರ್ನಿಯಲ್ಲಿ ಬೆಸ್ಟ್ ಕಾಂಪ್ಲಿಮೆಂಟ್?
-ಬಹುಶಃ ಇದು ತೆರೆ ಮೇಲೆ ಬಂದಿಲ್ಲ. ಜಗ್ಗೇಶಣ್ಣ ನಂಗೆ "ಮುತ್ತುರಾಜ್ ಕಂಪ್ಲೀಟ್ ನಂತರ. ಅವನೇ ನಾನು. ನಾನೇ ಮುತ್ತುರಾಜ್' ಅವನಿಗೆ ಯಾವ ವಿಷಯಗಳನ್ನ ಹೇಗೆ ಒದಗಿಸಿಕೊಳ್ಳಬೇಕು ಗೊತ್ತು" ಅಂತ ಹೇಳಿದ್ದು...

ನಿಮ್ಮ ಪ್ರಕಾರ ಯಾರು ಗೆಲ್ಲಬಹುದು.? ಯಾರು ಗೆಲ್ಲಬೇಕು.?
-ಒಬ್ಬ ಪ್ರೇಕ್ಷಕನಾಗಿ ಹೇಳುವುದಾದರೆ, ನನ್ನ ಅನಿಸಿಕೆ, ಬಯಕೆ ಶಿವರಾಜ್ ಕೆ.ಆರ್.ಪೇಟೆ ಗೆಲ್ಲಬೇಕು.

ಜನ ಯಾಕೆ ನಿಮಗೆ ವೋಟ್ ಮಾಡಬೇಕು.?
-ನನ್ನಲ್ಲಿ ಟ್ಯಾಲೆಂಟ್ ಇದೆ ಅಂತ ನಿಮಗೆ ಅನಿಸಿದ್ರೆ ವೋಟ್ ಮಾಡಿ. ನಾನು ಗೆದ್ದರೇ ಅಸಹಾಯಕರಿಗೆ, ವೃದ್ಧರಿಗೆ ಜೀ ವಾಹಿನಿ ಕಡೆಯಿಂದ ಬಂದ ಬಹುಮಾನದಲ್ಲಿ ಸಹಾಯ ಮಾಡುತ್ತೇನೆ. ಇದಂತು ಸತ್ಯ.


Click it and Unblock the Notifications











