Don't Miss!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮೂವರೂ ಗೆಳೆಯರು ಸೇರಿ ಸಿನಿಮಾ ಮಾಡಲು ಎಲ್ಲ ತಯಾರಿ ಮಾಡಿದ್ದೆವು...'
'ಅದು ಹೃದಯಾಘಾತ. ಹೇಗೆ ಬರುತ್ತದೆಯೋ ಗೊತ್ತಿಲ್ಲ. ಅದಕ್ಕೆ ಇಂಥದ್ದೇ ಕಾರಣ ಎಂದು ಹೇಳಲಾಗುವುದಿಲ್ಲ. ರಿಯಾಲಿಟಿಯನ್ನು ಒಪ್ಪಿಕೊಳ್ಳಬೇಕು ಎಂದು ಒಂದು ಕ್ಷಣ ಗಟ್ಟಿ ಮನಸು ಮಾಡಿಕೊಳ್ಳುತ್ತೇನೆ. ಮತ್ತೊಂದು ಕ್ಷಣದಲ್ಲಿಯೇ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ. ಇಲ್ಲ, ನಾನು ಸ್ಟ್ರಾಂಗ್ ಆಗಬೇಕು ಎಂದುಕೊಳ್ಳುತ್ತೇನೆ. ಮತ್ತೊಮ್ಮೆ, ಎಲ್ಲೋ ಶೂಟಿಂಗ್ ಹೋಗಿರಬೇಕು, ಬರುತ್ತಾನೆ ಎಂದುಕೊಳ್ಳುತ್ತೇನೆ. ಮತ್ತೆ ವಾಸ್ತವಕ್ಕೆ ಮರಳಿದಾಗ....'
Recommended Video
ತಮ್ಮ ಆತ್ಮೀಯ ಮಿತ್ರನನ್ನು ಕಳೆದುಕೊಂಡ ನೋವಿನಿಂದ ಎಂದಿಗೂ ಹೊರಬರಲು ಸಾಧ್ಯವಿಲ್ಲ ಎಂಬ ವೇದನೆ ಪನ್ನಗಾಭರಣ ಅವರ ಧ್ವನಿಯಲ್ಲಿತ್ತು. ಚಿರಂಜೀವಿ ಸರ್ಜಾ ಅವರ ಆಪ್ತರ ಬಳಗ ದೊಡ್ಡದು. ಅದರಲ್ಲಿ ಅತ್ಯಾಪ್ತರ ವಲಯದಲ್ಲಿದ್ದವರು ನಿರ್ದೇಶಕ ಪನ್ನಗಾಭರಣ. ಚಿರಂಜೀವಿ ಸರ್ಜಾ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಕಾಣಿಸುವ ಪನ್ನಗಾಭರಣ ಮತ್ತು ಪ್ರಜ್ವಲ್ ದೇವರಾಜ್ ಜತೆಗಿನ ಚಿತ್ರಗಳು ಅವರ ಬಾಂಧವ್ಯವನ್ನು ಹೇಳುತ್ತವೆ.
ಚಿರಂಜೀವಿ ಸರ್ಜಾಗೆ ಹಂಸಲೇಖ ಭಾವಪೂರ್ಣ ನಾದನಮನ
ಚಿರಂಜೀವಿ ಸರ್ಜಾ ಅವರ ಖುಷಿ, ಸಂಭ್ರಮ, ಬೇಸರ ಎಲ್ಲ ಸನ್ನಿವೇಶಗಳಲ್ಲಿಯೂ ಜತೆಗಿದ್ದವರು ಈ ಗೆಳೆಯರು. ಇದ್ದಕ್ಕಿದ್ದಂತೆ ಚಿರು ದೂರವಾಗುತ್ತಾರೆ ಎಂಬುದನ್ನು ಕನಸಿನಲ್ಲಿಯೂ ಊಹಿಸಿರಲಿಲ್ಲ. ಅದನ್ನು ಅರಗಿಸಿಕೊಳ್ಳಲಾಗದ ಆಘಾತ ಅವರಿಗಾಗಿದೆ. ಚಿರಂಜೀವಿ ಜತೆಗಿನ ಬಾಂಧವ್ಯದ ಬಗ್ಗೆ ಪನ್ನಗಾಭರಣ 'ಫಿಲ್ಮಿ ಬೀಟ್' ಜತೆ ಮಾತನಾಡಿದ್ದಾರೆ. ಮುಂದೆ ಓದಿ...
ಜತೆಯಾದೆವು, ಬೆಳೆದೆವು...
ನಾವು ಮೊದಲು ಜತೆಯಾಗಿದ್ದು ಇಮ್ರಾನ್ ಸರ್ದಾರಿಯಾ ಡ್ಯಾನ್ಸ್ ಕ್ಲಾಸಿನಲ್ಲಿ. ಆಗಿನ್ನೂ ಇಮ್ರಾನ್ ಸಿನಿಮಾಗಳಲ್ಲಿ ಕೊರಿಯಾಗ್ರಾಫರ್ ಆಗಿರಲಿಲ್ಲ. ನಾವು ಹತ್ತನೇ ತರಗತಿ ಮುಗಿಸಿದಾಗ ಇಮ್ರಾನ್ ಸರ್ದಾರಿಯಾ ನೃತ್ಯ ಶಾಲೆಯಲ್ಲಿ ಸೇರಿಕೊಂಡೆವು. ನಾನು, ಚಿರಂಜೀವಿ, ಪ್ರಜ್ವಲ್, ಅಭಿ ಮುಂತಾದವರ ಗೆಳೆತನ ಬೆಳೆದಿದ್ದು ಅಲ್ಲಿಯೇ. 'ಡ್ಯಾನ್ಸ್ ಪ್ರಾಕ್ಟೀಸ್ ಆದ ಬಳಿಕವೂ ಜತೆಯಲ್ಲಿ ಸೇರುತ್ತಿದ್ದೆವು. ಹಾಗೆಯೇ ಗುಂಪು ಸೃಷ್ಟಿಯಾಯಿತು. ಊರಿನಾಚೆ, ದೇಶದಾಚೆ, ರಾತ್ರಿ ಊಟಕ್ಕೆ ಹೋಗಬೇಕು ಎಂದಾಗೆಲ್ಲಾ ಜತೆಗೆ ಸೇರುತ್ತಿದ್ದೆವು. ಅದೊಂದು ಅನೂಹ್ಯ ಬಾಂಧವ್ಯ. ನಮ್ಮ ಮನೆಯವರೆಲ್ಲರೂ ಸ್ನೇಹಿತರೇ ಎಂಬುದು ಗೆಳೆತನ ಬೆಳೆದಂತೆ ನಮಗೆ ಗೊತ್ತಾಗಿದ್ದು.
ಎಂದಿಗೂ ಡೈಜೆಸ್ಟ್ ಆಗೊಲ್ಲ
ಫಿಲ್ಮ್ ಫಂಕ್ಷನ್ಗಳಿಗೆ ಹೋದರೂ ನಾವು ಮೂರು ಜನ (ಪನ್ನಗಾಭರಣ, ಚಿರಂಜೀವಿ ಸರ್ಜಾ ಮತ್ತು ಪ್ರಜ್ವಲ್ ದೇವರಾಜ್) ಒಂದಾಗುತ್ತಿದ್ದೆವು. ನಮ್ಮ ಸ್ನೇಹ ಒಂದು ರೀತಿ ಬೆಳೆಯುತ್ತಾ ಹೋಯ್ತು. ನಿಜ, ನಮಗೆ ಚಿತ್ರರಂಗದಲ್ಲಿ ತುಂಬಾ ಸ್ನೇಹಿತರು ಇದ್ದಾರೆ. ಆದರೆ ನಮ್ಮ ಮೂವರ ಆಪ್ತತೆ ಬೇರೆ ಥರ. ಈ ಪರಿಸ್ಥಿತಿಯನ್ನು ಹೇಗೆ ಒಪ್ಪಿಕೊಳ್ಳಬೇಕು ಎಂದು ಗೊತ್ತಿಲ್ಲ. ಪ್ರತಿದಿನವೂ ಕಾಡುತ್ತದೆ. ಆ ಸಾವು ಡೈಜೆಸ್ಟ್ ಆಗಿಲ್ಲ. ಆಗೋದೇ ಇಲ್ಲ ಎಂದು ಭಾವುಕರಾದರು ಪನ್ನಗಾಭರಣ.
ಹೃದಯ ಕಲಕುತ್ತದೆ ಚಿರಂಜೀವಿ ಸರ್ಜಾ ಕುರಿತ ಮೇಘನಾ ರಾಜ್ ಬರಹ
ಮೂವರ ಸಿನಿಮಾ ಸಿದ್ಧವಾಗುತ್ತಿತ್ತು
ನಾವು ಮೂರೂ ಜನ ಸೇರಿ ಸಿನಿಮಾ ಮಾಡಬೇಕಿತ್ತು. ಬಹುಶಃ ಕೊರೊನಾ ವೈರಸ್ ಬಾರದೆ ಇದ್ದಿದ್ದರೆ ಆಗಲೇ ಅನೌನ್ಸ್ ಕೂಡ ಮಾಡಿರುತ್ತಿದ್ದೆವು. ಒಂದು ಕಥೆ ಸಿದ್ಧಪಡಿಸಿದ್ದೆವು. ನಾನು ಮತ್ತು ಚಿರು ಸೇರಿ ಅದನ್ನು ಡೆವಲಪ್ ಮಾಡಿದ್ದೆವು. ಚೆನ್ನೈನಿಂದ ಬರಹಗಾರರನ್ನು ಕರೆಯಿಸಿ ಅದರ ಮೇಲೆ ಕೆಲಸ ಮಾಡಿಸಿದ್ದೆವು. ಪ್ರಜ್ವಲ್ಗೆ ಕಥೆ ವಿವರಿಸಿದ್ದಾಗ ಅವರಿಗೂ ಇಷ್ಟವಾಗಿತ್ತು. ಮೂರು ಜನರು ಸೇರಿ ಮಾಡುವಾಗ ಸಿನಿಮಾ ಅದ್ಭುತವಾಗಿ ಬರಬೇಕು ಎಂದು ತೀರ್ಮಾನಿಸಿದ್ದೆವು. ಬಾಂಬೆಯ ಕೆಲವು ನಿರ್ಮಾಪಕರೊಂದಿಗೆ ಮಾತನಾಡಿದ್ದೆವು. ದೊಡ್ಡ ಸ್ಕೇಲ್ ಸಿನಿಮಾ ಅದು.
'ಕೃಷ್ಣಾರ್ಜುನ'ರ ಕಥೆ
ಚಿರು ಯಾವಾಗಲೂ ಪ್ರಜ್ವಲ್ಗೆ ಸಲಹೆ, ಮಾರ್ಗದರ್ಶನ ಮಾಡುತ್ತಿದ್ದ. ಅದಕ್ಕಾಗಿ ಚಿರುವನ್ನು ಪ್ರಜ್ವಲ್ ಕೃಷ್ಣ ಎಂದೇ ಕರೆಯುತ್ತಿದ್ದದ್ದು. ನಾವು ಮಾತನಾಡುವಾಗ ಚಿರು ಕೂಡ ಪ್ರಜ್ವಲ್ನನ್ನು ಅರ್ಜುನ ಎಂದೇ ಕರೆಯುತ್ತಿದ್ದದ್ದು. ನಾವು ಮೂವರು ಮಾಡಲು ಬಯಸಿದ್ದ ಚಿತ್ರಕ್ಕೂ 'ಕೃಷ್ಣಾರ್ಜುನ' ಎಂದೇ ಹೆಸರು ಇಡಲು ಉದ್ದೇಶಿಸಿದ್ದವು.
ಅತ್ತಾಗ ಹೆಗಲು ಕೊಟ್ಟವರಿಗೆ ಕೈ ಮುಗಿದ ಚಿರು ಪತ್ನಿ ಮೇಘನಾ ರಾಜ್
ಚಿರಂಜೀವಿಯದು ನಿಷ್ಕಲ್ಮಶ ಮನಸು
ನೀವು ನೋಡಿದ, ಕೇಳಿದ ಚಿರಂಜೀವಿ ಹಾಗೆಯೇ ಇರುತ್ತಿದ್ದದ್ದು. ಒಳಗೊಂದು ಹೊರಗೊಂದು ಇರುತ್ತಿರಲಿಲ್ಲ. ನಿಷ್ಕಲ್ಮಶ ಮನಸು. ನಿಮಗೆ ಕಾಣಿಸುತ್ತಿದ್ದ ನಗುಮೊಗ ಯಾವಾಗಲೂ ಇರುತ್ತಿತ್ತು. ಸಿನಿಮಾಗಳಲ್ಲಿಯೂ ಅಷ್ಟೇ. ನಿರ್ಮಾಪಕ ಸ್ನೇಹಿ. ಬೇರೆಯವರ ಕಷ್ಟಗಳಿಗೆ ಮಿಡಿಯುವ ವ್ಯಕ್ತಿ. ಲಾಕ್ ಡೌನ್ ಆಗಿದ್ದಾಗಲೂ ತಿಳಿದವರಿಗೆಲ್ಲ ಫೋನ್ ಮಾಡಿ, ಆರಾಮಾಗಿ ಇದ್ದೀಯಾ? ಏನಾದರೂ ಸಮಸ್ಯೆ ಇದೆಯಾ? ದುಡ್ಡು ಕಾಸು ಇದೆಯಾ ಎಂದೆಲ್ಲ ವಿಚಾರಿಸುತ್ತಿದ್ದ ವ್ಯಕ್ತಿ.
ಆ ವೇದನೆ ಹೇಳಲಸಾಧ್ಯ
ಸಡನ್ ಆಗಿ ಹೃದಯಾಘಾತ ಆದಾಗ ಅದನ್ನು ಅರಗಿಸಿಕೊಳ್ಳುವುದು ಬಹಳ ಕಷ್ಟ. ಹಾರ್ಟ್ ಅಟ್ಯಾಕ್ ಎಂದರೆ ಹಾಗೆಯೇ, ಇದ್ದಕ್ಕಿದ್ದಂತೆ ಬರುತ್ತದೆ. ಹಾರ್ಟ್ ಅಟ್ಯಾಕ್ನಿಂದ ಕುಟುಂಬದಲ್ಲಿ ಅನೇಕರನ್ನು ಕಳೆದುಕೊಂಡಿದ್ದೇನೆ. ಆ ನೋವು, ವೇದನೆ ಹೇಳಲು ಅಸಾಧ್ಯ. ಆದರೆ ಇಂತಹ ಘಟನೆ ಆದಾಗ ಅದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋಗುತ್ತೇವೆ. ಆ ಕಾರಣಗಳನ್ನು ಹುಡುಕುವ ಬಗೆ ತುಂಬಾ ಕೆಟ್ಟದ್ದು ಎಂದು ಚಿರಂಜೀವಿ ಸರ್ಜಾ ಅವರಿಗೆ ಹೃದಯಾಘಾತವಾಗಲು ಅವರಿಗೆ ದುರಭ್ಯಾಸಗಳಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಸುದ್ದಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಜನರಿಗೆ ವಿವಾದ, ಮಸಾಲೆ ಬೇಕು
ಹೃದಯಾಘಾತಕ್ಕೆ ಕಾರಣ ಸರಳ. ಆದರೆ ಅದನ್ನು ಅಕ್ಸೆಪ್ಟ್ ಮಾಡಲು ಆಗೊಲ್ಲ. ಅದಕ್ಕಾಗಿ ಬಣ್ಣ ಹಚ್ಚುತ್ತಾರೆ. ಸುಶಾಂತ್ ಸಿಂಗ್ ಆತ್ಮಹತ್ಯೆ ಕಾರಣ ಗೊತ್ತಿಲ್ಲ, ಆದರೆ ಅದರ ಸುತ್ತ ಬಣ್ಣ ಹಚ್ಚುತ್ತಿದ್ದಾರೆ. ಅವರ ಸಾವಿನ ಬಗ್ಗೆ ಯಾರಿಗೂ ಉತ್ತರ ಸಿಗುವುದೂ ಇಲ್ಲ. ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಆ ಸಂದರ್ಭದಲ್ಲಿ ಅನಿಸಿರುತ್ತದೆ. ಅದಕ್ಕೆ ಬಣ್ಣ ಹಚ್ಚಬಾರದು. ಶ್ರೀದೇವಿ ಅವರ ಸಾವು ಸಂಭವಿಸಿದಾಗ ಅದಕ್ಕೆ ಬೋನಿ ಕಪೂರ್ ಕಾರಣ ಎಂದು ಬಣ್ಣ ಹಚ್ಚಿದ್ದರು. ಜನರಿಗೆ ವಿವಾದ ಬೇಕು, ಮಸಾಲೆ ಬೇಕು. ಆದರೆ ಅದರಿಂದ ಆಗುವ ವೇದನೆ ಆ ವ್ಯಕ್ತಿಗಳಿಗೆ ಹತ್ತಿರ ಇದ್ದವರಿಗೆ ಮಾತ್ರ ಗೊತ್ತಾಗುತ್ತದೆ.
ನಂಬದ ಸ್ಥಿತಿ ಬಂದಿದೆ
ಬೇರೆಯವರಿಗೆ ಬೇರೆ ಬೇರೆ ಮಾಹಿತಿ ಬೇಕು. ಅದಕ್ಕೋಸ್ಕರ ಹುಡುಕುವವರು ಕೊನೆಗೆ ತಮ್ಮದೇ ಸುದ್ದಿ ಸೃಷ್ಟಿಸುತ್ತಾರೆ. ಇಂದಿನ ಪೀಳಿಗೆಗೆ ತಾಳ್ಮೆ ಇಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿಯೂ ಅಂತಹದೇ ತುಂಬಿಮಕೊಂಡಿದೆ. ವಾಟ್ಸಾಪ್ಗಳನ್ನು ಹಿಂದೆ ಮುಂದೆ ನೋಡದೆ ಫಾರ್ವರ್ಡ್ ಮಾಡುತ್ತಾರೆ. ಕೊರೊನಾ ವೈರಸ್ ವಿಚಾರದಲ್ಲಿ ನಿಜವಾದ ಸುದ್ದಿ ಬಂದರೂ ನಂಬದಂತಾಗಿದೆ ಎಂದು ಚಿರು ಸಾವಿನ ಸುತ್ತಲಿನ ಕಥೆಗಳ ಬಗ್ಗೆ ಪನ್ನಗಾಭರಣ ವಿಷಾದ ವ್ಯಕ್ತಪಡಿಸಿದರು.