"ಒಬ್ಬ ತಂತ್ರಜ್ಞನನ್ನು ಗುರುತಿಸಿದ್ದು ಸರ್ಕಾರ ಕೊಟ್ಟ ಗೌರವ"- ಅಕಾಡೆಮಿ ನೂತನ ಅಧ್ಯಕ್ಷ ಅಶೋಕ್ ಕಶ್ಯಪ್!
ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಜನಪ್ರಿಯ ಛಾಯಾಗ್ರಹಕ ಅಶೋಕ್ ಕಶ್ಯಪ್ ಅಧಿಕಾರ ವಹಿಸಿಕೊಂಡಿದ್ದಾರೆ. ಹಿಂದಿನ ಅಧ್ಯಕ್ಷರಾಗಿದ್ದ ಸುನೀಲ್ ಪುರಾಣಿಕ್ ಅವರ ಕಾರ್ಯದ ಅವಧಿ ಮುಗಿದಿದ್ದರಿಂದ ನೂತನ ಅಧ್ಯಕ್ಷರಾಗಿ ಅಶೋಕ್ ಕಶ್ಯಪ್ ಅವರನ್ನು ಆಯ್ಕೆ ಮಾಡಲಾಗಿತ್ತು.
ಅಶೋಕ್ ಕಶ್ಯಪ್ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 'ಶಾಪ' ಸಿನಿಮಾದ ಛಾಯಾಗ್ರಹಣಕ್ಕೆ ಅಶೋಕ್ ಕಶ್ಯಪ್ ಅವರಿಗೆ ರಾಜ್ಯ ಪ್ರಶಸ್ತಿ ಕೂಡ ಲಭಿಸಿದೆ. ಕನ್ನಡದ ಜನಪ್ರಿಯ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು, ಕನ್ನಡ ಚಿತ್ರರಂಗದ ಏಳಿಗೆಗಾಗಿ ದುಡಿದಿದ್ದಾರೆ. 'ಭುವನ ಜ್ಯೋತಿ', 'ಶ್', 'ಕರುಣಿನ ಕೂಗು', 'ಸೂಪರ್', 'ಉಪ್ಪಿ2', 'ಕಾಫಿತೋಟ' ಸೇರಿದಂತೆ ಹಲವು ಸಿನಿಮಾಗಳಿಗೆ ಇವರೇ ಕ್ಯಾಮರಾಮ್ಯಾನ್. ಈಗ ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷರಾಗಿರುವ ಸಂದರ್ಭದಲ್ಲಿ ಫಿಲ್ಮಿಬೀಟ್ ಜೊತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಹೊಸ ಜವಾಬ್ದಾರಿ ಬಗ್ಗೆ ಏನು ಹೇಳುತ್ತೀರಾ?
"ನಿಜವಾಗಲೂ ತುಂಬಾನೇ ಖುಷಿಯಾಗುತ್ತಿದೆ. ಒಬ್ಬ ತಂತ್ರಜ್ಞನನ್ನು ಸರ್ಕಾರ ಗುರುತಿಸೋದು ಇದೆಯಲ್ಲಾ ಅದು ದೊಡ್ಡ ವಿಷಯ. ಸಾಮಾನ್ಯವಾಗಿ ಇದು ನಿರ್ದೇಶಕರು, ನಟರು ಇರುವ ಅಲಂಕರಿಸಿದ ಪೀಠ. ಅದನ್ನು ಒಬ್ಬ ಟೆಕ್ನಿಶಿಯನ್ಗೆ ಕೊಟ್ಟ ಅವಕಾಶ ಎಲ್ಲೆಲ್ಲೂ ಮನೆ ಮಾತಾಗಿದೆ. ಪರ್ವಾಗಿಲ್ಲ ಒಬ್ಬ ತಂತ್ರಜ್ಞನನ್ನು ಗುರುತಿಸಿದ್ರಲ್ಲ ಅನ್ನೋ ಅಭಿಪ್ರಾಯವಿದೆ. ನನ್ನ ಅನಿಸಿಕೆ ಕೂಡ ಅದೇನೆ. ದೇವರು ಇದ್ದಾನೆ. ಸರ್ಕಾರ ಇದೆ ಅಂತ ಅನಿಸುತ್ತೆ."

ಈ ಜಾಗ ನಿಮಗೆ ಹೊಸದೇ?
"ನಾನು ಸುನೀಲ್ ಪುರಾಣಿಕ್ ಅವರು ಇದ್ದ ಅವಧಿಯಲ್ಲಿ ನಾನು ಸದಸ್ಯನಾಗಿದ್ದೆ. ಹಾಗಾಗಿ ನನಗೆ ಅಕಾಡೆಮಿ ಹೊಸದಲ್ಲ. ಅವರ ಅವಧಿಯಲ್ಲಿ ಒಬ್ಬ ಸದಸ್ಯನಾಗಿ ನನಗೆ ಕೊಟ್ಟ ಅನುಭವ ತುಂಬಾನೇ ಕಲಿಯೋಕೆ ಸಿಕ್ಕಿದೆ. ಸಾಕಷ್ಟು ಯೋಜನೆಗಳನ್ನು ಅವರಿಂದ ತಿಳಿದುಕೊಂಡಿದ್ದೇನೆ. ಅವರು ಮಾಡಿದ ಯೋಜನೆಗಳೆಲ್ಲವನ್ನೂ ನಾನು ನೋಡಿದ್ದೇನೆ. ಅದು ತಿಳಿದುಕೊಳ್ಳಲು ಅನುಕೂಲ ಆಯ್ತು. ಹೀಗಾಗಿ ಈ ಜಾಗ ನನಗೆ ಹೊಸದೇನು ಅಲ್ಲ."

ನಿಮ್ಮ ಮುಂದಿರೋ ಸವಾಲುಗಳೇನು?
" ಸದ್ಯ ನಮ್ಮ ಮುಂದೆ ಇರೋದು ಫಿಲ್ಮ್ಫೆಸ್ಟಿವಲ್. ಇದಕ್ಕೆ ಬೇಕಾದ ಪ್ಲ್ಯಾನ್ ಆಫ್ ಆಕ್ಷನ್ ಅನ್ನು ಶೀಘ್ರವೇ ರೆಡಿ ಮಾಡಿಕೊಳ್ಳಬೇಕಿದೆ. ಇದರೊಂದಿಗೆ ಅಭಿವೃದ್ದಿ ಕಾರ್ಯಗಳನ್ನು ನೋಡಬೇಕಿದೆ. ಹಿಂದಿನ ಅಧ್ಯಕ್ಷರು ಬಿಟ್ಟಿರುವ ಯಾವುದಾದರೂ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗಬೇಕಿದೆ. ಕನ್ನಡದ ಸುಮಾರು ಫಿಲ್ಮ್ ಕಾಪಿಗಳು ಇದ್ದಾವೆ. 100ಕ್ಕೂ ಹೆಚ್ಚು ಹೆಚ್ಚು ಸಿನಿಮಾಗಳಿದ್ದಾವೆ. ಅದಕ್ಕೆ ಡಿಜಿಟಲ್ ರೂಪ ಕೊಟ್ಟು ಲೈಬ್ರರಿ ಮಾಡಬೇಕು. ಜನರ ಅಧ್ಯಯನಕ್ಕೆ, ಮುಂದಿನ ಪೀಳಿಗೆಗೆ, ಪಿಹೆಚ್ಡಿ ಮಾಡೋರಿಗೆ ಮಾಹಿತಿ ಕೇಂದ್ರವಾಗಬೇಕು. ಇದರೊಂದಿಗೆ ಪುರಾಣಿಕ್ ಅವರು ಮ್ಯೂಸಿಯಂ ಮಾಡಲು ಮುಂದಾಗಿದ್ದರು. ಈಗ ಅದು ಕಟ್ಟಡ ಆಗಿದೆ. ಉಳಿದ ಕಾರ್ಯ ಮಾಡಬೇಕಿದೆ.

ಇಲ್ಲಿ ಏನೇನು ಸವಲತ್ತುಗಳಿವೆ?
"ಈಗಾಗಲೇ ಚಲನಚಿತ್ರ ಅಕಾಡೆಮಿಯಲ್ಲಿ ಬೇರೆ ಬೇರೆ ರೀತಿಯ ಸವಲತ್ತುಗಳು ಇವೆ. ಟೆಕ್ನಿಶಿಯನ್ಗಳಿಗೆ, ಆರ್ಟಿಸ್ಟ್ಗಳಿಗೆ, ಕಾರ್ಮಿಕರಿಗೆ, ಹಿರಿಯರಿಗೆ ಹಣ ಸಹಾಯ ಮಾಡುವಂತಹ ಯೋಜನೆಗಳು ಇದ್ದಾವೆ. ಅದನ್ನು ಮುಖ್ಯ ಆದ್ಯತೆಯನ್ನಾಗಿಟ್ಟುಕೊಂಡು, ಅನಾರೋಗ್ಯದಿಂದ ಬರುವವರಿಗೆ ಸಹಾಯ ಮಾಡುವುದಾಗಿರಲಿ, ಅಥವಾ ವರ್ಕ್ ಶಾಪ್ ಮಾಡುವುದಾಗಿ, ಜಿಲ್ಲೆ ಜಿಲ್ಲೆಗೂ ಸಿನಿಮಾ ಹೋಗಬೇಕು ಅನ್ನೋ ಕಾರಣಕ್ಕೆ ಅದನ್ನೂ ಕೈಗೆತ್ತುಕೊಳ್ಳುತ್ತಿದ್ದೇವೆ."

ವಿಶ್ವವನ್ನು ತಲುಪುವುದು ಹೇಗೆ?
" ಕಾಂತಾರ ಬಂದು ಪಕ್ಕಾ ನಮ್ಮ ಮಣ್ಣಿನ ಕಥೆ. ನಮ್ಮ ಮಣ್ಣಿನ ಕಥೆಯನ್ನು ಸಾಮಾನ್ಯ ಬಜೆಟ್ನಲ್ಲಿ ನಿರ್ಮಿಸಲಾಗಿದೆ. ಅಂತಹ ಸಿನಿಮಾವನ್ನು ವಿಶ್ವದಾದ್ಯಂತ ಒಪ್ಪಿಕೊಂಡಿದೆ. ನಾನು ವಿಶೇಷವಾಗಿ ಹೇಳುವುದು ಏನೆಂದರೆ, ನಮ್ಮ ಮಣ್ಣಿನ ಕಥೆಯನ್ನು ಹೇಳಿದಾಗ ಇಡೀ ವಿಶ್ವ ಒಪ್ಪಿಕೊಳ್ಳುತ್ತೆ. ವಿಶ್ವದಲ್ಲಿರೋ ಪ್ರೇಕ್ಷಕರಿಗೆ ಪ್ರಾದೇಶಿಕ ಸಿನಿಮಾ ತೋರಿಸುವ ಕೆಲಸ ಆಗಬೇಕಿದೆ. ಬಾಲಿವುಡ್ ಮಂದಿ ಗ್ಲೋಬಲ್ ಆಡಿಯನ್ಸ್ಗೆ ಅಂತ ಸಿನಿಮಾ ಮಾಡುತ್ತಿದ್ದಾರೆ. ಅವರ ಸಿನಿಮಾ ಟೈಟಲ್ ಬಹುತೇಕ ಇಂಗ್ಲಿಷ್ನಲ್ಲಿ ಇರುತ್ತೆ. ವಿದೇಶಿಗರನ್ನೂ ಸೆಳೆಯಬೇಕು ಅಂತಿರುತ್ತೆ. ಮೊದಲು ನಮ್ಮ ಮಣ್ಣಿನ ಕತೆಯನ್ನು ಹೇಳಬೇಕು. ಅವರೂ ಕೂಡ ಒಪ್ಪಿಕೊಳ್ಳುತ್ತಾರೆ. ಇವತ್ತು ನಾನು ಕಂಡುಕೊಂಡ ಸತ್ಯ."

ರಾಜ್ಯದ ಮೂಲೆ ಮೂಲೆಗೂ ಸಿನಿಮಾ ತಲುಪುತ್ತಾ?
"ನಾವೇ ಈ ವಿಚಾರವನ್ನು ಹಿಂದೆ ಮಾತಾಡಿದ್ದೆವು. ಅದನ್ನು ಈ ಬಾರಿ ಸರ್ಕಾರ ಮುಂದೆ ಇಟ್ಟು ಅದನ್ನು ಕಾರ್ಯಗತ ಮಾಡುವುದಕ್ಕೆ ಪ್ರಯತ್ನಿಸುತ್ತೇನೆ. ನಾನೊಬ್ಬ ಆಸೆ ಪಟ್ಟರೆ ಸಾಲದು ಎಲ್ಲರೂ ಆಸೆಪಡಬೇಕು. ಮುಂದಿನ ದಿನಗಳಲ್ಲಿ ರಾಜ್ಯದ ಮೂಲೆ ಮೂಲೆಯಲ್ಲೂ ಸಿನಿಮಾ ಶಿಕ್ಷಣ, ಮತ್ತೆ ಥಿಯೇಟರ್ಗೆ ಜನ ಬರೋ ಹಾಗೆ ಮಾಡಲು ಯತ್ನಿಸುತ್ತೇವೆ. ಅದಾಗುತ್ತೆ ಅನ್ನೋ ಅನಿಸಿಕೆ ಕೂಡ ಇದೆ." ಎನ್ನುತ್ತಾರೆ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಅಶೋಕ್ ಕಶ್ಯಪ್.


Click it and Unblock the Notifications











