"ಆರ್ಕೆಸ್ಟ್ರಾ ಮೈಸೂರು ಒಬ್ಬ ಹಾಡುಗಾರನ ಕಥೆಯಲ್ಲ.. ಹೋರಾಟಗಾರನ ಕಥೆ" ಪೂರ್ಣಚಂದ್ರ
'ಆರ್ಕೆಸ್ಟ್ರಾ' ಈ ಪದವನ್ನು ಕೇಳಿದ ಕೂಡಲೇ ಒಬ್ಬೊಬ್ಬರಿಗೆ ಒಂದೊಂದು ಅನುಭವ ನೆನಪಾಗಬಹುದು. ಹಬ್ಬ ಹರಿದಿನಗಳು ನೆನಪಿಗೆ ಬರುತ್ತೆ. ಗಣೇಶ ಹಬ್ಬ ನೆನಪಾಗುತ್ತೆ. ದಸರಾ ಹಬ್ಬ ನೆನಪಾಗುತ್ತೆ. ರಾಜ್ಯೋತ್ಸವ ನೆನಪಾಗುತ್ತೆ. ಇಂತಹ ನೆನಪುಗಳ ಮಧ್ಯೆ ಕನಸುಗಳನ್ನು ನನಸಾಗಿಸಲು ಹೋರಾಡುವ ಹೋರಾಟಗಾರರನ ಕಥೆಯೊಂದು ತೆರೆಮೇಲೆ ಬರುತ್ತಿದೆ.
'ಆರ್ಕೆಸ್ಟ್ರಾ ಮೈಸೂರು' ಬಹುತೇಕ ಮೈಸೂರಿನವರೇ ಸೇರಿಕೊಂಡು ಮಾಡಿರೋ ಸಿನಿಮಾವಿದು. ಈ ಸಿನಿಮಾದ ಹೀರೊ ಪೂರ್ಣಚಂದ್ರ ಮೈಸೂರಿನವರು. ಧನಂಜಯ್, ನಿರ್ದೇಶಕ ಸುನೀಲ್, ರಘು ದೀಕ್ಷಿತ್ ಮೈಸೂರಿನ ನಂಟು ಹೊಂದಿದವರೇ. ಈ ಸಿನಿಮಾ ಜನವರಿ 12ರಂದು ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಹೀರೊ ಪೂರ್ಣಚಂದ್ರ ಸಿನಿಮಾ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.

'ಆರ್ಕೆಸ್ಟ್ರಾ ಮೈಸೂರು' ಒಂದು ಹೋರಾಟದ ಕಥೆ
"ನಮ್ಮ ಸಿನಿಮಾ ಆರ್ಕೆಸ್ಟ್ರಾ ಮೈಸೂರು ಒಬ್ಬ ಬದುಕು ರೂಪಿಸಿಕೊಳ್ಳಲು ಹೋರಾಟ ಮಾಡುತ್ತಿರುವವನ ಕಥೆಯನ್ನು ಹೇಳಲು ಹೊರಟಿದೆ. ಅವನು ಕನಸು ಕಾಣುತ್ತಾನೆ. ಆ ಕನಸನ್ನು ಮುಟ್ಟಲು ಅವನು ಯಾವೆಲ್ಲಾ ಅಡೆತಡೆಗಳನ್ನು ಎದುರಿಸುತ್ತಾನೆ. ಏನೆಲ್ಲಾ ಹೋರಾಟ ಮಾಡುತ್ತಾನೆ. ಅವರ ವೈಯಕ್ತಿಕ ಜೀವನದ ಮೇಲೆ ಎಷ್ಟು ಪರಿಣಾಮ ಬೀರುತ್ತೆ. ಅದನ್ನೆಲ್ಲಾ ಮೀರಿ ಅವನು ಹೇಗೆ ಸಾಧನೆ ಮಾಡುತ್ತಾನೆ ಅನ್ನೋದು ಸಿನಿಮಾ ತಿರುಳು. ಇದು ಒಬ್ಬ ವ್ಯಕ್ತಿ ಆರ್ಕೆಸ್ಟ್ರಾ ಸಿಂಗರ್ ಆಗಬೇಕು ಅನ್ನೋದಷ್ಟೇ ಅಲ್ಲದೆ,ಈ ಕಥೆ ಎಲ್ಲರಿಗೂ ಹೋಲಿಕೆಯಾಗುತ್ತೆ."

ಎಲ್ಲಾ ಹೋರಾಟಗಾರರಿಗಾಗಿ ಈ ಸಿನಿಮಾ
"ಬರೀ ಆರ್ಕೆಸ್ಟ್ರಾ ಸಿಂಗರ್ ಅಂತಷ್ಟೇ ಅಲ್ಲ. ಚಿತ್ರರಂಗದಲ್ಲಿ ಆಕ್ಟರ್ ಆಗಬೇಕು ಅಂತ ಬಂದೋರಿಗೆ, ಡೈರೆಕ್ಟರ್ ಆಗಬೇಕು ಅಂತ ಬಂದೋರಿಗೆ, ಯಾವುದೋ ಒಂದು ನಾಟಕ ಕಂಪನಿ ಶುರು ಮಾಡಿದವರಿಗೆ, ಹಪ್ಪಳಗಳನ್ನು ಹಂಚುತ್ತಿರೋ ಒಂದು ಐದು ಅಂಗಡಿಯನ್ನು ಹುಡುಕಬೇಕಿರುತ್ತೆ. ಅಲ್ಲಿಗೆ ಹೋಗಿ ಪ್ರಾಬಲ್ಯ ಮೀರಿ ಡಿಸ್ಟ್ರಿಬ್ಯೂಟರ್ ಅಂತ ಆಗಬೇಕಿರುತ್ತೆ. ಎಲ್ಲಾ ವರ್ಗದಲ್ಲಿರುವ ಹೋರಾಟಗಾರರಿಗೂ ಈ ಸಿನಿಮಾ ಹೊಂದಾಣಿಕೆಯಾಗುತ್ತೆ."

'ವೈಯಕ್ತಿಕವಾಗಿ ನಾನು ಸ್ಟ್ರಗಲ್ ಮಾಡಿಲ್ಲ'
"ಇದು ನಂದೇ ಕಥೆ ಅಂತ ಹೇಳಬಹುದು. ರಘು ದೀಕ್ಷಿತ್ ಮ್ಯೂಸಿಕ್ ಮಾಡಿದ್ದಾರೆ ಅವರದ್ದೇ ಕಥೆ ಅಂತ ಹೇಳಬಹುದು. ಧನಂಜಯ ಲಿರಿಕ್ಸ್ ಬರೆದಿದ್ದಾರೆ ಅವರದ್ದೇ ಕಥೆ ಅಂತ ಹೇಳಬಹುದು. ವೈಯಕ್ತಿಕವಾಗಿ ನಾನು ಸ್ಟ್ರಗಲ್ ಮಾಡಿದ್ಯಾ ಅಂತ ಕೇಳಿದ್ರೆ.. ಇಲ್ಲ ನಾನು ಸ್ಟ್ರಗಲ್ ಮಾಡಿಲ್ಲ. ಯಾಕಂದ್ರೆ ಸ್ನೇಹಿತರು ಆ ಫೀಲಿಂಗ್ ಅನ್ನೇ ಕೊಟ್ಟಿಲ್ಲ. ಯಾವಾಗಲೂ ನನ್ನ ಜೊತೆಯಲ್ಲಿ ನಿಂತಿದ್ದರು. ನನ್ನ ತಾಯಿ ಕೂಡ ತುಂಬಾ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಆದರೆ, ಹತಾಶೆಯಂತೂ ಇದ್ದೇ ಇತ್ತು."

ನಾನು, ಧನಂಜಯ್ ಒಟ್ಟಿಗೆ ನಾಟಕ ಮಾಡಿದ್ದೇವೆ
"ನಾನು ಮೈಸೂರಿನಲ್ಲಿ ಕಾಲೇಜು ದಿನಗಳಿಂದಲೂ ನಾಟಕಗಳನ್ನು ಮಾಡುತ್ತಿದ್ದೆ. ನಾಟಕಗಳಲ್ಲಿ ಮಾಡುತ್ತಾ, ಮಾಡುತ್ತಾ ನಾವು ಮೈಸೂರಿನ ಜಿಪಿಐಆರ್ ಅಂತ ಥಿಯೇಟರ್ ಗ್ರೂಪ್ನಲ್ಲಿ ನಾವೆಲ್ಲ ಒಟ್ಟಿಗೆ ಇದ್ದೆವು. ನಾನು, ಧನಂಜಯ್, ನಾಗಭೂಷಣ್ ನಮ್ಮ ಸಿನಿಮಾ ನಿರ್ದೇಶಕರಾದ ಸುನೀಲ್, ನಮ್ಮ ಜೊತೆ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಮಾದೇವ ಪ್ರಸಾದ್ ನಾವೆಲ್ಲಾ ಒಟ್ಟಿಗೆ ನಾಟಕ ಮಾಡುತ್ತಿದ್ದವರು. ಆಗ ನಾವು ಸಿನಿಮಾ ಮಾಡಬೇಕು ಅಂತ ಕನಸು ಕಾಣುತ್ತಿದ್ದೆವು. ಆಗ ವೈಲ್ಡ್ ಲೈಫ್ ಫೋಟೊಗ್ರಾಫರ್ ಕೃಪಾಕರ್ ಸೇನಾನಿ ಸಿಗುತ್ತಾರೆ. ಅವರು ಸಿಕ್ಕಿ ನಮ್ಮದೊಂದು ಶಾರ್ಟ್ ಫಿಲ್ಮ್ ನೋಡಿ, ನನ್ನದೇ ಕ್ಯಾಮರಾ ಎಡಿಟಿಂಗ್ ಸೆಟಪ್ ಕೊಡುತ್ತೇನೆ. ಏನು ಮಾಡುತ್ತೀರೋ ಮಾಡಿ. ಸಿನಿಮಾ ಮಾಡೋದನ್ನು ಕಲಿಯಿರಿ ಎಂದಿದ್ರು. ಸಿನಿಮಾ ಮಾಡಬೇಕು ಅಂತ ಬಂದಾಗ ಆರ್ಕೆಸ್ಟ್ರಾ ಮೈಸೂರು ಟೀಮ್ ಏನಿದೆ, ನಾವೆಲ್ಲಾ ಒಟ್ಟಿಗೆ ಜರ್ನಿ ಮಾಡಿದ್ದೇವೆ."

'ಆರ್ಕೆಸ್ಟ್ರಾ ಮೈಸೂರು' ಕಥೆ ಹುಟ್ಟಿದ್ದೇಗೆ?
"ಈ ಸಿನಿಮಾ ಮಾಡಬೇಕು ಅಂದಾಗ ನಮಗೆ ಗೊತ್ತಾಗಿದ್ದು ಆರ್ಕೆಸ್ಟ್ರಾ ಸೀಸನ್ ಅಂತ ಇರುತ್ತೆ ಅಂತ. ಮೊದಲು ಅದು ಶುರುವಾಗೋದು ಗಣೇಶನ ಹಬ್ಬದಿಂದ ಹಿಡಿದು ದಸರಾ ದಾಟಿ ಕನ್ನಡ ರಾಜ್ಯೋತ್ಸವದ ತನಕ ಬರುತ್ತೆ. ಈ ಸೀಸನ್ ಆದ ಬಳಿಕ ಅವರು ಏನು ಮಾಡುತ್ತಾರೆ. ಅಲ್ಲಿ ದುಡಿದನ್ನು ಇಟ್ಕೊಂಡು ವರ್ಷ ಪೂರ್ತಿ ಜೀವನ ಮಾಡೋಕೆ ಆಗಲ್ಲ. ಇದನ್ನೆಲ್ಲಾ ಸ್ಟಡಿ ಮಾಡಿದಾಗ, ಅವರೆಲ್ಲ ಆಟೋ ಡ್ರೈವರ್ ಆಗಿರುತ್ತಾರೆ. ಅಡುಗೆ ಭಟ್ಟ ಆಗಿರುತ್ತಾರೆ.ಟ್ರೈಲರ್ ಆಗಿರುತ್ತಾರೆ. ಹೀಗೆ ಬೇರೆ ಕೆಲಸ ಮಾಡಿಕೊಂಡಿರುತ್ತಾರೆ. ಹೀಗೆ ಒಂದು ಎಳೆ ಸಿಕ್ಕಿತ್ತು. ಆಗ ಸಿಂಗರ್ ಇಟ್ಕೊಂಡು ಕಥೆ ಹೆಣೆಯೋಕೆ ಶುರು ಮಾಡಿದ್ದೆವು." ಎನ್ನುತ್ತಾರೆ ಹೀರೊ ಪೂರ್ಣಚಂದ್ರ.


Click it and Unblock the Notifications











