'ಕಾಕ ಮುಟ್ಟೈ' ಗೆಲ್ತು.. 'ಪುಟ್ಟಕ್ಕನ ಹೈವೇ' ನೋಡ್ಲಿಲ್ಲ: 'ಡೊಳ್ಳು ಮತ್ತೊಂದು ಪ್ರಯತ್ನವೆಂದ ಪವನ್!
ರಾಷ್ಟ್ರ ಪ್ರಶಸ್ತಿ ಪಡೆದ ಸಿನಿಮಾಗಳು ಥಿಯೇಟರ್ಗೆ ಬರೋದೇ ಇಲ್ಲ ಅನ್ನೋ ಮಾತಿದೆ. ಈ ಮಧ್ಯೆನೇ 'ಡೊಳ್ಳು' ಚಿತ್ರಮಂದಿರಕ್ಕೆ ಲಗ್ಗೆ ಇಟ್ಟಿದೆ. ಕನ್ನಡಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ 'ಡೊಳ್ಳು' ಥಿಯೇಟರ್ನಲ್ಲಿ ಪದರ್ಶನ ಕಾಣುತ್ತಿದ್ದು, ನಿರ್ಮಾಪಕ ಪವನ್ ಒಡೆಯರ್ ಸಾಹಸ ಮೆರೆದಿದ್ದಾರೆ.
ಜಾನಪದ ಕಲೆಯನ್ನು ಆಧಾರಿಸಿ ಡೊಳ್ಳು ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಕರ್ನಾಟಕದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಸಿನಿಮಾವನ್ನು ಜನರು ಚಿತ್ರಮಂದಿರದಲ್ಲಿ ನೋಡೋರ ಸಂಖ್ಯೆ ತೀರಾ ಕಡಿಮೆ. ಇನ್ನೊಂದು ಕಡೆ ತಮಿಳು, ತೆಲುಗು, ಮಲಯಾಳಂನಲ್ಲಿ ನ್ಯಾಷನಲ್ ಅವಾರ್ಡ್ ಗೆದ್ದ ಸಿನಿಮಾಗಳೂ ಥಿಯೇಟರ್ನಲ್ಲಿ ಸದ್ದು ಮಾಡುತ್ತವೆ. ಇವೆಲ್ಲದರ ಬಗ್ಗೆ 'ಡೊಳ್ಳು' ಸಿನಿಮಾದ ನಿರ್ಮಾಪಕ ಪವನ್ ಒಡೆಯರ್ ಫಿಲ್ಮಿಬೀಟ್ ಜೊತೆ ಮಾತಾಡಿದ್ದಾರೆ.

ರಾಷ್ಟ್ರ ಪ್ರಶಸ್ತಿ ಸಿನಿಮಾಗಳು ರಿಲೀಸ್ ಆಗಲ್ಲ ಯಾಕೆ?
"ನನಗೆ ಈ ಸಿನಿಮಾ ಮೂಲಕ ಹಣ ಮಾಡುವ ಆಸೆ ಕಂಡಿತಾ ಇಲ್ಲ. ಚಿತ್ರರಂಗದಿಂದ ಒಂದಿಷ್ಟು ಪಡೆದುಕೊಂಡಿದ್ದೇವೆ. ಎಲ್ಲೋ ಒಂದು ಕಡೆ ಆಡಿಯನ್ಸ್ಗೆ ಈ ತರಹದ ಸಿನಿಮಾವನ್ನು ಕೇವಲ ಅವರ ಟೇಸ್ಟ್ಗೆ ಸೀಮಿತವಾಗಿರಿಸದೆ, ಈ ತರಹದ ಸಿನಿಮಾಗಳ ಅಭಿರುಚಿ ಬೆಳೆಸಬೇಕು. ಮಲಯಾಳಂನಲ್ಲಿ, ತಮಿಳಿನಲ್ಲಿ ಇಂತಹ ಸಿನಿಮಾವನ್ನು ನೋಡುತ್ತಾರೆ. ಉದಾಹರಣೆಗೆ ಹೇಳುವುದಾದರೆ, 'ಕಾಕ ಮುಟ್ಟೈ ' ಮತ್ತು 'ಪುಟ್ಟಕ್ಕ ಹೈವೇ' ಎರಡೂ ಸಿನಿಮಾಗೂ ನ್ಯಾಷನಲ್ ಅವಾರ್ಡ್ ಬಂತು. 'ಕಾಕ ಮೊಟ್ಟೈ' ಹೌಸ್ಫುಲ್ ಇತ್ತು. 'ಪುಟ್ಟಕ್ಕನ ಹೈವೇ' ಕಾಲಿ ಇತ್ತು. 'ಪುಟ್ಟಕ್ಕನ ಹೈವೇ' ಕೂಡ ಅದ್ಭುತ ಸಿನಿಮಾ. ಜನರಿಗೆ ಅದೊಂದು ಮೈಂಡ್ ಸೆಟ್ ಇದೆ. ಎಲ್ಲಿವರೆಗೂ ಜನರಿಗೆ ನಾವು ಅಭ್ಯಾಸ ಮಾಡಿಸುವುದಿಲ್ಲವೋ ಅವರು ನೋಡುವುದಿಲ್ಲ. ಇಂತಹ ಸಿನಿಮಾಗೆ ಮಾರ್ಕೆಂಟಿಂಗ್ ಕೂಡ ಹಾಗೇ ಮಾಡಬೇಕು. ಹಾಗಾಗಿ ಒಂದು ಪ್ರಯತ್ನ ಮಾಡಿದ್ದೇನೆ. ಎಷ್ಟರ ಮಟ್ಟಗೆ ಸಕ್ಸಸ್ ಆಗ್ತಿನೋ ಗೊತ್ತಿಲ್ಲ." ಎನ್ನುತ್ತಾರೆ ಪವನ್ ಒಡೆಯರ್.

ಎರಡೆರಡು ಮೈಂಡ್ಸೆಟ್ ಯಾಕೆ?
"ನಾನು ಗಮನಿಸಿದ ಹಾಗೇ, ಬೇರೆ ಕಡೆ ಹೇಗೆ ಹೀರೊಯಿಸಂ ಅನ್ನು ಇಷ್ಟ ಪಡುತ್ತಾರೋ, ಅದನ್ನೇ ಇಲ್ಲೂ ಕಾಪಿ ಮಾಡಲಾಗುತ್ತಿದೆ. ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಸಿನಿಮಾ ಅಂದರೆ ಎಮೋಷನ್. ಅಲ್ಲಿ ಆಂಧ್ರ-ತಮಿಳು ನಾಡಿನಲ್ಲಿ ಹೊಸಬರ ಸಿನಿಮಾಗಳಿಗೂ ಒಂದು ಕನಿಷ್ಟ ಮಾರ್ಕೆಟ್ ಇದೆ. ನಮ್ಮಲ್ಲಿ ಅದು ಇಲ್ಲ. ನಾವೂ ಆ ಪ್ರಯತ್ನ ಮಾಡಬೇಕು. ಒಂದೆರಡು ಬಾರಿ ಸೋಲಬಹುದು. ಬಳಿಕ ಇಂತಹದ ಸಿನಿಮಾ ಗೆಲ್ಲಿಸಬೇಕು ಅಂತ ಬರಬಹುದು. ಆ ಪ್ರಯತ್ನವನ್ನು ಮಾಡುತ್ತಿದ್ದೇವೆ."

ಸದಾಭಿರುಚಿಯ ಸಿನಿಮಾ ನಿರ್ಮಿಸಿದ್ದೇಕೆ?
"ಕಮರ್ಷಿಯಲ್ ಸಿನಿಮಾವನ್ನು ನಾನು ನಾಳೆ ಶುರು ಮಾಡಬಹುದು. ನನ್ನ ಬಳಿ 15 ರಿಂದ 20 ಕಥೆ ಯಾವಾಗಲೂ ರೆಡಿಯಿರುತ್ತೆ. ಅದೂ ಬೌಂಡ್ ಸ್ಕ್ರೀಪ್ಟ್. ಯಾವತ್ತೊಂದು ಒಂದು ದಿನ ನಾನು ಹೊಸಬನಾಗಿದ್ದೆ. ಈಗ ಇಷ್ಟು ದೂರ ಬಂದಮೇಲೆ ಹೊಸಬರನ್ನು ಪರಿಚಯ ಮಾಡಿಸಿಲ್ಲ ಅಂದರೆ, ಬಂದಿದ್ದೇ ವ್ಯರ್ಥ. ಅದೊಂದು ಜವಾಬ್ದಾರಿಯಿದೆ. ನಾನು ಹೊಸಬನಾಗಿ ಬಂದಿದ್ದಾಗ ನಾನು ಸುರೇಶ್ ಸರ್ ಹಾಗೂ ಕೋಮಲ್ ಸರ್ ಅವಕಾಶ ಕೊಟ್ಟರು. ಅವರನ್ನು ನಾನು ಲೈಫ್ನಲ್ಲೇ ಮರೆಯೋಲ್ಲ. ಅಪ್ಪು ಸರ್ ಕೂಡ ಇದೇ ಹೇಳುತ್ತಿದ್ದರು. ನಾವು ಮಾಡೋದು ಡ್ಯೂಟಿ ಅನ್ನುತ್ತಿದ್ದರು. ಅವರು ಪಿಆರ್ಕೆ ಹುಟ್ಟಾಕಿದ್ದಿದ್ದು ಅದಕ್ಕೇನೆ. ಅದಕ್ಕೆ ನಾವೀಗ ಪ್ರತಿಭಾವಂತ ಹೊಸಬರಿಗೆ ಅವಕಾಶ ಕೊಡಬೇಕು ಅಂತಿದ್ದೇವೆ."

ಕಮರ್ಷಿಯಲ್ ಸಿನಿಮಾನೂ ಮಾಡುತ್ತಿರಾ?
" ಮೊದಲನೇ ಪ್ರಯತ್ನವಾಗಿ ನಾನು ಈ ಪ್ರಯೋಗ ಮಾಡೋದು ನನ್ನ ಜವಾಬ್ದಾರಿಯಾಗಿತ್ತು. ಎರಡನೇ ಪ್ರಾಜೆಕ್ಟ್ನಿಂದ ಹೊಸಬರ ಜೊತೆಗೆ ಕಮರ್ಷಿಯಲ್ ಸಿನಿಮಾಗಳನ್ನೂ ನಿರ್ಮಾಣ ಮಾಡುತ್ತೇನೆ. ನಾನು ಬದುಕಬೇಕಲ್ಲ."

ಕ್ಲೈಮ್ಯಾಕ್ಸ್ ಬಗ್ಗೆ ಟಾಕ್ ಜೋರಾಗಿದೆಯಲ್ಲ?
" ಡೊಳ್ಳು ಸಿನಿಮಾ ಬಿಡುಗಡೆಯಾಗಿದೆ. ಮೊದಲ ದಿನ ರೆಸ್ಪಾನ್ಸ್ ಚೆನ್ನಾಗಿತ್ತು. ಮುಂದೆ ಹಬ್ಬವಿದೆ. ನೋಡೋಣ ಜನರು ಹೇಗೆ ತಗೋತಾರೆ ಅಂತ. ಗೊತ್ತಿಲ್ಲ. ನಾವುಗಳಂತೂ ಪ್ರಮೋಷನ್ ಮಾಡುತ್ತಲೇ ಇದ್ದೇವೆ. ರಿವ್ಯೂ ಕೂಡ ತುಂಬಾ ಚೆನ್ನಾಗಿದೆ. ಚಿತ್ರರಂಗದವರು ಎಲ್ಲರೂ ತುಂಬಾನೇ ಇಷ್ಟ ಪಟ್ಟಿದ್ದಾರೆ. ಕೊನೆಯ ಕ್ಲೈಮ್ಯಾಕ್ಸ್ಗೆ ನ್ಯಾಷನಲ್ ಅವಾರ್ಡ್ ಬಂದಿದ್ದು ಎನ್ನುತ್ತಿದ್ದಾರೆ."

ಜಿಲ್ಲೆಗಳಲ್ಲಿ 'ಡೊಳ್ಳು' ರಿಲೀಸ್ ಆಗಲ್ವಾ?
"ಉತ್ತರ ಕರ್ನಾಟಕದಿಂದ ತುಂಬಾನೇ ಬೇಡಿಕೆ ಇದೆ. ಶಿವಮೊಗ್ಗದಿಂದಲೂ ಬೇಡಿಕೆ ಇದೆ. ನೋಡೋಣ ಮುಂದೆ ಹೇಗೆ ರೆಸ್ಪಾನ್ಸ್ ಬರುತ್ತೋ ಅದನ್ನು ನೋಡಿಕೊಂಡು ಬೇರೆ ಬೇರೆ ಕಡೆ ಹೇಗೆ ರಿಲೀಸ್ ಮಾಡ್ಬೇಕು ಅಂತ ನೋಡುತ್ತಿದ್ದೇವೆ. " ಎನ್ನುತ್ತಾರೆ ನಿರ್ಮಾಪಕ ಪವನ್ ಒಡೆಯರ್.


Click it and Unblock the Notifications











