Don't Miss!
- News Smartphone: ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರುತ್ತಿದೆ ಸ್ಯಾಮ್ಸಂಗ್ M35 5G
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕವಿ ಹೇಳದ್ದನ್ನು ಕ್ಯಾಮೆರಾ ಹೇಳುವುದರಿಂದ 'ಹಸಿರು ರಿಬ್ಬನ್' ನಿರ್ದೇಶನ: ಎಚ್ಚೆಸ್ವಿ
ಕನ್ನಡದ ಖ್ಯಾತ ಕವಿ ಮತ್ತು ಲೇಖಕರಾದ ಎಚ್.ಎಸ್.ವೆಂಕಟೇಶಮೂರ್ತಿ ರವರು ಎರಡು ದಶಕಗಳಿಂದ ಸಿನಿಮಾ ನಂಟಿದ್ದರು ಸಹ ಈಗ ನಿರ್ದೇಶನಕ್ಕೆ ಮುಂದಾಗಿದ್ದಾರೆ.
ಎಚ್.ಎಸ್.ವಿ ರವರು ಈ ಹಿಂದೆ 'ಚಿನ್ನಾರಿ ಮುತ್ತ', 'ಕೊಟ್ರೇಶಿ ಕನಸು', ಮತ್ತು ಇತ್ತೀಚಿಗೆ ನಿಖಿಲ್ ಮಂಜು ನಿರ್ದೇಶನದ 'ಒಂದೂರಲ್ಲಿ' ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದಿದ್ದಾರೆ. ಅಲ್ಲದೇ ಪುನೀತ್ ರಾಜ್ ಕುಮಾರ್ ಅಭಿನಯದ 'ಮೈತ್ರಿ' ಚಿತ್ರಕ್ಕೆ ಸಾಹಿತ್ಯ, 'ಮುಕ್ತ' ಮತ್ತು 'ಮಹಾ ಪರ್ವ' ಕಿರುತೆರೆ ಧಾರಾವಾಹಿಗಳಿಗೆ ಟೈಟಲ್ ಸಾಂಗ್ ಬರೆದಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಪ್ರಖ್ಯಾತರಾಗಿರುವ ಇವರು ಚಿತ್ರರಂಗದ ಹಲವು ದಿಗ್ಗಜ ನಿರ್ದೇಶಕರ ಚಿತ್ರಗಳಿಗೆ ಕಥೆ, ಸಾಹಿತ್ಯ ಬರೆಯುತ್ತಾ ಎರಡು ದಶಕಗಳಿಂದಲ್ಲೂ ಸಿನಿಮಾ ಕ್ಷೇತ್ರದವರೊಂದಿಗೂ ಬಾಂಧವ್ಯ ಹೊಂದಿದ್ದಾರೆ. ಅವರು ಈಗ 'ಹಸಿರು ರಿಬ್ಬನ್' ಎಂಬ ಚಿತ್ರವನ್ನು ತಾವೇ ಕಥೆ-ಚಿತ್ರಕಥೆ-ಸಂಭಾಷಣೆ-ಸಾಹಿತ್ಯ ಬರೆದು ನಿರ್ದೇಶನ ಮಾಡಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರೊಂದಿಗೆ ನಡೆಸಿದ ಸಂದರ್ಶನ ಈ ಕೆಳಗಿನಂತಿದೆ.
ಸಂದರ್ಶನ: ಸುನೀಲ್ ಬಿಂಡಹಳ್ಳಿ
2 ದಶಕದಿಂದಲೂ ಸಿನಿಮಾ ನಂಟಿದ್ದರೂ ಈಗ ನಿರ್ದೇಶನಕ್ಕೆ ಮುಂದಾಗಿದ್ದು ಹೇಗೆ?
ಕನ್ನಡದ ದೊಡ್ಡ ನಿರ್ದೇಶಕರುಗಳ ಚಿತ್ರಗಳಿಗೆಲ್ಲಾ ಕಥೆ, ಸಂಭಾಷಣೆ ಎಲ್ಲಾ ಬರೆದಿದ್ದೆ. ನಿಖಿಲ್ ಮಂಜು ನಿರ್ದೇಶನದಲ್ಲಿ 'ಒಂದೂರಿನಲ್ಲಿ' ಸಿನಿಮಾ ಬಂತು. ಅಂದ ಮಕ್ಕಳ ಬಗೆಗಿನ ಈ ಚಿತ್ರಕ್ಕೆ ಹಲವು ಪ್ರಶಸ್ತಿಗಳು ಬಂದುವು. ಆ ಚಿತ್ರಕ್ಕೆ ಕಥೆ, ಹಾಡು, ಸಂಭಾಷಣೆ ಎಲ್ಲಾ ನಾನೆ ಬರೆದಿದ್ದು. ಈ ಬಾರಿ ನಿಖಿಲ್ ಮಂಜು ಅವರ ಗೆಳೆಯರು ಮತ್ತು ನನ್ನ ಸ್ನೇಹಿತರೆಲ್ಲರೂ ನೀವೆ ಒಂದು ಚಿತ್ರ ನಿರ್ದೇಶನ ಮಾಡಿ ಎಂದು ಕೇಳಿಕೊಂಡರೂ. ಅವರಲ್ಲಿ ನಿಸರ್ಗ ಕ್ರಿಯೇಷನ್ ಸಿನಿಮಾ ಪ್ರೊಡಕ್ಷನ್ ನ ನಿರ್ಮಾಪಕ ಕುಮಾರ್ ಸಹ ಒಬ್ಬರು. ಆದ್ದರಿಂದ ನಿರ್ದೇಶನಕ್ಕೆ ಒಪ್ಪಿಕೊಂಡೆ.
'ಹಸಿರು ರಿಬ್ಬನ್' ಚಿತ್ರದ ಬಗ್ಗೆ ಹೇಳಿ?
ನನ್ನದೊಂದು 'ಅನಾತ್ಮಕಥನ' ಎಂಬ ಪುಸ್ತಕವಿದೆ. ಅದನ್ನು ಸ್ವ-ಅನುಭವಗಳ ಪ್ರಬಂಧಗಳು ಎಂದೇಳಬಹುದು. ಅದರಲ್ಲಿ ಒಂದು ಅಧ್ಯಾಯವನ್ನು ಇಟ್ಟುಕೊಂಡು 'ಹಸಿರು ರಿಬ್ಬನ್' ಸಿನಿಮಾ ಮಾಡುತ್ತಿದ್ದೇವೆ. ಅಮಾಯಕರನ್ನು ಸ್ವಾರ್ಥಿಗಳು ಹೇಗೆ ಮೋಸ ಮಾಡುತ್ತಾರೆ ಎಂಬುದನ್ನು ಚಿತ್ರದ ಮೂಲಕ ಹೇಳಹೊರಟಿದ್ದೀವಿ.
ಪುಸ್ತಕದಲ್ಲಿ ಬಂದಿರುವ ಕಥೆಯನ್ನು, ಮತ್ತೆ ಸಿನಿಮಾದಲ್ಲಿ ಅಳವಡಿಸಿಕೊಳ್ಳಲು ಕಾರಣ?
ಒಂದು ನಮ್ಮ ನಿರ್ಮಾಪಕರು ಆ ಕಥೆಯನ್ನೇ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ. ನನಗೂ ಪ್ರಿಯವಾದ ಕಥೆ. ಸಾಹಿತ್ಯವಾಗಿ ಒಂದು ಕಥೆ ಬರುವುದು ಬೇರೆ. ಸಿನಿಮೀಯವಾಗಿ ಬರುವುದು ಬೇರೆ. ಚಿತ್ರದಲ್ಲಿ ಅನೇಕ ಅಂಶಗಳು ಬಂದು ಸೇರಿಕೊಳ್ಳುತ್ತವೆ. ಅನೇಕ ಸಂಗತಿಗಳನ್ನು ಮಾತಲ್ಲಿ ಹೇಳಲಾಗದ್ದನ್ನು ಕ್ಯಾಮೆರಾ ಹೇಳುತ್ತದೆ. ಹೆಚ್ಚು ಜನರಿಗೆ ತಲುಪಿಸಬಹುದು.
ನಿರ್ದೇಶನಕ್ಕೆ ತಯಾರಿ ಹೇಗಿದೆ?
ವಿಶೇಷ ತಯಾರಿ ಏನಿಲ್ಲ. ನಾನು ಕಥೆ ಬರೆಯಬೇಕಾದ್ರೆನೇ ಡೈರೆಕ್ಷನ್ ಆಗುತ್ತೆ. ಅಲ್ಲಿ ಕಥೆ ಜೊತೆಗೆ ಪಾತ್ರಗಳು, ಲೊಕೇಶನ್, ಸಂಭಾಷಣೆ ಎಲ್ಲವೂ ಮನಸ್ಸಿನಲ್ಲೇ ಬರುತ್ತದೆ. ಇದೊಂದು ಸರಳ ಸುಂದರವಾದ ಸೂಕ್ಷ್ಮವಾದ ಕಥೆಯನ್ನು, ಅಭಿರುಚಿಯುಳ್ಳ ಪ್ರೇಕ್ಷಕರಿಗಾಗಿ ಮಾಡುತ್ತಿರುವ ಸಿನಿಮಾ.
ಈ ವಯಸ್ಸಿನಲ್ಲಿ ನಿರ್ದೇಶನ ಶ್ರಮ ಎನಿಸುವುದಿಲ್ಲವೇ?
-ಶ್ರಮ ಅಂದುಕೊಂಡರೇ ಶ್ರಮ ಆಗುತ್ತೆ. ಬೇಡದ ಕೆಲಸ ಮಾಡಿದರೆ ಬೇಸರ ಆಗುತ್ತೆ. ಆದರೆ ಪ್ರೀತಿಯಿಂದ ನಮಗೆ ಬೇಕಾದ ಕೆಲಸ ಮಾಡಬೇಕಾದ್ರೆ ಶ್ರಮ ಕಾಣುವುದಿಲ್ಲ. ಇನ್ನು ಉತ್ಸಾಹ ಹೆಚ್ಚಾಗೆ ಇರುತ್ತದೆ. ಅಂತಹ ಉತ್ತಮ ಕೆಲಸಗಳನ್ನು ಮಾಡಿ ಮುಗಿಸುವವರೆಗೆ ನಿದ್ದೆಯೂ ಬರುವುದಿಲ್ಲ.
ಚಿತ್ರದಲ್ಲಿ ಯಾರೆಲ್ಲಾ ಅಭಿನಯಿಸಲಿದ್ದಾರೆ?
ಗಿರಿಜಾ ಲೋಕೇಶ್ ರವರು ಒಪ್ಪಿದ್ದಾರೆ. ನಿಖಿಲ್ ಮಂಜು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಾರೆ. ಒಂದು ಮುದ್ದಾದ ಮಗುವನ್ನು ಆಯ್ಕೆ ಮಾಡಿದೀವಿ. ಈ ಮೂರು ಕ್ಯಾರೆಕ್ಟರ್ ಫೈನಲ್ ಆಗಿವೆ. ಇನ್ನೊಂದು ನಾಲ್ಕು ಹೆಣ್ಣು ಮಕ್ಕಳು ಚಿತ್ರಕ್ಕೆ ಬೇಕಾಗಿದೆ. ನಿರ್ಮಾಪಕರು ನೋಡುತ್ತಿದ್ದಾರೆ. ಅವರು ಕರೆದುಕೊಂಡು ಬಂದು ತೋರಿಸಿ ನಾನು ಒಪ್ಪಿದರೆ ಅದು ಮುಗಿಯುತ್ತೆ. ಸೆಪ್ಟೆಂಬರ್ ನಲ್ಲಿ ಶೂಟಿಂಗ್ ನಡೆಯುತ್ತೆ.
ಚಿತ್ರೀಕರಣ ಎಲ್ಲೆಲ್ಲಿ ನಡೆಯಲಿದೆ?
ಲೊಕೇಶನ್ ಇನ್ನು ಆಯ್ಕೆ ಆಗಿಲ್ಲ. ಆದರೆ ಬೆಂಗಳೂರಿನ ಸುತ್ತಮುತ್ತ 50 ಕಿ.ಮೀ ಒಳಗಡೆಯೇ ತುಂಬಾ ಹಸಿರು ಪ್ರದೇಶದಲ್ಲಿ ಶೂಟ್ ಮಾಡಬೇಕು ಅಂದುಕೊಂಡಿದ್ದೇವೆ. ಇನ್ನೂ ಚಿತ್ರಕಥೆ ಮುಗಿದ ಮೇಲೆಯೇ ಎಂತಹ ಲೊಕೇಶನ್ ಬೇಕು ಅನ್ನೋದು ತಿಳಿಯೋದು. ಕಥೆಯ ಮೇಲೆ ಡಿಪೆಂಡ್.
ಮತ್ತೆ ನಿರ್ದೇಶನ ಮಾಡುವ ಐಡಿಯಾ ಇದೆಯೇ?
ಸದ್ಯಕ್ಕೆ ಇಲ್ಲ. ಈ ಚಿತ್ರ ಮಾಡಲು ಒಪ್ಪಿಕೊಂಡಿದ್ದೇನೆ. ಈ ಜವಾಬ್ದಾರಿನ ಮುಗಿಸಬೇಕು. ನಾನು ಸಹ ಏನ್ ಮಾಡಬಹುದು ಅನ್ನೋದನ್ನ ತಿಳಿದುಕೊಳ್ಳಬೇಕು. ಮೊದಲಿನಿಂದಲೂ ಚಿತ್ರ ಮಾಡುವ ಅಪೇಕ್ಷೆ ಇತ್ತು. ಅದು ಈಗ ಈಡೇರುತ್ತಿದೆ.
'ಹಸಿರು ರಿಬ್ಬನ್' ಏಕೆ ನೋಡಬೇಕು?
'ಹಸಿರು ರಿಬ್ಬನ್' ಚಿತ್ರವನ್ನು ಒಂದು ವಿಚಾರಕ್ಕೋ, ನೀತಿಗೊ, ಕಥೆ ದೃಷ್ಟಿಯಿಂದ ನೋಡಬೇಕಿಲ್ಲ. ಇದೆಲ್ಲದಕ್ಕೂ ಮೀರಿದ ಒಂದು ಅಸ್ತಿತ್ವಕ್ಕಾಗಿ ನೋಡಬೇಕು. ಒಂದು ಚಿತ್ರ ನೋಡಿದ ಮೇಲೆ ಪ್ರತಿಯೊಬ್ಬರಿಗೂ ಸಂಥಿಂಗ್ ಏನಾದರೂ ಒಂದು ಸೂಕ್ಷ್ಮ ವಿಷಯ ಆಡ್ ಆಗಿರುತ್ತದೆ. ಪುಸ್ತಕ, ಕಾದಂಬರಿಗಳನ್ನು ಓದುವುದರಿಂದ, ಸಿನಿಮಾ ನೋಡುವುದರಿಂದ ಬದುಕಿನ ಸಂಪನ್ನತೆ ಹೆಚ್ಚಾಗುತ್ತಾ ಹೋಗುತ್ತದೆ. ಅಂತಹ ಒಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ಅಂತಹ ಪ್ರಯೋಜನ ಇಲ್ಲಿದಿದ್ದರೇ ಚಿತ್ರ ಮಾಡಿ ಏನು ಪ್ರಯೋಜನ?.