ಗೌತಮ್ ಮೆನನ್ ನಿರ್ದೇಶನದಲ್ಲಿ ತಮಿಳಿಗೆ ಕಾಲಿಟ್ಟ ಶಿವಮಣಿ: ಮಗನ ಚಿತ್ರದಲ್ಲಿ ಅಪ್ಪನೇ ವಿಲನ್!
ಕನ್ನಡ ಚಿತ್ರರಂಗ ಅನುಭವಿ ನಿರ್ದೇಶಕ ಶಿವಮಣಿ. 'ಗೋಲಿಬಾರ್', 'ದೊರೆ', 'ವಿಶ್ವ', 'ಕುಬೇರ', 'ಅಶೋಕ', 'ತಿರುಪತಿ', 'ಮಸ್ತಿ', 'ಜೋಶ್' ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಮಾಸ್ ಸಿನಿಮಾಗಳನ್ನೇ ಹೆಚ್ಚಾಗಿ ನಿರ್ದೇಶಿರೋ ಶಿವಮಣಿ ಇತ್ತೀಚೆಗೆ ನಟನೆ ಮೂಲಕ ಜನಪ್ರಿಯರಾಗುತ್ತಿದ್ದಾರೆ.
ಕನ್ನಡದಲ್ಲಿ 'ಲವ್ ಯೂ','ಖಾಕಿ', 'ಬೆಳ್ಳಿ ಬೆಟ್ಟ', ಹೀರೊ ಆಗಿಯೂ ಕಾಣಿಸಿಕೊಂಡಿದ್ದರು. 'ಅಶೋಕ' ಸಿನಿಮಾ ಪೊಲೀಸ್ ಪಾತ್ರ ಸೇರಿದಂತೆ 'ಟೈಗರ್ ಗಲ್ಲಿ', 'ಬೆಲ್ಬಾಟಂ' ಇತ್ತೀಚೆಗೆ ತೆರೆಕಂಡ ವಿಕ್ರಂ ಸಿನಿಮಾದಲ್ಲಿ ನಟಿಸಿದ್ದಾರೆ.
ವಿಶೇಷ ಅಂದ್ರೆ, ಶಿವಮಣಿ ತಮಿಳಿನ ಸ್ಟಾರ್ ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಅವರ ನಿರ್ದೇಶನ ಸೂಪರ್ ಹಿಟ್ ಸಿನಿಮಾ 'ವೆಂದು ತನಿಂದಥು ಕಾಡು' ಸಿನಿಮಾದ ಚಾಪ್ಟರ್ 1 ಮೂಲಕ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಇದೇ ಸಿನಿಮಾದ ಚಾಪ್ಟರ್ 2ನಲ್ಲಿ ಪೂರ್ಣ ಪ್ರಮಾಣದ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಅನುಭವವನ್ನು ಶಿವಮಣಿ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.

ತಮಿಳು ಸಿನಿಮಾದಲ್ಲಿ ಮಿಂಚುತ್ತಿದ್ದೀರಾ?
"ವೆಂದು ತನಿಂದಥು ಕಾಡು ಅಂತ ಸಿನಿಮಾ ಹೆಸರು. ಸಾಹಿತ್ಯ ಕ್ಷೇತ್ರದಲ್ಲಿ ಜಯಮೋಹನ್ ಅನ್ನೋದು ಒಂದು ದೊಡ್ಡ ಹೆಸರು. ಪೊನ್ನಿಯಿನ್ ಸೆಲ್ವನ್ಗೂ ಇವರೇ ಡೈಲಾಗ್ ಬರೆದಿದ್ದಾರೆ. ಇವರು ಕಥೆ ಬರೆದಿರೋ ಸಿನಿಮಾವಿದು. ಈ ಟೈಟಲ್ ಅರ್ಥ ಬೆಂದು ಆರಿರುವ ಕಾಡು ಅಂತ. ಎರಡು ಚಾಪ್ಟರ್ಗಳಲ್ಲಿ ಬರುವ ಸಿನಿಮಾವಿದು. ಸಿಂಬು ಅವರದ್ದು ಲೀಡ್ ರೋಲ್. ಸೆಪ್ಟೆಂಬರ್ ತಿಂಗಳ 15ರಂದು ಈ ಸಿನಿಮಾ ರಿಲೀಸ್ ಆಗಿದೆ. ದೊಡ್ಡ ಹಿಟ್ ಆಗಿದೆ. ಚಾಪ್ಟರ್ 2 ಶುರುವಾಗಬೇಕಿದೆ. ಚಾಪ್ಟರ್ 2 ನಲ್ಲಿ ನನ್ನ ಪಾತ್ರ ಹೆಚ್ಚಿರುತ್ತೆ. ಚಾಪ್ಟರ್ 1ನಲ್ಲಿ ಕ್ಲೈಮ್ಯಾಕ್ಸ್ನಲ್ಲಿ ಬರುತ್ತೇನೆ. ನನ್ನಿಂದಲೇ ಸಿನಿಮಾ ಎಂಡ್ ಆಗುತ್ತೆ."

ನಿಮ್ಮ ಪಾತ್ರವೇನು?
" ಈ ಸಿನಿಮಾದಲ್ಲಿ ನನ್ನ ಪಾತ್ರ ರಾವುದ್ ಭಾಯ್ ಅಂತ. ದುಬೈನಿಂದ ಮುಂಬೈ, ಲಕ್ನೌನಲ್ಲಿ ಕಂಟ್ರೋಲ್ ಮಾಡುವ ಡಾನ್ ಪಾತ್ರ. ಇವರು ಕಿತ್ತಾಡುತ್ತಿರುತ್ತಾರೆ. ಆಗ ನಾನು ಕಾನ್ಫರೆನ್ಸ್ ಕಾಲ್ನಲ್ಲಿ ಮಾತಾಡುತ್ತೇನೆ. ಆಗ ನಾನು ಕ್ಲೈಮ್ಯಾಕ್ಸ್ನಲ್ಲಿ ಬರುತ್ತೆ. ಇದು ಪಾರ್ಟ್ 1 ಕಥೆ. ಎಲ್ಲಾ ಬಿಟ್ಟು ಹೋಗಬೇಕು ಅನ್ನುವಾಗ ಹೀರೊ ರಾವೂದ್ ಭಾಯ್ ಅನ್ನು ಯಾಕೆ ಭೇಟಿ ಆಗುತ್ತಾನೆ. ಅನ್ನೋದು ಚಾಪ್ಟರ್ 2ನಲ್ಲಿ ಗೊತ್ತಾಗುತ್ತೆ. ಇಲ್ಲಿ ನನ್ನ ಪಾತ್ರದ್ದು 5 ವರ್ಷದ ಕಥೆಯಿದೆ."

ತಮಿಳು ಸಿನಿಮಾಗೆ ಅವಕಾಶ ಸಿಕ್ಕಿದ್ದೇಗೆ?
" ವಾಸುದೇವ್ ಮೆನನ್ಗೆ ನನ್ನ ಮಗ ಅಸೋಸಿಯೇಟ್ ಡೈರೆಕ್ಟರ್. ನಾಲ್ಕು ವರ್ಷದಿಂದ ಅವನು ಅಲ್ಲಿ ಕೆಲಸ ಮಾಡುತ್ತಿದ್ದಾನೆ. ಒಂದು ಇಂಟ್ರೆಸ್ಟಿಂಗ್ ಫೇಸ್ ಹುಡುಕುತ್ತಿದ್ದರು. ಜೇಮ್ಸ್ನಲ್ಲಿ ಇದ್ದಂತಹ ಲುಕ್ ಅನ್ನು ಅವರಿಗೆ ಕಳುಹಿಸಿಕೊಟ್ಟಿದೆ. ಅದು ಅವರಿಗೆ ಇಷ್ಟ ಆಯ್ತು. ಹಾಗೆ ಕನೆಕ್ಟ್ ಆಗಿ ಸಿಕ್ಕಿದ ಪಾತ್ರವಿದು. ಗೌತಮ್ ಮೆನನ್ ಅಂತ ನಿರ್ದೇಶಕರ ಜೊತೆ, ಸಿಂಬು ಅಂತಹ ಸ್ಟಾರ್ ಜೊತೆ ಕೆಲಸ ಮಾಡೋಕೆ ಅವಕಾಶ ಸಿಗೋದು ದೊಡ್ಡ ವಿಷಯ."

ಇದೇ ಮೊದಲ ತಮಿಳು ಸಿನಿಮನಾ?
" ನಾನು ಬೆಲ್ ಬಾಟಂನ ತಮಿಳು ಅವತರಣಿಕೆ ಮಾಡಿದ್ದೇನೆ. ಆದರೆ, ಆ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. 'ವೆಂದು ತನಿಂದಥು ಕಾಡು' ರಿಲೀಸ್ ಆಗಿರುವುದರಿಂದ ಇದೇ ನನ್ನ ಮೊದಲ ಸಿನಿಮಾ ಆಗುತ್ತೆ. ಆ ಸಿನಿಮಾ ಇನ್ನೂ ರಿಲೀಸ್ ಆಗಬೇಕಿದೆ. ಕೋವಿಡ್ ಬಂದಿದ್ದರಿಂದ ಸ್ವಲ್ಪ ಸಮಯ ಹಿಡಿಯುತ್ತಿದೆ ಎನಿಸುತ್ತಿದೆ."

ನಿರ್ದೇಶನಕ್ಕೆ ಕಾಲಿಟ್ಟಿದ್ದು ಹೇಗೆ?
"ನಾನು ರಂಗಭೂಮಿಯಿಂದ ಬಂದವನು. ಆರ್.ನಾಗೇಶ್ ಅವರ ಜೊತೆ ಇದ್ದವನು. 16 ವರ್ಷದಿಂದಲೇ ರಂಗಭೂಮಿ ಜೀವನ ಶುರುವಾಗಿತ್ತು. ನನ್ನ ಸೀನಿಯರ್ ಆಗಿದ್ದವರು ಪ್ರಕಾಶ್ ರೈ, ಸತ್ಯಸಂಧ, ನಳಿನಾ ಮೂರ್ತಿ ಅವರೆಲ್ಲಾ ಥಿಯೇಟರ್ನಲ್ಲಿ ಇದ್ದರು. ಆಗ ಆಕ್ಟರ್ ಆಗಬೇಕು ಅಂತ ಒಲವಿದ್ದವನು. ಅದೇ ಆಸೆ ಮೇಲೆ ನಾನು ಚಿತ್ರರಂಗಕ್ಕೆ ಬಂದವನು. ಆಗ ಯಾರೋ ಹೇಳಿದ್ರು. ನೀವು ನಿರ್ದೇಶಕನ ಜೊತೆ ಇದ್ರೆ, ಯಾರೋ ನಟ ಬರಲಿಲ್ಲ ಅಂದ್ರೆ, ಡೈರೆಕ್ಟರ್ಗೆ ನೀವು ಇಷ್ಟ ಆದ್ರೆ ಒಂದು ಅವಕಾಶ ಸಿಗುತ್ತೆ ಅಂತ. ಹಾಗಾಗಿ ಸಹಾಯಕ ನಿರ್ದೇಶಕನಾದೆ, ವಿ.ಸೋಮಶೇಖರ್, ಜೋ ಸೈಮನ್ ಅವರೊಂದಿಗೆ ಕೆಲಸ ಮಾಡಿದೆ. ಈ ಮಧ್ಯೆ ತಮಿಳಿಗೂ ಹೋಗಿದ್ದೆ. ಅಲ್ಲಿ ಮೂರು ವರ್ಷ ಇದ್ದರೂ, ಸಹಾಯಕ ನಿರ್ದೇಶಕನಿಂದ ಸಹನಿರ್ದೇಶಕನಾಗಲೇ ಇಲ್ಲ. ಯಾಕಂದ್ರೆ, ತಮಿಳು ಭಾಷೆ ಬರುತ್ತಿರಲ್ಲಿ. ಹೀಗಾಗಿ ಮತ್ತೆ ಕರ್ನಾಟಕಕ್ಕೆ ಬಂದು 1992ರಲ್ಲಿ ನಿರ್ದೇಶಕನಾದೆ."

ನಿರ್ದೇಶಕ ನಟನಾಗಿದ್ದೇಗೆ?
"ಉಪೇಂದ್ರ ಹೀರೊ ಆದ್ರು. ಆಗ ನಿರ್ದೇಶಕರು ಹೀರೊ ಆಗೋ ಸರದಿ ಬಂತು. ಓಂ ಪ್ರಕಾಶ್ ಆದ್ರು, ನಾರಾಯಣ್ ಆದ್ರು, ಮಹೇಂದ್ರ ಆದ್ರು. ಆಗ ನಾನು 'ಲವ್ ಯೂ', 'ಖಾಕಿ', 'ಬೆಳ್ಳಿ ಬೆಟ್ಟ', 'ಅಶೋಕ' ನಾಲ್ಕು ಸಿನಿಮಾದಲ್ಲಿ ಮಾಡಿದ್ದೆ. ಮೂರು ಸಿನಿಮಾದಲ್ಲಿ ಹೀರೊ. ಅಶೋಕದಲ್ಲಿ ಪೊಲೀಸ್ ಅಧಿಕಾರಿ. ಆ ನಂತರ ಬೇಡ ಅಂತ ಅನಿಸಿತ್ತು. ಕ್ರಿಯೇಟಿವ್ ಪ್ರೋಸೆಸ್ನಲ್ಲಿ ಇರೋನು ಸೆಟ್ಟಲ್ಲಿ ಸುಮ್ಮನೆ ಕೂರಲು ಆಗಲ್ಲ. ಇನ್ನೂ ಒಳ್ಳೆ ಸಿನಿಮಾ ಮಾಡಬೇಕು ಅಂತ ಅನಿಸಿತ್ತು. ಆಗ ನಟನಾಗಿ ಬೆಳೆಯುವ ಎಲ್ಲಾ ಅವಕಾಶವಿತ್ತು. ಆಮೇಲೆ 'ವಿನ್ನರ್', 'ಓಂಕಾರ','ತಿರುಪತಿ', 'ಮಸ್ತಿ', 'ಜೋಶ್' ಮಾಡಿದೆ. ಈ ಮಧ್ಯೆ ಆಕ್ಟ್ ಮಾಡಿ ಅಂತ ಕೇಳ್ತಾನೇ ಇರೋರು. ಸಿಂಹಾದ್ರಿ ಮಾಡಿದೆ ಅಷ್ಟಾಗಿ ಹೋಗಲಿಲ್ಲ. ಆಗ ಒಂದಿಷ್ಟು ದಿನ ಸಿನಿಮಾ ಮಾಡೋದು ಬೇಡ ಅಂತ ಅನಿಸಿತ್ತು. ಈ ಹಂತದಲ್ಲಿ ರವಿ ಶ್ರೀವತ್ಸ ಟೈಗರ್ ಗಲ್ಲಿ ಸಿನಿಮಾದಲ್ಲಿ ನಟಿಸಬೇಕು ಅಂತ ಒತ್ತಾಯಿಸಿದ್ರು. ಆಮೇಲೆ ಬೆಲ್ಬಾಟಂ ಮಾಡಿದೆ. ಆಮೇಲೆ ಸಾಲು ಸಾಲು ಅವಕಾಶಗಳು ಸಿಗೋಕೆ ಶುರುವಾಯ್ತು."

ಕಾಲಿವುಡ್ನಲ್ಲಿ ರೆಸ್ಪಾನ್ಸ್ ಹೇಗಿದೆ?
"ಗೌತಮ್ ಮೆನನ್ ತುಂಬಾನೇ ಖುಷಿ ಪಟ್ಟಿದ್ದಾರೆ. ನನ್ನ ಜೊತೆ ಇರಿ ಅಂತ ಹೇಳಿದ್ದಾರೆ. ಈ ಸಿನಿಮಾ ರಿಲೀಸ್ ಆದ್ಮೇಲೆ ಕೆಲವು ನಿರ್ದೇಶಕರು ಅಪ್ರೋಷ್ ಮಾಡಿದ್ದಾರೆ. ನೋಡೋಣ ಅಲ್ಲೂ ಒಳ್ಳೊಳ್ಳೆ ಪಾತ್ರಗಳು ಸಿಗುತ್ತೆ ಅನ್ನೋ ನಂಬಿಕೆ ಇದೆ. ನನ್ನ ಮಗ ಅಲ್ಲಿ ಕೆಲಸ ಮಾಡುತ್ತಿರೋದ್ರಿಂದ ನನ್ನ ಮಗನ ಜೊತೆ ಇದ್ದಂಗೂ ಆಗುತ್ತೆ. ನನ್ನ ವೃತ್ತಿನೂ ನಡೆಯುತ್ತೆ. ಇದು ನನ್ನ ಇಲ್ಲಿವರೆಗಿನ ಮನಸ್ಥಿತಿ ಹಾಗೂ ಪರಿಸ್ಥಿತಿ. ಕನ್ನಡದಲ್ಲೂ ಒಳ್ಳೊಳ್ಳೆ ಅವಕಾಶವಿದೆ.

ನಿರ್ದೇಶನಕ್ಕೆ ಗುಡ್ಬೈ ಹೇಳ್ತೀರಾ?
"ಈ ಮಧ್ಯೆ ಸಿನಿಮಾ ಡೈರೆಕ್ಟ್ ಮಾಡಬೇಕು ಅಂದುಕೊಂಡಿದ್ದೇನೆ. ಎಲ್ಲೇ ಹೋದರೂ ಯಾಕೆ ನಿರ್ದೇಶನ ಮಾಡುತ್ತಿಲ್ಲ ಅಂತ ಕೇಳ್ತಾರೆ. ಹೋದ ವರ್ಷನೇ ಮಾಡಬೇಕಿತ್ತು. ಕೋವಿಡ್ ಬಿಡಲಿಲ್ಲ. ಈಗ ಕಥೆ ಎಲ್ಲಾ ಸಿದ್ಧವಾಗಿದೆ. ಮುಂದಿನ ವರ್ಷ ಮೊದಲಾರ್ಧದಲ್ಲಿ ಶುರುವಾಗುತ್ತೆ. ಹಾಗೇ ನಿರ್ದೇಶನ ಹಾಗೂ ನಟನೆ ಎರಡನ್ನೂ ಮುಂದುವರೆಸಬೇಕು ಅಂದ್ಕೊಂಡಿದ್ದೇನೆ." ಎಂದು ಸಿನಿಪ್ರಿಯರಿಗೆ ಭರವಸೆ ನೀಡಿದ್ದಾರೆ ಶಿವಮಣಿ.


Click it and Unblock the Notifications











