ಹಾರರ್ ಥ್ರಿಲ್ಲರ್ 'ಶ್ವೇತ' ಚಿತ್ರ ನಿರ್ದೇಶಕ ರಾಜೇಶ್ ಬಲಿಪ ಸಂದರ್ಶನ
ಈ ವಾರ ಚಂದನವನದಲ್ಲಿ 7 ಚಿತ್ರಗಳು ತೆರೆಕಾಣುತ್ತಿವೆ. ಅವುಗಳಲ್ಲಿ ನವ ನಿರ್ದೇಶಕ ರಾಜೇಶ್ ಆರ್ ಬಲಿಪ ಎಂಬುವರು ನಿರ್ದೇಶನ ಮಾಡಿರುವ 'ಶ್ವೇತ' ಚಿತ್ರವು ಸಹ ಒಂದು.
'ಶ್ವೇತ' ಚಿತ್ರವನ್ನು 'ಎಸ್ ಆರ್ ವೈ ಪ್ರೊಡಕ್ಷನ್ಸ್' ಅಡಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಸೈಂಟಿಫಿಕ್ ಫಿಕ್ಷನ್ ಹಿನ್ನೆಲೆಯ ಹಾರರ್ ಚಿತ್ರವಿದು. ಟ್ರೈಲರ್ ನಿಂದ ಗಮನ ಸೆಳೆದಿರುವ ಈ ಚಿತ್ರಕ್ಕೆ ಹೃದಯ ಶಿವ ಎಂಬುವರು ಸಂಭಾಷಣೆ, ಸಾಹಿತ್ಯ ಬರೆದಿದ್ದಾರೆ. 'ರಾಜು ಕನ್ನಡ ಮೀಡಿಯಂ' ಚಿತ್ರಕ್ಕೆ ಸಂಗೀತ ನೀಡಿರುವ ಕಿರಣ್ ರವೀಂದ್ರನಾಥ್ ರವರು 'ಶ್ವೇತ' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಈ ಚಿತ್ರದ ವಿಶೇಷತೆ ಕುರಿತು ನಿರ್ದೇಶಕ ರಾಜೇಶ್ ಆರ್ ಬಲಿಪ ರವರು ಫಿಲ್ಮಿಬೀಟ್ ನೊಂದಿಗೆ ಮಾತನಾಡಿದ್ದು, ಅವರೊಂದಿಗೆ ನಡೆಸಿದ ಸಂದರ್ಶನ ಈ ಕೆಳಗಿನಂತಿದೆ.
ಸಂದರ್ಶನ: ಸುನೀಲ್ ಬಿಂಡಹಳ್ಳಿ

ಚಿತ್ರದ ಕತೆ ಬಗ್ಗೆ ಹೇಳಿ?
'ಡಿ ಬಗ್ ಬಾಕ್ಸ್' (ಆತ್ಮಗಳನ್ನು ಬಾಟಲಿ ಒಳಗೆ ಬಂದಿಸಿಡುವುದು) ಕಾನ್ಸೆಪ್ಟ್ ನಲ್ಲಿ ಮೂರಿಬಂದಿರುವ ಚಿತ್ರ. ಮೊದಲೆಲ್ಲಾ ನಾನು ಇಂಟರ್ನೆಟ್ ನಲ್ಲಿ 'ಡಿ ಬಗ್ ಬಾಕ್ಸ್' ಬಗ್ಗೆ ಓದುತ್ತಿದ್ದೆ. ಈ ಬಗ್ಗೆ ನನಗೂ ತುಂಬಾ ಕುತೂಹಲವಿತ್ತು. 'ಶ್ವೇತ' ಪಾತ್ರಧಾರಿ ಮತ್ತು ಆಕೆಯ ಮೂವರು ಗೆಳತಿಯರು ಪ್ಯಾರಾ ಸೈಕಾಲಜಿ ಕಲಿಯುತ್ತಿರುತ್ತಾರೆ. ಒಮ್ಮೆ ಈ ಬಗ್ಗೆ ಅಧ್ಯಯನಕ್ಕೆಂದು ಒಂದು ಭೂತಬಂಗಲೆಗೆ ಹೋಗುತ್ತಾರೆ. ಅಲ್ಲಿ ಮಣ್ಣಿನ ಅಡಿಯಲ್ಲಿ 'ಡಿ ಬಗ್ ಬಾಕ್ಸ್' ಸಿಗುತ್ತದೆ. ಆದ್ರೆ ಆಕೆಗೆ ಅದೇನು ಎಂದು ತಿಳಿದಿರುವುದಿಲ್ಲ. ಅಲ್ಲಿಂದ ಮನೆಗೆ ತೆಗೆದುಕೊಂಡು ಬಂದು ಓಪನ್ ಮಾಡಲು ಪ್ರಯತ್ನಿಸುತ್ತಾಳೆ, ಓಪನ್ ಆಗುವುದಿಲ್ಲ. ಆದ್ರೆ ಒಮ್ಮೆ ಅದಾಗಿ ಅದೇ ಓಪನ್ ಆಗುತ್ತೆ. ನಂತರ ಅದರಲ್ಲಿ ನಿಜವಾಗಲೂ ಏನಿರುತ್ತೆ, ಅವಳು ಏನು ನೋಡುತ್ತಾಳೆ, ಚಿತ್ರ ಮುಂದೇನಾಗುತ್ತದೆ ಎಂಬುದೇ ಕತೆ.

ಇತರೆ ಹಾರರ್ ಚಿತ್ರಗಳಿಗಿಂತ 'ಶ್ವೇತ' ಹೇಗೆ ವಿಭಿನ್ನ?
ಇದು ರಿಮೇಕ್ ಸಿನಿಮಾ ಅಲ್ಲಾ. ಆದರೆ ಹಲವು ಸಿನಿಮಾಗಳಿಂದ ಸ್ಫೂರ್ತಿಗೊಂಡು ಮಾಡಿರುವುದು. ನಾನು ಇತರೆ ಚಿತ್ರಗಳಿಗೆ ಹೋಲಿಕೆ ಮಾಡುವುದಿಲ್ಲ. ಅವರವರ ಚಿತ್ರ ಅವರವರಿಗೆ ದೊಡ್ಡದು. ಟೋಟಲಿ ಒರಿಜಿನಲ್ ಕಾನ್ಸೆಪ್ಟ್. ವಿಎಫ್ಎಕ್ಸ್ ಮತ್ತು ರೀರೆಕಾರ್ಡಿಂಗ್ ನಲ್ಲಿ ಅದ್ಭುತವಾಗಿ ಚಿತ್ರ ಮೂಡಿಬಂದಿದೆ. ಬೆಂಗಳೂರಿನ ಮ್ಯಾನ್ಲಿಯೋ ಕ್ರಿಯೇಷನ್ಸ್ ನವರು ವಿಎಫ್ಎಕ್ಸ್ ಮಾಡಿದ್ದಾರೆ. ಯಾವುದೇ ಸೆಟ್ ಹಾಕದೇ 3ಡಿ ಮಾಡೆಲ್ ನಲ್ಲಿ ಸ್ಮಶಾನವನ್ನು ಕ್ರಿಯೇಟ್ ಮಾಡಿ ಸಿನಿಮಾ ಮಾಡಿದಿವಿ.

ಚಿತ್ರೀಕರಣ ಎಲ್ಲೆಲ್ಲಿ ನಡೆದಿದೆ?
ಸಿನಿಮಾ ಸಂಪೂರ್ಣ ಬೆಂಗಳೂರಿನಲ್ಲೇ ಶೂಟ್ ಮಾಡಿರುವುದು. ಶೇಕಡ 20 ರಷ್ಟು ಮಾತ್ರ ಅಂದ್ರೆ ಕ್ಲೈಮ್ಯಾಕ್ಸ್ ಅನ್ನು ಕೋಲಾರದಲ್ಲಿ ಚಿತ್ರೀಕರಿಸಿದ್ದೀವಿ.

ಈ ವಾರ 7 ಚಿತ್ರ ಬಿಡುಗಡೆ ಆಗುತ್ತಿವೆ, 'ಶ್ವೇತ' ಪೈಪೋಟಿ ನೀಡುವ ಭರವಸೆ ಇದೆಯೇ?
ಮೊದಲೇ ರಿಲೀಸ್ ಮಾಡಬೇಕು ಅಂದುಕೊಂಡಿದ್ವಿ. ಫ್ರೆಶರ್ಸ್ ಅಂದಮೇಲೆ ಸ್ವಲ್ಪ ಭಯ ಇದ್ದೇ ಇರುತ್ತೆ. ಹಾಗಂತ ನಾನು 'ಶ್ವೇತ' ಸಿನಿಮಾ ಎಕ್ಸ್ಟ್ರಾಡಿನರಿ ಅಂತ ಹೇಳೋದಿಲ್ಲ. ಇದೊಂದು ಒಳ್ಳೆ ಸಿನಿಮಾ. ದೊಡ್ಡ ಬಜೆಟ್ ಸಿನಿಮಾನು ಅಲ್ಲಾ. ಹಾಗಂತ ತೀರ ಸಣ್ಣ ಬಜೆಟ್ ಸಿನಿಮಾನು ಅಲ್ಲಾ. ಜು.7 ನೇ ತಾರೀಖು ರಿಲೀಸ್ ಮಾಡಬೇಕು ಎಂದು ಪ್ಲಾನ್ ಮಾಡಿದ್ವಿ. ಆಗಲು ಸಹ ಹೆಚ್ಚು ಸಿನಿಮಾಗಳಿದ್ದ ಕಾರಣ ಆಗಲಿಲ್ಲ. ಅಲ್ಲದೇ ಜಿಎಎಸ್ಟಿ ಜಾರಿ ಆದ ನಂತರ ಸ್ವಲ್ಪ ಸಮಸ್ಯೆ ಆಯಿತು. ಹಾಗಂತ ಇನ್ನೂ ಮುಂದಕ್ಕೆ ಪೋಸ್ಟ್ಪೋನ್ ಮಾಡಲು ಸಾಧ್ಯವಿಲ್ಲ.

ಪಾತ್ರಧಾರಿಗಳ ಬಗ್ಗೆ ಹೇಳಿ
ಮಹಿಳಾ ಪ್ರಧಾನ ಚಿತ್ರ. ಮಂಗಳೂರಿನ ಅಕ್ಷತಾ ಮಾರ್ಲಾ ರವರು 'ಶ್ವೇತ' ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ 'ಮೆಲೋಡಿ' ಎಂಬ ಚಿತ್ರ ಮಾಡಿದ್ದಾರೆ. ಅವರು ತುಂಬಾ ಚೆನ್ನಾಗಿ ಆಕ್ಟ್ ಮಾಡಿದ್ದಾರೆ. ಸೆಕೆಂಡ್ ಮೇಜರ್ ಪಾತ್ರವನ್ನು ಜಯಶೀಲ ಎಂಬುವರು 'ಸ್ವಾತಿ'ಯಾಗಿ ಶ್ವೇತ ತಂಗಿ ಪಾತ್ರ ನಿರ್ವಹಣೆ ಮಾಡಿದ್ದಾರೆ. ಅವರು ಸೀರಿಯಲ್ ಆಕ್ಟರ್. ಈ ಹಿಂದೆ ಚಿತ್ರಗಳಲ್ಲು ಅಭಿನಯಿಸಿದ್ದಾರೆ. ಕಿರಣ್ ವಾಟಿ, ಹೃದಯ ಶಿವ ರವರು ಮೊದಲ ಬಾರಿಗೆ ಅಭಿನಯಿಸಿದ್ದಾರೆ. ಶ್ರೀನಿವಾಸ್ ಪ್ರಭು ಪ್ರೊಫೆಸರ್ ಪಾತ್ರದಲ್ಲಿ, ಗೀತಾ, ಪ್ರವೀಣ್ ರವರು ಶ್ವೇತ ಫ್ರೆಂಡ್ಸ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಮೊದಲ ಚಿತ್ರವೇ ಹಾರರ್ ಸಿನಿಮಾ. ಏನಾದರು ಸಮಸ್ಯೆ ಎದುರಾಯಿತೇ?
ತೊಂದರೆ ಏನು ಆಗಲಿಲ್ಲ. ಮೊದಲ ಸಿನಿಮಾ ಆದ್ದರಿಂದ ತೀರಾ ದೊಡ್ಡ ಬಜೆಟ್ ಸಿನಿಮಾ ಮಾಡಿಲ್ಲ. ಸಿನಿಮಾ ಸಂಪೂರ್ಣ ಹಾರರ್ ಅಲ್ಲಾ. ಇದೊಂದು ಸೈಂಟಿಫಿಕ್ ಫಿಕ್ಷನ್ ಸಿನಿಮಾ. ಚಿತ್ರೀಕರಣ ವೇಳೆ ಎದುರಾದ ಒಂದೇ ಒಂದು ಸಮಸ್ಯೆ ಅಂದ್ರೆ ಕ್ಲೈಮ್ಯಾಕ್ಸ್ ಚಿತ್ರೀಕರಣವನ್ನು ಮೂರು ದಿನಗಳಲ್ಲಿ ಮುಗಿಸಬೇಕು ಅಂದುಕೊಂಡಿದ್ವಿ. ಆದರೆ ಶೂಟಿಂಗ್ ಶುರುಮಾಡಿದ ನಂತರ 'ಶ್ವೇತ' ಪಾತ್ರಧಾರಿ ಅಕ್ಷತಾ ಮಾರ್ಲಾ ರವರು ಡಿಪ್ರೆಶನ್ ಗೆ ಹೋದಂತೆ ಫೀಲ್ ಆದರೂ. ಆದ್ದರಿಂದ 6 ದಿನಗಳು ಆಯಿತು.


Click it and Unblock the Notifications











