ಇಸ್ಲಾಂ ತೊರೆದು ಹಿಂದು ಧರ್ಮ ಸೇರಲು ನಿರ್ದೇಶಕ ಅಲಿ ಅಕ್ಬರ್ ನಿರ್ಧಾರ
ಮಲಯಾಳಂ ಸಿನಿಮಾ ನಿರ್ದೇಶಕ, ಚಿತ್ರ ಸಾಹಿತಿ ಅಲಿ ಅಕ್ಬರ್, ಇಸ್ಲಾಂ ತೊರೆದು ಹಿಂದು ಧರ್ಮ ಸೇರುವುದಾಗಿ ಘೋಷಿಸಿದ್ದಾರೆ.
ಅಲಿ ಅಕ್ಬರ್ ಅವರು ಇಸ್ಲಾಂ ತೊರೆಯುವುದಾಗಿ ಘೋಷಿಸಲು ಬಲವಾದ ಕಾರಣವನ್ನು ನೀಡಿದ್ದಾರೆ. ಅಲಿ ಅಕ್ಬರ್ ಅವರು ಪ್ರತಿಭಟನಾರ್ತಕವಾಗಿ ಇಸ್ಲಾಂ ತೊರೆದು ಹಿಂದು ಧರ್ಮ ಸೇರುತ್ತಿದ್ದಾರೆ.
ಡಿಸೆಂಬರ್ 08ರಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ನಿಧನ ಹೊಂದಿದ ದಿನ ಕೆಲವು ಮುಸ್ಲಿಮರು ಅವರ ಸಾವನ್ನು ಸಂಭ್ರಮಿಸಿದ್ದಾರೆ. ಸಾವಿನ ಸುದ್ದಿಗೆ ಸಂತೋಷದ ಇಮೋಜಿಗಳುಳ್ಳ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನು ವಿರೋಧಿಸಿ ತಾವು ಇಸ್ಲಾಂ ಧರ್ಮ ತೊರೆಯುತ್ತಿರುವುದಾಗಿ ಹೇಳಿದ್ದಾರೆ.

''ಭಾರತೀಯ ಸೇನೆಯ ಮುಖ್ಯಸ್ಥರ ಸಾವನ್ನು ಸಂಭ್ರಮಿಸುತ್ತಿರುವುದನ್ನು ಮುಸ್ಲಿಂ ಮುಖಂಡರು ಖಂಡಿಸುತ್ತಲೂ ಸಹ ಇಲ್ಲ. ಇದು ದೇಶವಿರೋಧಿ ಕೃತ್ಯ, ಇಂಥಹದ್ದನ್ನು ನೋಡಿಕೊಂಡು ಸಹಿಸಿಕೊಂಡು ಇರಲಾಗದು. ನನಗೆ ನನ್ನ ಧರ್ಮದ ಮೇಲೆ ವಿಶ್ವಾಸ ಹೋಗಿದೆ'' ಎಂದಿದ್ದಾರೆ ಅಲಿ ಅಕ್ಬರ್.
ಫೇಸ್ಬುಕ್ನಲ್ಲಿ ವಿಡಿಯೋ ಪ್ರಕಟಿಸಿರುವ ಅಲಿ ಅಕ್ಬರ್, ''ನನ್ನ ಹುಟ್ಟಿನಿಂದ ನನಗೆ ಸಿಕ್ಕಿದ್ದ ಉಡುಪೊಂದನ್ನು ಇಂದು ಕಿತ್ತು ಎಸೆಯುತ್ತಿದ್ದೇನೆ. ನಾನು ಮುಸ್ಲಿಂ ಅಲ್ಲ, ಇಂದಿನಿಂದ ನಾನು ಭಾರತೀಯ. ಸೇನಾ ಮುಖ್ಯಸ್ಥನ ಸಾವನ್ನು ಸಂಭ್ರಮಿಸಿದವರಿಗೆ ಇದೇ ನನ್ನ ಉತ್ತರ'' ಎಂದು ಅಲಿ ಅಕ್ಬರ್ ಹೇಳಿದ್ದಾರೆ.
ಅಲಿ ಅಕ್ಬರ್ ಅವರ ಈ ವಿಡಿಯೋಗೆ ಸಾವಿರಾರು ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಅಲಿ ಅಕ್ಬರ್ ಅನ್ನು ಅವಾಚ್ಯವಾಗಿ ಬೈದು ಕಮೆಂಟ್ ಹಾಕಿದ್ದಾರೆ. ಅಂಥಹವರಿಗೆ ಅಲಿ ಸಹ ಅದೇ ಭಾಷೆಯಲ್ಲಿ ಕಮೆಂಟ್ ಹಾಕಿದ್ದರು. ಹಲವರು ಅಲಿ ನಿರ್ಣಯವನ್ನು ಬೆಂಬಲಿಸಿದ್ದಾರೆ ಸಹ. ಆ ನಂತರ ಈ ವಿಡಿಯೋ ಫೇಸ್ಬುಕ್ನಿಂದ ಮರೆಯಾಗಿದೆ. ಆದರೆ ವಾಟ್ಸ್ಆಪ್ಗಳಲ್ಲಿ ಹರಿದಾಡುತ್ತಿದೆ.
ತಮ್ಮ ನಿರ್ಣಯದ ಬಗ್ಗೆ ಮಾಧ್ಯಮಗಳೊಟ್ಟಿಗೂ ಮಾತನಾಡಿರುವ ಅಲಿ ಅಕ್ಬರ್, ''ಬಿಪಿನ್ ರಾವತ್ ನಿಧನದ ಪೋಸ್ಟ್ಗೆ ಖುಷಿಯ ಇಮೋಜಿ ಹಂಚಿಕೊಂಡಿದ್ದ ಬಹುತೇಕರು ಮುಸ್ಲಿಮರು. ರಾವತ್ ಅವರು ಪಾಕಿಸ್ತಾನದ ವಿರುದ್ಧ ಹಾಗೂ ಕಾಶ್ಮೀರದ ಮೂಲಭೂತವಾದಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದ್ದರು ಹಾಗಾಗಿ ಅವರಿಗೆ ಬಿಪಿನ್ ಮೇಲೆ ದ್ವೇಷ'' ಎಂದಿದ್ದಾರೆ.
ಇಸ್ಲಾಂ ಧರ್ಮ ತೊರೆಯುವ ಬಗ್ಗೆ ಮಾತನಾಡಿದ ಅಲಿ ಅಕ್ಬರ್, ''ಇಸ್ಲಾಂ ಧರ್ಮ ತೊರೆಯುವುದು ಖಂಡಿತ. ನಾನು ಮತ್ತು ನನ್ನ ಪತ್ನಿ ಇಸ್ಲಾಂ ತೊರೆದು ಹಿಂದು ಧರ್ಮ ಸೇರಲಿದ್ದೇವೆ. ಅದನ್ನು ದಾಖಲೀಕರಣ ಮಾಡಲಿದ್ದೇವೆ. ನನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೆ ನಾನು ಧರ್ಮ ಹೇರಿಕೆ ಮಾಡುವುದಿಲ್ಲ. ಅವರಿಗೆ ಇಷ್ಟವಿದ್ದರಷ್ಟೆ ಅವರು ಹಿಂದು ಧರ್ಮ ಸೇರಿಕೊಳ್ಳಬಹುದು'' ಎಂದಿದ್ದಾರೆ.
ಅಲಿ ಅಕ್ಬರ್, ಸಿನಿಮಾ ನಿರ್ದೇಶಕರಾಗಿರುವ ಜೊತೆಗೆ ರಾಜಕಾರಣಿಯೂ ಆಗಿದ್ದಾರೆ. 2014 ರಲ್ಲಿ ಅವರು ಕೇರಳದ ಕೊಡವಲ್ಲಿ ಲೋಕಸಭಾ ಕ್ಷೇತ್ರದಿಂದ ಎಎಪಿ ಪರವಾಗಿ ಚುನಾವಣೆಗೆ ಸ್ಪರ್ಧಿಸಿದ್ದರು. ಬಳಿಕ ಬಿಜೆಪಿ ಪಕ್ಷ ಸೇರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲನುಭವಿಸಿದರು. ಬಳಿಕ ಪಕ್ಷದ ಮುಖಂಡರೊಡನೆ ಕಿತ್ತಾಡಿ ಬಿಜೆಪಿಯ ರಾಜ್ಯ ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಈ ಹಿಂದೆಯೂ ಅಲಿ ಅಕ್ಬರ್ ಅವರ ಕೆಲವು ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು. ತಾವು ಎಂಟು ವರ್ಷದವರಾಗಿದ್ದಾಗ ಮದರಸಾನಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಆಗಿತ್ತೆಂದು ಅಲಿ ಅಕ್ಬರ್ ಆರೋಪ ಮಾಡಿದ್ದರು. ವೈನಾಡ್ನ ಮೀನಂಗಡಿಯ ಮದರಸಾನಲ್ಲಿ ಅಲ್ಲಿನ ಮುಖ್ಯ ಗುರು (ಉಸ್ತಾದ್) ತಮಗೆ ಲೈಂಗಿಕ ಹಿಂಸೆ ನೀಡಿದ್ದ, ಮದರಸಾಗಳಲ್ಲಿ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಸಾಮಾನ್ಯ ಎಂದು ಅಲಿ ಅಕ್ಬರ್ ಹೇಳಿಕೆ ನೀಡಿದ್ದರು.
1988 ರಿಂದಲೂ ಮಲಯಾಳಂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿರುವ ಅಲಿ ಅಕ್ಬರ್ ಈ ವರೆಗೆ 12 ಸಿನಿಮಾಗಳಲ್ಲಿಯಷ್ಟೆ ಕೆಲಸ ಮಾಡಿದ್ದಾರೆ. ಆದರೆ ಒಂದು ರಾಷ್ಟ್ರ ಪ್ರಶಸ್ತಿ ಮತ್ತು ಕೇರಳ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.


Click it and Unblock the Notifications











