ಸಮಂತಾ ಐಟಂ ಹಾಡಿನ ವಿರುದ್ಧ ದೂರು ದಾಖಲು: ಕಾರಣ ವಿಚಿತ್ರ!
ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾದಲ್ಲಿ ನಟಿ ಸಮಂತಾ ಮೊದಲ ಬಾರಿಗೆ ಐಟಂ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇದು ಬಹುವಾಗಿ ಸುದ್ದಿಯಾಗಿದೆ.
ಹಾಡಿನ ಲಿರಿಕಲ್ ವಿಡಿಯೋ ಹಾಗೂ ಪ್ರೋಮೋ ಈಗಾಗಲೇ ಬಿಡುಗಡೆ ಆಗಿದ್ದು, ಯೂಟ್ಯೂಬ್ನಲ್ಲಿ ಹಾಡು ದಾಖಲೆಯ ವೀವ್ಸ್ ಪಡೆದಿದೆ. ಹಾಡು ಬಹಳ ಹಿಟ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಆದರೆ ಕೆಲವರು ಈ ಹಾಡಿನ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಹಾಡಿನ ವಿರುದ್ಧ ಹಾಗೂ ಸಿನಿಮಾದ ಸಂಗೀತ ನಿರ್ದೇಶಕರು, ಹಾಡಿನ ಸಾಹಿತ್ಯ ಬರೆದವರು ಹಾಗೂ ಸ್ವತಃ ಸಮಂತಾ ವಿರುದ್ಧ ದೂರು ನೀಡಿದ್ದಾರೆ. ದೂರಿಗೆ ನೀಡಿರುವ ಕಾರಣ ತುಸು ಹೊಸದಾಗಿದೆ.
'ಊ ಅಂಟಾವ ಮಾವ ಊ ಹು ಅಂಟಾವ' ಎಂಬ ಹಾಡಿಗೆ ಸಮಂತಾ ನರ್ತಿಸಿದ್ದು, ಹಾಡಿನಲ್ಲಿ ಪುರುಷರನ್ನು ಛೇಡಿಸುವ ರೀತಿಯ ಸಾಹಿತ್ಯ ಇದೆ. ಇದರ ಬಗ್ಗೆ ತಕರಾರು ತೆಗೆದಿರುವ ಪುರುಷರ ಸಂಘವೊಂದು ಆಂಧ್ರಪ್ರದೇಶದ ಕೆಳನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಹಾಡನ್ನು ರದ್ದು ಮಾಡಬೇಕು, ಹಾಡು ಚಿತ್ರಮಂದಿರಗಳಲ್ಲಿ ಪ್ರಸಾರವಾಗಬಾರದಂತೆ ತಡೆ ಹಿಡಿಯಬೇಕು ಎಂದು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.

ಹಾಡು ರದ್ದು ಮಾಡಬೇಕೆಂದು ಒತ್ತಾಯ
ಸಮಂತಾ ನರ್ತಿಸಿರುವ 'ಪುಷ್ಪ' ಸಿನಿಮಾದ 'ಹೂ ಅಂಟಾವ ಮಾವ ಊ ಹು ಅಂಟಾವ' ಹಾಡಿನಲ್ಲಿ ಪುರುಷರನ್ನು ಮಹಿಳಾ ಪೀಡಕರು, ಕಾಮಾತುರತೆ ಉಳ್ಳುವರು ಎಂಬಂತೆ ಹೇಳಲಾಗಿದೆ. ಇದು ಪುರುಷರಿಗೆ ಅಪಮಾನ ಉಂಟು ಮಾಡುತ್ತಿದೆ. ಹಾಗಾಗಿ ಈ ಹಾಡನ್ನು ರದ್ದು ಮಾಡಬೇಕು, ಚಿತ್ರಮಂದಿರದಲ್ಲಿ ಈ ಹಾಡು ಪ್ರಸಾರವಾಗದಂತೆ ತಡೆ ಹಿಡಿಯಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಅರ್ಜಿ ವಿಚಾರಣೆ ಇನ್ನಷ್ಟೆ ನಡೆಯಬೇಕಿದೆ.

ಹಾಡಿನ ಸಾಹಿತ್ಯ ಹೀಗಿದೆ
''ಸೀರೆ ಉಟ್ಟುಕೊಂಡರೆ ಕಣ್ಣು ಕಣ್ಣು ಬಿಡುತ್ತೀರ, ತುಂಡು ಲಂಗ ಹಾಕಿಕೊಂಡು ಬಂದರೆ ಹಿಂದೇನೆ ಬರ್ತೀರ. ಬಟ್ಟೆಯಲ್ಲೇನಿದೆ ಎಲ್ಲ ಇರುವುದು ನಿಮ್ಮ ಕಣ್ಣುಗಳಲ್ಲೇ, ಗಂಡಸರ ಬುದ್ಧಿ ಶುದ್ಧಿ ಇಲ್ಲ. ಹೂ ಅಂತೀಯಾ ಮಾಮ, ಊ ಹು ಅಂತೀಯಾ' ಎಂದು ಹಾಡಿನ ಪಲ್ಲವಿ ಇದೆ. ಹಾಡಿನಲ್ಲಿ ಇನ್ನೂ ಹಲವು ಕಡೆಗಳಲ್ಲಿ ಗಂಡು ಮಕ್ಕಳನ್ನು ಕಾಮಾಸಕ್ತರೆಂದು, ಯುವತಿಯರ ಸೌಂದರ್ಯದ ಹಿಂದೆ ಓಡುವವರೆಂದು ಅರ್ಥ ನೀಡುವ ಸಾಲುಗಳಿವೆ. ಈ ಸಾಲುಗಳ ಬಗ್ಗೆ ಪುರುಷರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.

ಐಟಂ ಹಾಡಿನಲ್ಲಿ ಕುಣಿದಿರುವ ಸಮಂತಾ
'ಪುಷ್ಪ' ಸಿನಿಮಾದಲ್ಲಿ ಸಮಂತಾ ಮೊದಲ ಬಾರಿಗೆ ಐಟಂ ಹಾಡಿನಲ್ಲಿ ಕುಣಿದಿದ್ದಾರೆ ಹಾಗಾಗಿ ಈ ಹಾಡಿನ ಬಗ್ಗೆ ಅಭಿಮಾನಿಗಳಿಗೆ ಭಾರಿ ಕುತೂಹಲ ಇದೆ. ಹಾಡಿನ ಲಿರಿಕಲ್ ವಿಡಿಯೋ ಈಗಾಗಲೇ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಿದ್ದು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ. ಕನ್ನಡದಲ್ಲಿ ಹಾಡಿಗೆ ಸಾಹಿತ್ಯವನ್ನು ವರದರಾಜು ಚಿಕ್ಕಬಳ್ಳಾಪುರ ಅವರು ಬರೆದಿದ್ದು, ಗಾಯಕಿ ಮಂಗ್ಲಿ ಹಾಡಿದ್ದಾರೆ. ಸಂಗೀತ ನೀಡಿರುವುದು ದೇವಿಶ್ರೀ ಪ್ರಸಾದ್. ತೆಲುಗಿನಲ್ಲಿ ಹಾಡನ್ನು ಇಂದ್ರವತಿ ಚೌಹಾಣ್ ಹಾಡಿದ್ದಾರೆ. ಹಾಡು ಬರೆದಿರುವುದು ಚಂದ್ರಬೋಸ್.

ಡಿಸೆಂಬರ್ 17ಕ್ಕೆ 'ಪುಷ್ಪ' ಸಿನಿಮಾ ಬಿಡುಗಡೆ
'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳಸಾಗಣೆ ಕುರಿತ ಕತೆಯನ್ನು ಹೊಂದಿದ್ದು, ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಕನ್ನಡಿಗ ಡಾಲಿ ಧನಂಜಯ್, ಹಾಸ್ಯ ನಟ ಸುನಿಲ್ ಅವರುಗಳು ವಿಲನ್ಗಳಾಗಿ ನಟಿಸಿದ್ದಾರೆ. ನಟಿ ಅನುಸೂಯ ಸಹ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್ ಮುಖ್ಯ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ಮೈತ್ರಿ ಮೂವಿಸ್ ನವರು ನಿರ್ಮಾಣ ಮಾಡಿದ್ದಾರೆ. ಇದೇ ಡಿಸೆಂಬರ್ 17 ಕ್ಕೆ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.


Click it and Unblock the Notifications











