ರಾಜ್ ಕುಮಾರ್ ಜನ್ಮದಿನಕ್ಕೆ ಹಂಸಲೇಖ ನೀಡಿದ ಸುಂದರ ಹಾಡಿನ ಉಡುಗೊರೆ
ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಸಲುವಾಗಿ ಖ್ಯಾತ ಸಾಹಿತಿ, ಸಂಗೀತ ನಿರ್ದೇಶಕ ಹಂಸಲೇಖ ಸುಂದರವಾದ ಹಾಡೊಂದನ್ನು ರಚಿಸಿದ್ದು, ಅದನ್ನು ನಾಡಿನ ಹೆಸರಾಂತ ಗಾಯಕರು ಹಾಡುವ ಮೂಲಕ ಅಣ್ಣಾವ್ರಿಗೆ ಗೌರವ ಸಲ್ಲಿಸಿದ್ದಾರೆ.
ರಾಜ್ ಕುಮಾರ್ ನಟನೆಯ 'ಪರಶುರಾಮ' ಚಿತ್ರಕ್ಕೆ ಹಂಸಲೇಖ ಸಂಯೋಜಿಸಿದ್ದ 'ನಗುತಾ ನಗುತಾ ಬಾಳು ನೀನು' ಹಾಡನ್ನು ಈಗಲೂ ಜನರು ಗುನುಗುತ್ತಿರುತ್ತಾರೆ. ತಮ್ಮ ಸಂಗೀತದ ಇದೇ ಹಾಡಿಗೆ ಅಣ್ಣಾವ್ರ ಜನ್ಮದಿನದ ಅಂಗವಾಗಿ ವಿಭಿನ್ನ ಹಾಗೂ ಚೆಂದದ ಸಾಹಿತ್ಯ ಹೊಸೆದಿದ್ದಾರೆ. ಈ ಹಾಡಿನ ಮೂಲಕ ನಮ್ಮ ಸಂಗೀತಗಾರರು ಮತ್ತು ಸಂಗೀತ ತಂತ್ರಜ್ಞರು ಅವರನ್ನು ನೆನಪಿಸಿಕೊಂಡಿದ್ದಾರೆ.
ಅನೇಕ ಕಲಾವಿದರು ತಾವು ಇದ್ದಲ್ಲಿಂದಲೇ ಹಾಡಿನ ವಿಡಿಯೋ ಮಾಡಿ ಕಳಿಸಿದ್ದಾರೆ. ಅವುಗಳನ್ನು ಸೇರಿಸಿ ಗಿರಿಧರ್ ದಿವಾನ್ ವಿಡಿಯೋ ಎಡಿಟಿಂಗ್ ಮೂಲಕ ಜೋಡಿಸಿದ್ದಾರೆ. ಈ ಹಾಡಿಗೆ ಸಾಹಿತಿ ನಾಗೇಂದ್ರ ಪ್ರಸಾದ್ ಹೆಚ್ಚುವರಿ ಸಾಹಿತ್ಯ ಬರೆದಿದ್ದಾರೆ. ವೇಣುಗೋಪಾಲ್ ವೆಂಕಿ ಪರಿಕಲ್ಪನೆ ಮತ್ತು ಮ್ಯೂಸಿಕ್ ಪ್ರೋಗ್ರಾಮಿಂಗ್ನಲ್ಲಿ ಮೂಡಿರುವ ಈ ವಿಶಿಷ್ಟ ಪ್ರಯತ್ನವನ್ನು ಮ್ಯೂಸಿಕ್ ಮ್ಯಾನ್ಷನ್ ನಿರ್ಮಿಸಿದೆ. ಮುಂದೆ ಓದಿ...

ನೀವು ಸದಾ ನೆನಪಾಗುತ್ತಿದ್ದೀರಿ
ಹಂಸಲೇಖ ರಾಜ್ ಕುಮಾರ್ ಅವರ ವ್ಯಕ್ತಿತ್ವದ ಕುರಿತು ನೀಡುವ ವಿವರಣೆಯೊಂದಿಗೆ ಈ ವಿಡಿಯೋ ಆರಂಭವಾಗುತ್ತದೆ. 'ಈ ಲಾಕ್ಡೌನ್ ಸಮಯದಲ್ಲಿ, ಸೀಲ್ಡೌನ್ ಸಂಕಟದ ಸಮಯದಲ್ಲಿ, ಈ ಕೊರೊನಾ ಕೋಟಲೆಯಲ್ಲಿ ನೀವು ಅದೆಷ್ಟು ನೆನಪಾಗುತ್ತಿದ್ದೀರಿ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ ಎಂದು ರಾಜ್ ಕುಮಾರ್ ಅವರನ್ನು ಕುರಿತು ಹಂಸಲೇಖ ಹೇಳಿದ್ದಾರೆ.

ನಿಮ್ಮ ಕಾಳಜಿ ಅವರೆಡೆಗೆ ಇತ್ತು
ಏಕೆಂದರೆ ಈ ಸಮಯದಲ್ಲಿ ಎಲ್ಲ ಕಷ್ಟಪಡುತ್ತಿರುವವರು ಬಡವರು, ಹಳ್ಳಿಗರು, ಕಾರ್ಮಿಕರು, ರೈತರು, ದಿನಗೂಲಿ ಕಾರ್ಮಿಕರು. ಎಲ್ಲರ ಮನಸಿನ ಬದುಕಿನ ಜನಪದ ನಾಯಕರು ನೀವು. ನಿಮ್ಮ ಕಾಳಜಿ ಯಾವತ್ತೂ ಅವರಿಗೆ ಇದ್ದದ್ದು ನಮಗೆಲ್ಲರಿಗೂ ಗೊತ್ತಿದೆ. ನಿಮ್ಮ ಸಿನಿಮಾಗಳ ಮುಖಾಂತರ, ನಿಮ್ಮ ಪಾತ್ರಗಳ ಮುಖಾಂತರ, ನಿಮ್ಮ ನಡವಳಿಕೆ ಮುಖಾಂತರ ಎಷ್ಟೇ ಕೀರ್ತಿಯ ಶಿಖರಕ್ಕೆ ಏರಿದರೂ ಬಡವರನ್ನು ಬಡವರ ಕುರಿತಾದ ಬದುಕನ್ನು ಯಾವಾಗಲೂ ಪ್ರತಿನಿಧಿಸುತ್ತಿದ್ದಿರಿ. ನೀವು ಸದಾ ನೆನಪಾಗುತ್ತಿದ್ದೀರಿ ಎಂದಿದ್ದಾರೆ.

ಈಗಿನ ಸಂಕಟಗಳಿಗೆಲ್ಲ ನೀವೇ ಮದ್ದು
ನಿಮ್ಮ ಹುಟ್ಟುಹಬ್ಬ ಕಲೆಯಲ್ಲಿ ಇರುವ ಗುಣದ ಹುಟ್ಟುಹಬ್ಬ. ಬದುಕಿನಲ್ಲಿ ಇರಬೇಕಾದ ವಿನಯದ ಹುಟ್ಟುಹಬ್ಬ. ನಿಮ್ಮ ಹುಟ್ಟುಹಬ್ಬ ಸದಾಕಾಲ ಸರಳವಾಗಿ ಬದುಕಬೇಕೆಂಬ ಸರಳಜೀವನದ ಹುಟ್ಟುಹಬ್ಬ. ಇವತ್ತು ಜಗತ್ತು ವೇಗ ವೇಗ ವೇಗ, ದುಡ್ಡು ದುಡ್ಡು ದುಡ್ಡು, ರೋಗ ರೋಗ ರೋಗ. ಈ ಕಡೆ ಹೊರಟುಬಿಟ್ಟಿದೆ. ಇವೆಲ್ಲವಕ್ಕೂ ನೀವೇ ಮದ್ದಾಗಿದ್ದೀರಿ ಎಂದು ಹೇಳಿದ್ದಾರೆ.

ನಮಗೆ ಹಾಡು ಬಿಟ್ಟರೆ ಬೇರೆ ದಿಕ್ಕಿಲ್ಲ
ಸರಳವಾಗಿ ಬದುಕಬೇಕು ಮಾಡುವ ಕೆಲಸದಲ್ಲಿ ಗುಣ ಇರಬೇಕು. ಎಲ್ಲರಿಗೂ ಒಳ್ಳೆಯದಾಗುವ ಬದುಕನ್ನು ಪಡೆಯಬೇಕು ಎಂದು ನೀವು ಯಾವಾಗಲೂ ಹೇಳುತ್ತಿದ್ದೀರಿ. ಇವತ್ತಿಗೂ ನೀವು ಪ್ರಸ್ತುತ. ನಮಗೆ ಹಾಡು ಬಿಟ್ಟರೆ ಬೇರೆ ದಿಕ್ಕಿಲ್ಲ ಎಂದು ಭಾವುಕರಾಗಿ ಹಂಸಲೇಖ ಹೇಳಿದ್ದಾರೆ.
ನಿಮ್ಮ ಜನುಮದಿವಸ ನಮಗೆ ಹಬ್ಬ
'ರಾಜ ರಾಜ ಮುತ್ತುರಾಜ ಇಂದು ಹಬ್ಬ... ಜನುಮ ದಿವಸ ನಿಮಗೆ ಇಂದು ನಮಗೆ ಹಬ್ಬ. ಸಾವಿರ ಕಾಲ ನಮ್ಮೊಳಗೆ, ದೇವರ ಹಾಗೆ ನಿಮ್ಮ ನಗೆ. ರಾಜ ರಾಜ ಮುತ್ತು ರಾಜ ಇಂದು ಹಬ್ಬ... ಜನುಮ ದಿವನ ನಿಮಗೆ ಇಂದು ನಮಗೆ ಹಬ್ಬ.. ನಾವಾಡುವ ನುಡಿಯೊಳಗೆ ಅಜರಾಮರ ನಿಮ್ಮ ಉಸಿರು...' ಎಂಬ ಹಾಡು ಹೃದಯಸ್ಪರ್ಶಿಯಾಗಿದೆ.

ಹಾಡಿನಲ್ಲಿ ಕಾಣಿಸಿಕೊಂಡವರು
ಗಾಯಕರಾದ ಮೋಹನ್ ಕೃಷ್ಣ, ಅರ್ಚನಾ ಉಡುಪ, ಶಮಿತಾ ಮಲ್ನಾಡ್, ಸಮನ್ವಿತಾ, ಸುನಿತಾ, ಎಚ್ ಎಸ್ ಶ್ರೀನಿವಾಸಮೂರ್ತಿ. ಕೌಶಿಕ್ ಹರ್ಷ, ಬದ್ರಿ ಪ್ರಸಾದ್, ಸುಪ್ರಿಯಾ ರಘುನಂದನ್, ದಿವ್ಯ, ಶಶಾಂಕ್ ಶೇಷಗಿರಿ, ಮಂಗಳ ರವಿ, ವಿಜಯ ರಾಘವೇಂದ್ರ, ಚೇತನ್ ಕೃಷ್ಣ, ಮಾನಸ ಹೊಳ್ಳ, ಅನಿರುದ್ಧ ಶಾಸ್ತ್ರಿ, ಅಶ್ವಿನ್ ಪ್ರಭು ಮುಂತಾದವರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











